ಮಂಗಳವಾರ, ಜುಲೈ 26, 2011

ದುಃಖ್ಖವೇ ನಿನಗೆ ವಂದನೆ...!


ಸತ್ತ ಬೆಳಕಿನ ಸುತ್ತ
ಹುತ್ತ ಕಟ್ಟುತ್ತಿದೆ ಒಂದು ಕತ್ತಲು
ಸ್ಮಶಾನದಿಂದ ಮನೆಯವರೆಗೆ
ರಾತ್ರಿ ಬಿಚ್ಚುವ ನಗುವಿನ
ರೆಕ್ಕೆ ಮುರಿಯುತ್ತಿದೆ ಹಗಲು
ದುಃಖ್ಖವೇ ನಿನಗೇ ವಂದನೆ..!

ಕೋಣೆ-ಕೋಣೆಗಳ ಗಲ್ಲಕೆ
ತೊಟ್ಟಿಕ್ಕಿವೆ ಶೋಕ ಬಿಂಧು
ನೆಲವನ್ನಪ್ಪಿದ ನೆರಳಿಗೂ ಬಿಕ್ಕಳಿಕೆ
ಸತ್ತಂತ್ತಿವೆ ಬೆಳಕು ಹಣತೆಯೊಳಗೆ
ಮುಚ್ಚಿದ ಕಣ್ಣೊಳಗೂ ಕತ್ತಲೆ...!

ಈ ಜಗದ ರಾತ್ರಿಗಳಿಗೆ
ಮನೆ-ಮನೆ ರಾತ್ರಿಗಳ ಸಾಲು
ಬೆಳಕು ಕಾಣದ ಕುರುಡು ತೆಕ್ಕೆಯೊಳಗೆ
ಹಾಲ್ಗಲ್ಲದ ಹಸುಳೆಗಳ ಹಾಲಿಲ್ಲದ ಸ್ವರಗಳು
ಹಸುಳೆಯಿಲ್ಲದ ಗರ್ಭಗಳ ತಾಯ್ತನದ ಕೊರಗುಗಳು
ದುಃಖ್ಖವೇ ನಿನಗೆ ವಂದನೆ....!

ಗಾಳಿ ಲೆಕ್ಕಿಸದ ನಿಟ್ಟುಸಿರಿಗೆ
ಗೋಡೆಗೂ ಕೈ ಬಂದು ಅವುಚಿಕೊಳ್ಳುವ ಕನಸು
ಆಗಸದ  ಕತ್ತಲೆಗೂ ಹೊದಿಕೆ ನಗು
ನಿಂತ ನೆಲದ ಮೇಲೆ ಗೊತ್ತಿಲ್ಲ ಬಿರುಕುಗಳು
ದಿಕ್ಕಿಲ್ಲದೇ ಅಲೆದಾಡಿವೆ ಬೆಂಕಿ ಬಿರುಗಾಳಿಗಳು

ಮನದ ಭುವಿ ಜಲ ತೆರೆದು
ಸದ್ದೊಡೆವ ಆರ್ತಸ್ವರಗಳು
ಬಿಕ್ಕುತ್ತಿವೆ ನದಿಯಿಂದ-ಕಡಲಿಗೆ ದುಃಖ್ಖಗಳು
ಹರಿವ ದಾರಿಗೆ ಗೀಚಿ ಸುಕ್ಕುಗಳು
ಮರು ಹುಟ್ಟು ಕನಸುಗಳ ಮೌನ ಶವಯಾತ್ರೆಗಳು
ದುಃಖ್ಖವೇ ನಿನಗೆ ವಂದನೆ....!
----------------------------------------
-ರವಿ ಮೂರ್ನಾಡು

ಶನಿವಾರ, ಜುಲೈ 2, 2011

ಕೋಟಿ ಕತ್ತಲೆಯೊಳಗೆ


ಎಲ್ಲಾ ಮನಸ್ಸುಗಳು ಇರುಳಿಗೇ ಕಾಯುತ್ತಿವೆ
ಹಗಲು ಸಾಯಲು ಸೂರ್ಯ ಮಲಗಬೇಕು
ಮನೆ ಸೇರಲು ಹಕ್ಕಿ ಕರೆಯಬೇಕು
ಎಲ್ಲರಿಗೂ ನೆಮ್ಮದಿ ಕೊಡು ಇರುಳೇ..!

ದಿನ ಚಕ್ರ ಉರುಳಲು ಎಷ್ಟೊಂದು ಹೋರಾಟ
ಅತಿಥಿ ಸತ್ಕಾರಕ್ಕೆ ಮೂಡಣದಿ ಕೆಂಬಣ್ಣ
ಹಗಲು-ರಾತ್ರಿಯ ನಡುವೆ ಗುದ್ದಾಟ
ಮನೆ-ಮನದಲ್ಲಿ ಉರಿಯುತ್ತಿದೆ ನಗೆಯ ಹಣತೆ

ಸೂರ್ಯನ ಮುಸುಕಿನೊಳಗೆ ಭೂಮಿ ಮೌನ
ನೆಲ ಸೀಳಿದ ಹಳ್ಳ-ನದಿ-ತೊರೆ
ನಿಂತ ನೀರು ಕೆರೆ- ತುಂಬಿದೆ ಸಾಗರದ ಒಡಲು
ಇರುಳೇ ಎಚ್ಚರಿಸಿದರು ಸಾಗುತ್ತಿರಲಿ ಸೃಷ್ಠಿ

ನಿದ್ದೆಯ ಹಬ್ಬಕ್ಕೆ ಇರುಳು ಮುಚ್ಚಿದೆ ಕಣ್ಣು
ಜೀವದ ಉಸಿರು ಗಡಿಯಾರದ ಗಂಟೆ ಮುಳ್ಳು
ನೊಗ ಹೊತ್ತ ಜೀವಕ್ಕಿಲ್ಲ ದೇಹದ ಪರಿಚಯ
ತೆರೆಯಬಹುದೇ ಬಾಗಿಲು ಭಾಗ್ಯದ ಬದುಕಿಗೆ?!

ಪ್ರಕೃತ್ತಿಯ ಮಜಲುಗಳು ಅರ್ಥವಾಗದ ಭಾಷೆ
ಸಾಗುತ್ತಿರಲಿ ಹೀಗೆ ಕತ್ತಲೆ-ಬೆಳಕಿನ ತೇರು
ಅನಂತ ಪಯಣಕೆ ಅಷ್ಠ ದಿಕ್ಕೇ ಸಾಗರ
ಕರಿದೊಯ್ಯುವ ಸಾವೇ ನೋಯದಿರಲಿ ಜೀವ

ಸುತ್ತಲೂ ಹಬ್ಬುತ್ತಿದೆ ಕತ್ತಲೆ ಬಳ್ಳಿಯ ಬೇರು
ಕೋಟಿ ಕತ್ತಲೆಯೊಳಗೆ ಸಣ್ಣ ಬೆಳಕೇ ಧನ್ಯ
ಇದು ಜಗದೊಡೆಯನ ನಿಯಮ
ಅವನ ಬೊಗಸೆಯಲಿ ಜೀವ ಸಂಕುಲ ಮೌನ..
---------------------------------------------------------------
-ರವಿ ಮೂರ್ನಾಡು

ಕಡಲಾಳದ ಕವಿತೆ


ಕಡಲು ಹಾಡು ಹೇಳುತ್ತಿದೆ ಗೆಳೆತಿ..
ಅಮ್ಮ ಎಂದೋಡಿ ಬರುವ
ತಬ್ಬಲಿ ನದಿಗಳ ಮಡಿಲಿಗೇರಿಸಿ
ಜೋಗುಳ ಹಾಡುತ್ತಿದೆ
ಎದೆಗಪ್ಪಿ ಮುದ್ದಾಡಿ
ಒಡಲು ತುಂಬಿಸುತ್ತಿದೆ...!

ಕಡಲಿಗೆ ಕಣ್ಣೀರಿದೆ ಗೆಳತಿ...!
ನಿರಂತರ ಬಿಕ್ಕಳಿಸುವ ಅಲೆಗಳಲಿ
ನನ್ನ-ನಿನ್ನ ಕಣ್ಣೀರಿದೆ
ಅಂತರಂಗದ ದುಃಖ್ಖಗಳಿದೆ
ಹೇಳಲಾಗದ ಕಥೆಗಳನು
ಕಿನಾರೆಯಲಿ ಬಿಚ್ಚಿಡುತ್ತಿದೆ

ಕಡಲು ಕವಿತೆಯಾಗುತ್ತಿದೆ ಗೆಳತಿ..!
ಸಂಜೆ ಬಸವಳಿದ ಸೂರ್ಯನಿಗೆ 
ಮಂಚವಾಗುತ್ತಿದೆ
ಕತ್ತಲು ಕಂಬಳಿ ಹಾಸುತ್ತಿದೆ
ಕುಣಿದು ಕುಪ್ಪಳಿಸುವ ಅಲೆಗಳು
ಗಾಳಿ ಛಾಮರವಾಗುತ್ತಿದೆ

ಕಡಲಿಗೆ ಕೋಪವಿದೆ ಗೆಳತಿ..!
ಶುದ್ಧ ನೀರಲೆಗಳ ಮೇಲೆ
ಮಾನವನ ದಾಳಿಗೆ ಮುನಿದು
ಮೌನ ಮುರಿಯುತ್ತಿದೆ
ಒಡಲ ಉರಿ ಭುಗಿಲೆದ್ದು
ರುಂಡ-ಮುಂಡಗಳ ನುಂಗುತ್ತಿದೆ.

ಕಡಲಿಗೆ ಮಮತೆಯಿದೆ ಗೆಳತಿ.
ಒಡಲೊಳಗೆ ಉಸಿರಾದ
ಕೋಟಿ ಕಣ ಜೀವಗಳಿಗೆ
ಮೊಲೆ ಹಾಲುಣಿಸುತ್ತಿದೆ
ಕಿರಿದು ನೆಲವ ನುಂಗದೆ
ಜೀವಗಳ ಕಾಪಿಡುತ್ತಿದೆ
---------------------------------------------------------------------
-ರವಿ ಮೂರ್ನಾಡು