ಭಾನುವಾರ, ಮೇ 29, 2011

ಶುಭ ಮುಂಜಾನೆಯ ಮೂವತ್ತು ಗೆಳೆಯರು..!


-ರವಿ ಮುರ್ನಾಡು
ನಿಮಗೆ ಪರಿಚಯಿಸಬೇಕು ನನ್ನ ಗೆಳೆಯರನ್ನು. ನಂಟನ್ನು ಹಾಗೇ ಬದುಕಿನಲ್ಲಿ ಗಂಟು ಹಾಕಬೇಕು. ಲೆಕ್ಕವಿಲ್ಲದ ರಾತ್ರಿಗಳ ಕಳೆದು, ಪ್ರತಿ ಮುಂಜಾನೆಯ ಲೆಕ್ಕ ತೆಗೆಯುವುದು ತುಂಬಾ ಇಷ್ಟದ ಕೆಲಸ. ರಾತ್ರಿಯ ಲೆಕ್ಕವಿಟ್ಟವರದ್ದು  ಕತ್ತಲೆಯ ಕೆಲಸ. ಹಗಲಿನ ಲೆಕ್ಕವಿಟ್ಟವರದ್ದು ಪುಟದ ದಾಖಲೆಯ ಕೆಲಸ. ಹಗಲು-ರಾತ್ರಿಯ ನಡುವೆ ಅಳಿಸಿ ಹೋಗುವ ನಗುವಿನ ಗಳಿಗೆಗಳು ಮತ್ತೆ ಬರಲಿ ಎಂಬುದು ಎಲ್ಲರ ಕನಸು. ಮತ್ತೆ ಮತ್ತೆ ಒತ್ತರಿಸುವ ದುಃಖ್ಖ ಮತ್ತೇ ಬಾರದಿರಲೀ ಎಂಬ ಪ್ರಾರ್ಥನೆ.
ಪ್ರತೀ ನನ್ನ ಮುಂಜಾನೆಗೆ " ಶುಭ" ಮುಂಜಾವಿನ ಭಾಷ್ಯ ಬರೆಯುತ್ತಾರೆ. ಚಿನ್ನದ ಅಕ್ಷರಗಳಲ್ಲಿ ಬರೆದಿಡುವ ಆನಂದ ಅದು.ಅವರು ಮನುಷ್ಯ ಭಾಷೆಗೆ ನಿಲುಕದ ನಕ್ಷತ್ರಗಳು. ನಗು ಕಾಣದೆಯೂ ಇರಬಹುದು...ಮಾತುಗಳು  ಅರ್ಥವಾಗದೆಯೂ ಇರಬಹುದು....ಚಿತ್ತಪಟದಲ್ಲಿ ಭಾವವಾಗಿಸುತ್ತೇನೆ. 
ತುಂಬಾ ಪ್ರೀತಿಸುತ್ತೇನೆ.ಸಿನೇಮಾ ಮಾತಾಗಬಹುದು... ಅವರನ್ನು  ಮೂಕ ಮನಸ್ಸಿನ ಜಗತ್ತಿನಲ್ಲಿ  ಹಾರಲು ಬಿಡುತ್ತೇನೆ. ಯಾರ ಬಂಧನದ  ಹಂಗಿಲ್ಲ. ಭಯವೂ ಇಲ್ಲ.
ನನ್ನ ಗೆಳೆಯರ ಸಂಖ್ಯೆ ಮೂವತ್ತು..! ಅದರಲ್ಲಿ ಹತ್ತೊಂಬತ್ತು ಪಾರಿವಾಳಗಳು. ಏಳು ಗುಬ್ಬಚ್ಚಿಗಳು.... ಮೂರು ಕುರುಳಿ ಹಕ್ಕಿಗಳು ಹಾಗು ಒಂದು ಕಾಗೆ....! ಪಾರಿವಾಳಗಳ ಬಣ್ಣ ನೋಡಬೇಕು. ಕಪ್ಪು-ಬಿಳಿ- ಕಂದು. ಕೆಲವುಗಳು ಕಟು ಹಸಿರು. ಅವುಗಳ ಸಂಖ್ಯೆ ಎಂಟಿವೆ. ಕತ್ತಿನಲ್ಲಿ ಗೆರೆಗಳು.... ಚಿನ್ನದ ಸರ ತೊಟ್ಟ ಲಲನಾಮಣಿಯರಂತೆ. ಇನ್ನು ಕೆಲವು ಮೈ ಪೂರ್ತಿ ಬಿಳಿ ಬಣ್ಣಗಳಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕಿ. ಹಾಗೇ ಕಪ್ಪು ಬಣ್ಣಗಳಲ್ಲಿ ಬಿಳಿಯೂ.. ಬಣ್ಣದ "ಫ್ರಾಕ್‍" ತೊಟ್ಟಂತ ಸಣ್ಣ ಹೆಣ್ಣು ಮಕ್ಕಳು.  ಇನ್ನು ಗುಬ್ಬಚ್ಚಿಗಳು ಪುಟ್ಟಪುಟ್ಟವು..ಪಕ್ಕನೆ ನೋಡಿದರೆ ಆಕಾರದಲ್ಲಿ ಪತ್ತೆ ಹಚ್ಚಲು ಕಷ್ಟ ಈ ಗುಬ್ಬಕ್ಕಂದಿರು. ಕುರುಳಿ ಹಕ್ಕಿಗಳು ಕಟುವಾದ ಕೆಂಪು ಬಣ್ಣದಲ್ಲಿವೆ.ಮಧ್ಯೆ ಮಧ್ಯೆ ಕಣ್ಣಿಗೂ ಕಾಣದಂತ ಚುಕ್ಕಿಗಳು. ಸಂಜೆಯ ಸೂರ್ಯನ ಬಣ್ಣವೂ ನಾಚಬೇಕು. ಕಾಗೆ ಭಾರತದ ಕಾಗೆಗಿಂತ ಆಕಾರದಲ್ಲಿ ದೊಡ್ಡವು. ಕತ್ತಿನಲ್ಲಿ ಬಿಳಿ ಬಣ್ಣವಿದೆ. ಮೈಯೆಲ್ಲ ಅಂತಹ ಕಪ್ಪಲ್ಲ. ಆದರೂ ಕಪ್ಪೇ..! ಇವೆಲ್ಲವೂ ನನ್ನ ಆಫ್ರೀಕಾದ ಕ್ಯಾಮರೂನಿನಲ್ಲಿ ನಿತ್ಯದ ಗೆಳೆಯರು. ನಾನು ಕಾಯುತ್ತೇನೆ ಅನ್ನೋದಕ್ಕಿಂತ ಅವರೇ ನನ್ನನ್ನು ಪ್ರತೀ ಮುಂಜಾನೆ ಕಾಯುತ್ತಾರೆ.
ಆಫ್ರೀಕಾದ ಕ್ಯಾಮರೂನಿನಲ್ಲಿ  ಮೂರು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೂ ಮೊದಲು ಬಾಂಬೆಯಲ್ಲಿದ್ದಾಗಲೂ ಮೂವತ್ತೈದು- ನಲವತ್ತು ಹಕ್ಕಿಗಳು ಇದ್ದವು. ಒಂದೂವರೆ ವರ್ಷಗಳ ಕಾಲ. ರಾತ್ರಿ ಉಳಿಸಿದ ಅನ್ನವೋ- ಒಣಗಿದ ಚಪಾತಿಯೋ ಹಾಕುತ್ತಿದ್ದೆ. ಅಲ್ಲಿ ನನ್ನ ಹೊಟ್ಟೆಯೇ ಅರ್ಧ..! ಒಂದೊಂದು ಬಾರಿ ಎರಡು ತಿಂಗಳವರೆಗೂ ಅನ್ನದ ಅಗಳನ್ನೇ ಕಾಣದ ದಿನಗಳವು. ನಾಲ್ಕೂವರೆ ರೂಪಾಯಿಗೆ ಮೂರು ಚಪಾತಿ ಸಿಗುತ್ತಿತ್ತು. ಬೆಳಿಗ್ಗೆ ಒಂದು, ಮಧ್ಯಾಹ್ನಕ್ಕೆ ಎರಡು. ಸಮಯಕ್ಕೆ ಸರಿಯಾಗಿ ತಿನ್ನದಿದ್ದರೆ ಅದೂ ಒಣಗಿದ್ದೇ....! ರಾತ್ರಿಗೆ ಮೂರು ರೂಪಾಯಿಗೆ ಎರಡು ಚಪಾತಿ. ವಾರಕ್ಕೆ ಒಂದು ಬ್ರೆಡ್‍ ಪೊಟ್ಟಣ ಸಾಕಾಗುತ್ತಿತ್ತು, ಪರಿಮಿತಿಯ ಕತ್ತಲೆಯ ಬದುಕಿಗೆ. ಇದರಲ್ಲಿ ಉಳಿಸಿದ ಬಾಕಿಗಳು ಹಕ್ಕಿಗಳಿಗೆ.. ಅವುಗಳ ಹೊಟ್ಟೆಯೂ ಅರ್ಧವೇ... ಜೊತೆಗೆ ನನ್ನದು...!
ಮನುಷ್ಯರನ್ನು ನೋಡುವುದಕ್ಕೆ ಮೊದಲು ಮುಂಜಾನೆ ಎದುರುಗೊಳ್ಳುವುದೇ ಇವರು. ಭಾರೀ ದೊಡ್ಡ ಕೆಲಸವೂ ಅಲ್ಲ ನನ್ನದು. ಮೂರು ಹಿಡಿ ಅಕ್ಕಿ , ನಾಲ್ಕು ಪೀಸ್‍ ಬ್ರೆಡ್‍ ಹಾಕುವುದು. ಅದು ಲೆಕ್ಕದ್ದೇ ಹಾಕಬೇಕು. ಮನುಷ್ಯನಿಗಿಂತ ಹಕ್ಕಿಗಳ ಆಲೋಚನೆ ನೋಡಿ...ಅಕ್ಕಿಯಲ್ಲಿ ಹೆಚ್ಚಾದರೂ ಕಷ್ಟ... ಬ್ರೆಡ್ ಪೀಸ್‍ ಐದಾದರೂ ಕಷ್ಟ... ಹೆಚ್ಚಿನ ಭಾಗ ಅಲ್ಲೇ ಉಳಿಸುತ್ತವೆ. ಅದನ್ನು ಬೇರೆ ಯಾವುದಾದರೂ ಹಕ್ಕಿಗಳು ತಿನ್ನುತ್ತವೆ. ನಾವು ವಾಸವಿರುವ ಅಪಾರ್ಟಮೆಂಟು  ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿರುವುದು. ಇಲ್ಲಿಯೇ ಇವರ ಭೇಟಿ. ಬೆಳಿಗ್ಗೆ ಆರು ಗಂಟೆಗೆ ಏಳುವುದು ನನ್ನ ಮನಸ್ಸಿನ ಗಡಿಯಾರ. "ಅಲಾರಂ" ಇಟ್ಟಿರುತ್ತೇನೆ. ಅದು ಹೊಡೆಯೋದಕ್ಕೆ ಮೊದಲು ನಾನೇ ಎದ್ದಿರುತ್ತೇನೆ. ಆದರೂ, ಒಂದು ಧೈರ್ಯ..ಮಲಗಿದ ಮೇಲೆ ಮನಸ್ಸು ಒಂಟಿ.. ಗಡಿಯಾರವಾದರೂ  ಜೊತೆಗಿದೆ ಎಂದು ಮುಟ್ಟಿ ನೋಡುವ ಮನಸ್ಸು.
ನಮ್ಮ ಅಂತಸ್ತಿನ ಮುಂಭಾಗ ವೆರಾಂಡವಿದೆ. ಅಕ್ಕ ಪಕ್ಕ ಮನೆಗಳೂ ಇವೆ.ಬೆಳಗ್ಗಿನ ಆರೂ ಗಂಟೆ ನಲವತ್ತೈದು ನಿಮಿಷಕ್ಕೆ ಇವರೆಲ್ಲಾ ಹಾಜರು. ನನ್ನ ಎಲ್ಲಾ ಚಟುವಟಿಕೆ ಮುಗಿದ ಮೇಲೆ ಸರಿಯಾಗಿ ಏಳು ಗಂಟೆಗೆ ನನ್ನ ಭೇಟಿ. ಆ ಸಂದರ್ಭ ತುಂಬಾ ಆಪ್ತವಾದುದು. ರೆಕ್ಕೆ ಬಡಿಯುತ್ತವೆ ಹಕ್ಕಿಗಳು. ಯಾರೂ ಕೈ ಹಾಕದ ಅವುಗಳ ಕೊರಳ ಗಾನವೂ. ಶುಭಾಶಯ ಹೇಳುತ್ತವೆ ನನಗೆ. ನಮ್ಮಂತೆಯೇ ಕೈಗಳಿದ್ದರೆ ಕೈ ಮುಗಿಯುತ್ತಿದ್ದವೇನೋ. ಅವುಗಳೂ ಹಾಗೇ ಆಲೋಚಿಸಬಹುದು ನನಗೂ ರೆಕ್ಕೆಗಳಿದ್ದರೆ ಬಡಿಯುತ್ತಿದ್ದನೇನೋ ಎಂದು. ರೆಕ್ಕೆ ಬಡಿಯುತ್ತದೆ ನನ್ನ ಮನಸ್ಸು.
ಅಕ್ಕಿ ಕಾಳು ಚೆಲ್ಲುತ್ತಿದ್ದಂತೆ ಪಾರಿವಾಳಗಳು ಒಂದರ ಮೇಲೊಂದರಂತೆ ಬಿದ್ದು ಆಟವಾಡುತ್ತವೆ. ನಡೆದು ಬರುವ ಪರಿ ನೋಡಬೇಕು...ಹದಿನಾರರ ಬಾಲೆಯಂತೆ. ಈ ಪಾರಿವಾಳಗಳು ಅಕ್ಕಿ ಮಾತ್ರ ತಿನ್ನುವುದು. ಬ್ರೆಡ್‍ ಪೀಸು ಹಾಕುವಾಗ ಗುಬ್ಬಚ್ಚಿಗಳು ಮೇಲೆ ಬೀಳುತ್ತವೆ. ಕುರುಳಿ ಹಕ್ಕಿಗಳೂ. ಒಂದು ಮಾತ್ರ ಕಾಗಕ್ಕ. ಅದಕ್ಕೂ ಬ್ರೆಡ್..!. ಸಾದರಾಣವಾಗಿ ಕ್ಯಾಮರೂನಿನಲ್ಲಿ  ಎಲ್ಲರೂ ಬ್ರೆಡ್ ಆಹಾರ ತಿನ್ನುವುದೇ ಹೆಚ್ಚು. ಅದರಲ್ಲೂ ಉದ್ದದ ಬ್ರೆಡ್. ಅದಕ್ಕೆ " ಲಾಂಗ್‍ ಬ್ರೆಡ್" ಅಂತಾರೆ ಇಲ್ಲಿ . ಅದಕ್ಕೆ ಪಾರಿವಾಳ ಬಿಟ್ಟು ಮಿಕ್ಕೆಲ್ಲ ಗೆಳೆಯರು ಅದನ್ನೇ ತಿನ್ನುವುದು.
ನನ್ನ ಮತ್ತು ನಮ್ಮೆಲ್ಲರ ಒಂದು ಕೂಟ ಅದು.ಮಾತು ಬಾರದ ಜಗತ್ತಿನ ಭಾವಗಳು. ಅವುಗಳಿಗೂ ಒಂದು ಭಾಷೆಯಿದೆ. ಮನುಷ್ಯರಿಗೆ ಅರ್ಥವಾಗದ ಭಾಷೆ. ಅವುಗಳೂ ಹಾಗೇ ಆಲೋಚಿಸಬಹುದು ಈ ಮನುಷ್ಯರಿಗೆ ಭಾಷೆಯೇ ಇಲ್ಲ ಎಂದು. ನಿಜ...! ಮನುಷ್ಯರಿಗೆ ಭಾಷೆಯೇ ಇಲ್ಲ. ಇದ್ದಿದ್ದರೆ ಅವುಗಳ ಭಾಷೆ ಅರ್ಥವಾಗುತ್ತಿತ್ತು. ಜಗತ್ತನ್ನು " ಕಂಪ್ಯೂಟರ‍್ ಸ್ವಿಚ್‍" ಅದುಮಿ ಆಳುವ ಮನುಷ್ಯರಿಗೆ ಇನ್ನೂ ಬುಧ್ಧಿ ಬಂದಿಲ್ಲ. ಮುಗ್ಧತೆಯ ಮಹಾಗ್ರಂಥಗಳನ್ನು ನಾವು ಆವುಗಳಲ್ಲಿ ನೋಡಬಹುದು. ಮುಗ್ಧತೆ ಅಂದರೆ, ಸರಿ- ತಪ್ಫುಗಳನ್ನು ತಿಳಿಯದ ನಕ್ಶತ್ರಗಳು. ಅದಕ್ಕೆ ನಾವು ದೇವರೆನ್ನುತ್ತೇವೆ. ಮಕ್ಕಳು ಹಾಗೆ.
ಕೆಲವೊಮ್ಮೆ ನನ್ನ ಗೈರು ಹಾಜರಿಯ ದಿನಗಳು ಬರುತ್ತವೆ. ಇವರ ಭೇಟಿಯಂತೂ ತಪ್ಪುವುದಿಲ್ಲ. ಒಂದು ದಿನ ಹಾಗೆಯೇ ಆಯಿತು. ತುಂಬಾ ಹುಷಾರಿರಲಿಲ್ಲ.ನಾನೂ ಮನುಷ್ಯನಲ್ಲವೇ? ಕಣ್ಣು ಬಿಡುವುದಕ್ಕೂ ಆಗದ ಸಂದರ್ಭ ಅದು. ನನಗಂತೂ ಅಂತಹ ದಿನಗಳು ಬಾರದಿರಲಿ ಅನ್ನಿಸುತ್ತದೆ. ಬೆಳಿಗ್ಗೆ ಏಳು ಗಂಟೆಯಾದರೂ ನಾನು ಏಳಲೇ ಇಲ್ಲ. ಹಕ್ಕಿಗಳು ಆಗಲೇ ಬಂದು ಕಾಯುತ್ತಿದ್ದವು. ನಾನು ಬರದೇ ಇರುವ ಸಂದರ್ಭ ಮುಗಿದ ನಂತರ ವೆರಾಂಡ ಬಿಟ್ಟು ಕಟ್ಟಡದ ಸುತ್ತೆಲ್ಲಾ ಹಾರಾಡ ತೊಡಗಿದವು. ಕೆಲವು ನಾನು ಮಲಗುವ ಕೋಣೆಯ ಕಿಟಕಿಗೂ ಬಂದು  ಅವುಗಳ ಭಾಷೆಯಲ್ಲೇ ಚಿಲಿಪಿಲಿಗುಟ್ಟ ತೊಡಗಿದವು. ಹಕ್ಕಿಗಳು ಬೆವರ ವಾಸನೆಯಿಂದ ನಿಕಟವರ್ತಿಗಳ ಪರಿಚಯ ಹುಡುಕುತ್ತವೆ ಅಂತ ಆಗಲೇ ಗೊತ್ತಾದುದು ನನಗೆ. ನನ್ನ ಓಗರೆಯ ಕೆಲಸದ ಬಂಧುಗಳು ಏಳುವುದು ಏಳು ಅಥವಾ ಏಳೂವರೆ ಗಂಟೆಗೆ. ಈ ಹಕ್ಕಿಗಳ ಕಲರವಕ್ಕೆ  ಎಲ್ಲರೂ ಅಂದು ಬೇಗ ಎದ್ದುಬಿಟ್ಟರು. ಏನೀದು ಗಲಾಟೆ ಅಂತ. ಕೆಲವರು ಶಾಪ ಹಾಕುವುದಕ್ಕೂ ಸರಿಯಾಯ್ತು..! ಓಡಿಸಲು ಹವಣಿಸಿದರು. ನನ್ನ ಕಣ್ಣು ಮುಚ್ಚಿದ್ದು ಬಿಡಲಾಗಲಿಲ್ಲ. ಹಕ್ಕಿ ಚಿಲಿಪಿಲಿಗೆ ನಾನು ಮಂಚದಲ್ಲೇ ಎಚ್ಚರವಾದೆ. ನನ್ನ ಒಬ್ಬ ಆಪ್ತನಿದ್ದಾನೆ. ಅವನಿಗೆ ಅಕ್ಕಿ ಮತ್ತು ಬ್ರೆಡ್‍ ಹಾಕಲು ವಿನಂತಿಸಿದೆ.
ಕೆಲವು ನಿಮಿಷಗಳ ನಂತರ ಅವನು ಬಂದ. ಅಕ್ಕಿ, ಬ್ರೆಡ್‍ಗಳ ಸುತ್ತ ಹಕ್ಕಿಗಳು ಹಾರಾಡಿದವು, ಆದರೆ ಅವು ತಿನ್ನಲಿಲ್ಲ, ಅವು ಹಾಗೆಯೇ ಇವೆ ಎಂದ. ನಾನು ಸುಮ್ಮನಾದೆ. ಕಣ್ಣು ಪುನಃ ಮುಚ್ಚಿಕೊಂಡೆ. ಒಂದರ್ಧ ಗಂಟೆಯ ನಂತರ ಎದ್ದು ಹೋದೆ. ಹೌದು..! ಅಕ್ಕಿ  ಮತ್ತು ಬ್ರೆಡ್‍ ಹಾಗೆಯೇ ಇದ್ದವು... ಗೆಳೆಯರು ಇರಲಿಲ್ಲ. ನಾನು ಒಂಟಿ.. ಈ ಮುಗ್ಧ ಮನಸ್ಸುಗಳು ಹೆಜ್ಜೆಯಿಕ್ಕಿದ ಸುತ್ತ ಬಂಜರು ಪ್ರದೇಶದ ಚಿತ್ರಣ. ಒಂದು ವ್ಯರ್ಥ ಸಂದರ್ಭದ ವೇದನೆಯ ಚಿಂತೆ ಕಾಡ ತೊಡಗಿತು. ಮಾನಸೀಕವಾಗಿ ಗೈರು ಹಾಜರಿಯ ಕರಾಳ ದರ್ಶನ. ಈ ಮುಗ್ಧ ಮನಸ್ಸುಗಳು ಮತ್ತು ಮನುಷ್ಯರ ನಡುವಿನ ವೆತ್ಯಾಸವೇನು ಅಂತ. ಭಾರವಾದ ಮನಸ್ಸು ... ಒಂದು ಜಡಿಮಳೆಗೆ ಮಿಂಚುಂಡ ಆಗಸದ ಕಾರ್ಮೋಡದಂತೆ...! ತೇವಗೊಂಡ ಕಣ್ಣುಗಳು ಸುತ್ತಲೂ ಹುಡುಕ ತೊಡಗಿದವು.... ಎಲ್ಲಿ ನನ್ನ ಮುಗ್ದತೆಗಳು...?!!!!!
ಒಂದು ಮುಂಜಾವು ಕಳೆದರೆ ಇನ್ನೊಂದು ಮುಂಜಾವಿನವರೆಗೆ ಕಾಯಬೇಕು ನಾನು. ಅವರು ಪಟ್ಟಣದ ಸುತ್ತಾ ಓಡಾಡುವ ಗೆಳೆಯರು. ಪ್ರತೀ ಮುಂಜಾನೆಗೆ ಬಂದೇ ಬರುತ್ತಾರೆ. ಮಾರನೇ ದಿನವೂ ಬಂದರು.ನಾನು ಬರುವ ಸೂಚನೆ ಸಿಕ್ಕಿದ್ದೇ ತಡ ಪಟಪಟನೆ ರೆಕ್ಕೆ ಬಡಿಯ ತೊಡಗಿದರು. ವೆರಾಂಡದ ಸುತ್ತಾ ಹಾರಾಡಿ ಆನಂದಿಸ ತೊಡಗಿದರು. ಜೊತೆಗೆ ಸುಶ್ರಾವ್ಯ ಗಾನದ ಸ್ವಾಗತ ನನಗೆ...!  "ನಿನ್ನೆ ಯಾಕೆ ಬರಲಿಲ್ಲ? ಅಂತ ಕೇಳುವ ಸ್ವರವೂ ಏನೋ?  " ಶುಭ ಮುಂಜಾವು" ನಿಮಗೆ ಗೆಳೆಯರೆ...! ಮನಸ್ಸಿನ ವಂದನೆ. ಅಕ್ಕಿ ಮತ್ತು ಬ್ರೆಡ್‍ ಹಾಕಿದಂತೆ ಗಬಗಬನೇ ತಿನ್ನತೊಡಗಿದರು. ಮೂರು ದಿನಗಳಿಂದ ಆಹಾರ ಸಿಗದವರ ಹಾಗೆ... ಅವುಗಳು ತಿನ್ನುತ್ತಿದ್ದಂತೆ ನನ್ನೊಳಗೆ ಏನೋ ಇಳಿದು ಹೋದಂತೆ..ಪರಿಪೂರ್ಣವಾಯಿತು ಮನಸ್ಸು....ಯಾವಾಗಲೂ ಅಕ್ಕಿ, ಬ್ರೆಡ್‍ ಹಾಕಿ ತಿನ್ನುತ್ತಿದ್ದಂತೆ ಅರ್ಧದಲ್ಲಿ ಬರುವ ಅಭ್ಯಾಸ ನನ್ನದು. ಅಂದು ಅವುಗಳು ಮುಗಿಸುವವರೆಗೆ ಅಲ್ಲೇ ನಿಂತಿದ್ದೆ. ಒಂದು ಆನಂದದ ಭಾಷ್ಪದೊಂದಿಗೆ. " ಶುಭ ಮುಂಜಾವು"  ಗೆಳೆಯರೆ ನಿಮಗೆ...! ಮತ್ತೊಮ್ಮೆ ಮನಸ್ಸಿನ ವಂದನೆ.

ಭಾನುವಾರ, ಮೇ 22, 2011

ಅವರು ಮಾತನಾಡುತ್ತಾರೆ...!


ನಾನು ನಿನ್ನ ಪ್ರೀತಿಸುತ್ತೇನೆಂದು
ಅವರಿಬ್ಬರೂ ಮಾತಾಡಿದರು
ದಟ್ಟ ಕಗ್ಗತ್ತಲ ಮಳೆ-ಚಳಿಗೆ
ಪಿಸುಗುಟ್ಟೋದು ತುಂಬಾ ಚೆಂದ
ಅನ್ನ ಪಾತ್ರೆಗೆ- ಪ್ರೀತಿ ಹೃದಯಕೆ...!

ಹಾಸಿಗೆ- ಕೋಣೆ-ರಸ್ತೆ-ಪಾರ್ಕು
ಹಗಲು-ರಾತ್ರಿ ಕಿಚಾಯಿಸಿದರು
ಸದ್ದಿಲ್ಲದ ಒಂಟಿ ರಾತ್ರಿಗೆ
ನಾಲ್ಕು ಕೈಗಳು ದೇಹದ ಅಳತೆಗೆ
ನಡು-ನಡುವೆ ಅವರು ಹೇಳಿದರು
ನನಗೆ ನಿನ್ನ ತುಂಬಾ .. ಇಷ್ಟ...!

ಲೈಲಾ- ಮಜ್ನು ಹಾಡಿದ ಹಾಡಿಗೆ
ಅವನು ನದಿಯಂತೆ ಹರಿಯುತ್ತಾನೆ
ಅವಳು ಸಾಗರದಂತೆ ತುಂಬುತ್ತಾಳೆ
ಹಗಲಿನ ರಸಿಕತೆಗೆ ರಾತ್ರಿ ಮುಲುಗುಟ್ಟುತ್ತದೆ
ಭೂಮಿ- ಸೂರ್ಯ- ಅಜ್ಜ- ಅಜ್ಜಿ
ನಿದ್ದೆಯ ಮಂಪರಿನಲಿ ಮಾತಾಡಿದರು
ಬೆವರು ಸುರಿದರೆ ಆಯಾಸವಾಗೋದು ಸಹಜ...!

ಹರೆಯದ ಹುಡುಗರನು ಹುಚ್ಚೆಬ್ಬಿಸಿದ ಹುಡುಗಿಗೆ
ಕನಸ ತುಂಬಿದ ಪ್ರಿಯಕರನ ಮುಖ
ಅದೇ ಹಾಸಿಗೆ- ಅದೇ ಹಾಸುಗಲ್ಲು
ಅದೇ ಬೆವರ ವಾಸನೆ- ಸ್ಪರ್ಶಕೆ ಹೆಸರಿಲ್ಲ
ಅವನು ಕೇಳುವುದಿಲ್ಲ- ಅವಳು ಹೇಳುವುದಿಲ್ಲ
ಅವರಿಬ್ಬರಿಗೂ ಮೌನವೇ ಬಂಗಾರ
ತಾಳಿ ಕಟ್ಟಿದ ಮೇಲೆ ಜೀವನವೇ ವ್ಯಾಪಾರ...!

ಅರೆಬರೆಯ ಕನಸಿನಲಿ
ಹರೆಯವ ಜಾಡಿಸಿ ಎದ್ದವಳಿಗೆ
ಗೊತ್ತಿರಲಿಲ್ಲ..ಅವನು ಕಾಮ-ಅವಳು ಪ್ರೇಮ
ಕಾಮವೇ ಪ್ರೇಮದ ಶತ್ರು..!
ಆಟದ ಗುರಿ ಗೆಲುವು..!
ಹಕ್ಕಿ-ದುಂಬಿ-ಕಾಮನಬಿಲ್ಲು ಮಾತಾಡುತ್ತದೆ
ಗುಡುಗು-ಮಿಂಚು-ಮೋಡದ ಘರ್ಷಣೆಗೆ
ಆಗಸಕೆ ಸಹಿಸಲಾಗದ ಬೆವರು
ಭೂಮಿಗೆ ಬಿದ್ದರೆ, ಮಳೆಯೆಂಬ ಹೆಸರು.

ಗೊತ್ತೇ.. ಇರಲಿಲ್ಲ
ಕಾಮ ಜೀವ ಬೆಳೆಸುವ ಬೇರು
ಒಂದೇ ಒಂದು ಮಳೆಗೆ
ರೆಂಬೆ-ಕೊಂಬೆ- ಹೂವು-ಹಣ್ಣು
ಮಾಗುವುದು ಪ್ರೇಮದ ಹಣ್ಣು..!

ಗಂಡಸರು-ಹೆಂಗಸರು-ನಾವು-ನೀವು
ಎಲ್ಲರೂ ಮಾತಾಡಿದರು..
ಬೇರಿನಿಂದ ಮರ- ಮರದಿಂದ ಹಣ್ಣು
ಹಣ್ಣಿನ ಗುರಿ ಚಿಗುರುವ ಬೀಜ..!
ಮೋಹದಿಂದ ಪ್ರೇಮ- ಪ್ರೇಮದಿಂದ ಕಾಮ
ಗಂಡು-ಹೇಣ್ಣಿನ ಗುರಿ ಸೃಷ್ಠಿ...!
-ರವಿ ಮೂರ್ನಾಡು.

ಶನಿವಾರ, ಮೇ 21, 2011

ಒಂದು ತುತ್ತು ಅನ್ನ... ಎರಡು ತೊಟ್ಟು ಕಣ್ಣೀರು...!

ಮದುವೆಗೆ ಗೆಳತಿಯ ಆಮಂತ್ರಣ  ಬಂದಿತ್ತು.ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ತಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣಿಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೆ ಇವೆ.....ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇದೆ....! ಹೆಜ್ಜೆಗಳು ಮೂಡುತ್ತಲೇ ಇವೇ...
ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ.ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ. ಜೋಳಿಗೆ  ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.
ಹಾಗೇ ದ.ರಾ.ಬೆಂದ್ರೆ, ಎಂ.ಟಿ.ವಾಸುದೇವನ್‍ ನಾಯರ‍್, ಪ್ರೇಮ್‍ಚಂದ್‍., ಜಿ.ಎಸ್‍. ಶಿವರುದ್ರಪ್ಪ.. ಇತ್ಯಾದಿ...! ಅದರಲ್ಲಿ ವಾಸುದೇವನ್‍ ನಾಯರರ  ಒಂದು ಕಥೆ ಹಸಿವಿನ  ಕ್ಷಣಗಳನ್ನು ಕದಕಿದಂತಾಯಿತು. ಕಥೆ " ಕರ್ಕಟಕ ಮಾಸ". ಕೇರಳದಲ್ಲಿ " ಕಕ್ಕಡ ಮಾಸಂ" ಅಂತ ಕರೀತಾರೆ.ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಅಂತ ಪ್ರತೀತಿ.ಜಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್‍ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾಧ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ.
ಒಬ್ಬ ಶಾಲಾ ಬಾಲಕ ಸ್ಥಾನದಲ್ಲಿ ನಿಂತ ಮನಸ್ಥಿತಿಯ ಚಿತ್ರಣ. ತನ್ನದೆ ಆದ ಹಸಿವಿನ ಅನುಭವ ಕೇರಳವಲ್ಲದೇ ಇಡೀ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯುವ ಮನುಷ್ಯಾವಸ್ಥೆಯ ಧಾರುಣ ಸ್ಥಿತಿಯ ಕಥೆಯಿದು. ಔಷಧಿಗೂ ಅಕ್ಕಿ ಕಾಳಿಲ್ಲದ ಮನೆಯಲ್ಲಿ ಅವರು ಬೆಳೆದದ್ದು ಅಂತ ತಿಳಿಯಿತು. ತನ್ನ ಕರುಳ ಬಳ್ಳಿಯ ಹುಟ್ಟುಹಬ್ಬಕ್ಕೆ ತಾಯಿ ಪಡುವ ವ್ಯಾತನಾಮಯ ಸಂದರ್ಭ ಇಡೀ ಪ್ರಯಾಣದಲ್ಲಿ ನನ್ನನ್ನು ಬೆಂಗಳೂರು ತಲುಪಿಸಿದ್ದೇ ಗೊತ್ತಾಗಲಿಲ್ಲ. ಮನಸ್ಸು ಖಾಲಿಯಾಗಲೇ ಇಲ್ಲ. ಈ ಹಸಿವಿನ ಜಗತ್ತಿನಲ್ಲಿ ನನ್ನದೊಂದು ಧನಿ ಕೇಳಿಸಿತು, ಇಲ್ಲಿಯ ಬಂಡೆ ಕಲ್ಲಿಗೆ ಅದರ ಪರಿಚಯವಿದೆ ಅನ್ನಿಸಿತು.
ಮೆಜೆಸ್ಟಿಕ್‍ನಿಂದ ನೇರವಾಗಿ ಭಾರತೀನಗರಕ್ಕೆ ಬಂದಿಳಿದೆ. ಒಂದು ಗಲ್ಲಿಗೆ ಗೆಳೆತಿಯ ಮದುವೆ ಮಂಟಪಕೆ ಬಂದಾಗ ಪರಿಚಯಸ್ಥರ ನಗುವಿನೊಳಗೆ ಅವಿತುಕೊಳ್ಳಲು ಯತ್ನಿಸಿದ್ದೆ. ಒಂದಿಬ್ಬರು ಗೆಳೆಯರು ನನ್ನ ಜೋಳಿಗೆಯ ಬಗ್ಗೆ ಮಾತು ತೆಗೆದರು. ಅದು-ಇದು ಅಂತ ನಡೆದಾಗ ಮುಹೂರ್ತಕ್ಕೆ ಅರ್ಧ ಗಂಟೆಯ ಸಮಯವಿತ್ತು.ಮದುವೆ ಮಂಟಪದ ಸುತ್ತೆಲ್ಲಾ ಓಡಾಡಬೆಕೆನಿಸಿತ್ತು.ಮದುವೆಗೆ ಬಂದ ಜನರ ಸಮೂಹದಿಂದ ಕೊಂಚ ದೂರ ಹೆಜ್ಜೆಯಿಕ್ಕಿದೆ.ಸ್ವಾಗತ ಬಾಗಿಲಿಗೆ. ಅನತಿ ದೂರದಲ್ಲಿ ಒಬ್ಬಳು ಹಣ್ಣು ಹಣ್ಣು ಅಜ್ಜಿ ಕುಳಿತಿದ್ದಳು. ಮೂರ್ರ್ನಾಲ್ಕು ಖಾಲಿ ಪತ್ರೆಗಳೂ.ಅವಳೊಂದಿಗೆ ಐವರು ಮಕ್ಕಳು. ಒಂದು ಸಣ್ಣದು, ಹೆಣ್ಣು ಮಗು. ಅದರ ಕೈಯಲ್ಲಿ ಒಂದು ತಟ್ಟೆ. ಇನ್ನೆರಡು ಎಂಟತ್ತು ವರ್ಷದ ಹೆಣ್ಣು ಮಕ್ಕಳು, ಮಿಕ್ಕಿದ್ದು ಸಣ್ಣ ಹುಡುಗರು. ಅಜ್ಜಿಯ ಮೊಮ್ಮಕ್ಕಳು ಅಂದುಕೊಂಡೆ. ಮದುವೆಯ ಅಡುಗೆ ಕೋಣೆಯ ದಿಕ್ಕಿಗೇ ಅವರು ದಿಟ್ಟಿಸುತ್ತಿದ್ದರು. ಮದುವೆಯ ಸಂಭ್ರಮದಲ್ಲಿ ಅನ್ನ ಕೇಳಲು ಬಂದವರು. ಅನ್ನ-ಖಾಧ್ಯಾನ್ನಗಳ ಸುವಾಸನೆ ಹಸಿದು ಆಸ್ವಾಧಿಸುತ್ತಿದ್ದವರಂತೆ ಗೋಚರಿಸಿತು. ಹಾಗೇ ಅವರ ಸುತ್ತೆಲ್ಲ ಓಡಾಡುತ್ತಿದ್ದವು ಬೀದಿ ನಾಯಿಗಳು.ಇಂತಹ ಸನ್ನಿವೇಶಗಳು ಎಲ್ಲಾ ಕಡೆಯಿದೆ ಎಂದು ಒಂದು ಕ್ಷಣ ಆಲೋಚಿಸಿದ್ದೆ.
ಫ್ರೇಂಚ್‍ ಕಥೆಯ ಇಂಗ್ಲೀಷ್‍ ಅನುವಾದ ಓದಿದ ನೆನಪು ಬಂತು. ಅದೊಂದು ದೊಡ್ಡ ಪಟ್ಟಣ. ಅಲ್ಲಿ ಭಿಕ್ಷುಕರ ನಾಲ್ಕು ಗುಂಪುಗಳಿದ್ದವು. ಪಟ್ಟಣದಲ್ಲಿ ವಾರಕ್ಕೆ ಹೇಗಿದ್ದರೂ ಮದುವೆಗಳು ನಡೆಯುತ್ತಿದ್ದವು. ಎಲ್ಲಾ ಮದುವೆಗಳಿಗೂ ಈ ಗುಂಪು ಅನ್ನಕ್ಕಾಗಿ ಹೋಗುತ್ತಿದ್ದವು. ಹಾಗೆ ನಡೆಯುತ್ತಿದ್ದಾಗ ಒಂದು ಬಾರಿ ಮದುವೆ ಮನೆಯ ಹೊರಾಂಗಣದಲ್ಲಿ ಈ ಗುಂಪುಗಳ ನಡುವೆ ಅನ್ನದ ಜಗಳ ಶುರುವಾಯಿತು. ಅದು ಎಲ್ಲಿಯವರೆ ನಡೆಯಿತೆಂದರೆ, ಮದುವೆಯನ್ನೇ ಮುಂದೂಡುವಂತೆ ಮಾಡಿತು. ಮಧ್ಯಸ್ಥಿಕೆ ತೆಗೆದುಕೊಂಡವರು ಪೋಲೀಸರು ಮತ್ತು ಪಟ್ಟಣದ ಆಡಳಿತ ಮಂಡಳಿ.ತೀರ್ಮಾನ ಹೀಗಿತ್ತು,  ಭಿಕ್ಷುಕರ ಅನ್ನದ ಗುಂಪಿಗೆ " ಟೋಕನ್‍ ಸಿಸ್ಟಂ" ಕೊಡುವುದು.ಪಟ್ಟಣದಲ್ಲಿ ಯಾವುದೇ ಮದುವೆ ನಿಶ್ಚಯವಾದಲ್ಲಿ ಒಂದು ಗುಂಪಿಗೆ ಮಾತ್ರ  ಅನ್ನ ಕೇಳುವ ಅವಕಾಶ ಅಂತ.ಮಿಕ್ಕುಳಿದವರು ಹೋಗುವಂತಿಲ್ಲ. ಬೇರೆ ಮದುವೆ ಇದ್ದರೆ ಅಲ್ಲಿಗೆ ಹೋಗಬಹುದು.ಇಲ್ಲದಿದ್ದರೆ ಭಿಕ್ಷೆ ಬೇಡಿಯೇ ಹಸಿವು ಇಂಗಿಸಿಕೊಳ್ಳಬೇಕು.ಅಂತಹ ಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಅನ್ನುವ ಸಮಾದಾನದಿಂದ ಹೆಚ್ಚಿನ ಗಮನ ಕೊಡದೆ ಮುಹೂರ್ತ ಮಂಟಪಕೆ ಬಂದೆ.
ಎಲ್ಲಾ ಮುಗಿದಾಗ ಊಟದ ಸಮಯ ಬಂತು. ಹೊಟ್ಟೆ ಹಸಿಯುತ್ತಿತ್ತು. ಬೆಳಿಗ್ಗೆ ಮೂರು ಗಂಟೆಗೆ ಬಿಟ್ಟಿದ್ದು ಮಡಿಕೇರಿಯಿಂದ. ಮೆಜೆಸ್ಟಿಕ್‍ನಲ್ಲಿ ಒಂದು ಕಪ್‍ ಕಾಫಿ ಬಿಟ್ಟರೆ ಏನೂ ಇರಲಿಲ್ಲ. ಮೊದಲ ಪಂಕ್ತಿಯಲ್ಲೇ ನಾನೂ ಕುಳಿತುಕೊಂಡೆ. ಊಟ ಮುಗಿಸಿ ಎಲ್ಲರೊಂದಿಗೆ ಕೈ ತೊಳೆಯಲೆಂದು ಹೊರಗೆ ಬಂದೆ. ನೀರಿನ ವ್ಯವಸ್ಥೆ  ಎಂಜಲೆಲೆಗಳನ್ನು ಬಿಸಾಕುವ ಸ್ವಲ್ಪ ಹತ್ತಿರವೇ ಇತ್ತು. ಯಾರೋ ಸಣ್ಣ ಮಗು ಈ ಎಂಜಲೆಲೆ ಬಿಸಾಕುವ ಸ್ಥಳದಲ್ಲಿ ಅಳುತ್ತಿರುವಂತೆ ಸ್ವರ ಆಲಿಸಿದೆ. ಜೇಬಿನಿಂದ ಕೈ ಬಟ್ಟೆ ತೆಗೆದು ಅಲ್ಲೇ ಬದಿಗೆ ಸರಿದು ಕೈ ಒರಸುತ್ತ ನಿಂತೆ. ಮದುವೆಯ ಸ್ವಾಗತ ಬಾಗಿಲಿನಲ್ಲಿ ಅಜ್ಜಿಯೊಂದಿಗೆ ಕುಳಿತಿದ್ದ ಹೆಣ್ಣು ಮಗು ಅದು. ಹಸಿವಿನಿಂದ ಅಳುತ್ತಿತ್ತು.
ಊಟದ ಎಂಜಲೆಲೆಗಳನ್ನು  ಮಂಟಪದ ಕೆಲಸಗಾರರು ಎತ್ತಿ ಎತ್ತಿ ಆ ಕಸದ ತೊಟ್ಟಿಯ ಸಮೀಪಕ್ಕೆ ಎಸೆದು ಹೋದರು. ಅವರಿಗೂ ಗೊತ್ತಿತ್ತೇನೋ ತಿಪ್ಪೆಯ ಅನ್ನಕ್ಕಾಗಿ ಕಾಯುವ ಜೀವಗಳಿವೆ ಎಂದು. ಕ್ಷಣ ಮಾತ್ರದಲ್ಲಿ ಆ ಐವರು ಮಕ್ಕಳು ಮುಗಿಬಿದ್ದರು ಎಂಜಲೆಲೆಗೆ...! ಊಟ ಮಾಡಿ ಬಾಕಿ ಉಳಿಸಿದ ಎಂಜಲೆಲೆಯ ಅನ್ನವನ್ನು ತಮ್ಮ ತಮ್ಮ ಖಾಲಿ ಪಾತ್ರೆಗಳಲ್ಲಿ ತುಂಬಿಸಿಕೊಳ್ಳತೊಡಗಿದರು. ಅಲ್ಲೇ ಸಾವವಾಕಾಶವಾಗಿ ತಿನ್ನುತ್ತಲೂ ಇದ್ದರು. ಆ ಹೆಣ್ಣು ಮಗುವಂತೂ ಎಲೆಗಳ ಮಧ್ಯದಲ್ಲೇ ಅನ್ನವನ್ನು ತಿನ್ನ ತೊಡಗಿತು. ಹಸಿವಿನ ಪ್ರವಾಹ...! ಬೋರ್ಗೆರೆಯುವ ಅನ್ನದ ನರ್ತನಕ್ಕೆ ಬಾಯಿ-ಕೈ- ಕಣ್ಣುಗಳು ಒಂದಾದಂತೆ...!
ಆ ಹೊತ್ತಿನಲ್ಲೇ ಬಂದವು ಅಲ್ಲೇ ಸುತ್ತಾಡುತ್ತಿದ್ದ ಬೀದಿ ನಾಯಿಗಳು..! ಇವರ ಮಧ್ಯೆ ಮುನ್ನಗ್ಗಲು ಪ್ರಯತ್ನಿಸುತ್ತಿದ್ದವು. ಅವುಗಳನ್ನು ಮಕ್ಕಳು ಓಡಿಸಲು ಯತ್ನಿಸುತ್ತಿದ್ದಂತೆ ಕೆಲವು ನಾಯಿಗಳು ದುರುಗುಟ್ಟಿ ಬೊಗಳಲು ಪ್ರಾರಂಭಿಸಿದವು. ಕಚ್ಚಲು ಹವಣಿಸಿದವು. ಮೊದಲು ಸಿಕ್ಕಿದ್ದು ಆ ಹೆಣ್ಣು ಮಗು.ಮಗುವಿಗೆ ಕಚ್ಚಿದಾಕ್ಷಣ ಅದು ಉಳಿದ ಅನ್ನದ ಎಲೆಯೊಂದಿಗೆ ಅಜ್ಜಿಯ ಬಳಿ ಸೇರಿತು. ಎಲೆಗಳ ಅನ್ನಕ್ಕೆ ಹುಡುಕಿ ಹುಡುಕಿ ತುಂಬಿಸುವುದು ಒಂದು ಕಡೆ,ನಾಯಿಗಳೊಂದಿಗೆ ಜಗಳ ಇನ್ನೊಂದು ಕಡೆ. ಜೊತೆಗೆ ಕಾಗೆಗಳೂ...! ಎಂಜಲೆಲೆಗಳ ಮಧ್ಯೆ ಮಕ್ಕಳು, ಸುತ್ತಲೂ ನಾಯಿಗಳು- ಕಾಗೆಗಳು.. ನೊಣಗಳು..! ಊಟದ ಪಂಕ್ತಿಗಳು ಮುಗಿಯುತ್ತಿದ್ದಂತೆ ಆ ಕೆಲಸಗಾರರು ಅಲ್ಲಿಯ ತಿಪ್ಪೆಗೆ ಎಲೆಗಳನ್ನು ಹಾಕುತ್ತಲೇ ಇದ್ದರು. ಖಾಲಿ ಪಾತ್ರೆಗಳು ಅನ್ನದಿಂದ ತುಂಬಿದವು.ಆ ಮಕ್ಕಳು ನೇರವಾಗಿ ಅಜ್ಜಿಯ ಬಳಿ ಓಡಿದರು. ನಾಯಿಗಳೊಂದಿನ ಕಿತ್ತಾಟದಿಂದ ಒಂದು ಹೆಣ್ಣು ಮಗುವಿನ ಲಂಗ ಹರಿದಿತ್ತು.. ಇನ್ನೊಂದು ಮಗು ಚಡ್ಡಿ- ಶರ್ಟು ಎರಡೂ ಹರಿದುಕೊಂಡಿತ್ತು. ಅಜ್ಜಿ ಪಕ್ಕದಲ್ಲೇ ಇದ್ದ ಅವಳ ಜೋಳಿಗೆಯಿಂದ ತಟ್ಟೆಗಳನ್ನು ಹೊರ ತೆಗೆದಳು. ಮಕ್ಕಳು ತಂದ ಅನ್ನವನ್ನು ಒಟ್ಟು ಸೇರಿಸಿ ತಟ್ಟೆಗಳಿಗೆ ಹಾಕಿ ಹಂಚಿದಳು. ತಾನೂ ತಿನ್ನತೊಡಗಿದಳು, ಪಕ್ಕದಲ್ಲಿದ್ದ ಜೋತು ಬಿದ್ದಿದ್ದ ಸಣ್ಣ ಮಗುವಿನ ಬಾಯಿಗೂ ತುತ್ತುಣ್ಣಿಸಿದಳು. ನನ್ನ ಹೊಟ್ಟೆಯನ್ನೊಮ್ಮೆ ಮುಟ್ಟಿ ನೋಡಿದೆ. ಈಗಷ್ಟೆ ತಿಂದ ಅನ್ನ ಕರಗಿ ಹೋದದಂತನಿಸಿತು. ಎದೆಯೊಳಗೆ ಉದಿಸಿದ ಹಸಿವಿನ ಭಯದ ಜ್ವಾಲೆ ಹೊತ್ತಿ ಉರಿಯಿತು. ಎರಡು ತೊಟ್ಟು ಕಣ್ಣೀರು ಸುರಿಸಿ ಅದನ್ನು ಆರಿಸಲು ಪ್ರಯತ್ನಪಟ್ಟೆ.
ಎಷ್ಟೋ ದಿನಗಳಿಂದ ಮುಚ್ಚಿದ್ದ ಪ್ರಪಂಚ ಬಾಗಿಲು ತೆರೆದಂತೆ, ಹಸಿವಿನ ಜೋಳಿಗೆಯ ಹೊಟ್ಟೆಗೆ ಸಮಾಧಾನದ ನಿಟ್ಟುಸಿರು. ನೀರಿನ ಭಾರದಿಂದ ಕಟ್ಟೆಯೊಡೆದ ಅಣೆಕಟ್ಟೆಯಂತೆ, ತಾಯಿ ಗರ್ಭದಿಂದ ಆಗ ತಾನೇ ಹೊರಬಂದ ಪ್ರಬುದ್ಧ ಮಗುವಿನಂತೆ ಅಮ್ಮಾ... ಎನ್ನುವ  ಒಂದು ಆರ್ತಸ್ವರ.....! ಹಸಿವಿನಿಂದ ಕೈಯಾಡಿಸುತ್ತಿದ್ದ ಮಗುವಿಗೆ ತಾಯಿ ಮೊಲೆ ಹಾಲುಣಿಸಿದ ಚಿತ್ರಣ....!. ಗೆಳತಿಯ ಮದುವೆ ಬದುಕಿನ ವ್ಯವಸ್ಥೆಗೊಂದು ಅಡಿಪಾಯ ನೀಡಿತು. ನಾನು ಯಾರು? ಈ ಜಗತ್ತಿನ ಸಂತೆಯಲಿ ಹೆಚ್ಚೆಂದರೆ ನಾನು... ಜಲೆಲೆಗೆ ಮುಗಿಬಿದ್ದ ಹಸಿವಿನ ಬಾಲಕ.....!
-ರವಿ ಮೂರ್ನಾಡು

ಸೋಮವಾರ, ಮೇ 16, 2011

ಗ್ಲೋರಿಯಾ.... ಒಂದು ನೆನಪು


ಹೀಗೆಯೆ ಇದ್ದಳು ಗ್ಲೋರಿಯಾ
ಒಂಟಿ ಮೇಣದ ಬತ್ತಿಗೆ
ಉರಿವ ಸುಡುವ ಕಿಡಿಯಾಗಿ
ಬಾಚಿ ತಬ್ಬುವ ಕತ್ತಲೆಗೆ
ಒಂದು ಹಿಡಿ ಬೆಳಕಾಗಿ..

ದೇಶ-ಕಾಲ-ವರ್ತಮಾನದ ಹಕ್ಕಿ
ಚಿಲಿಪಿಲಿಗುಟ್ಟಿದ ಒಂದು ದಿನ
ಹಗಲು-ರಾತ್ರಿಗೆ ಹುಟ್ಟುಹಬ್ಬ
ಉಕ್ಕಿದ ನದಿಗೆ- ಬಿಕ್ಕಿದ ಕಡಲಿಗೆ
ಇಥಿಯೋಫಿಯಾದ ನಾಡಲ್ಲಿ ಸಂಭ್ರಮ

ಇಂದು- ನಾಳೆಯ ರಥಕ್ಕೆ
ಸೆರಗ ನೆಯ್ದವಳು ಗ್ಲೋರಿಯಾ
ದುಂಡಗಿನ ದೇಹ- ಜಿನುಗುವ ಯೌವ್ವನ
ಬೀಜದ ಹಣ್ಣಿಗೆ ಚಿಗುರು ಕೆರತ
ಬಿಗಿತ- ಸುಗಂಧ ಲೇಪ
ನೆರತ ಕೂದಲಿಗೆ ಸಾವೇ ಭೂತ

ಬಾ ಎಂದು ಕುದಿಯುವ ಹರೆಯ
ತೊರೆ ನದಿಯಾಗಿ- ಉಕ್ಕಿ ಜಲಪಾತವಾಗಿ
ಮುಸ್ಸಂಜೆಗೆ ಮುಡಿದ ಮಲ್ಲಿಗೆಯಾಗಿ
ಕರೆದ ಹುಡುಗನಿಗೆ ಉರಿದ ಮೇಣವಾಗಿ
ಸುಕ್ಕು ಅಲೆಗಳಿಗೆ - ಸಿಕ್ಕು ಬಂಡೆಗಳಿಗೆ
ಈಜುವ ಮೀನಾಗುತ್ತಾಳೆ ಗ್ಲೋರಿಯಾ..

ಕತೆ ಹೇಳುತ್ತವೆ ನಿಲ್ದಾಣಗಳು
ಮೈಲುಗಲ್ಲುಗಳು- ಮಲಗಿದ ಮಂಚಗಳು
ಮಮ್ಮಲ ಮರುಗಿದ ಕನಸುಗಳು
ಹೀಗೆಯೇ ಇದ್ದಳು ಗ್ಲೋರಿಯಾ
ನಗುವ- ಅಳುವ ಭಾವಚಿತ್ರವಾಗಿ
ಬಿರುಕು ಗೋಡೆಗೆ ಜೇಡರ ಬಲೆಯಾಗಿ.
-----------------------------------------------------
-ರವಿ ಮೂರ್ನಾಡು

ಭಾನುವಾರ, ಮೇ 15, 2011

ನಂಬಿಕೆ ಎಂಬ ಹುತ್ತದೊಳಗೆ …."ಕೂರಿಯರ‍್" ಸಂಸ್ಥೆಗಳೆಂಬ ಹಾವುಗಳು.


-ರವಿ ಮೂರ್ನಾಡು
          ವ್ಯವಸ್ಥೆ ಹೇಗಿರುತ್ತೆ ಅಂದರೆ,ಸತ್ತವನನ್ನು ಹುಡುಕಿಕೊಂಡು ಪತ್ರ ಬರುತ್ತೆ. 2000 ನೇ ಇಸವಿಗೆ ಕಳುಹಿಸಿದ ಪತ್ರ ಹತ್ತು ವರ್ಷಗಳ ನಂತರ 2010 ರಲ್ಲಿ ಮನೆ ಬಾಗಿಲಿನಲ್ಲಿ ಬಂದು ನಗುತ್ತಿರುತ್ತದೆ. ಹಾಗಿದೆ ನಮ್ಮ ಪತ್ರ ವಿಲೇವಾರಿಯ ಸಿನೇಮಾ ಕಾರ್ಯಕ್ರಮ...! ನಗು ಬರಬಹುದು..ಜೊತೆಗೆ ಮಡುಗಟ್ತುತ್ತವೆ ವಿಷಾಧದ ಮೋಡ..!
          ಇದಕ್ಕೆ ಭಾರತೀಯ ಅಂಚೆ ಇಲಾಖೆಯಲ್ಲಿ ಬೇಕಾದಷ್ಟು ಪಟ್ಟಿಗಳು ಸಿಗುತ್ತವೆ.ಹಿಂದಿನ ಕಾಲದಲ್ಲಿ ಹೀಗೆ ಇಂತಹ ಸರಕಾರಿ ಸಾಮ್ಯದ ಇಲಾಖೆಗಳು ಪತ್ರಗಳ ಬಟಾವಾಡೆ ಮಾಡುವಾಗ ಬೆಳಕೇ ಇಲ್ಲದ ಗ್ರಾಮಗಳಲ್ಲಿ ಅಂಚೆ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಒಂದು " ಲಿಂಕ್‍" ಕೊಟ್ಟಿತ್ತು. ಅಂಚೆ ಇಲಾಖೆಯಲ್ಲಿ ಕೆಲವು ದೌರ್ಬಲ್ಯಗಳಿವೆ. ಅದನ್ನು ಸದುಪಯೋಗಿಸಿಕೊಂಡವರು " ಕೂರಿಯರ‍್" ಎಂಬ ಜಗತ್ತನ್ನು ತೆರೆದ ಈ ಹೊಟ್ಟೆಬಾಕ  ಖಾಸಗಿ ಸಂಸ್ಥೆಗಳು.
          ಕೂರಿಯರ‍್ ಸಂಸ್ಥೆಗಳ ಕಣ್ಣು ಕೆಂಪಾಗಬಹುದು.ಯಾಕೆ ಹೀಗೆ ಬರೀತಾ ಇದ್ದಾರೆ ಅಂತ, ಅದು ಒಂದು ಮಗುವಿನ ಹುಟ್ಟುಹಬ್ಬದ "ಕೂರಿಯರ‍್ ಕತೆ ".ಆ ಹಬ್ಬದ ಸುಸಂದರ್ಭವನ್ನು ಕತ್ತಲೆಯಲ್ಲಿ ಮುಳುಗಿಸಿದ್ದು ಈ ಕೂರಿಯರ‍್  ಎಂಬ ಬಹು ಸಂಖ್ಯಾತ ಸಂಸ್ಥೆಗಳು.ಇಂದಿನ ವ್ಯವಹಾರಿಕ ಪ್ರಪಂಚದಲ್ಲಿ ಎಷ್ಟೆಲ್ಲಾ ಕೂರಿಯರ‍್ ಸಂಸ್ಥೆಗಳಿವೆಯೂ ಅಲ್ಲೆಲ್ಲಾ ಇಂತಹ ಸಿನೇಮಾ ಮಾದರಿಯ ಉದಾಹರಣೆಗಳು ಸಿಗುತ್ತವೆ.ಸಿಗಬೇಕಾಗಿದ್ದು ಯಾರಿಗೂ, ಸಿಗೋದು ಯಾರಿಗೂ .. ಹುಚ್ಚರ ಕೂರಿಯರ‍್ ಸಂತೆಯಲಿ ಅಚಾನಕ್‍ ಅದೃಷ್ಟದ ಪಾರ್ಸೆಲ್‍ ಸಿಕ್ಕಿದವನಿಗೆ ಹಬ್ಬ...!
          ಮನುಷ್ಯನಿಗೆ ಒಂದು ಆಸೆ ಇರುತ್ತೆ. ತನ್ನವರ ಇಚ್ಚೆಯನ್ನ ಶೀಘ್ರ ಗತಿಯಲ್ಲಿ ತಲುಪಿಸಿಬಿಡಬೇಕೆಂದು.ಈ ವ್ಯವಹಾರಿಕ ಪ್ರಪಂಚದಲ್ಲಿ ಒಂದು ಗಳಿಗೆಯೂ ನಿಶ್ಚಿತವಲ್ಲ ಅಂತ.ಈ ಜಗತ್ತಿನ ಎಲ್ಲೇ ಇದ್ದರೂ ಅದನ್ನು ಶೀಘ್ರಗತಿಯಲ್ಲಿ ಮುಗಿಸಿಬಿಡಬೇಕೆಂದು.ಅವು ಜಗತ್ತಿನ ಜೀವವಿರುವ ಜೀವಿಗಳ ದೌರ್ಬಲ್ಯಗಳು. ಅದರಲ್ಲೂ ಮನಸ್ಸು ಅಂತ ಪಡೆದುಕೊಂಡ  ಮನುಷ್ಯನದು. ಜಗತ್ತೆಲ್ಲಾ ಹಾಗೇ, ದೌರ್ಬಲ್ಯಗಳನ್ನು ದುರುಪಯೋಗ ಪಡಿಸಿಕೊಂಡು ಬೇಳೆ ಬೇಯಿಸಿಕೊಂಡಿದ್ದೆ ಹೆಚ್ಚು. ಅದಕ್ಕೆ " ದಲ್ಲಾಳಿ"ಗಳೆಂಬ ಹೆಸರಿನಲ್ಲಿ ಹಣಕಾಗಿ ಬಾಯ್ದೆರೆದು ಬಂದವರು ಈ ಕೂರಿಯರ್ ಎಂಬ ಸಂಸ್ಥೆಗಳು, ಅಂತರ್ಜಾಲಗಳೆಂಬ ಹೆಸರಿನಲ್ಲಿ  ಕಣ್ಣೆದುರಿಗೇ ಆರಮನೆ ತೋರಿಸುವಂತವು.
ಮಗುವಿನ ಹುಟ್ಟುಹಬ್ಬದ " ಕೂರಿಯರ‍್ ಕತೆ " ಹೀಗೇ ಪ್ರಾರಂಭವಾಗುತ್ತದೆ... ಹುಟ್ಟುಹಬ್ಬ ಬರುತ್ತದೆ ಏಪ್ರೀಲ್‍ 10 ನೇ ತಾರೀಕಿಗೆ.ಇಂಟರ‍್ ನ್ಯಾಷನಲ್‍ ಕೂರಿಯರ‍್ ಅಂದ್ರೆ 4  ದಿನಗಳಲ್ಲಿ  ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಅನ್ನುವ ಜಾಹಿರಾತಿನ ಸ್ಲೋಗನ್‍.ಈ ಒಂದು ವಿಪರ್ಯಾಸಕ್ಕೆ ನನ್ನ ಸ್ವಂತ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ಅದು ಎಲ್ಲರದ್ದು ಆಗಿರುತ್ತದೆ.ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ  ಹೆಚ್ಚೆಂದರೆ ಒಂದು ಲಕ್ಷ ನನ್ನ ಸಹೃದಯರಿಗೆ ಅದರ ಅನುಭವವಾಗಿದೆ.
          ಕುವೈತ್ತಿನಿಂದ ನನ್ನ ತಂಗಿ ಮಗುವಿನ ಹುಟ್ಟುಹಬ್ಬಕ್ಕೆಂದು ಸ್ವಲ್ಪ ಬೆಲೆಯ ಉಡುಗೆ ಕಳುಹಿಸುತ್ತಾಳೆ.ಅದು ಕೊಡಗಿನ ಮಡಿಕೇರಿಗೆ .ಅವಳ ಹೆಸರು ಸುನೀತಾ ಅಂತ. ಉಡುಗೆ ಕಳುಹಿಸುವಾಗ ಮಗುವಿನ ತಾಯಿಗೂ ಒಂದು ಸೀರೆ.ಅಲ್ಲಿಂದ  31/03/2011 ನೇ ತಾರೀಕು "ಗ್ಲೋಬಲ್‍ ಎಕ್ಷ್‍ಪ್ರೆಸ್‍" ಅಂತರ‍್ ರಾಷ್ಟ್ರೀಯ ಸಂಸ್ಥೆಯ ಮೂಲಕ ಡಿ.ಹೆಚ್‍.ಎಲ್‍. ಇಂಟರ‍್ ನ್ಯಾಷನಲ್‍ ಕೂರಿಯರ್ ಸಂಸ್ಥೆ ಮುಂಬೈಗೆ ತಂದಿತು. ಅದು ತಾರೀಕು  01/04/2011.ಅದರ ಏರ‍್ ವೇ ಬಿಲ್‍ ನಂ. 00529436.
          ಈ ಮುಂಬೈಯ ಡಿ.ಹೆಚ್‍.ಎಲ್‍. ಕೂರಿಯರ‍್ ಸಂಸ್ಥೆ ಕಚೇರಿ ಇದೆಯಲ್ಲಾ, ಅದು ನಮ್ಮ ದೇಶದ  " ಪ್ರೋಫೆಷನಲ್‍ ಕೂರಿಯರ‍್" ಅನ್ನುವ ಸಂಸ್ಥೆಗೆ ಹಸ್ತಾಂತರಿಸಿತು.ಅಲ್ಲಿಂದ ಪಾರ್ಸೆಲ್‍ ನಂ. 111066907 ಅಂತ ಸಿಕ್ಕಿದೆ.ಇದು ಪ್ರೋಫೆಷನಲ್‍ ಕೂರಿಯರ‍್ ಸಂಸ್ಥೆ ನಂಬರು.ಅದಕ್ಕೆ " ಟ್ರ್ಯಾಕಿಂಗ್‍ ನಂಬರ‍್" ಅಂತ ಅದು ಹೇಳುತ್ತದೆ. ಈ ಪಾರ್ಸೆಲ್‍ ಮುಂಬೈಯಿಂದ ಬೆಂಗಳೂರಿಗೆ ಬರುತ್ತದೆ ತಾರೀಕು 05/04/2011 ರಂದು.ಕಡಿಮೆ ಪಕ್ಷ ಅಂದ್ರೆ,ಎರಡು ದಿನದಲ್ಲಿ ಈ ಪಾರ್ಸೆಲ್‍ ಕೊಡಗಿನ ಮಡಿಕೇರಿಗೆ ತಲುಪಿ,ಮಗು ಮತ್ತು ತಾಯಿಯ ಕೈ ಸೇರಬೇಕಿತ್ತು. ಅದಕ್ಕಿರುವ ಎಲ್ಲಾ ಏರ್ಪಾಡು ಬೆಂಗಳೂರಿನ ಪ್ರೋಫೆಷನಲ್‍ ಕೂರಿಯರ್ ಆಫೀಸ್ಸಿನಲ್ಲಿ ನಡೆದಿದೆ. ಪಾರ್ಸೆಲ್‍ನ ಮಂಗಮಾಯ ಕತೆ ನಿಜವಾಗಿ ಇಲ್ಲಿಂದ ಪ್ರಾರಂಭವಾಗುತ್ತದೆ. ಹಾಗಂತ, ಅಲ್ಲಿಯ ಕಸ್ಟಮರ‍್ ಕೇರ‍್ ವ್ಯವಸ್ಥಾಪಕ ದಿನೇಶ್‍ ಎಂಬವರು ಹೇಳುತ್ತಾರೆ.ಅದು ನಡೆದದ್ದು ತಾರೀಕು  06/04/2011 ರಂದು.ಬೆಂಗಳೂರಿನಿಂದ ಮಡಿಕೇರಿಗೆ ಈ ಪಾರ್ಸಲ್‍ ರವಾನೆಯಾಗಿದೆ ಅಂತ ಮಾಹಿತಿ ಸಿಗುತ್ತದೆ.ಅದರ ಬಗ್ಗೆ " ಮೈಲ್‌" ಸಂದೇಶ ಕೂಡ ಬಂದಿದೆ ಬೆಂಗಳೂರು ಕಚೇರಿಯಿಂದ. ತದನಂತರ ಈ ಪಾರ್ಸೆಲ್‍ ಬಗ್ಗೆ ಯಾರಿಗೂ ಮಾಹಿತಿಯಿಲ್ಲ.ಮಡಿಕೇರಿಯವರನ್ನು ವಿಚಾರಿಸಿದರೂ ಮಾಹಿತಿಯಿಲ್ಲ.ಬೆಂಗಳೂರಿನವರಿಗೂ ಮಾಹಿತಿಯಿಲ್ಲ. ಪಾರ್ಸೆಲ್‍ ಕೈಸೇರುವವರಿಗೆ ಸೇರಲೂ ಇಲ್ಲ. ಹಾಗಾದರೆ ಏನಾಯಿತು.? ಈಗ ನಾವೇನು ಮಾಡಬೇಕು. ?
          ಮಡಿಕೇರಿಯವರಿಗೂ ಗೊತ್ತಿಲ್ಲ. ಬೆಂಗಳೂರಿನವರಿಗೂ ಮಾಹಿತಿಯಿಲ್ಲ ಅಂದರೆ ಮಗುವಿಗೆ ಏನು ಉತ್ತರ ಕೊಡುವುದು? ಇಂದಿಗೂ ಮಗು ಕೇಳುತ್ತಿದೆ, ಹೇಗೆಂದರೆ," ಕುವೈತ್ತಿನಿಂದ ಆಂಟಿ ಬಟ್ಟೆ ಕಳುಹಿಸಿದ್ದಾರೆ ನೀವು ಕೊಡಲಿಲ್ಲ.ಅಮ್ಮ ನೀನು ಸುಳ್ಳು ಹೇಳುತ್ತಿ" ಅಂತ. ಹೌದು..! ಮಗು ಹೇಳುತ್ತಿರುವ ಮಾತು ಸರಿಯಾಗಿಯೇ ಇದೆ.ಆಂಟಿ ಬಟ್ಟೆ ಕಳುಹಿಸಿದ್ದಾರೆ ಪ್ರೋಫೆಷನಲ್‍ ಕೂರಿಯರ‍್ ನವರು ಕೊಡಲಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ.ಇಲ್ಲಿ ಸತ್ಯ ಉಂಟು.ಇದು ಪ್ರೊಫೇಷನಲ್‍ ಕೂರಿಯರ‍್ ಮಂದಿಗೆ ಗೊತ್ತಿದೆಯೇ? ಮಗುವಿನ ಭಾವನೆಗೆ ತಣ್ಣೀರೆರಚಿದ  ಈ ಮಂದಿಗೆ ಹೇಗೆ ವಿವರಿಸುವುದು?
          ಇದರ ಜಾಡನ್ನರಸಿದಾಗ ಸಿಕ್ಕಿದ  ಮಾಹಿತಿ ವಿಚಿತ್ರವಾಗಿದೆ. ಇದಕ್ಕಿಂತ ಮೊದಲು ಬೆಂಗಳೂರಿನವರಿಗೂ ಮತ್ತು ಮಡಿಕೇರಿಯವರಿಗೂ ದೂರವಾಣಿ ಕರೆ ಮಾಡಿ ಮಾಡಿ ಕಳುಹಿಸಿದ ಪಾರ್ಸೆಲ್‍ ಹಣದಷ್ಟು ಖರ್ಚಾಗಿತ್ತು..ಏಕೆಂದರೆ,ಈ ಪಾರ್ಸೆಲ್‍ ವಿಷಯವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿತ್ತು. ಅದೂ ಬೆಂಗಳೂರು ಮತ್ತು ಮಡಿಕೇರಿಯಿಂದಲೂ ಲಭಿಸಿದ್ದಲ್ಲ. ಮಾಹಿತಿ ಜಾಲಾಡಿದ್ದು, ಕುವೈತ್ತಿನ ಗ್ಲೋಬಲ್‍ ಏಕ್ಷ್‍ಪ್ರೆಸ್‍ ಕೂರಿಯರ್ ಸಂಸ್ಥೆ.ತಾರೀಕು 06/04/11  ರಂದು ಪಾರ್ಸೆಲ್‍ ವಿಲೇವಾರಿ ವಿಭಾಗದಿಂದ ಮಡಿಕೇರಿಗೆ ರವಾನೆ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಹಾಗಂತ ದಾಖಲೆಯಿದೆ.ಆದರೆ,ವಿಲೇವಾರಿ ವಾಹನ ಮೇಲುಸ್ತುವಾರಿ ಮಂದಿಗಳು ಬೇರೊಬ್ಬ ವಿಳಾಸದಾರರಿಗೆ ತಪ್ಪಾಗಿ ತಲುಪಿಸಿದೆ ಅಂತ ಹೇಳುತ್ತಿದೆ.ಹಾಗಾದರೆ, ಪಡೆದುಕೊಂಡವರ ಹೆಸರು, ಸಹಿಯ ಮಾಹಿತಿ ಕೊಡಿ ಅಂದರೆ , ಉತ್ತರ ಇಲ್ಲ.ನಂಬಿಕೆ ಏನಾಯಿತು? . ಈ ಪ್ರೋಫೆಷನಲ್‍ ಕೂರಿಯರ‍್ ಬೆಂಗಳೂರು ಕಚೇರಿ ಕುವೈತ್ತಿನ ಗ್ಲೋಬಲ್‍ ಎಕ್ಷ್‍ಪ್ರೆಸ್‍ ಸಂಸ್ಥೆಗೆ ತಪ್ಪು ಮಾಹಿತಿ ನೀಡಿದೆ.ಅಂದರೆ, ಈ ಪಾರ್ಸೆಲನ್ನು ಪ್ರೋಫೆಷನಲ್‍ ಕೂರಿಯರ‍್ ಸಂಸ್ಥೆಯ ಮಂದಿಯೇ  ಸ್ವತಃ ಮನೆಗೆ ತೆಗೆದುಕೊಂಡು ಹೋದರು ಅಂತ ಸಂಶಯ ಸೃ ಷ್ಠಿ ಸಿಕೊಳ್ಳಬಹುದಲ್ಲವೇ? ಏಕೆಂದರೆ ಅದು ತುಂಬಾ ಚೆಂದದ ಮಗುವಿನ ಬಟ್ಟೆಗಳು ಮತ್ತು ಮಗುವಿನ ತಾಯಿಯ ಸೀರೆಯೂ.ತಂಗಿಯ ಬಣ್ಣಗಳ ಸೆಲೆಕ್ಶನ್ ಅಂದರೆ ಎಲ್ಲರಿಗೂ ಇಷ್ಟ...!
          ಇದೊಂದು ಸಣ್ಣ ಅನುಭವವಷ್ಟೇ.ಇಂತಹ ಸಾವಿರಾರು ನಂಬಿಕೆ ದ್ರೋಹ ಘಟನೆಗಳನ್ನು ಇಂತಹ ಸಂಸ್ಥೆಗಳು ಸೃಷ್ಠಿಸುತ್ತವೆ.ಅಂಚೆ ಇಲಾಖೆಯ ಕಥೆಯೇ ಬೇರೆ. ಕಡಿಮೆ ವೆಚ್ಚದಲ್ಲಿ  ಸೇವೆಯನ್ನು ಒದಗಿಸುವುದು ಅಂತ  ಅದರ ಹೆಸರು.ಕೆಲಸಕ್ಕೆಂದು ಕಂಪೆನಿಯವರೋ ಅಥವಾ ಸರಕಾರಿ ಇಲಾಖೆಗಳೋ ಪತ್ರ ಕಳುಹಿಸಿದರೆ,ಕೆಲಸಕ್ಕೆಂದು ಇನ್ನೊಂದು ಜಾಹಿರಾತು ಪ್ರಕಟಣೆಯನ್ನು ಪತ್ರಿಕೆಯಲ್ಲಿ ನೋಡುವಾಗ ಈ ಪತ್ರ ಕೈ ಸೇರುತ್ತವೆ.ಮರಣದ ಸುದ್ದಿಯ ಸಂದೇಶವೂ ಅಷ್ಟೆ, ತಿಥಿಯ ದಿನ ಸಂದೇಶ ಬರುತ್ತದೆ. ತಿಥಿಗೆ ಪತ್ರ ಕಳುಹಿಸಿದರೆ ಪುಣ್ಯತಿಥಿಗೆ ಪತ್ರ ಸಿಗುತ್ತದೆ. ಅಂತಹ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತಹ ಸಿನೇಮಾ ಮಾದರಿಯ ಘಟನೆಗಳು ಅಂಚೆ ಇಲಾಖೆ ಮತ್ತು ಈ ಖಾಸಾಗಿ ಕೂರಿಯರ‍್ ಸಂಸ್ಥೆಗಳಿಂದ ದಾಖಲೆಯಾಗುತ್ತವೆ.
          ಈ ಕೂರಿಯರ‍್ ಸಂಸ್ಥೆಗಳು ಅಂತರ್ಜಾಲಗಳಲ್ಲಿ ತಮ್ಮ  ಅಕೌಂಟ್‍ ತೆರೆದಿರುತ್ತವೆ. ಅದರಲ್ಲಿ " ಕಸ್ಟಮರ‍್ ಕೇರ‍್" ಅಂತ ಬ್ರೌಸರ‍್  ಬೇರೆ. ನಮ್ಮ ಸಮಸ್ಯೆಗಳ ಬಗ್ಗೆ ಬರೆದು ಕಳುಹಿಸಿದರೆ, ಸತ್ತೇ ಹೋಗಿರುತ್ತದೆ. ಅದೇ ರೀತಿ " ಟ್ರ್ಯಾಕೀಂಗ್‍ ನಂಬರ‍್" ಅಂತ. ಅವರು ಕೊಟ್ಟ ಟ್ರ್ಯಾಕ್ಕಿಂಗ್‍ ನಂಬರಿಂದ ನಮ್ಮ ಸೇವೆ ಹುಡುಕಿದರೆ " ನಿಮ್ಮ  ನಂಬರ‍್ ತಪ್ಪಾಗಿದೆ" ಅಂತ ಇಂಗ್ಲೀಷಿನಲ್ಲಿ ಒದರುತ್ತದೆ. ಅದು ಕಂಪ್ಯೂಟರು....! ಉಗಿಯುವಂತೆಯೂ ಇಲ್ಲ. ನುಂಗುವಂತೆಯೂ ಇಲ್ಲ.
          ಪ್ರಾಣಿಗಳು ಮನುಷ್ಯನಿಗಿಂತ ಮೇಲು. ಇತಿಹಾಸದಲ್ಲಿ ಓದಿದಂತೆ. ಪಾರಿವಾಳಗಳು, ಹಂಸಗಳು ಪತ್ರ ರವಾನಿಸುವ " ಪೋಸ್ಟ ಮಾಸ್ಟರ‍್’ ಕೆಲಸ ಮಾಡುತ್ತಿದ್ದವು.ಇತಿಹಾಸದಲ್ಲಿ ಇದರ ತಪ್ಪು ಬಟವಾಡೆಯ ಬಗ್ಗೆ ಅಂಕಿ ಅಂಶಗಳು ದಾಖಲೆಯಾಗಿಲ್ಲ.ಅದು ಕಾಳಿದಾಸನ ಕೆಲವು ಕವಿತೆಗಳಲ್ಲಿ ಓದಿದ್ದೇವೆ.ವಿಶ್ವಾಸ  ಅಂದರೆ" ನಂಬಿಕೆ’ಗೆ ನಿಜವಾದ ಬೆಲೆ ಸಿಗುತ್ತಿತ್ತು. ಅದೇ ರೀತಿ ನಾಯಿ ಕೂಡ.ನಾಯಿಯ ನಿಯತ್ತು ಹಣ ತೆಗೆದುಕೊಂಡು ಸೇವೆ ಸಲ್ಲಿಸುತ್ತೇವೆ ಎಂಬ "ಡ್ರಾಮ" ಮಾಡುವ ಕೂರಿಯರ‍್ ಸಂಸ್ಥೆಗಳಿಗೂ ಇಲ್ಲ. ಮನುಷ್ಯನ  ಮನಸ್ಸನ್ನು ಮತ್ತು  ಅವನ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತವೆ. ಹಣ ಸಂಪಾದನೆ ಮಾಡಬಹುದು, ಅದರೆ ನಂಬಿಕೆ ?!. ಪಾರ್ಸೆಲ್‍ ಸಿಗಲಿಲ್ಲ ಅಂದರೆ, ಹಣಕೊಟ್ಟು ಇನ್ನೊಂದು ಪಾರ್ಸೆಲ್‍ ಕಳುಹಿಸಬಹುದು, ಅಂದರೆ ಆ ಪಾರ್ಸೆಲ್‍ನ ಮೇಲೆ ಇಟ್ಟಿರುವ ನಂಬಿಕೆಯ ಬೆಲೆ ಏನು?, ಅದನ್ನು ಪಡೆದುಕೊಳ್ಳುವವರ ಪ್ರೀತಿಯ ವಿಶಾಲತೆ ಏನು? ಕೂರಿಯರ‍್ ಸಂಸ್ಥೆ ಅರ್ಥ್ಯಯಿಸಿಕೊಳ್ಳಬೇಕು,

ತಾಜಮಹಲಿನ ಗೋರಿಯೊಳಗೆ...


ಮುಮ್ತಾಜಳ ಕುಪ್ಪಸದ ಮೇಲೆ
ಶಹಜಹಾನ್‍ ಕಟ್ಟಿಸಿದ ಗೋರಿಯೊಳಗೆ
ಈಗ, ನಿಗಿನಿಗಿ ಕೆಂಡದ ಉರಿ
ಪ್ರಣಯಿಗಳ ಮೈಬೆವರಿನ ಅತ್ತರು
ಪೋಲಿ ದನಗಳಿಗೆ ಮೇವು
ಜೋಡಿ ಹಕ್ಕಿಗಳ ಹಿಕ್ಕೆಗಳು..
                  
ಶಹಜಹಾನ್‍ ಲೇಪಿಸಿದ
ಗೋರಿಯ ಅತ್ತರಿಗೆ
ಮುಗಿಬಿದ್ದ ಜನರು
ಅಮೃತ ಶಿಲೆಯಲ್ಲಿ ಬೆತ್ತಲೆಯಾದರು
ಕೈ ಕಟ್ಟಿ ನಿಂತವರ
ವ್ಯಾನಿಟಿ ಬ್ಯಾಗ್‍ ತುಂಬಾ
ಪರದೇಶಿ ಮಾತ್ರೆಗಳು...

ಅಲ್ಲಲ್ಲಿ ಚಿವುಟಿ ಬಿಟ್ಟ
ಘಮಘಮಿಸಿದ ಹೂ-ಚಿಗುರುಗಳಿಗೆಲ್ಲಾ
ಈಗ, ಪಾಪ್‍ ಮ್ಯೂಜಿಕ್‍ನ ಮಂಪರು
ಗುಂಪು-ಗುಂಪಾಗಿ ಬಂದವರೆಲ್ಲಾ
ಅಲ್ಲಿ, ಹಾಟ್‍ ಬಾಕ್ಸಿನಲ್ಲಿಟ್ಟ ಜೇನ್ನೊಣಗಳು.

ಗೋರಿ ಹೇಳಿದ ಪ್ರೇಮದ ಕಥೆ
ಶವದೊಳಗಿನ ಪಿಸುದನಿಗಳು
ಗೋರಿಗೆ ಬಂದ ಒಂದು ಸುತ್ತಿನಲ್ಲಿ
ತುಟಿ-ತುಟಿಗಳ ಸ್ಪರ್ಶದಲಿ
ಚೀಪಿದ ಲಾಲಿ ಪಾಪ್‍ನ  ಸಿಹಿಯಲಿ
ಕೊನೆಯುಸಿರೆಳೆದಿವೆ.!

ಮುಮ್ತಾಜಳ ಎಲುಬಿನ ಕಾಂತಿ
ಗೋರಿಯಾದ ಶವದ ಕಥೆ
ಕಪ್ಪನ್ನೊದ್ದು ಮೈಚೆಲ್ಲಿದ
ರಸ್ತೆಯಲಿ ಅನಾಥವಾಗಿದೆ...!

ಕ್ಲಿಕ್ಕಿಸಿದ ಕ್ಯಾಮರಾ ಕಣ್ಣುಗಳನು
ಮಾಸಿದ ಐತಿಹಾಸಿಕ ಪುಟಗಳನು
ಗೆದ್ದಲುಗಳು ಸ್ವಚ್ಚಗೊಳಿಸುತ್ತಿವೆ....
---------------------------------------------------------------
-ರವಿ ಮೂರ್ನಾಡು

ಭಾನುವಾರ, ಮೇ 1, 2011

ಗೆಳತಿ ನಿನ್ನದೇ ನೆನಪು...


ಈ ದಿನ ನಿನ್ನದೇ ನೆನಪು
ಹಗಲು ಸಾಯುವ ಹೊತ್ತು
ಕತ್ತೆಲೆಗೆ ಹೆದರಿ ಉರಿಯುವ ದೀಪಕೆ
ಮತ್ತೆ ಬಾ ಹಗಲೆಂದ ಕನಸು..!

ನೀ ನಡೆದ ದಾರಿಯಲಿ
ತಲೆದೂಗಿದ ಗಿಡಗಂಟಿಗಳು
ಮರವಾಗಿ ಆಗಸಕೆ ಬೆಳೆದ ಸೊಗಸು..!
ಸಾಲು ಬೇಲಿಯ ಬಳ್ಳಿಗೂ
ನೀನುಟ್ಟ ಉಡುಗೆಯದ್ದೇ ಬಣ್ಣಗಳು
ಅಲ್ಲಲ್ಲಿ ಚುಕ್ಕಿಟ್ಟ ಕಾಡು ಹೂವುಗಳಿಗೂ
ನೀ ಮುಡಿದ ಮಲ್ಲಿಗೆಯ ಕಂಪು..!

ಮಾತು ಹಿಡಿಗಂಟಾಗಿ
ನಿಂತಿದ್ದ ಮರದ ಕೆಳಗೆ
ನಗುವಿಗೂ ಬೆಚ್ಚಿದ ಎಲೆಗಳು..!
ಜೀವ ತುಂಬಿವೆ ಸುತ್ತಲ ನೆರಳುಗಳು
ಚಿಲಿಪಿಲಿ ಚಪ್ಪಾಳೆ ತಟ್ಟಿ ಹಕ್ಕಿಗಳು
ಪ್ರೀತಿಗೆ ಸಾಕ್ಷಿಯದ ಅದರ ಮರಿಗಳು.!
ಗೆಳತಿ.. ಈ ದಿನ ನಿನ್ನದೇ ನೆನಪು...!

ಈ ಸಂಜೆ ರಾತ್ರಿಯಲಿ
ಕೋಣೆಗೂ ನಿನ್ನದೇ ಮಾತು
ಕಿಟಕಿ ಸರಳನು ಸೀಳಿ
ಬಂದ ಬೀಸಣಿಕೆ ಗಾಳಿಗೂ
ನಿನ್ನದೇ ಹೊಗಳಿಕೆಯ ಹಾಡು !
ಕನಸು ಬಚ್ಚಿಟ್ಟ ಮೋಡ
ಕಣ್‍ ರೆಪ್ಪೆ ಬೇಲಿಯ ದಾಟಿ
ಮಳೆ ಸುರಿದು ತಿಳಿಯಾದ ತಳುಕು..!

ಈ ರಾತ್ರಿ ಹಗಲಿನದೇ ಕನಸು
ಕತ್ತಲು ಸಾಯುವ ಹೊತ್ತು
ಸೂರ್ಯನಿಗೆ ಹೆದರಿ ನಂದಿದ ದೀಪಕೆ
ಮತ್ತೆ ಬಾ ನೆನಪೆಂದ ಮನಸು..!
-------------------------------------------
-ರವಿ ಮೂರ್ನಾಡು
ನಿಲುಮೆ | May 8, 2011 at 12:08 am | Categories: ಕವನಗಳು |