ಶನಿವಾರ, ಆಗಸ್ಟ್ 25, 2012

ಬಾಗಿಲು.....!

ಎಂ. ಎಸ್. ಮೂರ್ತಿ 
ಆ ಬಾಗಿಲೊಳಗೆ
ಯಾರೋ ಕಟ್ಟಿದರು
ಅರಿಯದ ಜಗತ್ತು
ಹೊರಗೆ ಮತ್ತೊಂದು !

ಹೊರ ಬರುವ ಧಾವಂತಕೆ ನಾನು
ಒದ್ದಾಟಕೆ ಕದ ತೆರೆದ ಅವ್ವ
ಅಳುತ್ತಿದ್ದೆವು ಆ ಶುಭದಿನ !
ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ
ಸ್ವಾಗತವೆಂದು ನಕ್ಕರು ಜನ !

ಬೆಳಕು ಬೊಗಸೆ ಬಿಚ್ಚಿದಾಗ
ತೆರದಿದ್ದೇನೆ ಹಣತೆ ಕಣ್ಣು
ಓಡಿಸುತ್ತಾ ಕತ್ತಲು !
ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ
ಉರುಳಿದಂತೆ ನನ್ನ ಜಗತ್ತು !


ಮೊಲೆ ಹಾಲು ಕಲಿಸಿದ ಹಸಿವಿಗೆ
ನಡೆದು ಎಡವಿ ಓಡಿದ್ದೇನೆ ಬೆವತು
ಬಾಯಾರಿ ಕುಡಿದು ನೀರು
ಚಳಿಯೆಂದು ಬಡಬಡಿಸಿ
ಬಿಸಿಯೇರಿ ತಂಗಾಳಿಗೆ ತೆರೆದು !

ಕತ್ತಲೆಯಂತೆ ಬೆತ್ತಲೆ ನಾನು
ಜ್ಞಾನದ ಬೆಳಕಿನ ಭಿಕಾರಿ
ಹೂವಾಗಿ ಮೋಹಕೆ ಅರಳಿ
ಬಿದ್ದ ಬೀಜಕೆ ಬೇರಾಗಿ-
ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ
ಸುಕ್ಕು ಕಾಲುವೆಗೆ ಅನುಭವಗಳ ಸುರಿದು !

ಈ ಬಾಗಿಲ ಹೊರಗೆ
ನಾನೇ ಕಟ್ಟಿದ ಜಗತ್ತು
ಒಳಗೆ ಗೊತ್ತಿಲ್ಲದ ಮತ್ತೊಂದು !

ಈಗ ದಣಿದಿದ್ದೇನೆ...

ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
-ರವಿ ಮೂರ್ನಾಡು.

ಭಾನುವಾರ, ಆಗಸ್ಟ್ 19, 2012

ಅವರಿಬ್ಬರೂ-ನಾನು-ನೀನು

ಚಿತ್ರ ಕೃಪೆ: ಗೂಗಲ್

ಅವರಿಬ್ಬರೂ ಕಾಯುತ್ತಿದ್ದರು
ಒಬ್ಬ ಅಂಗಡಿಯಲಿ ದಿನಸಿ ಕಟ್ಟುತ್ತಾ
ಇನ್ನೊಬ್ಬ ಕ್ಯಾಲಿಫೋರ್ನಿಯಾದ ಗೋಪುರದಲಿ
ಬಾವಲಿಯಾಗುತ್ತಾ
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !

ಗಿರಾಕಿಗಳು ಬರುತ್ತಿದ್ದರು
ದಿನಸಿ ಖಾಲಿಯಾಗುತ್ತಿತ್ತು !
ಮಂದಿ ಮರೆಯಾಗುತ್ತಿದ್ದರು
ಹಗಲು ಸಾಯುತ್ತಿತ್ತು !

ನೀನು ಬರಲಿಲ್ಲವೆಂದು
ಅವನು ಅಂಗಡಿ ಬಾಗಿಲು ಮುಚ್ಚಿ
ಹೊರಟು ಹೋದ !
ಇವನು ಗೋಪುರದಲಿ ಮುಖ ಮುಚ್ಚಿ ಮಲಗಿದ !
ಅವರಿಗೆ ರಾತ್ರಿಯಾಗಿತ್ತು
ಆ ಶುಭದಿನದಂದು !

ನಾನೊಬ್ಬ ಇಲ್ಲಿ ಕಾಯುತ್ತಿದ್ದೆ
ಒಂಟಿ ಕೋಣೆಯಲಿ ನೀನು ನನ್ನವಳೆಂದು !
ಶಬ್ದಗಳ ತಿಕ್ಕಾಟದಲಿ ಕವಿತೆಯೆಂದು
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !

ಹಲ್ಲಿ ಲೊಚಗುಟ್ಟಿತು-ಕತ್ತಲೆಯ ತಬ್ಬಿತು
ರಾತ್ರಿ ಹನ್ನೆರಡಾಯಿತು ಕತ್ತಲೆಯ ಕರೆಯಿತು
ನೀನು ಬೆಳಕು ತರುವೆಯೆಂದು
ನಿನ್ನೆ ಹಗಲನ್ನು ನುಂಗಿದ ರಾತ್ರಿಯ ದೂರಲಿಲ್ಲ !
ತೊಲಗಾಚೆಯೆಂದು
ಇಂದಿನ ರಾತ್ರಿಯ ಹೊರದೂಡಲೂ ಇಲ್ಲ !
ನನಗೆ ರಾತ್ರಿ ಬೇಕಿತ್ತು
ಆ ಶುಭದಿನದಂದು !

ಈಗ.. ನಿನ್ನಲ್ಲಿ ಪ್ರಶ್ನೆ ಗೆಳತಿ
ಆ ದಿನ ನೀನು
ರಾತ್ರಿಯೆಂದು ಮಲಗಿದವರಿಗೆ
ಮರಗುವ ಹೃದಯವೋ ?
ಬದುಕುವ ಹಗಲೋ ?
ಆ ರಾತ್ರಿ ಭಾರಿಸಿ ಮರೆಯಾದ
ಗಂಟೆಯ ಶಬ್ದವೋ
ನನ್ನ ರಾತ್ರಿಯೋ ?!
-ರವಿ ಮೂರ್ನಾಡು.

ಬುಧವಾರ, ಆಗಸ್ಟ್ 1, 2012

ಎರಡು ಚಿತ್ರಗಳು-ಎರಡು ಕವಿತೆ



ರೇಖಾ ಚಿತ್ರ:ಎಂ.ಎಸ್.ಮೂರ್ತಿ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !

ಕಣ್ಣು ಬಂತು ಚಳಿಬಿಸಿಗೆ
ಆಕಳಿಸಿ ಮುಲುಕುಗಳು
ತೊಟ್ಟಿಕ್ಕಿದ ಹನಿಯಲ್ಲೂ
ತಿಕ್ಕಿ ಸಿಲುಕುಗಳು !
ಶ್ರಾವಣ ಬಂತೆಂದರೆ..
ಮುಚ್ಚಳಿಕೆಯೊಳಗೂ…
ಚಳಿಯನರಸುವ ಬಿಸಿ !

ಖಂಡ ಖಂಡವೂ ಅವನು
ಮಂಜುಗೆಡ್ಡೆ… ಹಗುರ
ಅವಳ ಖಂಡದ ಕೆಂಡಕೆ
ಕರಗಿ ಕಳೆವ ಭಾರ !

ಗಂಡೊಂದು ಅರ್ಧ
ಬಂದಾಗ….
ಇನ್ನರ್ಧ ಹೆಣ್ಣು ಕರಗಿದಾಗ
ಭೂಮಿ ದುಂಡಗಿದೆ
ಅರ್ಧಗಳು ಒಂದಾದಾಗ !

ಇಗೋ ಇಲ್ಲಿ ಭುವಿ
ಮೇಲೆ ಭಾನು
ಝಣ ಝಣ ಬಿಸಿಲು
ಜಿಟಿ ಜಿಟಿ ಮಳೆಗೆ
ತೊರೆ-ನೆರೆಯೆದ್ದ ನದಿ
ಹರಿದು ಜೀವದ ಹಸಿರು
ಎಲೆಗೆ ಹನಿ ಬೆವರು !
ತೊಟ್ಟಿಕ್ಕಿ ತೆನೆ ಪೈರು
ಗಾಳಿ ತೀಡಿ ಮುಂಗುರುಳು !

ಈಗ….
ತುಟಿಯಿಟ್ಟ ಮಗುವಿಗೆ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !
-ರವಿ ಮುರ್ನಾಡು

ನಮ್ಮ ಹೆಸರು ಹಸಿರಿಲ್ಲದ ಬೆತ್ತಲು..!
ಬದುಕಲಾರೆ ದೊರೆಯೇ
(ಚಿತ್ರ ಕೃಪೆ:ಅವಧಿ ಮಾಗ್)
ನೀರಿದ್ದರೂ ಕುಡಿಯಲಾರೆ
ಹಸಿವಿದ್ದರೂ ನುಂಗಲಾರೆ
ಎದೆಯ ಕೆಳಗೆ !

ದಯೆಯಿದ್ದರೆ ಕೊಡಲಿಯಲಿ
ಕತ್ತರಿಸಿ ಬಿಡು
ನನ್ನ ಗಂಟಲು !

ಕೆಲಕ್ಕುರುಳಿದ ಮೇಲೆ
ಬಾಯ್ತೆರೆಯಲಾರೆ
ತೆರೆದರೆ...
ಸುರಿಸಿ ಬಿಡು
ಕೊಡಲಿ ನೆಕ್ಕಿದ ನೆತ್ತರು !

ಅಷ್ಟಷ್ಟು ಕಣ್ಬಿಟ್ಟ
ಮಾನದ ಪಕಳೆಗಳು
ಹಸಿರಿಲ್ಲದೆ ಸತ್ತಿವೆ
ನಮ್ಮ ಮಸಣದ ಹೆಣಕ್ಕೂ
ಹೆಸರು ಬೆತ್ತಲು !
-ರವಿ ಮೂರ್ನಾಡು,