ಗುರುವಾರ, ಫೆಬ್ರವರಿ 21, 2013

ಭುಜಕ್ಕೇರಿ ಕುಳಿತ ಎರಡು ಕತ್ತಲೆ ಹಿಂಡುಗಳು !



ಅಪ್ಪ ಸತ್ತ ಮಾರನೇ ದಿನ
ಮನೆಯ ಕಿಟಕಿ ಸರಳುಗಳೆಡೆಗೆ
ಕಣ್ಣು ಬಿಟ್ಟಿದ್ದೆ
ಹುಲ್ಲು ಹಾಸಿನ ಬಯಲ ಕತ್ತಲೆಯಲಿ
ಅವರು ನಡೆದ ಹೆಜ್ಜೆ ಧ್ವನಿ ಆಲಿಸುತ್ತಿದ್ದೆ |

ನನಗೆದುರಾಗಿ, ಅವರ ಪಾದಗಳಲಿ
ಚಂದ್ರ ಹೊಳೆಯುತ್ತಿದ್ದ  |
ಎರಡೂ ಬದಿ ಧೂಳಿಗೆ
ಗಾಳಿ ಬೊಗಸೆಗಿಡಿದು ಒರೆಸುತ್ತಿದ್ದ
ಕೈಗಳಲ್ಲಿ ರಾತ್ರಿಯೊಂದು
ಕಡಿವಾಣವಿಲ್ಲದ ಕುದುರೆಯಂತೆ
ಓಡುತ್ತಿತ್ತು |

ನಾನು ಪ್ರಶ್ನಿಸಿದ್ದೆ
ಎಷ್ಟು ದಿನ ಹೀಗೆ ನಡೆಯುವಿರಿ ?
ಇದು ವಯಸ್ಸು,
ಗಾಳಿ ಉತ್ತರಿಸಿತು
ಖಂಡಿತವಾಗಿ, ಇದು ಗಾಳಿ ಗೀತೆ

ಊಟದ ತಟ್ಟೆ ,ಲೋಟಗಳಿಗೆ
ಬೆರಳುಗಳು ತಿರುಗುತ್ತಾ,
ಬಾಲ್ಯದ ಪೀಠೋಪಕರಣಗಳು
ಬಣ್ಣದ ಕುದುರೆಗಳ ಓಟಕೆ
ಬದಲಾಗುತ್ತಿವೆ  |
ಮತ್ತೊಮ್ಮೆ ತಿರುಗುತ್ತಿವೆ
ಹಳೆ ಸಲಕರಣೆಗಳಂತೆ

ಎಕರೆಗಟ್ಟಲೆ, ಬಯಲು ದಾಟಿ
ನಡೆಯುತ್ತಲೇ ಇದ್ದಾರೆ |
ಅವರ ನಾಲಗೆ ತುದಿಯಲಿ
ನಶಿಸಿದ ಸಾಮ್ರಾಜ್ಯವೊಂದರ
ನಾಣ್ಯದ ಬೆಳಕು ಕಂಗೊಳಿಸುತ್ತಿದೆ

ಸುಗಂಧ ,ಇನ್ನೊಂದು ಚಿನ್ನದ- 
ಪರಿಮಳಗಳ ಜೊತೆಗೆ,
ಎರಡು ಕತ್ತಲೆ ಹಿಂಡುಗಳು
ಭುಜಕ್ಕೇರಿ ಕುಳಿತು ಚಲಿಸಿವೆ |
ಅದೋ.. ಇದೀಗ
ಮುಖ ತಿರುಗಿಸುತ್ತಿದ್ದಾರೆ ತಂದೆ |

ಮತ್ತೆ ಹೋಗಲು ಹವಣಿಸಿದಾಗ
ಭಾರೀ ಮಳೆಗೆ ಹುಟ್ಟಿಕೊಂಡ
ಭಯಾನಕ ರಭಸಗಳ ಭೇದಿಸಲು
ಮುಂದೋಳುಗಳು ಗಾಳಿಗೆ ಬಾಚುತ್ತಿವೆ |

ಕಿಟಕಿ ಪಕ್ಕದ ಹೊರಾಂಗಣಕೆ
ಕುರ್ಚಿಗೆ ಕುಳಿತಿದ್ದೇನೆ |
ಮುಕ್ತ ನೆಲೆ ಕಂಡ ಗಾಳಿ
ಕಾಲ ಸೋಕಿ ಸರಿದಾಗ,
ಜೀವನ ಮೌಲ್ಯದ ಬೆಲೆ
ಅಳತೆಗೆ ಸಿಗಲಿಲ್ಲ  |

ನಾನೀಗ ಬೆಳೆದಿದ್ದೇನೆ
ನನ್ನ ಕೋಣೆಗೆ ಹಿಂತಿರುಗಿ
ಗೊತ್ತಿರುವುದನು ಪುನರಾವರ್ತಿಸುತ್ತೇನೆ |
ಭೂಮಿಯೊಂದು ಮನೆಯಲ್ಲ
ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ |

ಬಯಲು ದಾಟುವ ಮನುಷ್ಯನ
ಕೈಯಲ್ಲಿದೆ ಹಳೆ ರೇಶಿಮೆ 
ಜೊತೆಗೆ,ಹೊಸ ಚಂದ್ರನ ತುಣುಕು |
ಸಾವಿನಿಂದ ಪಲಾಯನಗೈಯ್ಯಲು 
ಉಪಾಯಗಳ ಹುಡುಕಾಡುತ್ತೇವೆ 
ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ  |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

2 ಕಾಮೆಂಟ್‌ಗಳು:

  1. ಚೆಂದದ ಕವಿತೆ ರವಿಯಣ್ಣ. ಅಪ್ಪನ ಪ್ರತಿಮೆಯಿಟ್ಟು ಜೀವನ ಮೌಲ್ಯಗಳನ್ನು ಪರಿಶೋಧಿಸಿದ್ದೀರಿ. ಓದುಗನ ಮನಸ್ಸನ್ನು ಸೆರೆಹಿಡಿಯುವ ಸೂಕ್ಷ್ಮತೆ ಮತ್ತು ತಾಕತ್ತು ಕವಿತೆಗಿದೆ.

    ಬಯಲು ದಾಟುವ ಮನುಷ್ಯ
    ನಕೈಯಲ್ಲಿದೆ ಹಳೆ ರೇಶಿಮೆ
    ಜೊತೆಗೆ,ಹೊಸ ಚಂದ್ರನ ತುಣುಕು |
    ಸಾವಿನಿಂದ ಪಲಾಯನಗೈಯ್ಯಲು
    ಉಪಾಯಗಳ ಹುಡುಕಾಡುತ್ತೇವೆ
    ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ |

    ಈ ಸಾಲುಗಳು ಬಹಳ ಹಿಡಿಸಿದವು.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
  2. ನನಗೆ ತೀವ್ರವಾಗಿ ಕಾಡಿದ ಕವನವಿದು.

    ಅಪ್ಪ ನನ್ನ ಪಾಲಿಗೆ ಕಿತ್ರ ಪಟದ ವ್ಯಕ್ತಿತ್ವ ಮಾತ್ರ. ನಾನು ತೀರಾ ಚಿಕ್ಕವನಾಗಿದ್ದಾಗಲೇ ನನ್ನ ತಂದೆಯವರು ತೀರಿಕೊಂಡರು.

    " ಭೂಮಿಯೊಂದು ಮನೆಯಲ್ಲ
    ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ |" ಇದು ಮಾನವನಿಗೆ ಮೊದಲು ಅರ್ಥವಾದರೆ ಎನಿಟೋ ಸಮಸ್ಯೆಗಳಿಗೂ ಅಂತ್ಯ!

    ಪ್ರತ್ಯುತ್ತರಅಳಿಸಿ