ಮಂಗಳವಾರ, ಮೇ 29, 2012

ಅಜ್ಜಿ ...ನಾನು ಸಂಗೀತ ಕಲಿಯಲು ಹೋಗುತ್ತಿದ್ದೇನೆ ..!

("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೩)
ಆ ರಾತ್ರಿ ಇಬ್ಬರು ಮಾತಾಡುತ್ತಿದ್ದಾರೆ. " ಧರ್ಮಸ್ಥಳದಿಂದ ಪತ್ರ ಬಂದಿತಾ?"
" ಅಹಾ..! ಬಂತು"
ತೆರೆದ ಕಣ್ಣು ತೆರೆದಂತೆ ಹೊದಿಕೆಯೊಳಗೆ ಒಬ್ಬ " ಹೋಗಬೇಡ" ಎಂದ. ಹಾಗೇ ನಿದ್ದೆಗೆ ಜಾರಿದ. . " ಸಂಗೀತ ಕಲಿಸಿಕೊಡಿ" ಎಂದ ಇನ್ನೊಬ್ಬನ ಕಣ್ಣುಗಳೆರಡು ತೆರೆತೆರೆದು ಕನಸುಗಳ ತೆರೆಯುತ್ತಲೇ ಇತ್ತು.....! ಅಲ್ಲೇ  ಅದೋ ಒಂದು ಹಾಡು ಜೋಗುಳ ಹಾಡುತ್ತಿದೆ...."ಪಂಚಮ ವೇದ.... ವೇದದ ನಾಧ...ಸರಿಗಮಪದನಿಸ ಭಾವಾನಂದಾ..’
ಬೆಳಿಗ್ಗೆ ಎದ್ದವನು ಅಂಗಡಿಯ ಆಚೆ ಬದಿಯ ಪಂಚಾಯಿತಿ ನಲ್ಲಿಯ ಮುಂದೆ ಬೀದಿ ಜನರ ಸಾಲುಗಳಲ್ಲಿ ಬಿಂದಿಗೆ ಹಿಡಿದು ನಿಂತ. ಮನೆಗೆ ಬೇಕಾದಷ್ಟು ನೀರು ತುಂಬಿಸುತ್ತಿದ್ದಾನೆ.
" ಹೋಂ ವರ್ಕ್ ಎಲ್ಲಾ ಮಾಡಿದ್ದೀಯಾ?"
" ಮಾಡಿದ್ದೇನೆ ಮಾಮ ?"
ಶಾಲೆಯ ಚೀಲ ಎತ್ತಿದವ... ಎರಡು ಚಡ್ಡಿ, ಎರಡು ಅಂಗಿ.." ಧರ್ಮಸ್ಥಳದ ಕಾರ್ಡು" , "ಚಲನಚಿತ್ರ ಗೀತೆಗಳು" ಪುಸ್ತಕವನ್ನು ಪಠ್ಯ ಪುಸ್ತಕಗಳ ಮಧ್ಯಕ್ಕಿಟ್ಟು ಭಾರವಾದ ಕತ್ತೆತ್ತಿದ.
" ಬಾ ಕಾಫಿ ಕುಡಿ"... ಅಜ್ಜಿ ಕರೆದರು.
ಗಡಿಯಾರ ನೋಡಿದ. ಶಾಲೆಗೆ ಹೋಗುವ ಸರಿಯಾಗಿ 9 ಗಂಟೆಗೆ ಮನೆಯಿಂದ ಹೊರಗೆ ಹೆಜ್ಜೆಯಿಡುತ್ತಿದ್ದಾನೆ. ಸ್ವಲ್ಪ ದೂರದಿಂದ ತಿರುಗಿ ನೋಡಬೇಕೆನಿಸಿತು. ತಿರುಗಿ ನೋಡಿದ.
"ನಾನು ಸಂಗೀತ ಕಲಿಯಲು ಹೋಗುತ್ತಿದ್ದೇನೆ ಅಜ್ಜಿ."
ಏನಿದು ರಣ ಬಿಸಿಲು..? .ಮೂರ್ನಾಡಿನಿಂದ 15 ಕಿ.ಮೀ. ಮಡಿಕೇರಿಗೆ ಕಾಲ್ನಡಿಯಲಿ ಬಂದವನಿಗೆ ಬಸ್ ನಿಲ್ದಾಣದಲ್ಲಿ ಅಮ್ಮ ನೆನಪಾಗುತ್ತಿದ್ದಾಳೆ. ನೇರವಾಗಿ ಕಡಗದಾಳು ಕ್ಲೋಸ್‍ಬರ್ನ್‍ ಕಾಫಿ ಎಷ್ಟೇಟಿಗೆ 8  ಕಿ.ಮೀ. ಮತ್ತೆ ನಡೆಯ ತೊಡಗಿದ. ಹೊಟ್ಟೆ ಹಸಿಯುತ್ತಿದೆ. ಕೈಗಳು ಚೀಲದೊಳಗೆ ಇಳಿದು ತಡಕಾಡಿತು. ಅಹಾ..! ಮಧ್ಯಾಹ್ನಕ್ಕೆ ಅಜ್ಜಿ ಹಾಕಿದ್ದ ಶಾಲೆಯ ಬುತ್ತಿ ಸಿಕ್ಕಿತು..ಅಲ್ಲೇ ದಾರಿ ಬದಿಯಲ್ಲಿ ಮುಚ್ಚಳ ತೆರೆದ. ಗೊತ್ತಿಲ್ಲದೇ ಕಣ್ಣು ಬುತ್ತಿ ಮುಚ್ಚಳದೊಂದಿಗೆ ತೆರೆತೆರೆದು ತೇವಗೊಳ್ಳುತ್ತಿದೆ . ಅಜ್ಜಿ ಮತ್ತೊಮ್ಮೆ ಮಧ್ಯಾಹ್ನಕ್ಕೆ ಕರೆದಳು. " ಬಾ ಊಟ ಮಾಡು". ತೊಟ್ಟಿಕ್ಕುತ್ತಲೇ ತಿಂದವನು ಮತ್ತೆ ನಡೆಯ ತೊಡಗಿದ.
" ಅಮ್ಮ ನೀನೇಕೆ ತೋಟಕ್ಕೆ ಹೋಗಿಲ್ಲ?"
" ಇಲ್ಲ, ಮೈ ಹುಷಾರಿಲ್ಲಪ್ಪ... ಇದೇನೋ ಇವತ್ತು ಶಾಲೆಯಿಲ್ಲವೇ?"
ಅಷ್ಟರವರೆಗೇ ದಾರಿಯುದ್ದಕ್ಕೂ ಭಾರವಾದ ದುಃಖ್ಖ ಅಮ್ಮನನ್ನು ಬಾಚಿ ಬಿಗಿದು ತಬ್ಬಿಕೊಂಡಿತು..ಬಿಕ್ಕಿ ಬಿಕ್ಕಿ ಹೇಳುತ್ತಿದ್ದಾನೆ
" ನಾನು ಸಂಗೀತ ಕಲಿಯಬೇಕು... ನಾನಿನ್ನು ಮೂರ್ನಾಡು ಶಾಲೆಗೆ ಹೋಗುವುದಿಲ್ಲ ಅಮ್ಮ"
ಬಿಸಿಲು ಬಿಸಿಯೇರಿದೆ. ಕೆನ್ನೆ-ಹಣೆಗೆ ಕಪ್ಪಿಟ್ಟ ಬೆವರು ಒರೆಸಿ,ತಲೆಗೂದಲಿಗೆ ಬೆರಳುಗಳು ನಿಧಾನವಾಗಿ ಓಡಾಡುತ್ತಿವೆ. ಒಳಗಿಳಿದ ಕಣ್ಣುಗಳಲ್ಲಿ ಮೇಲೆ ನೀರು ತುಂಬುತ್ತಿದೆ. ಎದೆಗವುಚಿ ಹೇಳುತ್ತಿದ್ದಾಳೆ.
" ಮಾವನಿಗೆ ಏನು ಹೇಳಿದೆ"
" ಯಾರಿಗೂ ಹೇಳಲಿಲ್ಲ. ಹಾಗೇ ಬಂದೆ. ನಾನು ಸಂಗೀತ ಕಲಿಯಬೇಕು ಅಮ್ಮ "
ಏನಿದು ಕೆನ್ನೆ- ಅಂಗಿ ಬಿಸಿಬಿಸಿಯಾಗುತ್ತಿದೆ? ಕತ್ತೆತ್ತಿದವನ ಕೆನ್ನೆಗೆ ಅವಳ ಕಣ್ಣ ಹನಿಗಳು ಮತ್ತೊಮ್ಮೆ ಹನಿದು ಬಿಸಿಯಾದವು. ಮೈ ನಡುಗಿ ಪುಳಕಿತನಾಗುತ್ತಿದ್ದಾನೆ.
"ಅಳಬೇಡಪ್ಪ... ಊಟ ಮಾಡಿದೆಯಾ?"
" ಹೂಂ"
ಬಂದವನೇ ಮನೆ ಒಳನುಗ್ಗಿ ಅಲ್ಲೇ ಗೋಡೆ ಬದಿಗೆಸೆದ ಶಾಲಾ ಚೀಲಕ್ಕೆ ಕೈ ಹಾಕುತ್ತಿದ್ದಾಳೆ. ಸಿಕ್ಕಿದ ಖಾಲಿ ಬುತ್ತಿ ಬಟ್ಟಲು ತೊಳೆದಿಟ್ಟು...
" ಬಾ ಗಂಜಿ ಅನ್ನ  ತಿನ್ನು, ತೆಂಗಿನಕಾಯಿ ಚಟ್ನಿಯಿದೆ"  ಅಡುಗೆ ಕೋಣೆಗೆ ಕರೆದಳು.
" ಶಾಲೆ ಬಿಡಬೇಡ ಮಗನೇ. ಶಾಲೆಗೆ ಹೋಗು"
ಬಾಯ್ಬಿಟ್ಟಿದೆ ಅಲುಮಿನೀಯಂ ತಟ್ಟೆ. ಬಾಚಿ ತಿನ್ನುತ್ತಿದ್ದ ಅನ್ನಕೆ ಹರಿದು ಹೋಗುತ್ತಿದ್ದ ಗಂಜಿ ನೀರನ್ನು ಬಾಯ್ಗಿಟ್ಟು ತಡೆದ. ಮತ್ತೊಮ್ಮೆ ಬಾಯ್ಗಿಟ್ಟು ಹೇಳಿದ...
"ಇಲ್ಲ.. ಮಡಿಕೇರಿಯಲ್ಲಿ ಸೇರಿಸು. ಸಂಗೀತ ಕಲಿಸುವವರು ಇದ್ದಾರೆ"
"ಯಾರೂ ಕಲಿಸುತ್ತಾರೆ...ಅಷ್ಟೊಂದು ದುಡ್ಡು ಬೇಡವೇ ಮಗನೇ ?"
ಮುಖ ಎತ್ತಲಿಲ್ಲ. ಗಂಜಿ ಅನ್ನ ತಿಂದ ಅವನು ಹೊರಗೆ ತಟ್ಟೆಗೆ ಮತ್ತೆ ಮತ್ತೆ ನೀರು ಸುರಿದು ತೊಳೆಯ ತೊಡಗಿದ. ಒಳಗೆ ಅವಳು ಹಳೆ ಪೆಟ್ಟಿಗೆ ತಡಕಾಡುತ್ತಿದ್ದಳು.
" ತೆಗೆದುಕೋ... ಬರುವ ವರ್ಷ ತೋಟಕ್ಕೆ ರಜೆ ಸಿಕ್ಕಿದಾಗ ಬಂದು ಮಾವನಿಗೆ ಮಾತಾಡುತ್ತೇನೆ"
ಎರಡು ರೂಪಾಯಿ ಕೊಟ್ಟಳು. ತೋಟದಲ್ಲಿ ಟೀ ಕುಡಿಯಲು ಬಚ್ಚಿಟ್ಟ ಹಣ.
"5 ಗಂಟೆಗೆ ಮೂರ್ನಾಡಿಗೆ ಯೂನಿಯನ್ ಬಸ್ಸಿದೆ"
ಏನು ತಲೆ ಇಷ್ಟೊಂದು ಬಿಸಿಯಿದೆ ? ಕೂದಲಿಗೆ ತೆಂಗಿನೆಣ್ಣೆ ಹಾಕಿ ತಿಕ್ಕುತ್ತಿದ್ದಾಳೆ. ಮಾತಾಡದೆ ಶಾಲೆಯ ಚೀಲ ಹೆಗಲಿಗೇರಿಸಿದ ಭಾರಕೆ ಮತ್ತೆ ಕಡಗದಾಳಿಗೆ ನಡೆಯತೊಡಗಿದ. " ಚೆನ್ನಾಗಿ ಓದು, " . ಏನೇನೋ  ಹೇಳುತ್ತಲೇ ಇದ್ದಳು, ಮರು ಮಾತನಾಡದೆ ನಡೆದ. ಮರೆಯಾಗುವವರೆಗೆ ತಿರುಗಿ ತಿರುಗಿ ನೋಡುತ್ತಲೇ ಇದ್ದ, ತಲೆ ಕಾಣುವವರೆಗೆ ನೋಡುತ್ತಲೇ ಇದ್ದಳು. ಅಲ್ಲೊಂದು ಕನಸು ಅವನನ್ನೇ ನೋಡುತ್ತಾ ಬಣ್ಣ ಹಚ್ಚುತ್ತಿತ್ತು. ಹೆಜ್ಜೆ ಬಿರುಸಾಗುತ್ತಿದ್ದಂತೆ ಅವಳಂತೆ ಕಾಣದಾಯಿತು. ಮತ್ತೊಮ್ಮೆ ದಾರಿಗಳು ಅಮ್ಮನನ್ನು ನೋಡಲೆತ್ನಿಸಿದವು.
ನೆನಪುಗಳು ಬಿಕ್ಕುತ್ತಲೇ ಇದ್ದವನಿಗೆ ರಸ್ತೆ ಬದಿಗೆ ಬಸ್‍ ಸಿಕ್ಕಿತು. ಹೆಸರು- ಊರಿನ ಪರಿಚಯ ಓದದೇ ಹತ್ತಿದವ , ಗೊತ್ತಿಲ್ಲದವರ ಪಕ್ಕದಲ್ಲಿ ಕುಳಿತುಕೊಂಡ. ಮತ್ತೆ ಮಾವ ನೆನಪಾಗುತ್ತಿದ್ದಾರೆ. ಅದೇ ಸ್ಕೇಲು !. ಕೆನ್ನೆ ಸವರಿಕೊಂಡ. ಮಡಿಕೇರಿ ಖಾಸಗಿ ಬಸ್‍ ನಿಲ್ದಾಣದಲ್ಲಿ ಇಳಿದು ಸುತ್ತಲೂ ಒಮ್ಮೆ ಕಣ್ಣಾಡಿಸುತ್ತಿದ್ದಾನೆ. ಪಟ್ಟಣದ ಸುತ್ತ ಆವರಿಸಿದ ನೀಲಿ ತುಂಬಿದ ಬೆಟ್ಟಗಳು. ದೊಡ್ಡ ದೊಡ್ಡ ಕಟ್ಟಡಗಳು, ಓಡುತ್ತಿದ್ದ ಕಾರು-ಬಸ್ಸುಗಳು. ಅಲ್ಲೇ ರಸ್ತೆ ಬದಿಗೆ ಜನರು ಹಿಂಡು ಹಿಂಡಾಗಿ ನಡೆಯುತ್ತಿದ್ದರು. ಅವರೊಂದಿಗೆ ಜೊತೆ ಸೇರಿ ನಡೆಯ ತೊಡಗಿದ. " ಎಷ್ಟೊಂದ್‍ ಜನ  ಇಲ್ಲಿ ಯಾರು ನನ್ನೋರು? ಕಣ್ಣು- ಮೂಗು ಕಾಣದ ಹಾಗೆ ಬಣ್ಣ ಹಚ್ಚಿದ ಅಕ್ಕ-ತಂಗಿ.. ಎಷ್ಟೊಂದ್‍ ಜನ ಇಲ್ಲಿ ಯಾರು ನನ್ನೋರು ?
ಸಂಜೆ 6 ಗಂಟೆಯಿಂದ ಮಡಿಕೇರಿ ಸಿನಿಯರ್ ಕಾಲೇಜು ರಸ್ತೆಗೆ ಮೂರು ಬಾರಿ ಸುತ್ತು ಹಾಕಿದ. ರಾತ್ರಿ 9  ಗಂಟೆಗೆ ಅಲ್ಲೇ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಪಾಪ್ಯುಲರ‍್ ಹೋಟೆಲ್‍ನಲ್ಲಿ ಜನರು ಒಳ ಹೋಗಿ- ಹೊರ ಬರುತ್ತಿದ್ದರು.ಬದಿಯಲ್ಲೇ ನಿಂತು ನೋಡತೊಡಗಿದ. ಹೋಟೆಲ್‍ ಮಾಲೀಕ ಒಮ್ಮೆ ನೋಡಿದ. ಅರ್ಧ ಗಂಟೆಯ ನಂತರ ಕ್ಯಾಶ್‍ ಕೌಂಟರಿಗೆ ಕರೆದ.
" ಏನು ಮಾಡುತ್ತಿದ್ದೀಯ ಇಲ್ಲಿ ?"
ಮಾತಾಡಲಿಲ್ಲ.
"ಶಾಲೆಗೆ ಹೋಗುವವನೋ?"
"ಶಾಲೆಗೆ ಹೋಗುವುದಿಲ್ಲ..ಇಲ್ಲೇ ಇರುತ್ತೇನೆ"
ಊರು-ಕೇರಿ-ಶಾಲೆ, ಅಪ್ಪ-ಅಮ್ಮ ಎಲ್ಲಾ ಕೇಳಿದ. ಎಲ್ಲವನ್ನೂ ಸುಳ್ಳು ಹೇಳಿದ.
"ರಂಗಾ ಇಲ್ಲಿ ಬಾ.... ಈ ಹುಡುಗ ಹೊಸದಾಗಿ ಬಂದಿದ್ದಾನೆ.. ಒಳಗೆ ಕರೆದುಕೋ"
"ನಿನ್ನ ಹೆಸರು?"
ಹೆಸರು ಹೇಳಿದ. " ನಿನಗೆ ಓದಲು- ಬರೆಯಲು ಬರುತ್ತಾ?"
"ಅಹಾ..! ಬರುತ್ತೆ"
"ನಾಳೆ ಅಪ್ಪ-ಅಮ್ಮನಿಗೆ ನನಗೊಂದು  ಕಾಗದ ಬರೆದುಕೊಡುತ್ತೀಯಾ?"
ಈರುಳ್ಳಿ ಚೀಲಗಳ ರಾಶಿ, ಎಣ್ಣೆ ಕಮಟು ವಾಸನೆಯ ಕೋಣೆ ತೋರಿಸುತ್ತಿದ್ದಾನೆ ರಂಗ.ಶಾಲೆಯ ಚೀಲ ಅಲ್ಲಿಟ್ಟು, ಅಡುಗೆ ಕೋಣೆಗೆ ಕರೆತಂದು ಬಿಟ್ಟು ಹೊರ ಹೋದ. ಕೆಲವು ಜನರು ರುಬ್ಬುತ್ತಿದ್ದರು, ಕೆಲವರು ದೊಡ್ಡ ದೊಡ್ಡ ಒಲೆಯ ಮುಂದೆ ಬೆಂಕಿಯಂತೆ ಉರಿಯುತ್ತಿದ್ದರು. ರಾಶಿ ತರಕಾರಿಗಳನ್ನು ಮಚ್ಚು-ಚಾಕುಗಳು ಕೊಚ್ಚಿ ಕೊಚ್ಚಿ ಹಾಕುತ್ತಿದ್ದವು. ಮೆಲ್ಲನೇ ಅಡುಗೆ ಕೋಣೆಯ ಹೊರಗೆ ಕಣ್ಣಾಯಿಸಿದ, ರಾಶಿ ಎಂಜಲು ತಟ್ಟೆಗಳ ಮಧ್ಯೆ ಕುಳಿತು ಒಬ್ಬಾತ ಬಾಚಿ ಬಾಚಿ ತೊಳೆದು ನೀರಿಗೆ ಪಾತ್ರೆಗಳನ್ನು ಮುಳುಗಿಸುತ್ತಿದ್ದ. ಕೋಣೆಯ ಬೆಂಕಿಗೆ ತಾನೂ ಸ್ವಲ್ಪ ಬೆವರು ಒರೆಸುತ್ತಾ ನಿಂತ.
"ನಿನಗೆ ಪಾತ್ರೆ ತೊಳೆಯಲು ಬರುತ್ತಾ?" ಅಡುಗೆ ಕೋಣೆಯಿಂದ ಒಬ್ಬಾತ ಕೇಳಿದ.
"ಆಹಾ..!"  
ಹೋಟೆಲಿನಲ್ಲಿ ಗಿರಾಕಿಗಳು ತಿಂದುಂಡ ಎಂಜಲು ತಟ್ಟೆಗಳ ರಾಶಿಗೆ ಅವನು ಕೈ ಹಾಕಿದ. ಒಂದೊಂದೇ ಎತ್ತಿ ತೊಳೆದು ಇತ್ತ ಇಡುತ್ತಲೇ ,ಅತ್ತ ತೊಳೆದಷ್ಟು ಪಾತ್ರೆಗಳು ಮತ್ತಷ್ಟು ತುಂಬುತ್ತಲೇ ಇದ್ದವು.  ಅದಷ್ಟು ಎಂಜಲುಗಳು ರಾಶಿ ಬೀಳುತ್ತಿದ್ದವು. ಕೆಳಗೆ ಕುಳಿತವನು ತಟ್ಟೆಗಳ ರಾಶಿಯಲ್ಲಿ ಕಾಣದಾದ. ಕ್ಯಾಶ್ ಕೌಂಟರಿನಲ್ಲಿ ಯಾವುದೋ ಹಾಡು ಕಿವಿಗೆ ಬಡಿಯುತ್ತಿದೆ. ಎಂಜಲು ತಟ್ಟೆಗಳಲ್ಲಿ ಎರಡನ್ನು ಎತ್ತಿ ಮೆಲ್ಲನೆ ತಟ್ಟಿ ನೋಡಿದ.. ಹೌದು..! ತಾಳ ಸರಿಯಾಗಿಯೇ ಇದೆ. ಹಾಗೇ ಮುಂದುವರೆಸಿದ..
"ಏನೋ ಊಟದ ತಟ್ಟೆ ತಟ್ಟುತ್ತಿದ್ದೀಯಾ?"
ಒಳಗಿನಿಂದ ಯಾರೋ ಗದರಿಸಿದಂತಾಯಿತು. ತಾಳ ಬಿಟ್ಟು ಮತ್ತೆ ತೊಳೆಯ ತೊಡಗಿದ.
"ಹೇ ಹೊರಗೆ ಹೋಗಿ ಟೇಬಲ್ ಕ್ಲೀನ್ ಮಾಡು"
ಪ್ಲಾಸ್ಟಿಕ್ಕಿನ ಇಷ್ಟಗಲದ ಬಕೇಟು-ಕೈಬಟ್ಟೆ ತೆಗೆದುಕೊಂಡ. ಹೊರಗೆ ಬಂದು ಗೋಡೆಗೆ ಒರಗಿ ತಿನ್ನುತ್ತಿದ್ದವರ ಕೈ-ಬಾಯಿ ನೋಡುತ್ತಾ ನಿಂತ. ಗಿರಾಕಿಗಳು ತಿಂದುಂಡು ಟೇಬಲ್ಲಿನಲ್ಲಿ ತಟ್ಟೆ ಬಿಟ್ಟೇಳುವುದನ್ನೇ ಕಾಯುತ್ತಿದ್ದ.  " ಮಾವ ಇಲ್ಲಿಗೆ ಬಂದರೋ..? ", ಸಣ್ಣಗೆ ಬೆವರುತ್ತಿದೆ, ಮತ್ತೊಮ್ಮೆ ಕೆನ್ನೆ ಮುಟ್ಟಿ ನೋಡಿದ. ಮೂರ್ನಾಡಿನ ಚಂದ್ರಣ್ಣ, ಬಾಬಣ್ಣ, ಪಕ್ಕದ ಮನೆಯ ಹಂಸಕಾಕ, ಲತೀಫ್ ಬಂದರೋ ? ". ಆ ರಾತ್ರಿ ಕಣ್ಣು ಮುಚ್ಚಿದವನಿಗೆ ಚಿನ್ನದ ಅಂಗಡಿ ಪಳನಿ ಸಾಮಿ, ಮರಗೆಲಸದ ಕುಟ್ಟೇಟ, ಕಬ್ಬಿಣ ಕೆಲಸದ ಡಾಲಿ ಸಾಮಿ ಹೋಟೆಲಿನಲ್ಲಿ ಕಣ್ಣೆದುರು ಬರುತ್ತಿದ್ದಾರೆ.  ಎಲ್ಲರೂ ಮಲಗಿದ ಮೇಲೆ ರಂಗನನ್ನು  ಮೆಲ್ಲಗೇ ಎಬ್ಬಿಸಿದ.
" ನನಗೆ ಒಂದು ಕಾರ್ಡು ಕೊಡು, ಮನೆಗೆ ಕಾಗದ ಬರೆಯುತ್ತೇನೆ." .
"ಹಣ ಕೊಟ್ಟರೆ ಕೊಡುತ್ತೇನೆ." . 25 ಪೈಸೆಯ ಕಾರ್ಡಿಗೆ ಉಳಿಸಿದ್ದ 50 ಪೈಸೆ ಕಸಿದುಕೊಂಡ. ಮಾವನಿಗೆ ಒಂದು ಕಾಗದ ಬರೆಯುತ್ತಿದ್ದಾನೆ....
"ಮಾಮ ನಾನು ಮಡಿಕೇರಿಯಲ್ಲಿದ್ದೇನೆ. ಸಂಗೀತ ಕಲಿತು ಬರುತ್ತೇನೆ .ನನಗೆ ಹೊಡೆಯಬೇಡಿ... "
ಒಂದು ಭಾನುವಾರದ ರಜೆಗೆ ಸಂಜೆ ರಂಗನೊಂದಿಗೆ ರಸ್ತೆಗಿಳಿದ. ಅಲ್ಲೇ ಸಿಕ್ಕಿದ ಟಪಾಲು ಪೆಟ್ಟಿಗೆಗೆ ಕಾರ್ಡು ಹಾಕಿದವನ ಕಾಲುಗಳು ಭಾರ ಕಳೆದುಕೊಂಡು ಹೆಜ್ಜೆಯಿಡತೊಡಗಿದವು. ದಿನಕ್ಕೆ ಒಂದು ರೂಪಾಯಿ ಸಿಕ್ಕಿದರೆ ಸಾಕು. ಸಂಗೀತ ಮೇಷ್ಟ್ರಿಗೆ ಫೀಜು ಕಟ್ಟಬಹುದು. ದಣಿಗಳು ಎಷ್ಟು ಕೊಡುವರೋ?
"ರಂಗ ನಿನಗೆ ದಣಿಗಳು ಎಷ್ಟು ದುಡ್ಡು ಕೊಡುತ್ತಾರೆ?"
ಐಸ್‍ಕ್ಯಾಂಡಿ ತಿನ್ನುತ್ತಿದ್ದವ ಹೇಳಿದ " ಹತ್ತು ರೂಪಾಯಿ ಕೊಡುತ್ತಾರೆ"
ರಾತ್ರಿ ಹೋಟೆಲಿನಲ್ಲಿ ಬೆಳಿಗ್ಗೆಗೆ ಬೇಕಾದ ಇಡ್ಲಿಗೆ ಅಕ್ಕಿ ರುಬ್ಬುತ್ತಿದ್ದ ಕೈಗಳು ಒಮ್ಮೆ ಮುಖದಲ್ಲಿದ್ದ ಬೆವರು ಒರೆಸಿತು. ದಣಿದು ಗೋಣಿ ಚೀಲಗಳ ರಾಶಿಯ ಮೇಲೆ ಮಲಗಿ ಕಣ್ಣು ಮುಚ್ಚಿದ. ಕತ್ತಲು ರೆಪ್ಪೆಯೊಳಗೆ ಸಂಗೀತ ಮೇಷ್ಟ್ರ ಕನಸು ಮಬ್ಬಾಗ ತೊಡಗಿದವು. ಒಂದು ದೀರ್ಘವಾದ ಸಂಗೀತದ ನಿಟ್ಟುಸಿರು.
" ಇಲ್ಲಿಂದ ಓಡಿ ಹೋದರೋ?"
 -----------------------------------------------------------------------
(ಮುಂದುವರೆಯುವುದ ಭಾಗ-೪ :  "ದಣಿಗಳೇ ನಾಳೆ ಮನೆಗೆ ಹೋಗಿ ಬರುತ್ತೇನೆ")

ಮಂಗಳವಾರ, ಮೇ 15, 2012

ಮಡಿಕೇರಿಗೆ ಏಸುದಾಸ್‍ ಬರುತ್ತಾರಂತೆ ...!



("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೨)
ಒಂದು ಶನಿವಾರ ಶಾಲೆಯಿಂದ ಬಂದವನು ಚುರುಗುಟ್ಟಿದ ಹೊಟ್ಟೆಯೊಳ ಗೊಂದು ಹಸಿವಿನ ತಾಳವನ್ನು ಗುರುತಿಸಿದ. ಸಂಗೀತ ಲೋಕದಲ್ಲಿ "ಸರಿಗಮಪದನಿಸ" ಹೇಳುವ ಧಾವಂತಕೆ ಭಿಕ್ಷೆಗೆ ನಿಂತಿವೆ ಏಳುಸ್ವರಗಳು . ಒಂದಕ್ಕೊಂದು ಮೇಳೈಸಿ ನರ್ತಿಸಿದವು.  ಎಲ್ಲಾ ಆದಿತಾಳಗಳ ಮೊದಲುಗಳು, ತಾವೆಂಬ ಮಿಗಿಲುಗಳ ದಾಟಿದಾಗ ಒಂದು ಸಮಾಗಮದ ಹಾಡು.  ಅಲ್ಲಿ ಯಾರಿಗೆ ಕೇಳಿತೋ ಕೇಳಿಯೂ ಕೇಳಿಸದ ರಾಗಸ್ವರ ....! ಒಂದು ಸಂಜೆ ಅವರು ಕರೆದರು.
" ರಾಮ ಮಂದಿರದಲಿ ಆ ದಿನ   ಹಾಡಿದ   ಹಾಡು ಇಲ್ಲಿ ಹಾಡು?"
ಹಾರ್ಮೋನಿಯಂ ಮೇಷ್ಟ್ರು ಚೌರೀರ ಬಾಬಣ್ಣ..! ಪಟ್ಟಣದ ರಾಮ ಮಂದಿರದ ಹಿಂಬದಿ ಕೋಣೆಯಲಿ ಶೃತಿ ಹಿಡಿಯುತ್ತಿದ್ದಾರೆ. "ಸ.......ರಿ.....ಗ.. ಸನಿದಪ..ಸನಿದಪ.."  ಕೋಣೆ ತುಂಬಾ ತೇಲುತ್ತಿವೆ ರಾಗಗಳು.. ನವೀರಾದ ಸ್ವರಗಳಿಗೆ ತಾಳ ಹಿಡಿದ ತಬಲ ಚಂದ್ರಣ್ಣ...! " ಥಕ ದಿಮಿ ...ಥಕ ದಿಮಿ....ದಿನ್ನಾ ತರಿಕಿಟಥಾ.... ದಿನ್ನಾ ತರಿಕಿಟಥಾ..." ಎದೆಯೊಳಗೆ ಬಡಿತಕ್ಕೆರಡರಂತೆ ಲಯ ಹುಡುಕುತ್ತಿದೆ. ಸುತ್ತ ಕುಳಿತ ನಾಲ್ಕಾರು ಮಂದಿ ... ಹಾಡು ಹೇಳುವವರೋ? ಸುಮ್ಮನಿದ್ದವ ಹಾಡಿಯೇ ಬಿಟ್ಟ...! . ಅವರೆಲ್ಲರೂ ತಮ್ಮ ತಮ್ಮೊಳಗೆ ಪಿಸುಪಿಸು ಮಾತಾಡಿಕೊಂಡರು. ಏನು... ಚೆನ್ನಾಗಿಲ್ಲವೇ ?
" ಚೆನ್ನಾಗಿದೆ...ಅಭ್ಯಾಸ ಮಾಡಬೇಕು....ಪ್ರತಿ ದಿನ ಸಂಜೆ ಬಾ.... ಸ್ವರ ಕೂರಿಸುತ್ತೇವೆ.... "
ತಾನೇ ಹಾಡುಗಾರನಾದ ಆ ಹುಡುಗನಿಗೆ ಮತ್ತೊಂದು ಕೇಳಿಸಿತು....
 "ಮಕ್ಕಳ ಹಾಡುಗಳನ್ನೇ ಅಭ್ಯಾಸ ಮಾಡಬೇಕು"
"ಮಾಡುತ್ತೇನೆ"......
ಹಾಕಿದ್ದು ನಯಾ ಪೈಸೆ....ಸಿಕ್ಕಿದ್ದು ಚಿನ್ನ  ..! ಕಾಫಿ ಗಿಡಗಳ ಬುಡದಲ್ಲಿ ತಲೆಯಾಡಿಸಿದ ಆ ಎಲೆಗಳು ಅಲ್ಲೆಲ್ಲೋ ಬೀಸುತ್ತಿದ್ದ ಗಾಳಿಯನ್ನು ಬರಸೆಳೆದು ಎದೆಗೆ ನುಗ್ಗಿಸಿದವು.  ಕನಸು ನಿದ್ದೆಗಳಲ್ಲಿ... ಬೆಳಿಗ್ಗೆ- ಸಂಜೆಗಳಲ್ಲಿ ಮಾರ್ಧನಿಸಿ ಗುನುಗುಟ್ಟ ತೊಡಗಿದವು ಕಣ್ಣುಗಳ ತುಂಬಾ ತಬಲ.. ಅದೋ ಹಾರ್ಮೋನಿಯಂ....! ಇದೋ  ಗಿಟಾರ್...ಕೃಷ್ಣನ ಕೊಳಲು ....ಹೇಗೆ ನರ್ತಿಸುತ್ತಿವೆ..ರಾಗ ನರ್ತನಕೆ ?.ಅದಕ್ಕೊಂದಷ್ಟು ಏರಿಳಿದ ಸ್ವರ ಶೃಂಗಾರಗಳು..! ಪ್ರತೀ ದಿನಗಳ ಸಂಜೆ ಶಾಸ್ತ್ರೀಯ ಉಪಾಸನೆ ಗಾಯನಗಳು. " ಶಂಕರಾಭರಣಂ".... ಸ್ವಾತಿ ಮುತ್ಯಂ..... ಸಿಂದೂ ಭೈರವಿ..... ಮಲೆಯ ಮಾರುತ....  ಎದೆಯ ತುಂಬಾ ಸ್ವರಗಳ ಅಲೆಗಳು ... ತಾಳ ಹಿಡಿದ  ಎದೆಯ ಬಡಿತ ನಿಧಾನವಾಗಿ ಏರಿದವು..  ಪಾಠಗಳು ಎಂದಿನಂತೆ ಶಾಲೆಯಲ್ಲಿ ಓದಿದವು....
ರಾತ್ರಿ 9  ಗಂಟೆಯವರೆಗೆ ಅಂಗಡಿ ತೆರೆದಿಟ್ಟು ಬಟ್ಟೆ ಹೊಲಿಯುತ್ತಿದ್ದ ಮಾವ , ಒಮ್ಮೆ ಕೇಳಿ ಸುಮ್ಮನಾದರು. ಮತ್ತೊಂದು ದಿನ.. ಮತ್ತೆ ಮತ್ತೆ ಕೇಳಿ ತಾಳ್ಮೆ ಕಳೆದುಕೊಳ್ಳುತ್ತಿವೆ ಆ ರಾತ್ರಿಗಳು..! ಹುಬ್ಬುಗಂಟಿಕ್ಕಿದ ಮಾವನ ಬಟ್ಟೆ ಕತ್ತರಿಸುವ ಅಳತೆ " ಸ್ಕೇಲ್"  ಅವನನ್ನೂ ಅಳತೆ ಮಾಡತೊಡಗಿದವು... ಊರು ಬಿಟ್ಟ ಊರುಗಳಲ್ಲಿ ಸಂಗೀತ ಸಂಜೆಗಳು..... ಹಾರ್ಮೋನಿಯಂ ಪೆಟ್ಟಿಗೆ , ತಬಲ ಇತ್ತಲಿಂದ ಅತ್ತ ಇಡುವುದು.. ಅದಕ್ಕೆ ಪೌಡರ‍್ ಹಾಕಿ ತಾಳಕ್ಕೆ ಮೆತ್ತಗೆಗೊಳಿಸುವುದು.... ಮೈಕ್ ಎತ್ತರಿಸುತ್ತಿದ್ದ ಅವನು, ಒಂದು ದಿನ ಕೇಳಿಯೇ ಬಿಟ್ಟ
" ಬಾಬಣ್ಣ ನನಗೆ ಸಂಗೀತ ಕಲಿಸಿಕೊಡಿ"
"ಕಲಿಸುತ್ತೇನೆ"..... ಆ ದಿನಗಳಿಗೆ ಕಾಯುತ್ತಿದ್ದವನ ನಿದ್ದೆಗೆಡಿಸಿ ಮಾವನ ಪೆಟ್ಟುಗಳಿಗೆ ಮೈ ಸೆಟೆದುಕೊಳ್ಳುತ್ತಿವೆ. ! ಸ.ರಿ.ಗ.ಮ.ಪ.ದ.ನಿ.ಸ... ಏರಿಳಿತಕ್ಕೆ  ಉಬ್ಬೇರಿಸಿ ಆಲೋಚಿಸುತ್ತಾನೆ. ಇಲ್ಲಿಂದ ಓಡಿ ಹೋದರೋ...?
ಶಾಲೆಯಲ್ಲಿ ತರಗತಿಯೊಳಗೆ ವಾರಿಜ ಟೀಚರ್ ಬಂದರು.
" ಇಲ್ಲಿ ಯಾರೆಲ್ಲಾ ಹಾಡು ಹಾಡುತ್ತೀರಿ?"
" ಟೀಚರ್ ರವಿ ಹಾಡುತ್ತಾನೆ " ಹೆಸರು ಬರೆದುಕೊಂಡಿದ್ದಾರೆ.
" ಇಲ್ಲಿ ಯಾರೆಲ್ಲಾ ಸಾಮಾನ್ಯ ಜ್ಞಾನಸ್ಪರ್ಧೆಗೆ ಸಿದ್ಧರಿದ್ದೀರಾ?"
ಯಾರು ಯಾರು ಕೊಟ್ಟರೋ ಅವರ ಹೆಸರು ಬರೆದುಕೊಂಡ ಆ ಟೀಚರ್....
 " ನಿನ್ನ ಹೆಸರು ಬರೆದುಕೊಂಡಿದ್ದೇನೆ"
" ಇಲ್ಲ ಟೀಚರ್ .. ನನಗೆ ಗೊತ್ತಿಲ್ಲ"
" ಬರೆಯಬೇಕು... ಬರೆಯದಿದ್ದರೆ ಬಾಸುಂಡೆ ಬರಿಸುತ್ತೇನೆ  ಹುಷಾರ್.  "
ತುಟಿ ಎರಡಾಗಲಿಲ್ಲ...ಮಾವ ಶಾಲೆಗೆ ಬರುವುದು ಇಷ್ಟವಿರಲಿಲ್ಲ.... ಏನು ಕೇಳುವರೋ.. ಏನು ಬರೆಯುವುದು ?
ಹಾಡುಗಾರಿಕೆ ಮುಗಿಯಿತು.. ! " ನಿಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ನಿಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ಯಾರು?. ಯಾರು, ಏನೆಂಬ 15  ಯಾರುಗಳಿಗೆ ಖಡಕ್ಕಾಗಿ ಉತ್ತರಿಸಿದ್ದ ... ಸಾಮಾನ್ಯ ಜ್ಞಾನ ಸ್ಪರ್ಧೆಯೂ ಮುಗಿಯಿತು.. ಶಾಲೆಯ ಮಕ್ಕಳೆಲ್ಲರೂ ಬಹುಮಾನಕ್ಕಾಗಿ ಸಭಾಂಗಣದಲ್ಲಿ ಕಾದಿದ್ದಾರೆ. ಆ ತಂಗಮ್ಮ ಟೀಚರ್ ಬಂದು ಹೇಳಿದರು...
" ಮಗು ನೀನು ಹಾಡು ಹಾಡುವುದನ್ನು ಬಿಡಬೇಡ"   
"ಇಲ್ಲ... ಬಿಡುವುದಿಲ್ಲ  ಏಕೆ?"  
ವೇದಿಕೆಯಲ್ಲಿ ಎರಡು ಪ್ರಶಸ್ತಿಗಾಗಿ ಎರೆಡೆರಡು ಬಾರಿ ಹೆಸರು ಕರೆಯುತ್ತಿದ್ದಾರೆ..
." ಹೌದು..! ಅದು ಅವನದೇ ಹೆಸರು"
ಎರಡೆರಡು ಬಾರಿ ಮೈ ಚಿವುಟಿಕೊಂಡ... ಈಗ ನಿರ್ಧರಿಸಿದ
" ನಾನು ಸಂಗೀತ ಕಲಿಯಬೇಕು ಟೀಚರ್ "
ಆ ದಿನ ಸಂಜೆಯೇ ಮನೆಗೆ ನುಗ್ಗಿದವವನಿಗೆ " ಶಂಕರಾ... ನಾದ ಶರೀರಾಪರ.... ವೇದ ವಿಹಾರ ಪರ....ಜೀವೇಶ್ವರ...!"  ಇದೇನು ಗಂಟಲು ಗೊತ್ತಿಲ್ಲದಂತೆ  ಸ್ವರ ಹೊರಡಿಸತೊಡಗಿದೆ?.
" ಮಡಿಕೇರಿಗೆ ಕೆ.ಜೆ.ಏಸುದಾಸ್‍ ಬರುತ್ತಾರಂತೆ "
" ಟಿಕೇಟು ಇದೆಯೇ ?"  
" 25  ರೂಪಾಯಿಯಿಂದ  5,000 ಸಾವಿರ ರೂಪಾಯಿವರೆಗೆ?" ತರಗತಿಯ ಹುಡುಗ ಸತ್ತಾರ‍್ ಹೇಳಿದ.
" ನೀನು ಬರುತ್ತೀಯ"
"ಬರುತ್ತೇನೆ"
" ಮೂರ್ನಾಡಿನಿಂದ ಮಡಿಕೇರಿಗೆ 15 ಕಿ.ಮೀ.ದೂರವಿದೆ. ಕಾರ್ಯಕ್ರಮ ರಾತ್ರಿ 9 ಗಂಟೆಗೆ. ಟಿಕೇಟು ಇಲ್ಲ.. ಬಸ್‍ಗೆ ದುಡ್ಡು ? "
" ಮನೆಯಲ್ಲಿ ಮಾವನಿಗೆ ಗೊತ್ತಾದರೆ ಹೊಡೆಯುತ್ತಾರೆ.."
ಸಂಜೆ 5.30 ಗಂಟೆಗೆ ರಾತ್ರಿಯ ಕಪ್ಪು ಕಾಣಿಸುತ್ತಿಲ್ಲ. ಡಾಂಬರು ಬಿಸಿ ಮುಟ್ಟುತ್ತಿಲ್ಲ. ಮಡಿಕೇರಿಗೆ ಪ್ರಯಾಣಿಸಿವೆ ಆ ನಾಲ್ಕು ಚಪ್ಪಲಿಯಿಲ್ಲದ ಬರಿಗಾಲುಗಳು. ಮನೆಯಲ್ಲಿ ಗೊತ್ತಾಗದಿದ್ದರೆ ಸಾಕು.  ಹಾಡು ಎದೆಯಲ್ಲಿ ಕೇಳುತ್ತಲೇ ಇರಲಿ "ಮರಿ ಮರಿ ನಿನ್ನೇ ... ಮುರಳಿದ..." 
ಮಡಿಕೇರಿ ಪೊಲೀಸ್‍ ಮೈದಾನದಲ್ಲಿ ಸಾಗರವೋ ಸಾಗರ.... ಸಾಸಿವೆ ಕೆಳ ಬೀಳದಷ್ಟು ಜನ ಸಾಗರ.. ಏಸುದಾಸ್ ಎಲ್ಲಿ ? . ಟಿಕೇಟು ಪಡೆದುಕೊಂಡವರು ಬಿದಿರಿನ ಬೇಲಿಯ ಆವರಣದೊಳಗೆ ಆಸೀನರಾಗಿದ್ದಾರೆ. ಬದಿಯಲ್ಲಿ ನಿಂತವರು ಎತ್ತರ ಎತ್ತರದ ಜನರು. ಕತ್ತು ಎತ್ತಿ ಎತ್ತಿ ಕಣ್ಣೆತ್ತಿ ತಿರುಗಿಸಿದರೂ ವೇದಿಕೆ ಕಾಣಿಸುತ್ತಿಲ್ಲ.  ಮುಗ್ಗರಿಸಿದರೂ ಮೇಲೇಳಲಾಗದಷ್ಟು  ಇಕ್ಕಟ್ಟಿನ ನಡುವೆ ನುಸುಳಿದ. ಬಿದಿರ ಬೇಲಿಯ ದಾಟಿ ಬದಿಯಲ್ಲಿ ನಿಂತುಕೊಂಡವನಿಗೆ ಏಸುದಾಸರು ಕಾಣಿಸುತ್ತಿಲ್ಲ. ಅದೋ ಬಿಳಿ ಪೈಜಾಮ ತೊಟ್ಟ ವ್ಯಕ್ತಿ ಹಾಡುತ್ತಿದ್ದಾರೆ " ಶಬರೀ... ಗಿರಿನಾಥ ... ದೇವ ....! ಅಭಯ ನೀಡಯ್ಯಪ್ಪಾ..... ದೇವ "
" ಅವರು ಏಸುದಾಸರ..?.. ಹೇ ಸತ್ತಾರು ಅವರು ಯಾರು?"
" ಹೌದು"
ಇವರನ್ನೊಮ್ಮೆ ಮುಟ್ಟಿ ನೋಡಬೇಕು.....! " ಅವರೊಂದಿಗೆ ಹಾಡುತ್ತಿರುವ ಆ ಲಂಗ- ದಾವಣಿ ಹುಡುಗೀಯರು ಯಾರು?"
"ಗೊತ್ತಿಲ್ಲ"
ನಿರೂಪಕರು ಒಂದು ಹಾಡು ಮುಗಿದಂತೆ.. ಮಾತು ಮುಂದುವರೆಸಿದ್ದಾರೆ. 
"ಇದೀಗ  ಜನಪ್ರೀಯ ಗೀತೆ ವಿಷ್ಣುವರ್ಧನ್‍ ಅಭಿನಯದ "ಬಂಧನ" ಚಿತ್ರದಿಂದ . " ಗಾಯಕ ಏಸುದಾಸರೊಂದಿಗೆ ಗಾಯಕಿಯರಾದ ಕೆ.ಎಸ್‍. ಚಿತ್ರಾ ಮತ್ತು ಸುಜಾತ..."
ಇದು ಕೊನೆಯ ಹಾಡು....
 " ಸತ್ತಾರು ನನಗೆ ಅವರನ್ನು ಮುಟ್ಟಿ ನೋಡಬೇಕು"
" ಬಾ ನಡೆ"
ವೇದಿಕೆ ಹಿಂಬದಿಗೆ ಬಂದವರಿಗೆ ದಾರಿಯಿಲ್ಲ. ಪೋಲಿಸರು ಬಿಡುತ್ತಿಲ್ಲ.
" ಇಲ್ಲ ನನಗೆ ಏಸುದಾಸರ ಕೈ ಮುಟ್ಟಬೇಕು"
" ಅದೋ  ಅವರು ಅಲ್ಲಿದ್ದಾರೆ.... ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ...."
ಜನರ ಗುಂಪು ಬೇದಿಸಿ ನುಗ್ಗಿದವರಿಗೆ ಜನರು-ಪೋಲಿಸರು ಗೊತ್ತಾಗಲೇ ಇಲ್ಲ. ನೇರವಾಗಿ  ಫೊಟೋ ತೆಗೆಯುತ್ತಿದ್ದವರ ಮಧ್ಯದಲ್ಲೇ ಮುಗಿಬಿದ್ದ ಬಾಲಕ ಏಸುದಾಸರ ರೋಮ ತುಂಬಿದ ಸಂಗೀತದ ಕೈಗಳೆರಡನ್ನೂ ತಡವ ತೊಡಗಿದ. ಅಚಾನಕ್ ಸ್ಪರ್ಶಕೆ ಕೊಂಚ ಕತ್ತೆತ್ತಿ ನಗು ಮೊಗದಲ್ಲೇ ನೋಡುತ್ತಾರೆ ಏಸುದಾಸರು .
" ಬೆನ್ನು ತಡವಿದರು.. ಬಾಲಕ ಮೈನವಿರೇಳಿಸಿಕೊಂಡ..." 
ಎಷ್ಟು ಫೋಟೋಗಳಲ್ಲಿ ಸಿಕ್ಕಿಸಿಕೊಂಡರೋ ಗೊತ್ತಿಲ್ಲ... ಪಕ್ಕದಲ್ಲಿ ಗಾಯಕಿಯರಾದ ಚಿತ್ರಾ.... ಸುಜಾತ....  ಒಂದೈದು ನಿಮಿಷ  ಮಾತ್ರ..! ಜನಸಾಗರದಿಂದ ಕಣ್ಮರೆಯಾಗುತ್ತಿದ್ದಾರೆ ಏಸುದಾಸರು...! ಕಾರು ಹತ್ತಿ ಹೋಗುವವರೆಗೆ ನೆಟ್ಟಿದ್ದ ಕಣ್ಣು ಹಿಂದಕ್ಕೆಳೆದುಕೊಳ್ಳಲು ಕೊಂಚ ಆಲೋಚಿಸಿದ... ಮತ್ತೊಮ್ಮೆ ಹಾಡು ಕೇಳುತ್ತಿದೆ " ಎಲ್ಲೆಲ್ಲೂ ಸಂಗೀತವೇ..... ಕೇಳುವ ಕಿವಿ ಇರಲು... ನೋಡುವ ಕಣ್ಣಿರಲು.. ಎಲ್ಲೆಲ್ಲೂ ಸಂಗೀತವೇ..."
15 ಕಿ. ಮೀ. ದೂರದ ಮೂರ್ನಾಡು ಏಸುದಾಸರು ಹೋಗುವವರೆಗೆ ನೆನಪಾಗಲಿಲ್ಲ. ರಾತ್ರಿ 12  ಗಂಟೆಯ ಕಗ್ಗತ್ತಲು.... ಹಿಂದೆ ಹಿಂದೆಯೇ ಬೆನ್ನು ಹತ್ತಿದವನಿಗೆ
" ಸತ್ತಾರು ಹೋಗುವ?"
" ಅಹಾ..! ಹೋಗುವ... ರಾತ್ರಿ ಕಣೋ..ನನಗೆ ದೆವ್ವಗಳ ಹೆದರಿಕೆ."
’ ಮಾವ ಹೊಡೆಯುತ್ತಾರೆ.... ದಾರಿಯಲ್ಲಿ ವಿದ್ಯುತ್‍ ಕಂಬದ ದೀಪವಿದೆ. "
ಶುರುವಾಗುತ್ತಿದೆ ಕಗ್ಗತ್ತಲೆಯಲ್ಲಿ ಸಂಗೀತದ ಓಟಗಳು. ಕೆಲವೊಮ್ಮೆ ಬಿರುಸಾಗಿ .. ಒಂದಷ್ಟು ಓಡಿ.. ಮತ್ತೊಮ್ಮೆ ಕುಳಿತು..ಇನ್ನೊಂದಷ್ಟು ನಡೆದು ನಿಧಾನವಾಗಿ.. ನಟ್ಟ ನಡುರಾತ್ರಿಯ ಮಸಣದಂತ  ಮೂರ್ನಾಡು ಪಟ್ಟಣಕೆ ಬಂದವರಿಗೆ ಕಗ್ಗತ್ತಲೆಯಲ್ಲಿ ದಿಕ್ಕಿಲ್ಲದೆ ಮನೆಯವರ ಭಯದ ಕತ್ತಲೆ ಆವರಿಸಿದೆ. ಅವನು ಅವನ ಮನೆಗೆ ನಡೆದ. ಏಟು ಸಿಗುವುದು ಖಾತ್ರಿಯಾಯಿತು.  ಮೆಲ್ಲನೇ ಅಂಗಡಿಯ ಕದ ತೆರೆದು ಒಳ ನುಗ್ಗಿದ. ಚಿಲಕ ತೆರೆದೇ ಇತ್ತು. ಗೊತ್ತಿತ್ತು , ಚಿಲಕ ತೆರೆದೇ ಇಟ್ಟಿದ್ದರು... ! ಇದು ಹೊಸತಲ್ಲ....! ಒಳಗೆ ಬಂದಾಕ್ಷಣ ಅಲ್ಲಿಯವರೆಗೆ ನೆನಪಿರದ  ಹೊಟ್ಟೆ ಹಸಿಯುತ್ತಿದೆ..ಅಡುಗೆ ಮನೆಗೆ ಹೆಜ್ಜೆಯಿಕ್ಕಿ ಅನ್ನದ ಪಾತ್ರೆಯ ಮುಚ್ಚಳ ತೆಗೆದ.
" ಎಲ್ಲಿಗೆ ಹೋಗಿದ್ದೆ ?"
ತಿರುಗಿ ನೋಡಿದ. ನಡುಗುತ್ತಲೇ ಮಾವನ ಮುಂದೆ ನಿಂತಿದ್ದಾನೆ. ಮುಖ ಕಾಣದ ಮಾವನ ಕೈಗೆಳೆರಡು ಕೆನ್ನೆಗೆ ಅಪ್ಪಳಿಸಿದವು. ಕೈಯಲ್ಲಿದ್ದ ಅನ್ನ ತುಂಬಿದ ತಟ್ಟೆ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಯಿತು. ಅದು ರಾತ್ರಿಯಂತಹ ರಾತ್ರಿ 3 ಗಂಟೆಗೆ.
" ಹಾಳಾಗಿ ಹೋದವನೇ . ಸಂಗೀತ.. ಸಂಗೀತ.... "
ಬೆಳಿಗ್ಗೆ ಎದ್ದವನಿಗೆ ಅಲ್ಲಲ್ಲಿ ಕೈಕಾಲು ನೋವು... ಮುಟ್ಟಿ ನೋಡಿದ. ಆಹಾ ! ಬಾಸುಂಡೆಗಳು. ರಾತ್ರಿ ಏಸುದಾಸರ ಕೈ ಸ್ಪರ್ಶ ನೆನಪಾದವು.
 " ನಾನು ಸಂಗೀತ ಕಲಿಯಬೇಕು... ಇಲ್ಲಿಂದ ಓಡಿ ಹೋದರೋ ?"
ಒಂದು ಸಂಜೆ " ಪ್ರಜಾವಾಣಿ" ಪತ್ರಿಕೆ ತಿರುವುತ್ತಿದ್ದಾನೆ. "ಧರ್ಮಸ್ಥಳ ಹೆಗ್ಗಡೆಯವರಿಂದ ಸಂಗೀತ ಆರಾಧಕರಿಗೆ ಸನ್ಮಾನ" ಸುದ್ದಿ..! . ವಿಳಾಸಕ್ಕಾಗಿ ಅತ್ತಿತ್ತ ಪರದಾಡಿದ. ಸಿಕ್ಕಿತು..! ಒಂದು ವಿದಾಯದ ಕ್ಷಣಗಳು ನಿಧಾನವಾಗಿ ತೆರೆದುಕೊಳ್ಳಲು ಹವಣಿಸಿದವು.."ಮನೆ ಬಿಟ್ಟು ಓಡಿ ಹೋಗುತ್ತಿದ್ದೇನೆ..." .. ಎದೆಯವರೆಗೆ ಗುರಿಯೊಂದು ಕೂಗಿ ಕರೆಯಿತು...  ಸಂಗೀತ ಕಲಿಯಬೇಕು ! ಅಂದೇ ಒಂದು " ಕಾರ್ಡು"  ಬರೆದ ನೇರವಾಗಿ ವೀರೇಂದ್ರ ಹೆಗ್ಗಡೆಯವರಿಗೆ..
" ನಾನು ಧರ್ಮಸ್ಥಳಕ್ಕೆ ಬರುತ್ತೇನೆ. 6 ನೇ ತರಗತಿಗೆ ಪಾಸಾಗಿದ್ದೇನೆ. ನನಗೆ ಸಂಗೀತ ಕಲಿಸಿಕೊಡಿ"
ಬೆಳಿಗ್ಗೆ-ಸಂಜೆಗಳ ಓಟಗಳಿಗೆ ಹೆಜ್ಜೆಗೊಂದು ಹಾಡು ಗುನುಗುತ್ತಲೇ ಅಂಚೆ ಕಚೇರಿಗೆ ಭೇಟಿಯಿತ್ತ... ಅಲ್ಲೆ ಬದಿಯ ಹೋಟೆಲಿನಲ್ಲಿ ರೇಡಿಯೋಂದು ದೇವರನ್ನು ಹೊಗಳುತ್ತಾ ಹಾಡು ಹಾಡುತ್ತಿದೆ.
ಮನೆಗೆ ಬಂದವನು ಅದೇ ಹಾಡನ್ನು ಗುನುಗ ತೊಡಗಿದ...." ನಟವರ ಗಂಗಾಧರ... ಉಮಾ ಶಂಕರ... ನಾದ... ವಿನೋದ.."
------------------------------------------------------------------------------------------
CLICK BELLOW (  ಮುಂದುವರೆದ  ಭಾಗ-3  )
Part-3 ಅಜ್ಜಿ ...ನಾನು ಸಂಗೀತ ಕಲಿಯಲು ಹೋಗುತ್ತಿದ್ದೇನೆ ..! http://ravimurnad.blogspot.com/2012/05/blog-post_29.html
Part-1 “ಸಂಗೀತ ಕಲಿಸಿಕೊಡಿ” ಎಂದ ಬಾಲಕ ಧರ್ಮಸ್ಥಳ ಹೆಗ್ಗಡೆಯವರಿಗೆ ...
Part-4 "ದಣಿಗಳೇ ನಾಳೆ ಮನೆಗೆ ಹೋಗಿ ಬರುತ್ತೇನೆ"

ಮಂಗಳವಾರ, ಮೇ 8, 2012

“ಸಂಗೀತ ಕಲಿಸಿಕೊಡಿ” ಎಂದ ಬಾಲಕ ಧರ್ಮಸ್ಥಳ ಹೆಗ್ಗಡೆಯವರಿಗೆ "ಕಾರ್ಡು" ಹಾಕಿದ್ದ !


ವಯಸ್ಸು 12... ಇಸವಿ 1984 . 5 ನೇ ತರಗತಿ ಪರೀಕ್ಷೆ ಬರೆದು 6 ನೇ ತರಗತಿಗೆ ತೇರ್ಗಡೆ ಹೊಂದಿದ್ದಾನೆ. " ಕಾರ್ಡು’ ಹಾಕಿದ ದಿನದಿಂದ ಧರ್ಮಸ್ಥಳದ ಪತ್ರ ಬರುವುದನ್ನೇ ದಾರಿ ನೋಡುತ್ತಿದ್ದ.  " ನನಗೆ ಒಂದು ಪತ್ರ ಬಂದಿದೇಯೇ?". ಪರಿಚಯಸ್ಥ ಅಂಚೆಯವನು ಪೊನ್ನಪ್ಪ ಇಂದು " ಇಲ್ಲ"  ಎಂದು ಹೇಳದಿದ್ದರೆ ಸಾಕು. ಅವನು ಅದನ್ನೇ ಹೇಳುತ್ತಿದ್ದ. ಶಾಲೆಗೆ ಹೋಗುವ ಮೊದಲು ಆ ಬೆಳಿಗ್ಗೆಗಳ 7.30 ಗಂಟೆಗೆ 5 ತಿಂಗಳವರೆಗೆ ಅಂಚೆ ಕಚೇರಿಗೆ ಹಾಜರಿ ಹಾಕುತ್ತಿದ್ದ ಆ ಬಾಲಕನಿಗೆ ಒಂದು ದಿನ ಪತ್ರ ಬಂತು. ಕಂದು ಬಣ್ಣದ " ಕಾರ್ಡಿನ" ನಾಲ್ಕು ಮೂಲೆಗೆ ದೇವರ ತಿಲಕದ ಕೆಂಪು ಬಣ್ಣವಿದೆ.
" ಶ್ರೀ ಮಂಜುನಾಥೇಶ್ವರ ನಮಃ"
ಪ್ರಣಾಮಗಳು ಬಾಲಕ ರವಿಗೆ. ನಿಮ್ಮಲ್ಲಿರುವ ಕಲೆಯ ಆಸಕ್ತಿಗೆ ದೇವರು ಸದಾ ಇರುವನು. ನಮ್ಮ ಗುರುಕುಲದಲ್ಲಿ ಪ್ರತ್ಯೇಕ ಸಂಗೀತ ಶಾಲೆಯಿಲ್ಲ. ನಿಮ್ಮ ಊರಿನಲ್ಲೇ ಅಥವ ಪಕ್ಕದ ಊರಿನಲ್ಲಿ ಇರುವ ಸಂಗೀತ ಗುರುಗಳಿಂದ ಕಲಿಯಬೇಕಾಗಿ ಸಲಹೆ ನೀಡುತ್ತೇವೆ. ನಿಮ್ಮಲ್ಲಿರುವ ಆಸಕ್ತಿ ಬೆಳೆಯಲಿ . ಮಂಜುನಾಥನ ಆಶೀರ್ವಾದಗಳು..."
-ಇಂತಿ
ಆಡಳಿತಾಧಿಕಾರಿಗಳು, ಧರ್ಮಸ್ಥಳ.
ಹಿರಿಹಿರಿ ಹಿಗ್ಗಿಬಿಟ್ಟ. ಎಷ್ಟು ಸಲ ಓದಿದನೋ ಗೊತ್ತಿಲ್ಲ. ಸಮಾಧಾನವಾಗಲಿಲ್ಲ..... ಕಾರ್ಡಿನಲ್ಲಿರುವ ಪ್ರತಿಯೊಂದು ಪದಗಳನ್ನು ಕಂಠಪಾಠ ಮಾಡಿದ ಮೇಲೇ ಸಮಾಧಾನವಾಯಿತು. ಆ ಬಾಲಕನ ಕಣ್ಣಲ್ಲಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಬರೆದಂತೆ ಇತ್ತು ಆ " ಕಾರ್ಡು" !. ಈಗ  ಸಂಗೀತದ ಶಾಸ್ತ್ರಗಳೇ ಗೊತ್ತಿಲ್ಲದ ಮೂರ್ನಾಡು ಕೇರಿಯಲ್ಲಿ " ಸ..ರಿ..ಗ..ಮ..ಪ..ದ..ನಿ..ಸ.." ತಾಳ ಗುರುತಿಸುವವರನ್ನು ಹುಡುಕತೊಡಗಿತು ಸ್ವರಗಳು.
ಒಂದೊಂದಾಗಿ ಬಿಚ್ಚ ತೊಡಗಿದವು ಸಂಗೀತದ ಸುರುಳಿಗಳು........
ಆ ಸುತ್ತಲೂ ಹಸಿರು ತುಂಬಿದ ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಲೈನ್‍ ಮನೆಗಳ ಹೊರಾಂಗಣದಲ್ಲಿ ಕುಳಿತು ಆಲಿಸುತ್ತಿದ್ದಾನೆ . ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಬಂದ ಕಾರ್ಮಿಕ ಹೆಂಗಸರ ಅಡುಗೆ ಕೋಣೆಯಲ್ಲಿ " ಉದೋ ಉದೋ" ಒಲೆ ಉರಿಸುವ ಊದು ಕೊಳವೆ ಶಬ್ದ. ಪುಟ್ಟ ಪುಟ್ಟ ಮನೆಗಳ ಸೀಳಿ ಗಗನಚುಂಬಿ ಮರಗಳ ಎಲೆಯೊಳಗೆ ಮರೆಯಾಗಿ ಹೊಗೆಗಳು ಹೊರಗೋಡುತ್ತಿದ್ದವು. ಅದಷ್ಟು ಲೈನ್ ಮನೆಗಳಲ್ಲಿ ರೇಡಿಯೋ ಹಾಡು ಹಾಡುತ್ತಿವೆ...ಸಿಲೋನ್‍ ಸ್ಟೇಷನ್ ,ಬೆಂಗಳೂರು ಸ್ಟೇಷನ್. ವಿವಿಧ ಭಾರತಿ.. ಕನ್ನಡ, ತಮಿಳು, ಮಲಯಾಳಂ, ಹಿಂದಿ....
"ಇದು ಆಕಾಶವಾಣಿ..... ಧಾರವಾಡ ಕೇಂದ್ರ, ಸಮಯ 6 ಗಂಟೆ,  9  ನಿಮಿಷ, 30  ಸೆಕೆಂಡುಗಳಾಗಲಿದೆ . ಇದೀಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು...."  ಕಿವಿ ನಿಮಿರಿಸಿಕೊಳ್ಳುತ್ತಾನೆ ..."ಅಮೃತ ಘಳಿಗೆ" ಚಿತ್ರದ ಗೀತೆ.
"ಹಿಂದೂಸ್ಥಾನವೂ ಎಂದೂ ಮರೆಯದ ಭಾರತ ರತ್ನವೂ ಜನ್ಮಿಸಲಿ......"
" ಹೇ... ಏನೋ ಮಾಡುತ್ತಿದ್ದೀಯಾ... ಓದುವುದಕ್ಕಲ್ಲವೇ ಹೇಳಿದ್ದು.."ಅಯ್ಯೋ ಚಿಕ್ಕಮ್ಮ ವಾರೀಜಳ ಸ್ವರ...! ಭಾರಿಸುವುದೆಂದರೆ ಹಲ್ಲು ಕಡಿದು ಭಾರಿಸುತ್ತಿದ್ದಳು. ಪ್ರೀತಿಯಿಲ್ಲವೇ?!
ಅದು ಕಿವಿಗೆ ಬೀಳದಂತೆ ಹಾಡು ಎದೆಗೆ ತುಂಬುತ್ತಿದ್ದವು.  ಈ ಹಾಡನ್ನು ಹೇಗಾದರೂ ಮಾಡಿ ಕಲಿಯಬೇಕು. ಹೇಗೆ ಕಲಿಯುವುದು? ನನಗೆ ಹಾಡು ಕಲಿಯಬೇಕು. ಸುಂಟಿಕೊಪ್ಪ ಪಟ್ಟಣದ ರವಿವಾರದ ಸಂತೆ ದಿನ ಬಂತು. ಅಜ್ಜಿಯನ್ನು ಕಾಡಿಬೇಡಿ ದಾರಿಬದಿ ಪುಸ್ತಕ ವ್ಯಾಪಾರಿಯಿಂದ  25 ಪೈಸೆಗೆ "ಚಲನಚಿತ್ರ ಗೀತೆಗಳು" ಪುಸ್ತಕ ಖರೀದಿಸಿದ. ಹಾಡುಗಳು ಒಂದೊಂದಾಗಿ ಕಂಠಪಾಠವಾತ್ತಿವೆ.  ಯಾರಿಗೂ  ಕಾಣದ ಕಾಫಿ ಗಿಡಗಳ ಬುಡದಲ್ಲಿ , ಲೈನ್ ಮನೆ - ಶಾಲೆಯ ಬಚ್ಚಲು ಮನೆಯಲ್ಲಿ , ಶಾಲೆಗೆ ಹೋಗುವ ದಾರಿಯಲ್ಲಿ  ಒಮ್ಮೆ .. ಮತ್ತೊಮ್ಮೆ....ಮಗದೊಮ್ಮೆ ಹಾಡುತ್ತಲೇ ಇದ್ದ. 3 ನೇ ತರಗತಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಎಲ್ಲರೂ ಹಾಡು ಸ್ಪರ್ಧೆಗೆ ಹೆಸರು ನೋಂದಾಯಿಸಿದರು.  ಇವನೂ ನೋಂದಾಯಿಸಿದ.
ಗೊತ್ತಾಗಿದ್ದೇ ತಡ ಲೈನ್ ಮನೆಯ ಹುಡುಗ- ಹುಡುಗಿಯರ ಪ್ರಶ್ನೆಗಳು. " ಹೇ ಸ್ವಾತಂತ್ರ್ಯೋತ್ಸವಕ್ಕೆ ಏನು ಹಾಡು ಹೇಳುತ್ತೀಯ?!  ಒಮ್ಮೆ ಇಲ್ಲಿ ಹಾಡು"
ನಾಚಿಕೆ ನೆತ್ತಿಗೇರುತ್ತಿದೆ. ಹೇಗೆ ಹಾಡುವುದು ? " ಹೇ ಇವನು ಹಾಡು ಹೇಳುತ್ತಾನಂತೆ... ದೊಡ್ಡ ಹಾಡುಗಾರ" ಕಿಚಾಯಿಸುತ್ತಿದ್ದಾರೆ.... ಎಲ್ಲರೂ ನನ್ನನ್ನೇ ನೋಡುವರಲ್ಲ..?!.ಕೈಕಾಲು ಸಣ್ಣಗೆ ನಡುಗತೊಡಗಿದವು.. ಸ್ವಾತಂತ್ರ್ಯೋತ್ಸವದ ವೇದಿಕೆ ಹತ್ತಲು ಹೆಜ್ಜೆಗಳು ಮರೆತವು. ಅಂದೇ ಸಂಜೆ  ಮತ್ತೊಮ್ಮೆ ಕಾಫಿ ಗಿಡದ ಬುಡದಲ್ಲಿ ಅದೇ ಹಾಡು ಹಾಡಿದ. ಚೆನ್ನಾಗಿದೆಯೇ...ಗೊತ್ತಿಲ್ಲ.... ಕಾಫಿಗಿಡದ ಎಲೆಗಳು ಗಾಳಿಗೆ ತಲೆ ಆಡಿಸಿ ಸುಮ್ಮನಾದವು.
ಸಣ್ಣ ಮಾವ ಒಮ್ಮೆ ಎಷ್ಟೇಟಿಗೆ ಬಂದಿದ್ದಾರೆ.
" ಇವನು 3 ನೇ ಕ್ಲಾಸಿನಲ್ಲಿ ಒಳ್ಳೆ ಅಂಕ ಗಳಿಸಿದ್ದಾನೆ"
"ಹೌದಾ?"  ಮತ್ತೊಮ್ಮೆ ಅಜ್ಜಿ ಸ್ವರ ಸೇರಿಸಿದರು. " 4 ನೇ ತರಗತಿಗೆ ಬೇಕಾದ ಪುಸ್ತಕಗಳನ್ನು ಶಾಲೆಯಿಂದ ಉಚಿತವಾಗಿ ಬಹುಮಾನ ನೀಡಿದ್ದಾರೆ"
ಮೂರ್ನಾಡಿಗೆ ಹೋಗುವಾಗ ಲೈನ್ ಮನೆಗಳು, ಬುಗುರಿ-ಚಿನ್ನಿ ದಾಂಡು, ಅದಷ್ಟು ಚಡ್ದಿ ಜೇಬಿನಲ್ಲಿ ತುಂಬಿಸಿಟ್ಟಿದ್ದ ಬಣ್ಣ ಬಣ್ಣದ ಗೋಲಿಗಳ "ಜಿಗಿಜಿಗಿ" ಶಬ್ಧಗಳು ಮತ್ತೆ ಮತ್ತೆ ಕೇಳುತ್ತಿವೆ. ಮತ್ತಷ್ಟು ಗೆಜ್ಜೆ ಕಟ್ಟಿ ಮಾವನ ಮನೆಯಿಂದ ಶಾಲೆಗೆ ಹೆಜ್ಜೆಯಿಟ್ಟಿದ್ದಾನೆ ಹುಡುಗ. ಹಾಡು ಕೇಳುತ್ತಿದ್ದ ಕಾಫಿಗಿಡಗಳು, ಬಚ್ಚಲು ಮನೆ, ಶಾಲೆಗೆ ಹೋದ ದಾರಿಗಳು ಮೌನದ ಕದ ತಟ್ಟಿ ಮಾರ್ಧನಿಸಿದವು. ರಾಮ ಮಂದಿರದಲ್ಲಿ ಬೆಳಿಗ್ಗೆ ಭಕ್ತಿ ಶ್ಲೋಕಗಳು ಕೇಳುತ್ತಿವೆ.......ಮಸೀದಿಯಲ್ಲಿ ಲಯಬದ್ದ ಪ್ರಾರ್ಥನೆ .....!   ಪಟ್ಟಣದ ಬೀದಿಯನ್ನು ಎಚ್ಚರಿಸುವಾಗ ಮನೆಯ ಮುಂದಿನ ಪಂಚಾಯಿತಿ ನಲ್ಲಿಯಲ್ಲಿ ಉಗುಳುವ ನೀರಿನ ರಭಸಕ್ಕೆ ಚಂಡೆ ಮದ್ದಳೆ ಸ್ವರವನ್ನು ಆಲಿಸಿದ್ದ . ಬಿಂದಿಗೆಯೊಳಗೆ ನೀರು ತುಂಬುತ್ತಿದೆ.... ಮತ್ತೊಂದು ಮೃದಂಗ ನಾಧ..!
" ಇವತ್ತು ಸಂಜೆ ಪಳನಿ ಸ್ವಾಮಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯಿದೆ ಬರುತ್ತೀಯಾ?"
ವೃತಾಧಾರಿಗಳ ನಿತ್ಯ ಭಜನೆ ಕಾರ್ಯಕ್ರಮಕ್ಕೆ ಬೀದಿಯ ಹುಡುಗರು ಕನಸು ಬಿಚ್ಚುತ್ತಿದ್ದಾರೆ.
" ಪೂಜೆ ಮುಗಿದ ಮೇಲೆ ಪ್ರಸಾದ ಕೊಡುತ್ತಾರೆ"
"ಹೌದಾ..! ಬರುತ್ತೇನೆ" .
ಒಂದಷ್ಟು ಅಯ್ಯಪ್ಪಾ ಸ್ವಾಮಿ ಭಜನಾವಳಿಗಳು .. ಕೆ.ಜೆ.ಏಸುದಾಸ್, ಡಾ. ರಾಜ್‍ ಕುಮಾರ‍್, ಕೆ. ವೀರಮಣಿ, ಜಯಚಂದ್ರನ್‍ ನಾಲಗೆಯಲ್ಲಿ ನಲಿದಾಡ ತೊಡಗಿದವು, ಪಟ್ಟಣ ತುಂಬಾ ಭಜನಾವಳಿಗೆ ಗೊತ್ತಿಲ್ಲದ ಆರಾಧಕರು ಕರೆಯುತ್ತಲೇ ಇದ್ದಾರೆ.  ಭಕ್ತರು ಹಾಡಿಸಿ ಹಾಡಿಸಿ ರಾಗ ಹೆಚ್ಚಿಸಿದ್ದು ಗೊತ್ತಾಗಲೇ ಇಲ್ಲ .! ಮತ್ತಷ್ಟು ಹಾಡಿದ... ರಾಮ ಮಂದಿರ, ಗಣೇಶೊತ್ಸವ , ಅವರಿವರ ಮನೆಯಲ್ಲಿ ಹಾಡುತ್ತಾ ತಾಳ ಹಾಕುತ್ತಿದ್ದ. ತಲೆ ಕಂಡದ್ದೇ ತಡ   " ಒಂದು ಹಾಡು ಹೇಳೋ" . ತಲೆಯಾಡಿಸುತ್ತಾ... ಕಣ್ಣು ಮುಚ್ಚಿ ಲೀನನಾದವನಿಗೆ ......
" ಚೆನ್ನಾಗಿ ಹಾಡುತ್ತೀಯಾ"..... ತುಟಿ ಸೀಳಿ ಕಿವಿ ನಿಮಿರಿಸಿದ ನಗುವಿಗೆ ಒಸರುತ್ತಿವೆ ನಾಚಿಕೆ ಬೆವರ ಹನಿಗಳು !.. ಮುಖ ಒರೆಸಿಕೊಂಡ.... ಯಾರಿಗೂ ಕಾಣದಂತೆ ಓಡಿ ಕಣ್ಮರೆಯಾದ..! ಈಗ ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಲೈನ್ ಮನೆಯ ಹುಡುಗ- ಹುಡುಗಿಯರು ನೆನಪಾದರು...!
" ಹೇ... ಹುಡುಗ ಇಲ್ಲಿ ಬಾ.... ಈ ಹಾಜರಿ ಪುಸ್ತಕವನ್ನು 2 ನೇ ಕ್ಲಾಸಿಗೆ ಕೊಟ್ಟು ಬಾ" ಭೋಜಮ್ಮ ಟೀಚರ‍್ ಕಳುಹಿಸಿದರು.
ಹಾಜರಿ ಪುಸ್ತಕ ಹಿಡಿದು ಹೆದರುತ್ತಲೇ ಒಳ ನುಗ್ಗಿದವನಿಗೆ ತಂಗಮ್ಮ ಟೀಚರ್  " ಒಂದು ಹಾಡು ಹೇಳು ಮಗು"
" ಹೇ.. ಮಕ್ಕಳೇ ಸುಮ್ಮನಿರಿ "
ಪುಟಾಣಿಗಳು ಮೌನ ವಹಿಸಿದ್ದಾರೆ.. ಏನು ಹಾಡುತ್ತಾನೆ ಇವನು? ಸ್ವರಗಳು ಗಂಟಲು ತೆರೆದು ತುಟಿ ಅದುರಿಸಿದವು....." ಹಿಂದೂಸ್ಥಾನವೂ ಎಂದೂ ಮರೆಯದ ಭಾರತ ರತ್ನವೂ ನೀನಾಗು..."
"ಟೀಚರ್ ... ಹಾಡು  ಮುಗಿಯಿತು".... ಕಣ್ಣು ಮುಚ್ಚಿದ್ದ ಟೀಚರ್ ಕಣ್ಣು ತೆರೆದರು. " ಮಗು.. ಚೆಂದ ಸಂಗೀತ ಕಲಿಯಬೇಕು.. ದೊಡ್ಡವನಾದ ಮೇಲೆ ಹಾಡು ಹಾಡುವುದನ್ನು ಮರೆಯಬೇಡ." 
"ಆಯಿತು ಟೀಚರ್.... ಬರುತ್ತೇನೆ", ಹೇಳಿ ಮುಗಿಸುವುದರೊಳಗೆ ತರಗತಿಯ ಹೊರಗೆ ಓಡುತ್ತಿದ್ದ ಹೆಜ್ಜೆಗಳು ಹಾಡುಗಾರನ ತಾಳ ಹುಡುಕುತ್ತಿದ್ದವು....!
" ಎಲ್ಲಿಗೆ ಓಡುತ್ತಿದ್ದೀಯಾ?"
"ಸಂಗೀತ ಕಲಿಯಲು ಓಡುತ್ತಿದ್ದೇನೆ.."
ಓಡುತ್ತಿದ್ದವನನ್ನು ಯಾರೋ  ಒಮ್ಮೆ ಕರೆದರು. ಹೆಸರು ಪರಿಚಯ ಅರಿಯದ ಭಾವಗೀತೆಗಳು...
 " ಯಾವುದೀ...ಪ್ರವಾಹವೂ...! ಯಾವುದೀ...ಪ್ರವಾಹವೂ....!"