ಮಂಗಳವಾರ, ಜನವರಿ 29, 2013

ಗಾಂಧಿ ಚಿತ್ರದ ನೋಟು !



ನೋಟು ಬಂತು ಬೀದಿಗೆ
ಮುದ್ರೆಯೊತ್ತಿ ಗಾಂಧಿಗೆ
ಸರದಿ ಜನರು ಬ್ಯಾಂಕಿಗೆ |

ತಿಂಗಳಿಡೀ ಸುರಿದ ಬೆವರು
ದುಡಿದ ಮಂದಿ ಕನಸಿಗೆ |
ಅಕ್ಕಿ,ಬೇಳೆ,ಶಾಲೆ ಶುಲ್ಕ 
ಹೆಂಡತಿ, ಮಕ್ಕಳ ಬದುಕಿಗೆ |
ದುಡಿವ ಮಹಿಳೆ ಗಂಡನಿಗೆ
ನೋಟು ಹೆಂಡ ಮೋಜಿಗೆ |

ಜನನಾಯಕ ಕೊಳ್ಳೆಹೊಡೆದ
ನೋಟು ತುಂಬಾ ಓಟಿಗೆ |
ಸುಂಕವೆಂಬ ಹೆಸರಿನಲ್ಲಿ
ಸೊಂಟ ಮುರಿವ ಜನರಿಗೆ |
ಅಕ್ಕಿ,ರಸ್ತೆ,ನೀರು,ಹೆಂಡ
ಟೆಂಡರು ಕರೆದು ಸೋರಿದೆ |

ನೋಟಿಗಾಗಿ ಮದುವೆಯಾದ
ವರ ವಧುವಿನ ಭಿಕ್ಷುಕ |
ಹಣಕ್ಕಾಗಿಯೇ ಹೆಣವಾಗುವ
ಮಂದಿ ಮಸಣ ಸೂತಕ |
ಹೆಣ ಹೋಗುವ ದಾರಿಯಲ್ಲಿ
ನಾಣ್ಯ ಎಸೆವ ನಾಟಕ |
ಸತ್ತವನ ಹಣಕ್ಕಾಗಿಯೇ
ಬಂಧ,ಬಂಧ ಮಾರಕ |

ವಿದ್ಯೆ ಕೊಡುವ ಶಾಲೆಗಳಿಗೆ
ನೋಟು ವಿದ್ಯೆ ಕರಗತ |
ನೀತಿ ನುಡಿವ ಪಾಠಗಳು
ನಕಲಿ ಸಹಿಗೆ ಸೀಮಿತ |
ಪದವಿಗೊಂದು ಉದ್ಯೋಗಕೆ
ಶುಲ್ಕ ಪಡೆವ ವ್ಯಾಪಾರ |
ಲಂಚ ಕೊಡುವ ಕೆಲಸಗಳಿಗೆ
ಗಾಂಧಿ ನೋಟೇ ಅಪಚಾರ |

ಆಸ್ಪತ್ರೆಯ ದೇಗುಲದಲಿ
ವೈದ್ಯ,ದಾದಿ ದೇವರು|
ಹಣವಿಲ್ಲದೆ ಸತ್ತ ರೋಗಿ
ಹೆಣದ ಸಾಲಿಗನೆಂಬರು|
ಕೋರ್ಟು ಕಚೇರಿ ಮೇಜಿನಲ್ಲಿ
ಅಧಿಕಾರಿ ಸತ್ಯ ಸಭ್ಯರು
ಲೋಕಾಯುಕ್ತದೆಸರಿನಲ್ಲಿ
ನೋಟು ಮುಟ್ಟವವೆಂಬರು|

ಕೂಲಿಯವನ ನೋಟಿನಲ್ಲಿ
ಬೆವರ ನಾತ ಹೇಸಿಗೆ |
ಶ್ರೀಮಂತನ ಜೇಬಿಗಿಳಿದು
ಸುಗಂಧ ಅರಳಿ ನಾಸಿಕ |
ನೋಟಿಗಾಗಿ ಹಲವು ವೇಷ
ಜಗದ ತುಂಬಾ ಜನರಿಗೆ  |
ಬೆವರ ಹನಿಗೆ ಸತ್ಯವಿದೆ
ಅನ್ನ ತುಂಬಿ ಹೊಟ್ಟೆಗೆ |

ಬಾರು,ಕ್ಲಬ್ಬು ರಾತ್ರಿ ಮಬ್ಬು
ಬಿದ್ದ ಹೆಂಡ ನೋಟಿಗೆ |
ಸೊಂಟ ಕುಣಿವ ಬೆಲೆವೆಣ್ಣಿನ
ಬಾಯಿ ತುಂಬ ಮುತ್ತಿಗೆ |
ಅನ್ನಕ್ಕಾಗಿ ಸೆರಗು ಸರಿದ
ಹಾದರ ಹೆಣ್ಣ ಮಡಿಲಿಗೆ |
ಅದೇ ನೋಟು ಪೂಜೆಗೆಂದು
ಗುಡಿ ದೇವರ ಹುಂಡಿಗೆ |

ಊರು ದೇಶ ಸುತ್ತಿ ನೋಟು
ಮಿಥ್ಯ ಸತ್ಯ ನೋಡಿದೆ |
ಕಣ್ಣೀರು, ಬೆವರು,ರಕ್ತ
ನೆಕ್ಕಿ ಸ್ವಲ್ಪ ಮಾಸಿದೆ |
ಸತ್ಯಮೇವ ಜಯತೇ ವಾಕ್ಯ
ಗಾಂಧಿ ನೋಟು ಅಪ್ಪಿದೆ |
ಅನಾಚಾರ, ಅತ್ಯಾಚಾರ
ನಿತ್ಯ ಅದಕೆ ನಡೆದಿದೆ |

ನೋಟು ಬಂತು ಬೀದಿಗೆ
ಮುದ್ರೆಯೊತ್ತಿ ಗಾಂಧಿಗೆ
ಸರದಿ ಜನರ ಬದುಕಿಗೆ |
-ರವಿ ಮೂರ್ನಾಡು

ಸೋಮವಾರ, ಜನವರಿ 28, 2013

ಒಂದು ಸಾವಿರ ವರ್ಷಗಳಿಗೆ !



ಈ ಕ್ಷಣದಿಂದ ಜಿಗಿಯುತ್ತೇನೆ ಸಾವಿರ ವರ್ಷಗಳಿಗೆ
ವಾಲುತ್ತಾ ಪ್ರಾಚೀನ ಮರವೊಂದರ ಭವಿಷ್ಯದ ನೆರಳಿಗೆ
ಹುಬ್ಬೆತ್ತಿ ವಿಚಾರ ಮಾಡುವಿರೋ ನೆರಿಗೆ ಮೂಡಿಸಿ ಹಣೆಗೆ
ಉದುರುವ ಎಲೆಗಳ ಸಾವಿರಾರು ಸಾವಿಗೆ?

ಪ್ರಾಮಾಣಿಕತೆಯಿಲ್ಲದ ಸಮಾನತೆ ಪಡೆದ ನಾವು
ಸಮಯಗಳ ಆಯ್ಕೆಗೆ ಬದಲಾಗುವ ಶತ್ರುಗಳೇ ?
ಕೂದಲು,ಚರ್ಮ,ಗಡಿಯಾರದ ಕದಲಿಕೆ ಸ್ವಾಗತವು
ನೋಡಲಾಗದ ಕಂಗಳ ಮುಚ್ಚಿ ನಿಷೇಧಿಸುವುದೇ?

ಮೊದಲು ಜನಿಸಿದವರಿಗೆ ಭಾರವಿದೆ ಬದುಕಿಗೆ
ಹಗುರಾಗುತ್ತೇವೆ ಭವಿಷ್ಯ ದಿನಗಳ ಭಾರಕೆ
ಪ್ರತೀ ಹೆಜ್ಜೆಯ ಕುರುಡು ಪ್ರಯಾಣದ ತಪ್ಪಿಗೆ
ದಾಟಬಹುದೇ ಅದೇ ರಸ್ತೆಗೆ, ಅದರಂತೇ ಇನ್ನೊಂದಕೆ?

ವಾಲುತ್ತೇವೇ ನೆರಳಿಗೆ, ಅದೇ ಮರ ನೋಡುವುದು
ಪುಡಿಯಾದ ಕಲ್ಲೊಂದರ ಧೂಳು ಪತ್ತೆಯಾಗುವುದು
ಅಚ್ಚರಿಯಾಗುವುದು ,ಧೂಳಿನ ಒಂದು ಕಣ ನನ್ನದೇ
ಮೂಳೆಗಳು ನನ್ನವೇ, ಪ್ರಶ್ನೆಗಳೂ ತುಕ್ಕು ಹಿಡಿಯಬಹುದೇ ?
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಭಾನುವಾರ, ಜನವರಿ 27, 2013

ಬೆರಳಿಗಂಟಿದ ಸುಡಾನ್ ಇತಿಹಾಸ ಪುಟದ ಧೂಳಿನ ಕಣಗಳು: ಜಗತ್ತು ಶಾಪ ಹಾಕಿದ್ದೇ ಹೆಚ್ಚು |

ಆಫ್ರೀಕಾ ಅಕ್ಷರ ಪ್ರವಾಸ -2
ಹಾಗೇ ನೋಡಿದರೆ, ಈ ಸುಡಾನ್ ಆಫ್ರೀಕಾ ಖಂಡದಲ್ಲೇ ಅತೀ ದೊಡ್ಡ ರಾಷ್ಟ್ರ. ಆದರೇನು, ಅಷ್ಟೇ ದೊಡ್ಡ ಮಾನವ ಗಂಡಾಂತರದ ರಾಷ್ಟ್ರವೂ ಕೂಡ ಹೌದು. ಆಷ್ಟೇ ಪ್ರಮಾಣದ ಇಲ್ಲಿಯ ಮಾನವ ಹತಾಶೆಗಳು ತುತ್ತ ತುದಿಯಲ್ಲಿ ಗೋಗರೆಯುತ್ತಿವೆ. ತಡೆ ರಹಿತ ಧರ್ಮಯುದ್ದ, ಹೋರಾಟ ನಡೆಯುತ್ತಲೇ ಇದ್ದ ಈ ಕಪ್ಪು ನೆಲದ ಸುಡಾನಿನ್ನಲ್ಲಿ, ಹಸಿವು ಹೋರಾಟ ನಡೆಸಿತು, ರೋಗಗಳು ಸತ್ಯಾಗ್ರಹ ನಡೆಸಿ ಸದ್ದಿಲ್ಲದಂತೆ ಮನುಷ್ಯರು ಮಣ್ಣೊಳಗೆ ಸೇರಿಕೊಂಡರು.ತಮ್ಮ ತಮ್ಮಲೇ ರಕ್ಷಿಸಿಕೊಳ್ಳಲು ತಮ್ಮ ತಮ್ಮವರನ್ನೇ ಹೊಡೆದು ಕೊಂದರು. ಹಸಿವಿಗೆ ಅನ್ನವಿಲ್ಲದ ಘಳಿಗೆಯಲ್ಲಿ ಪಕ್ಕದವರ ಅನ್ನಕ್ಕಾಗಿ ಜಗಳ ಕಾದು,ಪ್ರಾಣಿಗಳ ಹಾಗೇ ಕಚ್ಚಾಡಿ ಹಸಿವು ಇಂಗಿಸಿಕೊಂಡ ನಿದರ್ಶನಗಳನ್ನು ವಿಶ್ವ ಸಂಸ್ಥೆ ರೆಫ್ಯೂಜಿ ತಂಡ ವಿಶ್ವ ದಾಖಲೆಯಾಗಿ ಕಣ್ಣ ಮುಂದೆ ಬಿಚ್ಚಿಡಬಹುದು. ಹಲವು ದಶಕಗಳ ಜಟಾಪಟಿಯಲ್ಲಿ ಸುಧಾರಣೆಗೆ ಹಲವು ದಶಕಗಳೇ ಹಿಡಿಯಬಹುದಾದಷ್ಟು ಸಾಮಾಜಿಕ ಅಸ್ತವ್ಯಸ್ತತೆಗಳು ಹರವಿಕೊಂಡಿವೆ ಸುಡಾನಿನಲ್ಲಿ. ಇರಲು ಮನೆ ಕಟ್ಟುವ ನೆಲ ಬಿರುಕಿಟ್ಟಿದೆ ಫಿರಂಗಿಯ ಸದ್ದುಗಳಿಗೆ. ನೆಲವಿದ್ದರೂ ಮನೆಯಿಲ್ಲ. ತಾಯಿ ಇದ್ದರೂ ತಂದೆಯಿಲ್ಲ.ಮಕ್ಕಳಿದ್ದರೂ ಇವರೂ ಯಾರೂ ಇಲ್ಲ.ಎಲ್ಲರೂ ಇದ್ದರೂ ತಿನ್ನಲೂ ದುಡಿಯುವ ಮೂಲವಿಲ್ಲ.ಒಟ್ಟಾರೆ  ಹಳಿದುಹೋದ ನಾಗರಿಕ ಬದುಕೊಂದು ಹೊಸ ವೇಷಕಟ್ಟಿ ನಿಲ್ಲಬೇಕಾದ ಸ್ಥಿತಿಯಿದೆ ಎಲ್ಲಾ ನೆಲಕ್ಕೆ ಹೂತು ಹೋಗಿ ಅಂಬರ ಮಾತ್ರ ತೆರದ ಈ ಮಣ್ಣಿನಲ್ಲಿ. ಮನುಷ್ಯ ಯಾವುದನ್ನೂ ಮಾಡಿ ಬದುಕುವ ಮೂಲಗಳನ್ನು ಪಡೆದುಕೊಳ್ಳಬಹುದೋ ಅದೆಲ್ಲವೂ ಈ ನೆಲದಲ್ಲಿ ಹೊಸ ಹುಟ್ಟಿಗೆ ಕಾಯುತ್ತಿದೆ. ಇಷ್ಟಕ್ಕೂ ಇಲ್ಲೊಂದು ಆಡಳಿತ ಸರಕಾರ, ಸ್ಥಳೀಯ ಆಡಳಿತ ಸಂಸ್ಥೆ ರಚನೆಗೊಂಡಲ್ಲಿ ಅವರೊಂದು ಹೊಸ ಸವಾಲು ಜಗತ್ತಿಗೆ ಎದುರಾಗುವುದು.

ಮನುಷ್ಯ ಅನ್ನುವ ಜೀವಿ ಸುಮಾರು ಒಂಬತ್ತು ಮಿಲಿಯನ್ ವರ್ಷಗಳ ಹಿಂದೆ ಸುಡಾನಿನಲ್ಲಿ ಜೀವಿಸಿದ್ದ.  ಮಧ್ಯ ಆಫ್ರೀಕಾದಿಂದ ಉಕ್ಕಿ ಮೇಡಿಟರೇನಿಯನ್ ಸರೋವರದವರೆಗೆ ನಾಲ್ಕು ಸಾವಿರ ಮೈಲುಗಳ ಉದ್ದ ಹರಿಯವ ನೈಲ್ ನದಿಯ ಸುತ್ತಳತೆಯಲ್ಲಿ ನಾಗರಿಕ ಬದುಕು ಸಾಗಿದ ಸ್ಪಷ್ಟ ಕುರುಹುಗಳಿವೆ. ಕಳೆದ ನಾಲ್ಕು ಶತಮಾನಗಳ ಹಿಂದೆ ಸುಡಾನಿನಲ್ಲಿ ಕ್ರೈಸ್ತರು ಜಾರಿಗೆ ತಂದ ಎತ್ತುಗಳಿಂದ ನೀರೆತ್ತುವ ತಂತ್ರ ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಹೊಸತೊಂದು ಆಶಾಕಿರಣ ಮೂಡಿಸಿತ್ತು. ಇದೇ ಸಂದರ್ಭ ಕ್ರಿ.ಪೂ.525ರಲ್ಲಿ ಈಜಿಫ್ಟನ್ನು ಆಳುತ್ತಿದ್ದ ಕೇಂಬೆಸಿಸ್ ರಾಜನ ಕಾಲದಲ್ಲಿ ಪರ್ಷಿಯನ್ನರು ಒಂಟೆಗಳನ್ನು ತಂದು ಈ ನೆಲದಲ್ಲಿ ಮೇಯಲು ಬಿಟ್ಟರು.

ಹೋಮರ್ ಎಂಬ ರಾಜನಿಗೆ ಸುಡಾನ್ ಬಗ್ಗೆ ಗೊತ್ತಿತ್ತು. ಅವನ ರಾಷ್ಟ್ರದ ಪ್ರಜೆಗಳು ವ್ಯಾಪಾರಕ್ಕಾಗಿ ಸುಡಾನಿಗೆ ಬಂದು ಅರಬ್ ವಜ್ರಗಳಿಗೆ,ಸಾಂಬಾರ ಪದಾರ್ಥಗಳಿಗೆ ಮತ್ತು  ಗುಲಾಮರ ಸಾಗಾಣೆಗೆ ಬಟ್ಟೆಗಳು, ವೈನ್ ಹಾಗೂ ಹೊಳೆಯುವ ಕಲ್ಲುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಜಗತ್ತಿಗೆ ಹೆಂಗಸರು, ಮಕ್ಕಳನ್ನು ಗುಲಾಮರನ್ನಾಗಿ ಮಾನವ ಮಾರಾಟ ಸಂತೆ ಇಲ್ಲೇ ಕಳೆಕಟ್ಟುತ್ತದೆ. ಮಾನವ ಮಾರಾಟದ ದಲ್ಲಾಳಿಗಳಿಗೆ ಕೆಲಸ ಸಿಕ್ಕಿದ್ದೇ ಇಲ್ಲಿಯ ಮಾನವ ಸಂತೆಗಳಿಂದ. ನೆರೋ ಎಂಬ ರಾಜ ತನ್ನ ವಿಲಕ್ಷಣ ಸೈನ್ಯವನ್ನು ಸುಡಾನಿಗೆ ದಂಡ ಯಾತ್ರೆ ಕಳುಹಿಸುತ್ತಾನೆ. ಈ ದಂಡಯಾತ್ರೆಯ ಸೈನ್ಯಾಧಿಕಾರಿ ಅಚಾನಕ್ಕಾಗಿ ದಕ್ಷಿಣ ಸುಡಾನ್ ಪ್ರದೇಶದಲ್ಲಿ ನಿಂತು ಬಿಟ್ಟ. ಇದಕ್ಕೆ ಆಂಗ್ಲ ಭಾಷೆಯಲ್ಲಿ "ಸಡ್ಡ್" ಅನ್ನುವ ಹೆಸರು ಬಂತು. ಇಲ್ಲೇ ಈ ಭಾಗದ ಹಲವು ರಾಜ್ಯಭಾರಗಳನ್ನು ತೆಕ್ಕೆಗೆ ತೆಗೆದುಕೊಂಡ ನೆರೋ ಕಾರ್ಯಾಭಾರ ಅಲ್ಲಿರುವ ಎಲ್ಲಾ ರಾಜರನ್ನು ತಮ್ಮ ಅಧೀನಕ್ಕೆ ಬರಮಾಡಿಕೊಳ್ಳುತ್ತದೆ. ಇವರದ್ದೇ ಆಳ್ವಿಕೆಯ ಜಸ್ಟಿನಿಯನ್ ರಾಜನ ಅಧಿಕಾರವಧಿಯಲ್ಲಿ ಸುಡಾನ್ ಬಹುತೇಕ ರಾಜ್ಯಭಾರಗಳು ಕ್ರೈಸ್ತಧರ್ಮಕ್ಕೆ ಮತಾಂತರಕ್ಕೆ ರೆಕ್ಕೆ ತೆರೆಯುತ್ತವೆ. .ನೈಲ್ ನದಿಯ ಉದ್ದಗಲಕ್ಕೂ ಇವುಗಳ ದಟ್ಟಣೆಯಿದೆ. 16ನೇ ಶತಮಾನದಲ್ಲಿ ಇಸ್ಲಾಂ ಧರ್ಮ ಪ್ರಚಾರ ಬರುವವರೆಗೆ ಚರ್ಚುಗಳು ಎಲ್ಲೆಂದರಲ್ಲಿ ತಲೆ ಎತ್ತಿದವು. ಮತ್ತಷ್ಟು ಮಂದಿ ಕ್ರೈಸ್ತಧರ್ಮ ಅನುವಾಯಿಗಳಾಗಿದ್ದರು. ಬಹುಪಾಲು ಮಂದಿ ಅವರೇ ಇದ್ದರು.

ಆಧುನಿಕ ಸುಡಾನ್ ಇತಿಹಾಸ ನೆಪೋಲಿಯನ್ನನಿಗೆ ಋಣಿಯಾಗುವುದು. 1797ರಲ್ಲಿ ಮೆಮುಲಿಕ್ಸ್ ಶಕ್ತಿಯಿಂದ ಪಿರಮಿಡ್ ಕದನದಲ್ಲಿ ಈಜಿಪ್ಟಿನ ಕಕೇಶಿಯನ್ ಆಳುವ ವರ್ಗ ಅಲುಗಾಡಿಸಿತು. ಇದರ ಲಾಭದ ಅದೃಷ್ಟ ಅಲ್ಬೇನಿಯ ಸೈನ್ಯದ ಮುಹಮ್ಮದ್ ಮೀ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಮಹಮ್ಮದ್ ಮೀ ತನ್ನ ಪುತ್ರ ಇಸ್ಲಾಯಿಲ್‍ನನ್ನು ಸುಮಾರು 10ಸಾವಿರ ಸೈನಿಕ ಬಲದ ಪಡೆಯೊಂದಿಗೆ 1821ರಲ್ಲಿ ಕಳುಹಿಸಿದ.ಉತ್ತರ ಮತ್ತು ಕೇಂದ್ರ ಸುಡಾನಿನ  ಮರಳುಗಾಡು ಪ್ರದೇಶಗಳು ಇವರ ಸುಪರ್ದಿಗೆ ಬಂದದ್ದೇ ತಡ, ಪ್ರಪ್ರಥಮ ಬಾರಿಗೆ ಸುಡಾನ್ ಎನ್ನುವ ಅರ್ಥ " ಕಪ್ಪು ತುಂಬಿದ ನೆಲ"ಎಂಬ ಹೆಸರಿಗೆ ತಿರುಗಿಕೊಂಡಿತು.ಮಾತ್ರವಲ್ಲದೆ, ರಾಜಕೀಯ ಚತುರತೆಗಳು ಅಧಿಕಾರಕ್ಕೆ ನಿಧಾನವಾಗಿ ಬದಲಾಗ ತೊಡಗಿದವು.

ಮರಳುಗಾಡಿನಿಂದ ಮೋಕ್ಷ ಬರಲು ಸುಡಾನಿಗೆ ಆರಂಭಿಸಿದ್ದೇ ಇಲ್ಲಿಂದ. 1884ರಲ್ಲಿ ದೋಣಿ ನಿರ್ಮಾಪಕ ಡೊಂಗ್ಲಾ ನ ಮಗನಾಗಿ ಮುಹಮ್ಮದ್ ಅಹ್ಮದ್ ಜನಿಸುತ್ತಾನೆ. ಈತ ಮೃದು ಭಾಷಿಯಾಗಿ ಬೆಳೆಯುತ್ತಾ ಬೆಳೆಯುತ್ತಾ ಇಲ್ಲಿನ ಅಬ ದ್ವೀಪ ಪ್ರದೇಶದಿಂದ ಸುಮಾರು 150 ಮೈಲುಗಳ ದಕ್ಷಿಣ  ಖೊರ್ಟೋಂ ಪ್ರದೇಶಕ್ಕೆ ವಲಸೆ ಬಂದು, ಧರ್ಮ ಪ್ರವರ್ತಕನಾಗಿ " ಮೊಹ್ದಿ" ಎಂಬ ನಾಮಾಂಕಿತದಲ್ಲಿ ಗುರುತಿಸಿಕೊಂಡ. 1881ರಲ್ಲಿ ಪ್ರವಾದಿಯ ಎರಡನೇ ಅವತಾರವೆಂದು ಘೋಷಿಸಿಕೊಂಡ. ಅಷ್ಟು ಮಾತ್ರವಲ್ಲದೆ, ಪಶ್ಚಿಮದ ಬುಡಕಟ್ಟು ಜನರನ್ನು ಒಟ್ಟುಗೂಡಿಸಿ ಅನೀತಿ ಮತ್ತು ಮಾನವ ಅಸಂಗತತೆ ವಿರುದ್ಧ ಸಾಮಾಜಿಕ ಯುದ್ಧಕ್ಕೆ ಘೋಷಣೆ ನೀಡಿದ. ಆರಂಭಿಕ 1884 ರಲ್ಲಿ ಈ ಮೊಹ್ದಿ ಎಲ್ಲಾ ಸುಡಾನ್  ಮಂದಿಯನ್ನು ಒಟ್ಟುಗೂಡಿಸಿ ಖರ್ಟೋಂ ಪ್ರದೇಶದ ರಕ್ಷಕನಾಗಿ ಮಾರ್ಪಾಡುಗೊಂಡ.

ಈ ಮಧ್ಯೆ ಈಜಿಪ್ಟ್ ಸುಡಾನಿಗೆ ಕಾಲಿರಿಸುತ್ತದೆ. ಅದರೊಂದಿಗೆ ಬ್ರಿಟನ್ ಸೇರಿಕೊಂಡು ಯುದ್ದಕ್ಕೆ ಸಜ್ಜುಗೊಂಡಿತು. ಆದರೆ, ಮೊಹ್ದಿ ಬಲ ಜನರ ಬೆಂಬಲದಿಂದ ಬಲಿಷ್ಠವಾಗಿತ್ತು. ಪರಿಹಾರ ಕಾಣದಾಗ ಜನರಲ್ ಚಾರ್ಲ್ಸ್ ಗೋರ್ಡನ್ ನೇತೃತ್ವ ಖೋರ್ಟಂ ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗ ತೊಡಗಿತು. ಸುಮಾರು 317 ದಿನಗಳ ಕಾಲ ನಡೆದ ಯುದ್ದದ್ದಲ್ಲಿ ಮೊಹ್ದಿ ಸೈನಿಕರು ಅನಾರೋಗ್ಯ ಪೀಡಿತರಾಗಿ ದುರ್ಬಲರಾಗತೊಡಗಿದರು. ತನ್ನ ಸೈನ್ಯದೊಂದಿಗೆ ಮೊಹ್ದಿ ಪಲಾಯನಗೈಯ್ದ. ಈ ದುರ್ಬಲತೆಯನ್ನು ಸದುಪಯೋಗಪಡಿಸಿಕೊಂಡ ಬ್ರಿಟನ್ ಮತ್ತು ಈಜಿಪ್ಟ್  ಖೊರ್ಟಂ ಪ್ರದೇಶ ವಶಪಡಿಸಿಕೊಂಡಿತು. ಖೊರ್ಟಂ ಪ್ರದೇಶ ಕೈಬಿಟ್ಟ ಐದು ತಿಂಗಳ ನಂತರ ಮೊಹ್ದಿ ಟೈಫಾಯ್ಡಿಗೆ ತುತ್ತಾಗಿ ಮರಣ ಹೊಂದಿದ. ಇವನ ಸ್ಥಾನವನ್ನು ಅಲಂಕರಿಸಿದ ಖಲೀಫ ಅಬ್ದುಲ್ಲಾ ಬರುವಾಗ ಸುಡಾನ್ ಅದಾಗಲೇ ನಾಗರಿಕ ಯುದ್ದದಿಂದ ಸಂಕಷ್ಟಕ್ಕೆ ಈಡಾದ ಜೊತೆಯಲ್ಲಿ ಸರಣಿ ಯುದ್ದಗಳು ಪ್ರಾರಂಭವಾದವು. 1898ರ ಸೆಪ್ಟೆಂಬರ್ ನಲ್ಲಿ ಜನರಲ್ ಹರ್ಬರ್ಟ್ ಕಿಚೆನರ್ ನೇತೃತ್ವದ ಬ್ರಿಟನ್- ಈಜಿಫ್ಟ್ ಸೈನ್ಯವನ್ನು ನೈಲ್ ನದಿಯ ತಪ್ಪಲು ಪ್ರದೇಶದಲ್ಲಿ  ಹೊಸದಾಗಿ ನಿರ್ಮಿಸಲಾದ ಸುಡಾನಿನ ಹೊಸ ನಗರ ಓಮ್ದುರ್ಮನ್ ಬಯಲು ಪ್ರದೇಶದಲ್ಲಿ ತನ್ನ 60 ಸಾವಿರ ಸೈನಿಕರೊಂದಿಗೆ ಖಲೀಫ ಅಬ್ದುಲ್ಲಾ ಎದುರಿಸಿದ.ಈ ಯುದ್ದದಲ್ಲಿ ಖಲೀಫನ ಸುಮಾರು 10,800 ಸೈನಿಕರು ಹತರಾದರು ಮತ್ತು 16,000 ಮಂದಿ ಗಾಯಗೊಂಡ ಪರಿಣಾಮ ಬ್ರಿಟನ್-ಈಜಿಪ್ಟ್ ಸೈನ್ಯ ಓಮ್ದುರ್ಮನ್ ಪ್ರದೇಶವನ್ನು ಆಕ್ರಮಿಸಿಕೊಂಡಿತು.

ಜಂಟಿ ಕಾರ್ಯಾಚರಣೆಯಿಂದ ಸುಡಾನ್ ಅನ್ನು ಆಕ್ರಮಿಸಿಕೊಂಡ ಬ್ರಿಟನ್ ಮತ್ತು ಈಜಿಪ್ಟ್ ನಡುವೆ ಆಳ್ವಿಕೆ ಕುರಿತ ತಗಾದೆ ಆರಂಭವಾಗಿತ್ತು. 1899ರ ಜನವರಿ 19ರಂದು ಈ ಎರಡೂ ರಾಷ್ಟ್ರಗಳೂ ಒಗ್ಗಟ್ಟಾಗಿ ಸುಡಾನಿನಲ್ಲಿ ಯಾವ ಯಾವ ಪ್ರದೇಶಗಳು ತಮ್ಮ ತಮ್ಮ ಸುಪರ್ದಿಯಲ್ಲಿ ಸೇರಬೇಕೆಂಬ ಬಗ್ಗೆ ಚರ್ಚಿಸಿ ನಿರ್ಣಯಕೈಗೊಂಡಿತು. ನಂತರದ ಹನ್ನೆರಡು ವರ್ಷಗಳಲ್ಲಿ ಸುಡಾನ್ ರಾಷ್ಟ್ರದ ಆದಾಯ ಸುಮಾರು ಹದಿನೇಳು ಪಟ್ಟು ಹೆಚ್ಚಳವಾಗಿತ್ತು. ಖರ್ಚು ಮೂರು ಪಟ್ಟು ಏರಿತ್ತು ಮತ್ತು ರಾಷ್ಟ್ರದ ಬಡ್ಜೆಟ್ 1960ವರೆಗೆ ಯಾವುದೇ ತೊಂದರೆಯಿಲ್ಲದೆ ಸರಿತೂಗಿಸುತ್ತ ಬಂದಿತ್ತು. ಇದು ಬ್ರಿಟನ್ ಮತ್ತು ಈಜಿಪ್ಟ್ ಆಡಳಿತ ನಡೆಸುತ್ತಿದ್ದ ಎಲ್ಲಾ ಪ್ರದೇಶಗಳ ಅಭಿವೃದ್ದಿಯ ಪಾಲುಗಾರಿಕೆಯ ಫಲವಾಗಿತ್ತು. ಆದರೆ ಇದರ ಮಧ್ಯೆ 1924ರಲ್ಲಿ ಪ್ರಥಮ ವಿಶ್ವಯುದ್ದ ಸಮಾಪ್ತಿಯಾದ ನಂತರ ಕೈರೋ ರಸ್ತೆಯಲ್ಲಿ ಸರ್ ಲೀ ಸ್ಟಾಕ್ ಹತ್ಯೆ ನಡೆದ ಸಂದರ್ಭ ಈಜಿಪ್ಟ್ ತನ್ನ ರಾಷ್ಟ್ರದ ಭಾವುಟ ಹಾರಿಸಿದ್ದು ಬ್ರಿಟನ್ನಿನ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ಪರಿಣಾಮ ಸುಡಾನಿನಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಪ್ರತಿಕಾರವಾಗಿ ಎಲ್ಲಾ ಈಜಿಪ್ಟಿನ ಅಧಿಕಾರಿಗಳನ್ನು ಸುಡಾನಿನಿಂದ ಕಿತ್ತು ಹಾಕತೊಡಗಿದರು. ತದ ನಂತರ 1936ರಲ್ಲಿ ಬ್ರಿಟನ್ ಮತ್ತು ಈಜಿಪ್ಟ್ ಸಹಾಯ ಸೂತ್ರಕ್ಕೆ ಮತ್ತೊಮ್ಮೆ ಸಹಿ ಹಾಕಿದ ಪರಿಣಾಮ ಸಣ್ಣ ಪುಟ್ಟ ಉದ್ಯೋಗಕ್ಕಾಗಿ  ಕೆಲವೇ ಕೆಲವು ಈಜಿಪ್ಟಿಯನ್ನರಿಗೆ ಬ್ರಿಟನ್ ಕಪಿಮುಷ್ಠಿಯಲ್ಲಿದ್ದ ಸುಡಾನಿನಲ್ಲಿ ನೆಲೆ ನಿಲ್ಲಲು ಅವಕಾಶ ಕೊಟ್ಟಿತ್ತು. ಬ್ರಿಟನ್ ಮತ್ತು ಈಜಿಪ್ಟಿನ ಈ ಒಪ್ಪಂದ ಸೂತ್ರವನ್ನು ಸುಡಾನ್ ಪ್ರಜೆಗಳನ್ನು ಕೆರಳಿಸದೆ ಇರಲಿಲ್ಲ.. ಪರಿಣಾಮವಾಗಿ ಈಜಿಪ್ಟ್ ಮತ್ತು ಬ್ರಿಟನ್ ಪ್ರಜೆಗಳ ವಲಸೆ ಬರುವುದರಿಂದ ಇತರ ರಾಷ್ಟ್ರಗಳ ಮಂದಿಯೂ ಬರುವ ಅನುಮಾನವನ್ನು ಹೊರಗೆಡವಿದರು. ಇವರ ವಿರೋಧಿ ಮನೋಭಾವದ ಬೆನ್ನಲ್ಲೇ, ಇಸ್ಲಾಯಿಲ್ ಅಲ್-ಅಝಾರಿ ನೇತೃತ್ವದಲ್ಲಿ ಪದವೀಧರರ ಕಾಂಗ್ರೇಸ್ ಹುಟ್ಟಿಕೊಂಡಿತು. ಇದು ಸುಡಾನ್ ಇತಿಹಾಸದಲ್ಲಿ ಪ್ರಥಮವಾಗಿ ಭುಗಿಲೆದ್ದ ನೆಲದ ಗುಂಪು.

ಮುಂದುವರೆಯುತ್ತಲೇ 1945ರವರೆಗೆ ಎರಡು ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. ಅಲ್- ಅಝಾರಿ ನೇತೃತ್ವದಲ್ಲಿದ್ದ ನ್ಯಾಷನಲ್ ಯೂನಿಯನಿಷ್ಟ್ ಪಾರ್ಟಿ ಸುಡಾನ್ ಮತ್ತು ಅಬ್ದುರ್ ರಹ್ಮಾನ್ ಅಲ್ ಮಹ್ದಿ ನೇತೃತ್ವದ ಉಮ್ಮಾ ಪಕ್ಷ  ಈಜಿಪ್ಟ್  ಅನ್ನು ಒಂದು ಮಾಡುವ  ಬೇಡಿಕೆಯಿಟ್ಟಿತು. ಇದಕ್ಕೆ ಧರ್ಮದ ಅಡಿಪಾಯದಲ್ಲಿ ಪ್ರಭಾವಿಯಾಗಿದ್ದ ಸಯದ್ ಸರ್ ಅಲಿ ಅಲ್ -ಮಿರ್ಘನಿ ಬೆಂಬಲ ಸೂಚಿಸಿದ್ದರು. ಮತ್ತೊಂದು ಉಮ್ಮಾ ಪಕ್ಷದ ಅಬ್ದುರ್- ರಹ್ಮಾನ್ ಅಲ್ - ಮಹ್ದಿ ನೇತೃತ್ವದಲ್ಲಿ ಸುಡಾನ್ ಸ್ವಾತಂತ್ಯವನ್ನು ಒತ್ತಿ ಹಿಡಿದಿತ್ತಲ್ಲದೆ, ಈಜಿಪ್ಟಿನ ಎಲ್ಲಾ ಸಂಪರ್ಕವನ್ನು ವಿರೋಧಿಸಿತ್ತು. ಸುಡಾನಿನಲ್ಲಿ ಧರ್ಮದ ವಿಚಾರದಲ್ಲಿ ಸಯಿದ್ ಸರ್ ಅವರಿಂದ ಕಿತ್ತು ಹಾಕಲಾದ ಪ್ರಭಾವಿ ಉಮ್ಮಾ ಪಕ್ಷ ಹುಟ್ಟು ಹಾಕಿದ ಅಬ್ದುರ್ ರಹ್ಮಾನ್ ಅಲ್ ಮಹ್ದಿ ಆಗಿದ್ದರು.
ಇಷ್ಟೆಲ್ಲಾ ಸ್ವಾತಂತ್ರ್ಯ ಹೋರಾಟಗಳು ನಡೆದ ಪರಿಣಾಮವಾಗಿ 1953ರ ಫೆಬ್ರವರಿ 12ರಂದು ಬ್ರಿಟನ್ ಮತ್ತು ಈಜಿಪ್ಟ್ ಅಂತಿಮ ನಿರ್ಧಾರದ ಒಪ್ಪಂದಕ್ಕೆ ಎದ್ದು ನಿಂತವು. ಮುಂದಿನ ಮೂರು ವರ್ಷಗಳಲ್ಲಿ ಸುಡಾನಿಗೆ ಸ್ವತಂತ್ರ ರಾಷ್ಟ್ರವನ್ನಾಗಿ ಬಿಟ್ಟು ಕೊಡುವುದಕ್ಕೆ ಒಪ್ಪಿದವು. ಈ ಒಪ್ಪಂದದಲ್ಲಿ ಅಂತರ್ರಾಷ್ಟ್ರೀಯ ಸಮಿತಿಯೊಂದರ ಮುಖಾಂತರ ಸುಡಾನ್ ಸಂಸತ್ತು ರಚನೆಗಾಗಿ ಸಚಿವರು ಮತ್ತು ಚುನಾವಣೆ ನಡೆಸಿ ಜನಪ್ರತಿನಿಧಿಗಳ ಆಯ್ಕೆ ನಡೆಸುವ ಕುರಿತು ಒಪ್ಪಿಗೆ ಸೂಚಿಸಲಾಗಿತ್ತು.

1953ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸುಡಾನ್ ಸಾರ್ವತ್ರಿಕ ಚುನಾವಣೆಯೂ ನಡೆಯಿತು. ಇದರಲ್ಲಿ ಎನ್.ಯು.ಪಿ. ಪಕ್ಷ ಬಹುಮತ ಸಾಧಿಸಿ ವಿಜಯಿಯಾದ ಬೆನ್ನಲ್ಲೇ ನೇತೃತ್ವ ವಹಿಸಿದ್ದ ಇಸ್ಮಾಯಿಲ್ ಅಲ್ ಅಝಾರಿ 1954ರಲ್ಲಿ ಸುಡಾನಿನ ಪ್ರಥಮ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಆದರೆ, ದೇಶದ ಸಾರ್ವಜನಿಕ ಸೇವೆಯಲ್ಲಿ ಬ್ರಿಟಿಷ್ ಮತ್ತು ಈಜಿಪ್ಟಿಯನ್ನರ ಕೈವಾಡ ಇದ್ದೇ ಇತ್ತು. ಡಿಸೆಂಬರ್ 19, 1955ರಲ್ಲಿ ಸುಡಾನ್ ಪಾರ್ಲಿಮೆಂಟ್ ಒಮ್ಮತದ ಮತ ಚಲಾಯಿಸಿ ಸುಡಾನ್ ಸರ್ವ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು.  ಇದರ ಬೆನ್ನಲ್ಲೇ 1956 ಜನವರಿ 1ರಂದು  ಬ್ರಿಟಿಷ್ ಮತ್ತು ಈಜಿಪ್ಟಿಯನ್ ಸೈನ್ಯಗಳು ಸುಡಾನ್ ತೊರೆದ ದಿನದಂದೇ ರಾಷ್ಟ್ರದ ಸಂಸತ್ ಸಮಿತಿಯ ಐದು ಮಂದಿಯನ್ನು ಸುಡಾನಿನ ವಿವಿಧ ಪ್ರದೇಶಗಳ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇವರುಗಳು ಮುಂದಿನ ಎರಡು ವರ್ಷಗಳಲ್ಲಿ ಹೊಸ ಸಂವಿಧಾನ ರಚನೆಯಾಗುವವರೆಗೆ ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ನಂತರ ಅಂದರೆ 1958 ನವೆಂಬರ್ ತಾ.17ರಂದು  ಜನರಲ್  ಇಬ್ರಾಹಿಂ ಅಬೌದು ನೇತೃತ್ವದಲ್ಲಿ ರಕ್ತಕ್ರಾಂತಿ ಸೈನ್ಯವೊಂದು ಪ್ರಧಾನಿ ಅಲ್ ಅಝಾರಿ ಸರಕಾರದ ವಿರುದ್ಧ ದಂಗೆಯೆದ್ದಿತು. ಜನರಲ್ ಅಬೌದು ಕಲ್ಪನೆಯ ಅಧಿಕಾರದಲ್ಲಿ ಸೈನ್ಯದ 13 ಮಂದಿ ಅಧಿಕಾರಿಗಳು ಸುಡಾನಿನಲ್ಲಿ  ಆಡಳಿತ ಉಸ್ತುವಾರಿಗೆ ಸಿದ್ದರಾಗಿದ್ದು ಮಾತ್ರವಲ್ಲದೆ, ಪ್ರಜಾತಂತ್ರದ ಹೆಸರಿನಲ್ಲಿ ಸುಡಾನ್ ಸರಕಾರ ನಿಯತ್ತು ಮಾತು ಸೌರ್ಹಾದತೆಯನ್ನು ಬದಿಗೊತ್ತಿದೆ ಎಂಬ ಘೋಷಣೆ ಮೊಳಗಿಸಿತ್ತು. ಆದರೆ, ಇದು ಮತ್ತೆ ಸರಕಾರದ ಒಳ ಒಪ್ಪಂದದಲ್ಲಿ ಮೌನವಾಯಿತು.

ಇಷ್ಟೆಲ್ಲಾ ಮಾರ್ಪಾಡುಗಳು ಆಗುವಾಗ 1966ರಲ್ಲಿ  ಉಮ್ಮಾ ಪಕ್ಷದ ಅಧ್ಯಕ್ಷ 30ವರ್ಷ ಪ್ರಾಯದ ಸಾಧಿಕ್ ಅಲ್ ಮಹ್ದಿ ಸುಡಾನಿನ ಪ್ರಧಾನಿ ಪಟ್ಟವನ್ನು ಅಲಂಕರಿಸುತ್ತಾನೆ. ರಾಷ್ಟ್ರದ ಒಳನಾಡು ಪ್ರದೇಶಗಳಲ್ಲಿ ಒಂದಾದ ದಕ್ಷಿಣ ಸುಡಾನಿನಲ್ಲಿ ಆತಂಕಗಳಿದ್ದವು. ಆದರೂ ನೂತನ ಪ್ರಧಾನಿ ಇಲ್ಲಿಗೇ ಆಗಾಗ್ಗೆ ಭೇಟಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಂಡುಕೋರರ ಧಾಳಿ, ಕೊಲೆ ಸಂಚು ಮತ್ತು ಇನ್ನಿತರ ಕುತಂತ್ರಗಳೂ ನಡೆದ ಅನುಭವವನ್ನು ಮೆಟ್ಟಿ ನಿಂತ ಉದಾಹರಣೆ ಅಲ್ಲಿದ್ದವು. ಸುಡಾನ್ ರಾಷ್ಟ್ರದ ದಕ್ಷಿಣ ವ್ಯವಹಾರಗಳ ಸಚಿವಾಲಯ ಸರಕಾರದ ಅಧೀನದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ಜೀವನವನ್ನು ಕಾಪಾಡಲು ಆಲೋಚನೆ ನಡೆಸಿತ್ತು. ಆದರೆ, ಈಕ್ವೇಟೊರಿಯಾ ಪ್ರಾಂತ್ಯದಲ್ಲಿ ಬಂಡುಕೋರರ ಗಲಭೆಗಳಿಂದ ರಕ್ಷಣೆ ಮತ್ತು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೈನ್ಯವನ್ನು ನೆಲೆಗೊಳಿಸಿ ಬಂಡುಕೋರರ ನೆಲೆಗಳ ಮೇಲೆ 1970ರ ಅಕ್ಟೋಬರ್ ನಲ್ಲಿ ಆಕ್ರಮಣಕ್ಕೆ ತೊಡಗುತ್ತವೆ. ಈ ಯುದ್ದ ಅಧೀಕೃತವಾಗಿ 1972ರಲ್ಲಿ  ಅಂತ್ಯಗೊಂಡು, ದಕ್ಷಿಣ ಸುಡಾನಿನ "ಅನ್ಯ-ನ್ಯಯ" ಬಂಡುಕೋರರ ನಾಯಕ ಮೇಜರ್ ಜನರಲ್ ಲಗುವಿನೊಂದಿಗೆ ಸುಡಾನ್ ಸರಕಾರದ ಕರ್ನಲ್ ನ್ಯುಮೈರಿ ಜೊತೆಗೆ ಶಾಂತಿ ಒಪ್ಪಂದವೇರ್ಪಡುತ್ತದೆ.
ಅಧ್ಯಕ್ಷ ನ್ಯುಮೈರಿ ತನ್ನ 8 ವರ್ಷಗಳ ಆಡಳಿತಾವಧಿ 1976ರಲ್ಲಿ ಕೊನೆಗೊಂಡಾಗ ಹಲವು ಪ್ರಾಣಾಂತಿಕ ಕುತಂತ್ರಗಳನ್ನು ಎದುರಿಸಿ ಬದುಕುಳಿದರು. ತನ್ನ ಆಡಳಿತದಿಂದ ಕಿತ್ತು ಹಾಕಲಾಗಿದ್ದ ಮಾಜಿ ಹಣಕಾಸು ಮಂತ್ರಿ ಹುಸೈನ್ ಅಲ್ ಹಿಂದಿ ಮತ್ತು ಮಾಜಿ ಪ್ರಧಾನಿ ಸಾಧಿಕ್ ಅಲ್ ಮಹ್ದಿ  ಈ ಕುತಂತ್ರಗಳನ್ನು ಹೆಣೆದು ವಿರೋಧಿಗಳೊಂದಿಗೆ ಸೇರಿ ಸುಮಾರು 2ಸಾವಿರ ಮಂದಿಯ ಬಂಡುಕೋರರ ಸೈನ್ಯವನ್ನು ಖೋರ್ಟಂ ಮತ್ತು ಒಮ್ದುರ್ಮನ್ ಪ್ರದೇಶದಲ್ಲಿ ನೆಲೆ ನಿಲ್ಲಿಸುವಲ್ಲಿ ಸಫಲರಾತ್ತಾರೆ. ಈ ಗುಂಪು ಸರಕಾರಕ್ಕೆ ಬಹಳಷ್ಟು ತೊಂದರೆಯನ್ನು ತಂದೊಡ್ಡಿತ್ತಲ್ಲದೆ, ವಾಯುದಳದ ಯುದ್ದವಿಮಾನಗಳನ್ನು ಅಪಹರಿಸುವಲ್ಲಿ ಕೈಚಳಕ ತೋರಿಸುತ್ತಾರೆ. ಈ ಸಂದರ್ಭ ಯುದ್ದ ನಡೆದ ಅವರ ಸ್ವಾಧೀನದ ಪ್ರಾಂತ್ಯಗಳಲ್ಲಿ ಸುಮಾರು 98 ಮಂದಿಯ ಮಾರಣ ಹೋಮ ನಡೆಯಿತು. ನೂರಾರು ಮಂದಿಯನ್ನು ಸೆರೆಹಿಡಿದು ದಿಗ್ವಂಧನಕ್ಕೊಳಪಡಿಸಲಾಗಿತ್ತು. ಈ ಬಂಡುಕೋರ ಗುಂಪು ಎರಡು ಪ್ರಭಲ ರಾಷ್ಟ್ರಗಳ ಸಹಾಯವನ್ನು ಪಡೆದು ಸುಡಾನಿಗೆ ಬರಮಾಡಿಕೊಂಡಿತು. ಸೈನ್ಯಗಳ ಹಸ್ತಾಂತರದ ಒಪ್ಪಂದಕ್ಕೆ ಈಜಿಪ್ಟ್ ನೊಂದಿಗೆ ಸಹಿ ಹಾಕಿದ  ಬೆನ್ನಲ್ಲೇ ಯುದ್ದಗಳು ಬಿರುಸಾಗತೊಡಗುವುದು. ಇದೇ ದಿನಗಳು ಈಜಿಪ್ಟ್ ಮತ್ತು ಸೌದಿ ಅರೇಬಿಯಾದೊಂದಿಗೆ ತ್ರೀಪಕ್ಷೀಯ ಮಾತುಕತೆಗೆ ನಾಂದಿಯಾಡುತ್ತದೆ.

ಕೈಗಾರಿಕಾ ಉದ್ಯಮ ಮೂಲಗಳು 1981 ತಡೆರಹಿತವಾಗಿ ನಡೆದ ಇತಿಹಾಸ ಪುಟಗಳಾಗಿವೆ. ಇದರಲ್ಲಿ ರೈಲ್ವೇ ಇಲಾಖೆ ಮತ್ತು ರಸ್ತೆ ಸಂಚಾರ ಇಲಾಖೆಗಳ ಸುಮಾರು 43ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೊಡಲಾಗದ ವೇತನಕ್ಕೆ ಜೂನ್ ತಿಂಗಳಲ್ಲಿ ಸತ್ಯಾಗ್ರಹದ ರೂಪದಲಿ ಸುಡಾನ್ ರಸ್ತೆಯಲ್ಲಿ ನಡೆಯುತ್ತಾರೆ. ಇದು ರಾಜಕೀಯ ಪ್ರೇರಿತ ಹೊರದೇಶಿಗರ ಕುತಂತ್ರವಾಗಿತ್ತು. ಜೂನ್ 16ರಂದು ಅಧ್ಯಕ್ಷ ನ್ಯುಮೈರಿ ತನ್ನ ರಕ್ಷಣಾ ದಳಗಳಿಗೆ ಆದೇಶ ನೀಡಿ ಹೋರಾಟದಲ್ಲಿ ಭಾಗಿಯಾದ ಎಲ್ಲರನ್ನೂ ಹೊಣೆಗಾರರನ್ನಾಗಿಸಿ ಬಂಧಿಸುತ್ತಾರಲ್ಲದೆ, ಎಲ್ಲಾ ಸಂಘಟಣೆಗಳನ್ನು ಸುಡಾನ್ ಸೋಷಿಯಲಿಸ್ಟ್ ಯೂನಿಯ ಸುಪರ್ದಿಗೆ ಒಳಪಡಿಸಿದರು.

1971ರವರೆಗೆ ಸುಡಾನ್ ಅರಬ್ ಜಗತ್ತು ಮತ್ತು ಅದಕ್ಕೆ ಹೊಂದಿಕೊಂಡ ಯುಎಸ್.ಎಸ್.ಆರ್. ರಾಷ್ಟ್ರಗಳೊಂದಿಗೆ ಗೆಳತನವನ್ನು ಸಾಧಿಸಿದ ಫಲವಾಗಿ ಅಂತರ್ರಾಷ್ಟ್ರೀಯ ಸಂಬಂಧಗಳು ಗರಿಗೆದರಿದ್ದವು.  ಇದು ಸುಡಾನ್ ದೇಶದ ಆಂತರಿಕ ನಿಯಮಕ್ಕೆ ಸರಿಹೊಂದುವಂತಿತ್ತು. ಇದರ ಪರಿಣಾಮವಾಗಿ ಖಾಸಗಿ ಸಂಸ್ಥೆಗಳು ಮತ್ತು ವಿದೇಶಿಗರ ಅಧೀನದಲ್ಲಿದ ವ್ಯಾಪಾರಿ ಸಂಸ್ಥೆಗಳು ರಾಷ್ಟ್ರೀಕೃತಗೊಂಡು 1973ರಲ್ಲಿ ಹಲವು ಗೊಂದಲದಲ್ಲಿದ್ದ  ವ್ಯಾಪಾರ ವಹಿವಾಟುಗಳು ಖಾಸಗಿತನದ ಒಡೆತನಕ್ಕೆ ದೂಡಲ್ಪಡುತ್ತವೆ ಸುಡಾನಿನಲ್ಲಿ.

ಸುಡಾನ್ ದೇಶದ ಇತಿಹಾಸ ಹೀಗೆ ಮುಂದುವರೆಯುತ್ತಿದ್ದಂತೆ ಮತ್ತೊಂದು ಸುತ್ತಿನ ಹೋರಾಟ ಮತ್ತು ಯುದ್ದಕ್ಕೆ  1983ರ ಸೆಪ್ಟೆಂಬರ್ 8ರಲ್ಲಿ ಅಧ್ಯಕ್ಷ ಜಾಫರ್ ಮೊಹಮ್ಮೆದ್ ಅಲ್ ನ್ಯುಮೈರಿ ನಾಂದಿ ಹಾಡುತ್ತಾರೆ. ಅದು ಹೇಗೆಂದರೆ, ರಾಷ್ಟ್ರದಲ್ಲಿ ಹೊಸ ಇಸ್ಲಾಂ ಷರಿಯಾ ಕಾನೂನೊಂದನ್ನು ಜಾರಿಗೆ ತರುತ್ತಾರೆ. ಇದರ ಪ್ರಕಾರ ದರೋಡೆ,ಅತ್ಯಾಚಾರ, ಕೊಲೆ ಮತ್ತು ಇದಕ್ಕೆ ಸಮನಾದ ಕೃತ್ಯಗಳನ್ನು ಪವಿತ್ರ ಧರ್ಮದ ಆಧಾರದಲ್ಲಿ ಶಿಕ್ಷಿಸಲಾಗುವುದು ಎಂದಾಗಿತ್ತು.. ಮತ್ತು ಮದ್ಯಪಾನ, ಜೂಜುಗಾರಿಗೆ ನಿಷೇಧಿಸಿ, ಮುಸ್ಲಿಮೇತರರಿಗೆ ಇದರಿಂದ ಹೊರತುಪಡಿಸಿ ಹತ್ಯೆ ಮತ್ತು ಕಳ್ಳತನದ ಶಿಕ್ಷೆಯನ್ನು ಘೋಷಿಸಲಾಯಿತು. ಈ ಕಾನೂನಿನ ಜಾರಿಯನ್ನು ಸುಡಾನ್ ರಾಜಧಾನಿ ಖೋರ್ಟಂನಲ್ಲಿ ಸೆಪ್ಟೆಂಬರ್ 23ರಂದು ಅತಿ ವಿಜೃಂಭಣೆಯಿಂದ ಅಧ್ಯಕ್ಷ ನ್ಯುಮೈರಿ ಜಾರಿಗೆ ತಂದ ದಿನವೇ ದೇಶಾದ್ಯಂತ ಸಂಗ್ರಹಿಸಿಡಲಾಗುವ ಮಧ್ಯಪಾನಗಳನ್ನು ನೈಲ್ ನದಿಗೆ ಸುರಿಯಲಾಗುವುದು ಎಂದು  ಅಧ್ಯಕ್ಷೀಯ ಭಾಷಣದಲ್ಲಿ ನ್ಯುಮೈರಿ ಘೋಷಿಸಿದ್ದರು. ಪ್ರಸಕ್ತ   ಹರವಿಕೊಂಡಿರುವ ಸುಡಾನ್ ಎಂಬ ಭೂಮಿಯ ಜಗತ್ತು ಕಂಡ ಕರಾಳ ದೃಶ್ಯಗಳು ಇಲ್ಲಿಂದಲೇ ಬಣ್ಣ ಕಟ್ಟಿಕೊಂಡಿವೆ. ಜನ ಸಾಗರವೇ ಸಾವಿನಂಚಿಗೆ ಸರಿದ,ರಾತೋರಾತ್ರಿ ದಿಕ್ಕೆಟ್ಟು ಪಲಾಯನಗೈಯ್ದ,ಬೀಭತ್ಸತೆಗಳು ಇಲ್ಲಿಂದ ಆರಂಭವಾಗುವುದು. ಇಲ್ಲಿಂದಲೇ ಜನರು ಮನೆಯಿಲ್ಲದೆ,ಅನ್ನವಿಲ್ಲದೆ, ಸಹಾಯಕರಿಲ್ಲದೆ, ಕುಟುಂಬಸ್ಥರಿಲ್ಲದೆ ಸುಡಾನ್ ದೇಶದ ಗಡಿ ಭಾಗಕ್ಕೆ ಸಾಲು ಸಾಲುಗಳಾಗಿ ಮಿಲಿಯನ್ ಸಂಖ್ಯೆಗಳಲ್ಲಿ ವಲಸೆ ಹೋಗುತ್ತಾರೆ. ಅದು ಹೀಗಿದೆ:

ಖೊರ್ಟಂನಲ್ಲಿ ಸಾಮಾಜಿಕ ವ್ಯವಸ್ಥೆಗಳ ಅಧಃಪತನದ ವಿರುದ್ಧ  ಪ್ರಥಮವಾಗಿ ದಂಗೆಯೆದ್ದವರು ಮುಂದಿನ ಜನಾಂಗದ ಆಸ್ತಿ ವಿದ್ಯಾರ್ಥಿಗಳು.. ಎಲ್ಲಾ ಶಾಲೆಗಳು ಮುಚ್ಚಲ್ಪಟ್ಟವು. ಇಡೀ ಖೊರ್ಟಂ ಪ್ರದೇಶದಲ್ಲಿ ವಿದ್ಯುಚ್ಛಕ್ತಿ ಕಡಿತಗೊಂಡು ಕತ್ತಲೆಯಲ್ಲಿ ಮುಳುಗಿತು. 1984ರಲ್ಲಿ  ಸಾರ್ವಜನಿಕ ಸೇವೆಯಲ್ಲಿ  ಅಸ್ತವ್ಯಸ್ತತೆ ,ವೇತನ ಕೊರತೆ, ಔಷಧಿಗಳಿಲ್ಲದೆ ವೈದ್ಯರ ಹೋರಾಟಗಳು ಆರಂಭವಾಗುತ್ತವೆ. ದೇಶದ ಎಲ್ಲಾ 2ಸಾವಿರಕ್ಕೂ ಅಧಿಕ ವೈದ್ಯರುಗಳು ಸಾಮೂಹಿಕ ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ಒಪ್ಪಿಕೊಳ್ಳದ ಸರಕಾರ ವೈದ್ಯರ ಸಂಘ ಸಿಂಧುವಲ್ಲ ಎಂದಿತು. ವೈದ್ಯರು ಕೆಲಸಕ್ಕೆ ಹೋಗದೆ ಹೋರಾಟದಲ್ಲೇ ಮುಂದುವರೆದರು.

ಈ ಮಧ್ಯೆ ನಿರಾಶ್ರಿತರ ಸಂಖ್ಯೆ ಹಂತ ಹಂತವಾಗಿ ಬೆಳೆಯತೊಡಗಿ ಸುಡಾನ್ ಗಡಿಭಾಗಗಳಲ್ಲಿ ಇವರುಗಳು ಆಶ್ರಯಕ್ಕಾಗಿ ಹರಡಿಕೊಳ್ಳುತ್ತಿದ್ದರು. ಇದಲ್ಲದೆ, ಕೆಲವು ನಿರಾಶ್ರತರನ್ನು ವಿಶ್ವಸಂಸ್ಥೆ ರೆಫ್ಯೂಜಿ ಸಹಾಯಕ ತಂಡಗಳ ಮಧ್ಯವರ್ತಿಗಳಿಂದ ಇತರ ದೇಶಗಳಲ್ಲಿ ಆಶ್ರಯಕ್ಕೆ ಕರೆದೊಯ್ಯಲಾಗುತ್ತಿತ್ತು. ಅದೂ ಸುಡಾನ್ ಗಡಿಭಾಗದ ಮೂಲಕವೇ ನಡೆಯುತ್ತಿತ್ತು. 1982 ರಲ್ಲಿ ಪೋರ್ಟ್ ಸುಡಾನ್ ನಗರದಲ್ಲಿ ನಿರಾಶ್ರಿತರನ್ನು ಒಳಸಂಚು ಮಂದಿಗಳಿಂದ ಗಲಭೆಗೆ ಪ್ರಚೋದಿಸಲಾಗುತ್ತದೆ. ಕಸಿವಿಸಿಗೊಳಗಾದ ಅಧ್ಯಕ್ಷ ಗಾಫರ್ ನ್ಯುಮೈರಿ ತನ್ನ ದೇಶದ ಗಡಿ ಮಾರ್ಗಗಳನ್ನು ಮುಚ್ಚಿದ. ಈತನಿಗೆ ತನ್ನದೇ ಸರ್ಕಾರದ ಕೆಲವು ಸದಸ್ಯರಿಂದ ಇದಕ್ಕೆ ಒತ್ತಡ ಬರುತ್ತದೆ. 1985ರಲ್ಲಿ ದೇಶದಲ್ಲಿ ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ಗೆ ವಿಸ್ತರಿಸತೊಡಗಿತು. 1986ರಲ್ಲಿ ಇದು ಮತ್ತಷ್ಟು ವಿಶಾಲಗೊಂಡು ಎರಡು ಮಿಲಿಯನ್ ಗಡಿಯನ್ನು ದಾಟಿತು. ಸುಡಾನ್ ರಾಷ್ಟ್ರದ ಹಸಿದವರ ಸಂಖ್ಯೆ, ಜೊತೆಗೆ ರೋಗಿಗಳು, ಆಶ್ರಯವಿಲ್ಲದವರ ಸಂಖ್ಯೆಗೆ ವಿಶ್ವ ಸಂಸ್ಥೆ ರೆಫ್ಯೂಜಿ ತಂಡ ಕಂಗಾಲಾಗತೊಡಗಿದಂತೆ , ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹಾಯ ಹಸ್ತಕ್ಕೆ ತೊಡಗುತ್ತವೆ. ಅದು ಹೇಗೆಂದರೆ, ಅಹಾರ ಸಾಮಾಗ್ರಿಗಳು, ಡೇರೆ ಕಟ್ಟಿಕೊಳ್ಳಲು ಸಲಕರಣೆಗಳು, ಹೊದಿಕೆಗಳು, ನೀರಿನ ಟ್ಯಾಂಕರ್,ಉಪ್ಪು,ಆರೋಗ್ಯ ತುರ್ತು ಚಿಕಿತ್ಸಾ ಔಷಧಿಗಳು ಸೇರಿದಂತೆ ಮನುಷ್ಯ ಮೂಲಭೂತ ಅವಶ್ಯಕಗಳು ವಿತರಣೆಯಾಗುತ್ತವೆ. ಇದೇ ಕಾರ್ಯಕ್ರಮಗಳು ಇಂದಿಗೂ ಹಲವು ದಶಕಗಳ ನಾಗರಿಕ ಯುದ್ದಕ್ಕೆ ನಲುಗಿ ಸುಧಾರಣೆ ಕಾಣದ ಸುಡಾನ್ ನಿರಾಶ್ರಿತರ ತಾಣಗಳಲ್ಲಿ ವಿಶ್ವಸಂಸ್ಥೆಯ ಮೂಲಕ ನಡೆಯುತ್ತಲೇ ಇದೆ. ಹಲವು ದಶಕಗಳಿಂದ ಅತೃಪ್ತ ಬಂಡುಕೋರರು ಮತ್ತು ಮಿಲಿಟೆರಿ ಸರಕಾರ ಸುಡಾನನ್ನು ಆಳುತ್ತಿದೆ. ನಾಗರಿಕ ಯುದ್ದಗಳಿಗೆ ಜಗತ್ತಿನಾಧ್ಯಂತ ರಾಷ್ಟ್ರಗಳು ಸುಡಾನಿಗೆ ಶಾಪ ಹಾಕಿದ್ದೇ ಹೆಚ್ಚು.ಯಾರೂ ಅದರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದು ಇದುವರೆಗೆ ಕೇಳಿಲ್ಲ. ಪತ್ರಿಕಾ ವರದಿ ಕಾಣಲಿಲ್ಲ.
(ಮುಂದೆ ನಿರೀಕ್ಷಿಸಿ)

ಶುಕ್ರವಾರ, ಜನವರಿ 25, 2013

ಶರತ್ಕಾಲ !



ಮುಡಿ ಬಿಚ್ಚಿ ಬಾಚುವಳು
ಓಡುವ ಬಣ್ಣಗಳ ಬಳಿದು   
ನೆಲಕೆ ಅದ್ಭುತ ಸುರಿದು   
ರೋಮಾಂಚನಕೆ ಹರಿದು
ಶರತ್ಕಾಲದ ಬೆಡಗಿ 

ಬಾಡಿದ ಬೇಸಿಗೆ ಬಿಸಿಗೆ
ಗಾಳಿ ತಂಪುಗಳ ಹಿಂಡಿ
ಹಸಿರೊದ್ದ ಉಡುಗೆಗೆ ಬಳುಕಿ
ಮೈಬಿದ್ದ ಮಂಜಿಗೆ ನಡುಗಿ
ಋತುವಿನ ಹುಡುಗಿ

ದಳ ಬಿಟ್ಟ ಹೂಬಳ್ಳಿಗೆ
ಚಿಟ್ಟೆಗಳದ್ದೇ  ಮುತ್ತಾಟ
ದುಂಬಿಗಳದ್ದೇ ಹಾರಾಟ |
ಶರತ್ಕಾಲದ ಹುಡುಗಿಯ
ಹೊದ್ದಿವೆ ಚಳಿಯ ದುಪ್ಪಟ |
ಅಸ್ಥಿರ ಕಾಲದ ಘಳಿಗೆ
ವಸಂತಿಗೆ ವಿದಾಯ ಸಂಕಟ

ಓಡುವ ಬಣ್ಣಗಳ ಹಿಡಿದು
ಬಾಚುವ ಬಾಚಣಿಗೆ ಮುರಿದು
ತುರುಕಿ ಹೆಗಲೇರಿದೆ
ವ್ಯಾನಿಟಿ ಬ್ಯಾಗು |
ತುಟಿಗೆ ಮುತ್ತಿಕ್ಕುತ್ತಿತ್ತು
ತಂಪು ಮಂಜು !
-ರವಿ ಮೂರ್ನಾಡು

ಸೋಮವಾರ, ಜನವರಿ 21, 2013

ಸುಡಾನ್ ಎಂಬ ಸುಡುಗಾಡು ದೇಶದಲ್ಲಿ ಮಾತನಾಡುವ ಮಾಂಸಖಂಡಗಳು !


ಮಹಸ ಎಂಬ "ರೆಫ್ಯೂಜಿ" ಮಹಿಳೆ ಹೇಳಿದ ಕಥೆ ಮತ್ತು ವಿಳಾಸವಿಲ್ಲದ ಊರು !
ಆಫ್ರೀಕಾ ಅಕ್ಷರ ಪ್ರವಾಸ -1 
ಆ ಬೆಟ್ಟದ ಮೇಲೆ ನಿಂತು ಈ ಜಗತ್ತಿನ ತುಂಬಾ ಕಣ್ಣಾಯಿಸಿದಾಗ ಈ ಸುಡಾನ್ ದೇಶದ ಸುಡುಗಾಡಿನಲ್ಲಿ ಹುಟ್ಟುವ ಬದಲು ಬೇರೆಲ್ಲಾದರೂ ಹುಟ್ಟಿದ್ದರೆ ಚೆನ್ನಿತ್ತು ಅಂತ ಅನ್ನಿಸಿತು. ಜನ್ಮ ನೀಡಿದ ಭೂಮಿಯೇ ನೀರಿಲ್ಲದೆ ಮಲಗಿದಾಗ , ಮಳೆ ಸುರಿವ ಮೋಡವೇ ಬಿಸಿಲಿಗೆ ಇಲ್ಲಿ ಬಾಯಾರುತ್ತದೆ. ಪರಿಚಯಸ್ಥರೆಂದು ನಂಬಿದ ನೆರೆಕರೆಯ ಮಂದಿಯೇ ಬಂಡುಕೋರರಾಗಿ ಎದೆಗೆ ಬಂದೂಕು ಹಿಡಿದಾಗ ಕ್ರಿಮಿಕೀಟದ ಮನುಷ್ಯನಿಗೆ ಸುಡಾನಿನಲ್ಲಿ ಏನು ಕೆಲಸ ?.ಕುಳಿತಲ್ಲೇ ಅಂತರ್ಜಾಲದಲ್ಲಿ ಜಗತ್ತನ್ನು ಓದುವ ಮಂದಿಯನ್ನು ನೋಡುವಾಗ ಸುಡಾನ್ ಮರಳುಗಾಡು ಪ್ರದೇಶದ ರಫ್ಯೂಜಿ ಕ್ಯಾಂಪಿನಲ್ಲಿ ಪ್ಲಾಸ್ಟಿಕ್ ಡೇರೆ ಹಾಕಿ, ಮರದ ಬುಡದಲ್ಲೇ ಮಲಗಿ ಇಣುಕಿ ನೋಡುವ ಮಂದಿ ಭಯಗೊಂಡಾರು !. ಜಗತ್ತಿನ  ಅಂತರ್ಜಾಲ ಸುಖದ ಅಭಿವೃದ್ಧಿ ರಾಷ್ಟ್ರಗಳ ಮಂದಿಯ ಬಗ್ಗೆ ಜಿಗುಪ್ಸೆಗೊಂಡಾರು. ಫ್ಯಾಷನ್ ಮೇಳದಲ್ಲಿ ತಕಥೈ ಕುಣಿವ ಹೆಂಗೆಳೆಯರು, ಶಾಲೆ-ಕಾಲೇಜು, ಕಚೇರಿಗೆ ಲಗುಬಗೆಯಿಂದ ಸಿಂಗರಿಸಿ ನಗರ ಪಟ್ಟಣಗಳಲ್ಲಿ ನಡೆದು ನಗುವಿನ ಗಾಳಿ ಬೀಸುವ ಮಹಿಳೆ , ಯುವತಿಯರ ಬಗ್ಗೆ ಇಲ್ಲಿಯ ಮಹಿಳೆಯರು, ಹೆಂಗೆಳೆಯರು ಹೊಟ್ಟೆಕಿಚ್ಚುಪಟ್ಟಾರು. ಅಷ್ಟೊಂದು ಭಯಾನಕವಾಗಿದೆ ಮನುಷ್ಯ ನಂಬಿಕೊಂಡಿರುವ  ಈ ಮಾನವ ಜಗತ್ತು.

ಹಾಗಂತ ಇಲ್ಲಿಯ ಒಬ್ಬ ಮನುಷ್ಯ ಈ ಕಥೆ ಹೇಳುತ್ತಿದ್ದಂತೆ ಮತ್ತೊಂದು ಗುಂಡು ಎದೆಗೆ ತಾಗುತ್ತದೆ. ಒಂದು ಜೀವ ನೆಲಕ್ಕೆ ಬೀಳುವುದನ್ನು ಕಂಡು, ಮತ್ತೊಂದು ಜೀವ ಕಥೆ ಹೇಳದೆ ಓಡುತ್ತಾ ರೆಫ್ಯೂಜಿ ಕ್ಯಾಂಪಿನ ಡೇರೆಯೊಳಗೆ ಅನ್ನ-ನೀರಿಗೆ ತಡಕಾಡುವುದನ್ನು ಕಾಣಬಹುದು. ಹಸಿವಿನ  ಕಟ್ಟಕಡೆಯ ನೋವಿಗೆ ಸಹಿಸಲಾಗದೆ ಮಾರ್ಧನಿಸುವ ಆರ್ತಸ್ವರವೊಂದು ಆ ಡೇರೆಯೊಳಗೆ ಕೇಳುತ್ತಿದೆ.
ಮಹಸ ತಾನೇ ಕಟ್ಟಿದ ಡೇರೆಯ ಹೊರಾಂಗಣದ ಧೂಳು ತುಂಬಿದ ನೆಲದಲ್ಲಿ ಕುಳಿತಿದ್ದಾಳೆ. ಕಂಕುಳಲ್ಲಿ ಹಾಲು ಕುಡಿಯುವ ಹಸುಳೆಯೊಂದು ಅವಳನ್ನೇ ನೋಡುತ್ತಾ ಹಾಲಿಗಾಗಿ ಒಣಗಿದ ತುಟಿಗೆ ನಾಲಗೆ ನೆಕ್ಕುತ್ತಿದೆ. 29ವರ್ಷದ ನಾಲ್ಕು ಮಕ್ಕಳ ಈ ತಾಯಿ ಹೇಳುತ್ತಾಳೆ
"ನನಗೆ ಭಯವಾಗುತ್ತಿದೆ"
ಏಕೆ  ಭಯವಾಗುತ್ತಿದೆ ಎಂಬ ಕಥೆ ಬಿಚ್ಚುತ್ತಾ ಹೋಗುತ್ತಿದೆ ಸುಡಾನ್ ರೆಪ್ಯೂಜಿ ಕ್ಯಾಂಪಿನ ಡೇರೆಗಳಿಂದ .ಗಂಡನಿಲ್ಲದ ಅವರ ಬದುಕು ತುಂಬಾ ಖಂಡನೀಯ. ಮಹಸಳಂತೆಯೇ ಹಲವು ಹತಾಶರಾದ ಮಹಿಳೆಯರ ಸಂಖ್ಯೆ ಇಲ್ಲಿ ಲೆಕ್ಕವಿಲ್ಲದ್ದು. ಇವರ ಗಂಡಂದಿರೆಲ್ಲಾ ದಕ್ಷಿಣ ಸುಡಾನಿನ ಮೇಲ್ಬಾಗದ  ಬ್ಲೂ ನೈಲ್ ರಾಜ್ಯದಲ್ಲಿ ಮಬಾನ್ ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಸುಡಾನ್ ಲಿಬರೇಷನ್ ಪೀಪಲ್ಸ್ ಚಳುವಳಿಯಲ್ಲಿ ಭಾಗವಹಿಸಿದ್ದಾರೆ ಅಥವಾ ಬಲವಂತದಿಂದ ತಳ್ಳಲ್ಪಟ್ಟು ಬಂಡುಕೋರರ ಗುಂಪಿನಲ್ಲಿ ಸುಡಾನ್ ಸರಕಾರದ ಸೈನೈದೊಂದಿಗೆ ಹೋರಾಡುತ್ತಿದ್ದಾರೆ. ಕೆಲವರು ಮಡಿದಿದ್ದಾರೆ. ಸೈನ್ಯದ ಧಾಳಿ ಮಿತಿಮೀರಿದಾಗ ಅಲ್ಲಿಂದ ತಪ್ಪಿಸಿಕೊಂಡು ಮತ್ತೆಲ್ಲಿಗೋ ಗುರುತು ಪರಿಯವಿಲ್ಲದೆ ಓಡಿ ಹೋಗುತ್ತಿದ್ದಾರೆ. ಈ ಮಹಸಳ ಗಂಡನೂ ಕೂಡ ಬಂಡುಕೋರರ ಸೈನ್ಯದಲ್ಲಿ ಸೇರಿಕೊಂಡು ಬ್ಲೂ ನೈಲ್ ರಾಜ್ಯದಲ್ಲಿ ಹೋರಾಡುತ್ತಿದ್ದಾನೆ. ಅವನು ಬದುಕಿದ್ದಾನೆ ಅಥವಾ  ಅಲ್ಲಿಂದ ಓಡಿಹೋಗಿ ಬೇರೆಲ್ಲೋ ಮರೆಯಾಗಿದ್ದಾನೆ. ಹಾಗಂತ  ಮಹಸ ನಂಬಿದ್ದಾಳೆ. ಪತ್ನಿಯಾದವಳು ತನ್ನ ಪತಿಯನ್ನು ಹೀಗೆ ನೆನಪಿಸುತ್ತಾಳೆ. ಗಂಡನಿಲ್ಲದೆ ಮಕ್ಕಳನ್ನು ಬದುಕಿಸುವ ಅವಳ ಬದುಕು ಖಂಡನೀಯ...! ಸುಡಾನ್ ನಾಗರಿಕ ಯುದ್ಧಕ್ಕೆ ಮೌನವಾಗಿ ಒಂದು ಧಿಕ್ಕಾರದ ಧ್ವನಿ ಅಲ್ಲಿ ಮೇಳೈಸುತ್ತಿದೆ...

ಈ ಮಹಸ ಸುಮಾರು 44,000 ರೆಫ್ಯೂಜಿ ಮಹಿಳೆಯರೊಂದಿಗೆ ಇಲ್ಲಿನ ಡೋರೊ ಕ್ಯಾಂಪಿನಲ್ಲಿ ತಮಗೆ ತಾವೇ ಡೇರೆ ಕಟ್ಟಿಕೊಂಡು ಬದುಕುತ್ತಿರುವರು. ಪಕ್ಕದಲ್ಲೇ ಸತ್ತವರನ್ನ ಹೂತ ಹೆಣಗಳ ಅಸ್ತಿಪಂಜರಗಳು ಬಿರುಸು ಗಾಳಿಗೆ, ಮಳೆಗೆ ಮೇಲೆದ್ದು ಅಟ್ಟಹಾಸಗೈಯ್ಯುವುದು. ಪುಟಾಣಿ ಮಕ್ಕಳು ಅದನ್ನೇ ಆಟದ ಸಾಮಾಗ್ರಿಗಂತೆ ಅತ್ತಿಂದಿತ್ತ ಆಟವಾಡುವುದನ್ನು ಕಾಣಬಹುದು. ಮತ್ತೊಂದು ದಿನ ಅವರದ್ದೇ ಹೆಣದ ಅಸ್ತಿಪಂಜರಗಳು ಮತ್ತೊಂದು ಮಗುವಿಗೆ ಆಟದ ಸಾಮಾಗ್ರಿಯಾಗುವುದು. ಮಹಸ ಮತ್ತು ಅವಳಂತೆಯೇ ಇರುವ ಹೆಂಗಸರು  ದಿನ ನಿತ್ಯ ಬಂಡುಕೋರರ ಮತ್ತು ಸುಡಾನ್ ಸರಕಾರದ  ಸೈನಿಕರ ಅಟ್ಟಹಾಸಕ್ಕೆ, ಧೈಹಿಕ ಹಿಂಸೆ, ಧರ್ಮ ಬೇಧ, ಹಿಂಸಾಚಾರಕ್ಕೆ ಬಲಿಯಾಗಿ, ಪ್ರತೀ ಕ್ಷಣ ಪ್ರತೀ ದಿನವನ್ನು ಭಯದಲ್ಲಿ ಕಳೆಯುವುದನ್ನು ಕಲ್ಪಿಸಿಕೊಂಡಾಗ ಯಾವ ಸಂದರ್ಭದಲ್ಲಿ ಧಾಳಿ ಡೇರೆಗೆ ನುಸುಳುತ್ತದೋ ಅದನ್ನು ಎದುರಿಸಲು ದಿನೇ ದಿನೇ  ಅಬಲ ಹೆಂಗಸರು, ಮಕ್ಕಳು ಸಾಮಾರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನೇ ನಂಬಿರುವ  ಮಕ್ಕಳಿಗೆ ಒಪ್ಪೊತ್ತಿನ ಊಟ ಒದಗಿಸಲು ಪರಿತಪಿಸುವುದು ಮಾತ್ರ ಮಹಸ ಹೇಳಿದ ಅವಳ ಅನುಭವ ಬದುಕಿನ ಕಥೆ .  ಹಾಗಂತ ವಿಶ್ವ ಸಂಸ್ಥೆ  ಒದಗಿಸಿದ ರಫ್ಯೂಜಿ ಕ್ಯಾಂಪಿನ ವೀಕ್ಷಕರು ಮತ್ತಷ್ಟೂ ಅನುಭವ ಕಥೆಗಳನ್ನು ದಾಖಲೆ ಮಾಡಿದ್ದಾರೆ.

2011ರಲ್ಲಿ ದಕ್ಷಿಣ ಕೊರ್ಡೊಫನ್ ಮತ್ತು ಬ್ಲೂನೈಲ್ ರಾಜ್ಯಗಳು ಮಾರಣಾಂತಿಕ ಜಟಾಪಟಿಗೆ ಇಳಿದಿದೆ. ಈ ಹೋರಾಟಕ್ಕೆ ಪ್ರಮುಖವಾಗಿ ಹೆಣಗಳಾಗಿದ್ದು ಈ ಪ್ರಾಂತ್ಯದ ನಾಗರಿಕರು. ಕೆಲವರು ತಿಂಗಳು ಗಟ್ಟಲೆ ಅನ್ನವಿಲ್ಲದೆ ಸತ್ತರು, ಹಾಲಿಲ್ಲದೆ ಹಸುಳೆಗಳು ತಾಯಂದಿರ ಮಡಿಲಲ್ಲೇ ಪ್ರಾಣ ಬಿಟ್ಟವು. ಕೆಲವು ತಾಯಂದಿರು ಮಕ್ಕಳ ಸಮೀಪದಲ್ಲೇ ಅನ್ನವಿಲ್ಲದೆ ಹೆಣವಾದರು. ರಾತೋ ರಾತ್ರಿ ಧಾಳಿ ನಡೆಸುವವರ ಉಪಟಳಕ್ಕೆ ಭಯಗೊಂಡು ಗೊತ್ತು ಗುರಿಯಿಲ್ಲದೆ ಪಲಾಯನಗೈಯ್ದರು. ಇವರಲ್ಲಿ ಮಹಿಳೆಯರು ಮಕ್ಕಳನ್ನು ಕಂಕುಳಲ್ಲಿರಿಸಿ ಮನೆ ಸಂಸಾರ ತೊರೆದು ದಿಕ್ಕಾಪಾಲಾಗಿದ್ದಾರೆ. ಇವೆಲ್ಲರನ್ನೂ ಪತ್ತೆ ಹಚ್ಚಿ ವಿಶ್ವ ಸಂಸ್ಥೆಯ ರೆಫ್ಯೂಜಿ ತಂಡ ದಕ್ಷಿಣ ಸುಡಾನಿನಲ್ಲಿ ಕ್ಯಾಂಪ್ ಏರ್ಪಡಿಸಿ ನೆಲೆ ನಿಲ್ಲಿಸಿತು. ಇವರ ಸಂಖ್ಯೆ 1,12,000  ಕುಟುಂಬಗಳು. ಧಾಳಿ ಎಷ್ಟು ಕ್ರೋರವಾಗಿದೆಯೆಂದರೆ, ಹಾಲು ಕುಡಿಯುತ್ತಿದ್ದ ಮಕ್ಕಳು ತಾಯಂದಿರು, ಅನ್ನ ತಿನ್ನುತ್ತಿದ್ದ ಸಂದರ್ಭಗಳಲ್ಲೇ ಧಾಳಿಕೋರರ ಗುಂಡಿಗೆ ಬಲಿಯಾದ ನಿದರ್ಶಗಳು  ಸುಡಾನ್ ಅಮಾನವೀಯ ನೆಲದಲ್ಲಿ ಕಥೆಗಳಾಗಿವೆ. ನಡೆಯುತ್ತಲೇ ಇವೆ. ಕೆಲವು ಹೆಣಗಳು ಯಾರ ಗೋಜಿಗೂ ಸಿಗದೆ ಅಲ್ಲೇ ಮನೆಯೊಳಗೆ ಮಣ್ಣೊಳಗೆ ಹೂತು ಹೋಗುತ್ತಿವೆ.ಆ ಮನೆಯೊಳಗಿಂದ ನಾಯಿ,ಕಾಗೆ, ರಣ ಹದ್ದುಗಳ ಅರಚಾಟ ಕೇಳಬಹುದು. ಮತ್ತಷ್ಟು ನಾಯಿಗಳು ಹೊರಗೆ ಬಂದು ನಾಲಗೆ ನೆಕ್ಕುವುದು, ಕಾಗೆ, ಹದ್ದುಗಳು ಮನೆ ಸುತ್ತಾ ಹಾರಾಡುತ್ತಿರುವವು.

ಮಾನವ ಹಕ್ಕುಗಳ ಕಾರ್ಯಕರ್ತರ ಪ್ರಕಾರ ತಾವು ನೀಡುತ್ತಿರುವ ರಫ್ಯೂಜಿ ಕ್ಯಾಂಪುಗಳಲ್ಲಿ ದಿನನಿತ್ಯ ಸಂಖ್ಯೆಗಳು ಏರುತ್ತಿದೆ. 2012ರ ಮಳೆಗಾಲದ ಸಂದರ್ಭದಲ್ಲಿ ಧಾರಾಕಾರ ಮಳೆಗೆ ಕನಿಷ್ಠ ನಾಲ್ಕು ತಿಂಗಳು ಮನೆ ಮಠವಿಲ್ಲದ ಮಹಿಳೆಯರು ಮಕ್ಕಳು ಇಲ್ಲಿನ ರೆಫ್ಯೂಜಿ ಕ್ಯಾಂಪುಗಳಲ್ಲಿ ಮಳೆ ನೀರಿಗೆ ತೊಯ್ಯುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು. ಅವರು ಚಳಿಯಲ್ಲಿ ನಡುಗುತ್ತಿದ್ದರು.ಹಸಿವಿಗೆ ಮಳೆ ನೀರು ಕುಡಿಯುತ್ತಿದ್ದರು. ಇವರಲ್ಲಿ  ಬ್ಲೂ ನೈಲ್ ರಾಜ್ಯದ ಗಡಿ ರೇಖೆ ದಾಟಿ ಓಡಿ ಬಂದ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚು. ವಯೋವೃದ್ಧರು ನಡೆಯಲಾಗದೆ ಮುಗ್ಗರಿಸಿ ಬೀಳುತ್ತಿದ್ದ ದೃಶ್ಯಗಳನ್ನು ಕಂಡಿದ್ದೇವೆ ಎಂದರು. ವಿಶ್ವ ಸಂಸ್ಥೆಯ ರೆಫ್ಯೂಜಿ ಸಹಾಯಕ ತಂಡಗಳು ಬ್ಲೂನೈಲ್ ರಾಜ್ಯದ ಈ ರೆಫ್ಯೂಜಿಗಳಿಗೆ ದಿನನಿತ್ಯದ ಆಹಾರ ಪದಾರ್ಥ , ಮತ್ತು ಉಳಿದುಕೊಳ್ಳಲು ಡೇರೆ ನೀಡಲಾಗದೆ ಕೈಚೆಲ್ಲುವ ಪ್ರಸಂಗ ಎದುರಾಗಿದೆ. ಈ ಕಾರಣವಾಗಿ ಆಶ್ರಯಕ್ಕಾಗಿ ಬಂದವರು ಅಲ್ಲಲ್ಲಿ ಸಿಕ್ಕಿದ ಮರದ ಬುಡದಲ್ಲಿ ಮಲಗುತ್ತಿದ್ದಾರೆ. ಹಸಿವಿಗೆ ಕಾಡು ಮರಗಳ ಹಣ್ಣು-ಸೊಪ್ಪು ತಿಂದು, ಸುತ್ತಮುತ್ತ  ಕೊಳಚೆ ನೀರು ಹರಿಯವ  ನೆಲದಲ್ಲೇ ನಿಂತುಕೊಳ್ಳುತ್ತಾರೆ. ಇವರ ಗುಂಪಿನಲ್ಲೇ ಇದ್ದಾಳೆ ಈ ನಾಲ್ಕು ಮಕ್ಕಳ ತಾಯಿ ಮಹಸ.

ಇತ್ತೀಚಿನ ಆರು ತಿಂಗಳಲ್ಲಿ ಗಡಿಭಾಗದಲ್ಲಿ ಬಂಡುಕೋರರ ಹೋರಾಟ ಹೆಚ್ಚಾಗಿದೆ.ಆದರೆ, ದಿಕ್ಕಾಪಾಲಾಗಿ ಓಡಿ ಬರುತ್ತಿರುವ ರೆಫ್ಯೂಜಿಗಳ ಸಂಖ್ಯೆ ಕಡಿಮೆಯಾಗಿದೆ. ಬಹುಷಃ ಸಾಕಷ್ಟು ಗಾಯಗೊಂಡ ಮಂದಿ, ಓಡಲು ಅಸಮರ್ಥರಾದ ಮಂದಿ ಸತ್ತು ಹೋಗಿರಬಹುದು. ಅಥವಾ ದಾರಿ ತಿಳಿಯದೆ ಮತ್ತೆಲ್ಲಿಯೋ ಅಲೆಯುತ್ತಿರಬಹುದು. ಆಶ್ರಯ ಪಡೆದುಕೊಂಡು  ಬಂದ ಕುಟುಂಬಗಳಲ್ಲಿ ಶೇ.80ರಷ್ಟು ಮಹಿಳೆಯರು ಮಕ್ಕಳೇ ಇದ್ದಾರೆ. ಕುಟುಂಬದ ವಾರೀಸುದಾರ ಗಂಡನಿಲ್ಲದೆ ಬದುಕುತ್ತಿರುವ ಈ ದಿನಗಳು ಮುಖ್ಯವಾಗಿ ಆಹಾರಕ್ಕಾಗಿ ಪರಿತಪಿಸುವ ಕ್ಷಣಗಳೇ ಹೆಚ್ಚು. ವಿಧೆವೆಯರು ಮತ್ತು ಗರ್ಭೀಣಿ ಮಹಿಳೆಯರು ಮತ್ತಷ್ಟು ತ್ರಾಸ ಪಡುತ್ತಿರುವ ದೃಶ್ಯಗಳನ್ನು ನೋಡುವಾಗ ಕರುಳು ಕಿತ್ತು ಬರುವುದು ಎಂದು ವಿಶ್ವಸಂಸ್ಥೆ ರೆಫ್ಯೂಜಿ ಮೇಲ್ವಿಚಾರಕಿ ಮೈರತ್ ಮುರದೊವ್ ಗದ್ಗದಿತರಾಗುತ್ತಾರೆ. ಏಕೆಂದರೆ, ಅಸಂಖ್ಯ ನಿರಾಶ್ರಿತರಿಂದ ಆವೃತವಾಗಿರುವ ಈ ಕ್ಯಾಂಪುಗಳಲ್ಲಿ ಮಹಿಳೆಯರು ಆಹಾರ ಪದಾರ್ಥಗಳಿಗಾಗಿ ವಿತರಣೆ ಕೇಂದ್ರದ ದೂರದ ಪ್ರದೇಶಗಳಿಗೆ ಗಂಟೆಗಟ್ಟಲೆ ನಡೆದು ಬರುವ ದೃಶ್ಯ ಸರ್ವೇ ಸಾಮಾನ್ಯ.ಅದರಂತೆ ಪಡೆದುಕೊಂಡ ಪದಾರ್ಥಗಳ ಚೀಲಗಳನ್ನು ಹೆಗಲಲ್ಲಿ ಹೊತ್ತೊಯ್ಯುವ ಅತೀ ಸಂಕಷ್ಟದ ಸಂದರ್ಭಗಳು ಇಲ್ಲಿವೆ. ಇದರಲ್ಲಿ ಅಬಲೆ ಮಹಿಳೆಯರು, ವಯೋವೃದ್ದರು, ಬಾಲಕ- ಬಾಲಕಿಯರು ಚೀಲಗಳ ಭಾರಕ್ಕೆ ದಾರಿಗಳಲ್ಲಿ ನಲುಗುತ್ತಿರುವುದು ಕಂಡು ಬರುತ್ತವೆ.

ಈ ಬರಹದ ಅಕ್ಷರ ಪ್ರವಾಸದಲ್ಲಿ ಬರುವ "ಮಹಸ" ಮಹಿಳೆ ಕೇವಲ ಒಂದು ಉದಾಹರಣೆಯಂತೆ ಇಲ್ಲಿನ ಅಸಂಖ್ಯೆ ಮಹಿಳೆಯರನ್ನು ಪತ್ರಿನಿಧಿಸಿದ ಪ್ರತಿಮೆಯಾಗಿದ್ದಾಳೆ. ತಮ್ಮ ಕುಟುಂಬ ಮಂದಿಗೆ, ಮಕ್ಕಳ ಹಸಿವು ಇಂಗಿಸಲು ದಿನದ ಹಲವು ಗಂಟೆಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಪರಿ ಇದೆ. ಇಲ್ಲಿಯೂ ತಮ್ಮತಮ್ಮವರಿಂದಲೇ ಪದಾರ್ಥ ಸಾಗಣೆಗೆ ಜಟಾಪಟಿಗಳು ನಡೆದು ಸಿಕ್ಕಿದ ಪದಾರ್ಥಗಳು ಇನ್ನೊಬ್ಬರ ಪಾಲಾಗುತ್ತದೆ. ಬಲವಂತವಾಗಿ ಮತ್ತೊಂದು ಕುಟುಂಬದ ಮಂದಿಗಳು ಕಸಿದುಕೊಳ್ಳುತ್ತಾರೆ. ಇದು ಜಗತ್ತು ಕಂಡ ಸಮೂಹ  ಅನ್ನದ ಜಗಳ. ಹಸಿವಿನ ತುತ್ತ ತುದಿಯ ಪರಿತಾಪಗಳು. ಇವೆಲ್ಲಕ್ಕಿಂತಲೂ ಮತ್ತಷ್ಟು ಅಪಾಯವೆಂದರೆ, ಆಹಾರ ಪದಾರ್ಥ ಬೇಯಿಸಲು ಕಟ್ಟಿಗೆ ಸಂಗ್ರಹಿಸುವ ಕೆಲಸ. ಈ ವಿಚಾರವನ್ನು ಸ್ವತಃ ಮಹಸ ಬಿಚ್ಚಿಡುತ್ತಾಳೆ. ಹೇಗೆಂದರೆಒಲೆ ಬೆಂಕಿಗೆ  ಕ್ಯಾಂಪುಗಳ ಸಮೀಪದ ಅರಣ್ಯಗಳಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋಗುವುದೇ ಹಸಿವಿಗೆ ಅನ್ನ ತಿನ್ನುವ ತ್ರಾಸಕ್ಕಿಂದ ಅಪಾಯಕಾರಿ. ಅರಣ್ಯಗಳಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಜನಾಂಗದ ಮಂದಿ ರೆಫ್ಯೂಜಿ ಮಹಿಳೆಯರನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಾರೆ. ಅವರಿಂದ ಕಟ್ಟಿಗೆ ಕಡಿಯಲು ಬಳಸುವ ಕತ್ತಿಗಳನ್ನು ಕಸಿದುಕೊಳ್ಳುತ್ತಾರೆ.ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅತೀ ಭಯಂಕರವಾಗಿ ಅಲ್ಲಿಂದ ಓಡಿಸುತ್ತಾರೆ. ಈ ಬುಡಕಟ್ಟು ಜನಾಂಗದ ಮಂದಿ ಮತ್ತು ರೆಪ್ಯೂಜಿ ಮಹಿಳೆಯರ ಮಧ್ಯೆ ಆಗಾಗ್ಗೆ ನಡೆಯುತ್ತಿರುವ ಹೋರಾಟಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮನೆಗೆ ತಂದ ಆಹಾರ ಪದಾರ್ಥ ಬೇಯಿಸಲು ಒಲೆ ಬೆಂಕಿ ಹಚ್ಚುವುದು ಕಷ್ಟಗಳಲ್ಲಿ ಮತ್ತೊಂದು ಸೇರ್ಪಡೆ.

ಮಹಸಳ ಜೊತೆಗಾರ್ತಿಯರಾದ ತಲಿತ ಮತ್ತು ಮಪೆಲ್ ಹೇಳುವಂತೆ ಅರಣ್ಯದಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ಅರಣ್ಯ ಜನಾಂಗದ ಮಂದಿ  ಬೆನ್ನೆಟ್ಟಿ ಕಟ್ಟಿಗೆಗಳಿಂದ ಹೊಡೆದರು. ಅಲ್ಲಿಂದ ಓಡಿಸಿದರು.ಆದ್ದರಿಂದ ತಂದ ಆಹಾರ ಪದಾರ್ಥಗಳನ್ನು ಬೇಯಿಸದೆ, ಮಕ್ಕಳು ಮತ್ತು ಕುಟುಂಬ ಮಂದಿ ಕಾಡು ಎಲೆ ಸೊಪ್ಪು, ಹಣ್ಣು ಹಂಪಲು ತಿಂದು ಹಸಿವು ಇಂಗಿಸಿಕೊಳ್ಳುತ್ತೇವೆ. ಒಲೆಗೆ ಬೆಂಕಿ ಉರಿಸಲು ಅವರಿಗೆ ಗೊತ್ತಿಲ್ಲದಂತೆ ಕಟ್ಟಿಗೆಗಳನ್ನು ಸಂಗ್ರಹಿಸಿ , ಅವರ ಕಣ್ಣಿಂದ ಮುಚ್ಚಿಡಬೇಕು. ಇಲ್ಲದಿದ್ದಲ್ಲಿ ಕೊಂದು ಬಿಡುವರು ಎಂದು ಪ್ರಾಣಭೀತಿಯನ್ನು ಹೊರಗೆಡವುತ್ತಾರೆ. ಮತ್ತಷ್ಟೂ ಅಪಾಯವೆಂದರೆ, ಮಾನ ಕಾಪಾಡುವುದು. ಕಟ್ಟಿಗೆ ಸಂಗ್ರಹಿಸಲು ಹೋಗುವ ಮಹಿಳೆಯರನ್ನು  ಆ ಗುಂಪಿನ ಒಂದಕ್ಕಿಂತ ಹೆಚ್ಚು ಮಂದಿ ಮರಕ್ಕೆ ಕಟ್ಟಿ ಹಾಕಿ ಮುಗಿ ಬೀಳುತ್ತಾರೆ. ಇದೊಂದು ಬಂಡುಕೋರರ ಅತ್ಯಾಚಾರವೆಂಬ ಪ್ರದರ್ಶನದ ಮತ್ತೊಂದು ಯುದ್ದದ ಪ್ರತಿರೂಪ. ಇವರ ಗಂಡಂದಿರು ಸೈನ್ಯದಲ್ಲಿ ಬಂಡುಕೋರರಾಗಿ ನಲುಗುತ್ತಿದ್ದರೆ, ಇವರ ಹೆಂಗಸರು, ಪುತ್ರಿಯರು ಮತ್ತೊಂದು ಗುಂಪಿಗೆ ಬಲವಂತವಾಗಿ ಹರಾಜಾಗುತ್ತಿದ್ದಾರೆ. ಹಲವಷ್ಟು ಸುಲಿಗೆ, ಹತ್ಯೆ ಪ್ರಕರಣಗಳಲ್ಲಿ ರೆಫ್ಯೂಜಿ ಮಹಿಳೆಯರ ವರದಿಗಳನ್ನು ವಿಶ್ವಸಂಸ್ಥೆ  ರೆಫ್ಯೂಜಿ ತಂಡ ಮಾಹಿತಿ ಸಂಗ್ರಹಿಸಿದೆ.  ಇದು ದಿನನಿತ್ಯ ಸುಡಾನಿನಲ್ಲಿ ನಡೆಯುವ ದೈನಂದಿನ ಕಾರ್ಯವೈಖರಿಗಳು. ಹೇಳ ತೀರದಷ್ಟೂ ಜಗತ್ತು ಪರಿಚಯಿಸಿಕೊಂಡ ರೋಗ ರುಜಿನಗಳು ಇಲ್ಲಿ ಹರಿದಾಡುತ್ತಿವೆ. ಆರೋಗ್ಯ ಸೇವೆ ಒದಗಿಸುವಲ್ಲಿ ವಿಶ್ವ ಸಂಸ್ಥೆ ಹೆಣಗಾಡುತ್ತಿದ್ದರೂ, ಇದರ ಮಧ್ಯೆ ಚಿಕಿತ್ಸೆ ದೊರೆಯದೆ ದಿನ ನಿತ್ಯ ಹಲವು ಮರಣ ಯಾತ್ರೆಗಳು ಕಣ್ಣ ಮುಂದೆಯೇ ಸಾಗುತ್ತಿದೆ. ಅದರಲ್ಲಿ ಹಲವು ಭಯಾನಕ ರೋಗಕ್ಕೆ ಬಾಧಿತರಾದ ಮಹಿಳೆಯರು, ಅವರ ಮಕ್ಕಳು ಮಸಣವಿಲ್ಲದ ಮರಳಲ್ಲಿ ಹೂತು ಹೋಗುತ್ತಿದ್ದಾರೆ.

ವಿಶ್ವ ಮಾನವ ಹಕ್ಕುಗಳ ವೀಕ್ಷಕ ತಂಡ 2012ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದ ವರದಿ ಭಯಾನಕವಾಗಿದೆ. ಅಪ್ಪರ್ ಬ್ಲೂ ನೈಲ್ ರಾಜ್ಯದ ಗಡಿಭಾಗದಲ್ಲಿರುವ ಮತ್ತೊಂದು ರೆಫ್ಯೂಜಿ ಕ್ಯಾಂಪಿನಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಯರ ಅತ್ಯಾಚಾರ ಪ್ರಕರಣಗಳಲ್ಲಿ ಬೀಭತ್ಸ ಕೃತ್ಯಗಳು ದಾಖಲಾಗಿದೆ ಎಂದಿದೆ. ಕ್ಯಾಂಪಿನಲ್ಲಿದ್ದ ಮಹಿಳೆಯರು  ಕಟ್ಟಿಗೆಗೆ ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಹಲವು ತಾಸುಗಳವರೆಗೆ ಪರದಾಡಬೇಕಾದ ಪರಿಸ್ಥಿತಿಯಿದೆ. ಹೀಗೆ ಹೋದ ಮಹಿಳೆಯರು ಮತ್ತು ಹೆಂಗೆಳೆಯರ ಮೇಲೆ ಬಲವಂತ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಹಸಿವಿಗೆ ಅನ್ನ ಬೇಯಿಸಲು ಕಟ್ಟಿಗೆ ಸಂಗ್ರಹಿಸದೇ ಇರುವ ಸ್ಥಿತಿ ಒಂದೆಡೆಯಾದರೆ, ಹೋದವರು ಅತ್ಯಾಚಾರಕ್ಕೀಡಾಗಿ ಶವಗಳಾಗಿ ಬರದೇ ಇರುವ ಮತ್ತೊಂದು ಅಮಾನುಷ ಸ್ಥಿತಿ. ಜಾಗತಿಕ ಡೆನಿಷ್ ರೆಫ್ಯೂಜಿ ಕೌನ್ಸಿಲ್ ಇತ್ತೀಚೆಗೆ 2012ರ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿಯೂ ಇದನ್ನೇ ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿದೆ.

ಹಾಗಾದರೆ, ಸುಡಾನ್ ದೇಶದಲ್ಲಿ ಏಕೆ ಮಾನುಷ ಕೃತ್ಯಗಳು ಹೀಗೆ ನಡೆಯುತ್ತಿದೆ ಎಂಬ ಉತ್ತರಕ್ಕೆ ನಲುಗುವ ಮಾತುಗಳು ಜಗತ್ತಿಗೆ ಸಿದ್ದವಾಗುವುದು. ಇದರ ನಾಗರಿಕ ಹೋರಾಟಗಳ ಪುಟಗಳು 1956ರಿಂದ ಬ್ರಿಟೀಷ್ ಮತ್ತು ಈಜಿಪ್ಟಿನಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಲಭಿಸಿದಂದಿನಿಂದ ಹೊಗೆಯಾಡುತ್ತಿದೆ. ಅದು ಏಕೆ ಮತ್ತು ಅದರ ಅನುಭವಗಳೇನು ಅನ್ನುವ ಮಾತುಗಳು ಇದೀಗ ಬಿಚ್ಚಿಕೊಳ್ಳುವುದು. ಕಗ್ಗತ್ತಲೆ ಖಂಡ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಆಫ್ರೀಕಾದ ಬಹುತೇಕ ರಾಷ್ಟ್ರಗಳು ಈ ಹಿಂದಿನಿಂದಲೂ ಹಲವು ಅಮಾನುಷ ಇತಿಹಾಸಕ್ಕೆ ಜಗತ್ತಿನಲ್ಲಿ ಭಾಜನರು. ಇದರಲ್ಲಿ ಕ್ಯಾಮರೂನ್,ಛಾಡ್, ಕೋಂಗೋ, ಮಾಲಿ,ನೈಜಿರಿಯಾ, ಇತಿಯೋಪಿಯಾ, ಉಗಾಂಡ, ಕಿನ್ಯಾ,ಸೊಮಾಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಸೇರಿಕೊಂಡಿವೆ. ಆದರೆ, ಸುಡಾನ್ ಎಂಬ ಸುಡುಗಾಡು ದೇಶದಲ್ಲಿ ನಾಗರಿಕ ಯುದ್ದಗಳು ನೆಲದ ಪರಿಚಯವನ್ನು ವಿಳಾಸವಿಲ್ಲದ ಊರುಗಳನ್ನಾಗಿಸುವ ಗುರಿ ಮಾತ್ರ ಮಾನವ ಜನಾಂಗವನ್ನು ದಂಗು ಬಡಿಸುತ್ತದೆ. ಅದು ಹೇಗೆ?
(ಮುಂದೆ ನಿರೀಕ್ಷಿಸಿ)
-ರವಿ ಮೂರ್ನಾಡು

ಶುಕ್ರವಾರ, ಜನವರಿ 18, 2013

ನಾ ತೆರೆದ ಜಗತ್ತು !



ಎಲ್ಲಾ ಉಳಿಪೆಟ್ಟು ಹಲ್ಲುಗಳು ಕೊರೆದು
ಎದೆ ಕಗ್ಗಲ್ಲ ಸಿಗಿಯಲಿ
ಅಲ್ಲೊಂದು, ಸುಂದರ ಶಿಲ್ಪ ಸೆಟೆದು
ಪೆಟ್ಟುಗಳಿಗೂ ನಗುತಿರಲಿ |

ಊರೆಲ್ಲಾ ಕೊಳಚೆಗಳು ಹರಿದು
ಎದೆಕೊಳಕೆ ದುರ್ವಾಸನೆ ಉಕ್ಕಲಿ
ಅಲ್ಲೊಂದು ಕಮಲ ದಳಗರಳಿಸಿ
ಜೇನ್ನೊಣ ಮಕರಂಧವೀರುತ್ತಿರಲಿ |

ಎದೆಎದೆಯ ಆರ್ತಸ್ವರಗಳು ಮೊರೆದು
ಸಾಂತ್ವನದ ಕಿವಿಗಳ ಹುಡುಕಲಿ
ನನ್ನೆರಡು ಕಿವಿಗಳಿಗೆ ಮಾತ್ರ
ಧಾವಿಸಿ ಸುಮ್ಮನಾಗಲಿ !

ಜಗದಲ ಪ್ರವಾಹಗಳು ನೆರೆಬಿದ್ದು
ಸಂದು ಸಂದುಗಳ ತಡವಲಿ
ನನ್ನೆದೆಯ ಕಾಲುವೆಗೆ ಹರಿದು
ನೊರೆ ಉಕ್ಕಿ ನಲಿಯುತಿರಲಿ |

ಅವರಿವರ ನೋವುಗಳು ಕೂಗೆದ್ದು
ಆಗಸಕೆ ಮೊರೆಯಿಡಲಿ
ಅಲ್ಲೊಂದು,ಎನ್ನ ಮೋಡದ ಹೃದಯ
ತಂಪಾಗಿ ಮಳೆ ಸುರಿಯಲಿ |

ಸುಡುಸುಡು ದೃಷ್ಠಿಗಳು ದುರುಗುಟ್ಟಿ
ತಂಪು ಕಣ್ಣೆರಡ ಹುಡುಕಲಿ
ನನ್ನೆರಡು ಕಂಗಳು ಮಾತ್ರ
ಬೆಂಕಿ ನೋಟಕೆ ಹನಿಯಲಿ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಭಾನುವಾರ, ಜನವರಿ 13, 2013

ಆ ಸರದಿ ಸಾಲಿನ ಮಂದಿ



ಆ ಸರದಿ ಸಾಲಿನ ಕೊನೆಯಲಿ
ದೊಡ್ಡ ಗುಂಪಿನ ಮಂದಿ ನಿಂತಿದ್ದಾರೆ|

ಬಡತನಕೆ ಹಸಿದವರ ಹೆಜ್ಜೆಗಳು
ಸ್ವಲ್ಪ ಸ್ವಲ್ಪವೇ ಸರಿದು ಕೆಳಗೆ
ನೆಲದುದ್ದಕ್ಕೂ ಸ್ಪಷ್ಟವಾಗಿವೆ
ಪೂರ್ವಜರ ಚಳವಳಿಗೆ-
ಬಾಯ್ಬಿಟ್ಟ ವಲಸೆ ಧ್ವನಿಗಳು |

ಕಂಗಳ ತುಂಬಾ ಕಪ್ಪು ನೀರು-
ಹೊತ್ತು ನಿಂತವರ
ಗಂಟಲಿಗೆ ಅಗತ್ಯದಷ್ಟು ತುಂಬಿ
ಮೊದಲು ಹುಟ್ಟಿದ ಸ್ವರಕೆ ಹೊರಟ
ಮೊದಲ ವಾಕ್ಯ ಮಾತ್ರವೇ ಉಳಿದಿವೆ
ಕಟ್ಟಿದ ಬಾಯಿಗೆ ಮೂಕವಾಗಿ
ತುಟಿ ಒಣಗಿದ ಕಂಗಳು ಕಾದಿವೆ

ಹದ್ದು-ಗಿಡುಗಗಳ ರೆಕ್ಕೆಗಳು
ಅಂಕು ಡೊಂಕು ಸಲಕರಣೆಗಳ
ಪಕ್ಕೆಲುಬುಗಳ ತೂಗಿ
ಮಿರುಗು ಕಣ್ಬೊಂಬೆಗಳ ಕಪ್ಪಿನಲಿ
ಸ್ತಬ್ಧಗಳು ಬೇಟೆಗಿಳಿದಿವೆ |

ಪಕ್ಕದ ಕೊಳದಲಿ
ಬರಗಾಲ,ನಾಗರಿಕ ಯುದ್ಧಗಳ ಬಾಯಿಗೆ
ಹಾರುತ್ತಿದ್ದ ನೋಣಗಳ ರೆಕ್ಕೆ
ಒಣಗಿದ ರಕ್ತಕೆ ಮುರಿಯುತ್ತಿವೆ |

ಸಾಲುಗಟ್ಟಿದ ಗುಂಪು ಒಟ್ಟಾಗಿ
ಒಂದೇ ದೇಹಕೆ ಮಾಂಸಖಂಡವಾಗಿ
ಒಬ್ಬನೇ ಮನುಷ್ಯನಾಗಿ
ಸರದಿ ಮುಗಿಸುವ ಬಯಕೆಯಿದೆ |

ಸದಾ ಮೇಲಿರುವ ರಾತ್ರಿಗಳಿಗೆ
ಚಂಡಮಾರುತದ ಮೈದಾನದಲ್ಲಿ
ಕಾಡುಕುದುರೆ ಸವಾರಿ ನಡೆಯುತಿದೆ |

ಅವರು ..
ಅಂತಿಮ ಪಯಣದ ಒಂದು ದಿನ
ಇಲ್ಲೇ ಹುಟ್ಟಿದ ಹಕ್ಕಿಗಾಗಿ
ಅನುವಂಶಿಕವಾಗಿ ಬಂದ ಭೂಮಿಯ
ಒಡೆಯರಾಗುತ್ತಾರೆ |

ಕರುಣೆ ತೋರುವುದಿಲ್ಲ
ಸಾಲಿನ ಕೊನೆಗೆ ಹುಟ್ಟಿದ
ಶುಭ್ರ ಸರೋವರದ ಅಲೆಯಲಿ
ತೇಲಿ ಪ್ರತಿಫಲಿಸಿದ
ಚಿನ್ನದ ಖಡ್ಗದ ಹರಿತದ ತೀವ್ರತೆಗಳು |

ಮೂಡಣಕೆ ಬೆಳಕಿನ ಪ್ರಕಾಶ ಉರಿಯುತಿದೆ
ಅದು ಅವರಿಗಲ್ಲ !
ಅಲ್ಲೆಲ್ಲೋ ಮಳೆಗೆ ಬಿರುಸು ಬಂದಿದೆ
ತೊಯ್ದಿದೆ ಇವರ ಗಲ್ಲ !
-ರವಿ ಮೂರ್ನಾಡು
 ಚಿತ್ರಕೃಪೆ:ಗೂಗಲ್ ಅಂತರ್ಜಾಲ