ಸೋಮವಾರ, ಏಪ್ರಿಲ್ 30, 2012

“ಪ.ಗೋ” ಹೆಸರಲ್ಲ ! ನಡೆದಾಡುವ ಪತ್ರಿಕೆ

-ರವಿ ಮೂರ್ನಾಡು.

ಮುತ್ಸದ್ಧಿ ಮರಕಿಣಿಯವರು ನೆನಪಾಗುತ್ತಾರೆ. 89  ವಸಂತಗಳನ್ನು ಧಾಟಿ ಬದುಕೆಂಬ ಜಗತ್ತಿನಲ್ಲಿ ಎಲ್ಲವನ್ನು ಲೆಕ್ಕ ಹಾಕುವ ಮಗುವಿನ ವಯಸ್ಸು. ಈ ಸಮಾಜದ ಕೊಳಕುಗಳನ್ನು ಒಂದಿಷ್ಟು  ತೊಳೆಯಲು ಪತ್ರಕರ್ತ ಎಂಬ ಕಡಲಲ್ಲಿ ಈಜಿದ ನರಸಿಂಹರಾವ್‍ ಅವರೂ ತೆರೆಯಲ್ಲಿ ನಗುತ್ತಿದ್ದಾರೆ. 79 ರ ಅಂಬೆಗಾಲಿಕ್ಕುವ ಹರೆಯದಲ್ಲಿ ಸಮಾಜಕ್ಕೆ ಕೊಟ್ಟ ಬಾಬ್ತುಗಳು " ಪ.ಗೋ" ಪ್ರಶಸ್ತಿಯಲ್ಲಿ ಉಲ್ಬಣಗೊಳ್ಳುತ್ತವೆ.
        ಮೊನ್ನೆ ಮೊನ್ನೆ  " ಪ.ಗೋ. ಸಂಸ್ಮರಣಾ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ  ಈ ಎಲ್ಲಾ ಮುತ್ಸದ್ಧಿಗಳು ತುಂಬು ಮನಸ್ಸಿನಿಂದ, ತರೆದ ಜಗತ್ತಿಗೆ ಪದ್ಯಾಣ ಗೋಪಾಲಕೃಷ್ಣರೊಂದಿಗೆ ಒಬ್ಬರಿಗೊಬ್ಬರು ಮಾತಾಡಿದಂತೆ ಅನ್ನಿಸಿತು. ಪದ್ಯಾಣ ಗೋಪಾಲಕೃಷ್ಣರು ದ.ಕ. ಜಿಲ್ಲೆಯ ಬಹುದೊಡ್ಡ ಅಭಿಮಾನ. ಅದನ್ನು ಪ್ರತಿನಿಧಿಸುವವರು ಈ ಸಮಾಜದ ಆಸ್ತಿಗಳು. ರಾಜ್ಯ ಮತ್ತು ರಾಷ್ಟ್ರಕ್ಕೆ ಅದರ ಸಮಾರಂಭ ಒಂದು ದಾಖಲೆ.  ಧರ್ಮಸ್ಥಳದ  ಹೆಗ್ಗಡೆಯವರ ವಿಶಾಲ ಹಸ್ತ, ದೈವವೆಂಬ ಸಂಬೋಧನೆಯಲ್ಲಿ  ನಿಜತ್ವವನ್ನು ತೆರೆದ ಬದುಕು ಭಂಡಾರ. ನ್ಯಾಯ-ನೀತಿ-ಧರ್ಮಗಳು  ಜಗತ್ತನ್ನು ಆಳುತ್ತವೆ ಅನ್ನುವ ಪರೋಕ್ಷ ಧ್ವನಿ ಇದು.  ದ.ಕ. ಪತ್ರಕರ್ತರ ಸಂಘದ ತರೆದ ಮನಸ್ಸುಗಳು ಈಗ ಇಲ್ಲಿ, ಇದೇ  ಸಂಸ್ಮರಣೆಯಲ್ಲಿ ಪದ್ಯಾಣರ ಉದಾತ್ತ ಬದುಕನ್ನು ಅನಾವರಣಾಗೊಳಿಸುವಾಗ ಎಲ್ಲೋ ಒಂದಿಷ್ಟು ನೆಮ್ಮದಿಗಳ ಉಸಿರು ಮತ್ತೆ ಮತ್ತೆ ತೆರೆದುಕೊಳ್ಳುವುದು. ಇದು ಬದುಕು ಮತ್ತು ಜಗತ್ತು ನಡೆಯುವ ಪರಿ.
ಜಗತ್ತಿಗೆ ಬಂದ ಪ್ರತಿಯೊಬ್ಬನ ಬದುಕಿನಲ್ಲಿ ನೆನಪಾಗಿ ಕಾಡುವುದು ಸಾಧನೆಯ ಹಿಂದಿನ ಹೆಗಲೊತ್ತ ಬದುಕುಗಳು.  ಕುಟುಂಬದ ಹರಿಕಾರರು, ಈಗಲೂ ವಿಸ್ಮಯಕ್ಕೆ ಸಿಕ್ಕಿದ  ಜಗತ್ತು ಇದು. ಪದ್ಯಾಣ ಸಾವಿತ್ರಮ್ಮ ಅನ್ನುವ ಬದುಕು ಎಲ್ಲರಿಗೂ ಸಿಕ್ಕಿದಲ್ಲಿ ಇನ್ನೊಬ್ಬ ಪದ್ಯಾಣ ಗೋಪಾಲ ಕೃಷ್ಣರನ್ನು ಸಮಾಜ ಕಾಣಬಹುದು. ಅದು ಸತ್ಯ. ಅದಕ್ಕೆ ಸಹನೆ , ತಾಳ್ಮೆ ಮತ್ತು  ಅಭಿಮಾನ ಬೇಕು. ಅದು ಇಲ್ಲಿ ಸಿಕ್ಕಿತು. ಹಾಗಾಗಿ, ಒಬ್ಬ ಗೋಪಾಲಕೃಷ್ಣರ ಬದುಕು ಎತ್ತಲೋ ಸಾಗುತ್ತಿರುವ ಸಮಾಜಕ್ಕೆ ಅದರ್ಶದ  ಮೊನಚಾಗಿ ಕಾಣುತ್ತಿದೆ. ಹೆಣ್ಣು ಸಮಾಜದ ಕಣ್ಣು. ಅದು ಕುಟುಂಬವನ್ನು ಜಗತ್ತಿಗೆ ತೆರೆದಾಗ ಸಿಗುವ ಉತ್ತರ. ಎಲ್ಲಾ ಎಲ್ಲಗಳನ್ನು ಮೈಗೂಡಿಸಿಕೊಂಡು, ತುತ್ತು ಅನ್ನ ಬಾಯ್ಗಿಟ್ಟ ಸಂತಸದ ಕ್ಷಣಗಳು  ಚಿನ್ನದ ಕಣಗಳಾಗಿ ಪರಿಪೂರ್ಣವಾಗುವುದು. ಅದು ಎಲ್ಲಾ ಮನೆಗಳಲ್ಲೂ ಆರ್ವಿಭವಿಸಲಿ.  ಇದು ಉತ್ಪ್ರೇಕ್ಷಯಾಗಲಾರದು. ಸತ್ಯ ಹೇಳಿದರೆ ಇನ್ನೊಂದು ಪ.ಗೋ. ಹುಟ್ಟಬಹುದು ಅನ್ನುವ ಆಶಾಭಾವನೆ.!
ಪ್ರಶಸ್ತಿ ಮತ್ತು ವ್ಯಕ್ತಿ ಅದರ ಬಗ್ಗೆನೇ ಒಂದಷ್ಟು ಮಾತಾಡಬೇಕು ಅನ್ನಿಸಿತು. ಆದರ್ಶ ಮತ್ತು ಬದುಕಿನ ನಿಲುವುಗಳು ವ್ಯಕ್ತಿಯ ಅಳತೆಗೋಲಾಗುವಾಗ ಪ್ರಶಸ್ತಿ ಅವುಗಳನ್ನು ಪ್ರತಿನಿಧಿಸುತ್ತವೆ. ಇದು " ಸೋಷಿಯಲ್ ಐಡೆಂಟಿಟಿ"ಯ ಇನ್ನೊಂದು ಪರ್ಯಾಯ  ಮುಖ. ವ್ಯಕ್ತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಇನ್ನೊಂದು ಹೊಸತನಕ್ಕೆ ಉತ್ತೇಜಿಸುವ ಮಾಧ್ಯಮ. ಪ್ರಶಸ್ತಿಯೇ ಸಾಧನೆ ಎಂದು  ಪಟ್ಟಿ ಮಾಡುವವರು ಉಂಟು. ಅದನ್ನೇ ಹಿಗ್ಗಾಮುಗ್ಗಾ ಪಡೆದು ಪಟ್ಟಿ ಬೆಳೆಸುವುದುಂಟು. ಇವೆಲ್ಲದರ ನಡುವೆ ಪ್ರಶಸ್ತಿಯೇ ಇಲ್ಲದೆ ಇರುವ ಸಾಧನೆಗಳೂ ಇವೆ. ಬೇಡವೆಂದರೂ ಬೆಂಬಿಡುವ ಮುಖಬೆಲೆಗೆ ಮುಖ ಮುರಿದುಕೊಳ್ಳುವವರೂ ಇದ್ದಾರೆ.. ಈ ಅಳತೆ ಪಟ್ಟಿ ಪರ್ಯಾಯವಾಗಿ ಇನ್ನಷ್ಟು ಎತ್ತರಕ್ಕೇರಿಸುವ ಸೂತ್ರ ಅಷ್ಟೆ.  ತಮ್ಮದೇ ನಿಲುವಿಗೆ ಬದ್ಧರಾಗಿ ಗುರುತಿಸಿಕೊಂಡ ಮಹಾನುಭಾವರು ಈ ಪ್ರಶಸ್ತಿಯ ಮೌಲ್ಯವನ್ನೂ ಮೀರಿ ನಿಲ್ಲುವರು. ಅದು ಅವರ ಹೆಸರಿನಲ್ಲಿ ಕೊಡ ಮಾಡುವ ಸಮಾಜ ಮತ್ತು ಪಡೆದುಕೊಂಡವರನ್ನು ಸದಾ ಕಾಲ ಎಚ್ಚರಿಕೆಗೆ ಕರೆದೊಯ್ಯುತ್ತವೆ. ಯಾವಾಗ ಪಡೆದುಕೊಂಡ ವ್ಯಕ್ತಿಯಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಮಾಧರಿ ಸಿಗುವುದೋ ,ಅಂದಿಗೆ  ಅದರ ಮೌಲ್ಯ ಇನ್ನಷ್ಟು ಮೇಲಕ್ಕೇರುವುದು. ಅದು  ದೊಡ್ಡದಾದರೂ ಸರಿ, ಸಣ್ಣದಾದರೂ ಸರಿ. ಪ್ರಶಸ್ತಿಯ ಹೆಸರಿನಲ್ಲಿ ವ್ಯಕ್ತಿಯ ಕೊಡುಗೆ ಮೇಲ್ಮಟ್ಟಕ್ಕೇರುವುದು.
2000  ರಲ್ಲಿ ಪ್ರಾರಂಭವಾದ ಈ " ಪ.ಗೋ" ಪ್ರಶಸ್ತಿಯ  ಮೊದಲ ಸಮಾರಂಭಕ್ಕೆ ಆನಂದ ಪಟ್ಟಿದ್ದೇನೆ. ಈ ಮೊತ್ತ ಮೊದಲ ಗ್ರಾಮೀಣ ಪ್ರಶಸ್ತಿ ಕೊಡಗಿನ " ಶಕ್ತಿ" ದೈನಿಕದ ಗೌರವ ವರದಿಗಾರ ಶ್ರೀ ಅನಿಲ್ ಹೆಚ್.ಟಿ. ಅವರಿಗೆ ಸಂದಾಯವಾಗಿತ್ತು  ಅನ್ನುವಾಗ  ಪದ್ಯಾಣ ಗೋಪಾಲಕೃಷ್ಣ ಮತ್ತು ಕೊಡಗಿನ " ಶಕ್ತಿ" ದೈನಿಕದ ಸಂಪಾದಕ ದಿ.ಬಿ.ಜಿ.ಗೋಪಾಲಕೃಷ್ಣರ  ಸಂಬಂಧವನ್ನು ತಳುಕು ಹಾಕಿತ್ತು. ನಾನು ಇದೇ 2000 ರ ಸಮಯದಲ್ಲಿ ಶಕ್ತಿ ಪತ್ರಿಕೆಯಲ್ಲಿ  ಸೇವೆಯಲ್ಲಿದ್ದೆ.  ಪ್ರಶಸ್ತಿ ಪ್ರಕಟಣೆ ಸುದ್ದಿಯನ್ನು ಖುದ್ಧು " ಕಂಪೋಸ್" ಮಾಡಿದ ಹೆಮ್ಮೆ ನನಗೆ. ಪ.ಗೋ.ರನ್ನು ಮೊದಲ ಭಾರಿಗೆ  ಸಂಪಾದಕ  ಬಿ.ಜಿ.ಗೋಪಾಲಕೃಷ್ಣರನ್ನು ಪರಿಚಯಿಸಿದ ಎನ್. ಮಹಾಬಲೇಶ್ವರ ಭಟ್ಟರು  " ಶಕ್ತಿ" ಪತ್ರಿಕೆಯ ಖಾಯಂ ಬರಹಗಾರರಾಗಿದ್ದರು. ಪ.ಗೋ.ರವರ ಬದುಕು ಬರಹಗಳಲ್ಲಿ  ಹೆಕ್ಕಿ ತೆಗೆದಾಗ ಸಿಕ್ಕಿದ  ಅವರ ಮಾತಿನಂತೆ, ಸಂಯುಕ್ತ ಕರ್ನಾಟಕ ಪತ್ರಿಕೆಗೆ ಕೆಲಸಕ್ಕೆ ಸೇರುವ ಸಮಯದಲ್ಲಿ ಮೇಳೈಸಿದ ಬಂಧವಿದು. ಶಕ್ತಿ ದಿನಪತ್ರಿಕೆಯ ಬೆಂಗಳೂರು ವರದಿಗಾರಿಕೆಗೆ ಸಿಕ್ಕಿದ  ಕೆಲಸವಿದು. ಈ  ಸಂದರ್ಭದ ವಿವರಣೆ ಬಹಳ ಸೊಗಸಾಗಿ ಪದಗಳಲ್ಲಿ  ಹರವಿದ್ದಾರೆ ಪ.ಗೋ.ರವರು.  ಅಲ್ಲಿ ಅವರ ಕೆಲಸದ ತುರಾತುರಿ ಎಷ್ಟಿತ್ತೆಂದರೆ,  ಬಿ.ಜಿ. ಗೋಪಾಲಕೃಷ್ಣರ ಅನುಮಾನದ ಮಾತಿಗೆ " ಸದ್ಯಕ್ಕೆ ದಿನಕ್ಕೊಂದು ರೂಪಾಯಿ ಕೊಟ್ಟರೆ ಸಾಕು" ಎನ್ನುವ ಅನಿರ್ವಾಯತೆ ಕ್ಷಣಗಳು ಆರ್ದ್ರಗೊಳಿಸುವುದು. ಸಂಪಾದಕರಿಂದ ನೇಮಕಾತಿ ಪತ್ರ ಕೈ ಸೇರಿದೊಡನೆ ಹಂಚಿಕೊಂಡ ಅವರ ಅನುಭವ ಬೆಲೆಕಟ್ಟಲಾಗದು. ಅಲೆ ಅಲೆದು ಬೆಂಡಾದ  ಇಂದಿನ ನಿರುದ್ಯೋಗಿಗಳು , ಉದ್ಯೋಗ ಸಿಕ್ಕಿದಾಗ ಪಡೆವ ಸಂತೋಷವನ್ನು ಯತಾವತ್ತಾಗಿ ಚಿತ್ರಿಸುವುದು.
ಇಂತಹದ್ದೇ ಕೈ ಚೆಲ್ಲಿದ ಇನ್ನೊಂದು ಚಿತ್ರಣ ಅವರ ಅನುಭವಗಳಲ್ಲಿ ಬಂದಾಗ  ಸ್ವತಃ ಪತ್ರಿಕೆ ಸ್ಥಾಪಿಸುವ ಇರಾದೆಗೆ ಮನಸ್ಸನ್ನು ಅನಾವರಣಗೊಳಿಸುವುದು. ಚೆನ್ನಾಗಿಯೇ ನಡೆಯುತ್ತಿದ್ದ  ಶಕ್ತಿ ದಿನಪತ್ರಿಕೆಗೆ ಒಂದು ಕಾಲದಲ್ಲಿ  ತೊಡಕಾದಾಗ ಸರಕಾರದ ಅನುಧಾನ  ನೆರವಿಗೆ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ತಾನೊಂದು ಪತ್ರಿಕೆ ನಡೆಸಲು ನಡೆಸಿದ ಎಲ್ಲಾ ಪ್ರಯತ್ನಗಳು ನೆಲಕಚ್ಚಿದಾಗ ಸರಕಾರದ ಅನುದಾನದ ಇಬ್ಬಗೆ ನೀತಿಯನ್ನು ಪರೋಕ್ಷವಾಗಿ ಮಾತುಗಳಲ್ಲಿ  ದುಃಖ್ಖಿಸಿದ ಸಂದರ್ಭವಿದು. ಅದು ಬದುಕಿನ ನೀತಿ ಮತ್ತು  ವ್ಯವಸ್ಥೆಗಳಿಗೆ ಚಾಟಿ ಏಟಿನಂತಿದೆ. ನಡೆಗಳಿಗೆ ಶಪಿಸುವ ವ್ಯವಸ್ಥೆ ವರ್ತುಲದಂತಿದೆ.
ಹತ್ತು- ಹನ್ನೆರಡು ವರ್ಷಗಳು ಕಳೆದಿವೆ ನೋಡಿ. ಇನ್ನಿಲ್ಲದ ಭಾವಗಳನ್ನು ಮೆಲುಕು ಹಾಕುವುದು ಸಂದರ್ಭಗಳು. ಇದರಿಂದ ಬದಲಾದ ದಾರಿಗಳು ಎಷ್ಟೋ. ಸರಿ ದಾರಿಗೆ ಬಂದ  ಸಂದರ್ಭಗಳು ಎಷ್ಟೋ. 2000 ರಲ್ಲಿ ಪ್ರಾರಂಭವಾದ ಈ ಪ.ಗೋ. ಜಗತ್ತಿನ ಪ್ರಶಸ್ತಿಯ ಅನಾವರಣಾ ಇನ್ನಷ್ಟು ಜಗತ್ತಿಗೆ ತಲುಪಬೇಕು ಅನ್ನುವ ಆಶಯ ಇದಕ್ಕಿದೆ. ಪ. ಗೋ. ಪ್ರಶಸ್ತಿಯನ್ನು ರಾಜ್ಯ ಸರಕಾರವೇಕೆ ಪರಿಗಣಿಸಬಾರದು? ಇಂದಿನ ಪ್ರಜಾ ಪ್ರಭಾ ವಲಯದಲ್ಲಿ  ಮತ್ತಷ್ಟು ಪ್ರಭಾವಕ್ಕೆ ಒಳಗಾಗಿರುವ ಪತ್ರಿಕೋಧ್ಯಮಕ್ಕೆ ವಿಶಿಷ್ಟ ಕೊಡುಗೆ ನೀಡಿದ ಈ ಪದ್ಯಾಣ ಗೋಪಾಲ ಕೃಷ್ಣರ ಹೆಸರು ರಾಜ್ಯ, ರಾಷ್ಟ್ರದ  ಸೀಮಾರೇಖೆಗೆ ಏಕೆ ಬರಬಾರದು ಅನ್ನುವ ಪ್ರಶ್ನೆಗೆ ಪ್ರತೀಕವಾಗಿ  ಚಿಂತಿಸುವಾಗ, ಪತ್ರಕರ್ತರ ಜಗತ್ತು ತೆರೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇವೆ. ಬೇಸರಗಳು ಮೂಲೆಗುಂಪಾಗಲಿ, ಒಡಕುಗಳು ಮತ್ತೆ ಸರಿದಾರಿಗೆ ಬರಲಿ. ರಾಷ್ಟ್ರ- ರಾಜ್ಯ ರಾಜಕೀಯದಲ್ಲಿ ಪದವಿತ್ತ ಮಹನೀಯರು ಇತ್ತ ಗಮನ ಹರಿಸಬೇಕೆಂಬುದು ಸಮಾಜದ  ಅವಲತ್ತು. ಕರ್ನಾಟಕ ರತ್ನ ಸಂಪುಟದಲಿ ಶಾಶ್ವತ ನೆಲೆ ಸಿಗುವುದು ಮಾತ್ರವಲ್ಲ , ಚಿರಕಾಲ ನೆನಪಿಸುವ ಬರಹಗಳು ಪತ್ರಕರ್ತರ ಬದುಕನ್ನು ಹಸನುಗೊಳಿಸಲಿ. ಇದಕ್ಕಾಗಿ ಸತ್ಯವನ್ನೇ ಹೇಳಬೇಕು. ಕಲಿಗಾಲದಲ್ಲಿ ಅನ್ಯ ಮಾರ್ಗವಿಲ್ಲ ಎನ್ನುವಾಗ ಸುಳ್ಳನ್ನು ಮರೆಮಾಚಿ, ಸತ್ಯಕ್ಕಾಗಿ ಮೀಸಲಾಗದೆ ವಿಧಿಯಿಲ್ಲ.  !
ಯಾಕೆ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಲಾಗುತ್ತದೆ ಅನ್ನೋದು ಒಂದು ನಯವಾದ ಪ್ರಶ್ನೆ. ಪ್ರತೀಯೊಬ್ಬ ವ್ಯಕ್ತಿ ಈ ಸಮಾಜದಲ್ಲಿ ವಿಭಿನ್ನವಾಗಿ ನಿಲ್ಲುತ್ತಾನೆ. ಕೆಲವು ಸ್ಮರಿಸುವಂತಹ ನಿಲುವುಗಳು, ಕೆಲವು ಒಗ್ಗಿಕೊಳ್ಳಲಾಗದ  ಮನಸ್ಥಿತಿಗಳು. ಅದೆಷ್ಟೋ ವ್ಯಕ್ತಿಗಳನ್ನು ಈ ಸಮಾಜ ಮತ್ತೆ ಮತ್ತೆ ಸ್ಮರಿಸಿ ಅವರಿಂದ ಕಲಿತುಕೊಳ್ಳುತ್ತವೆ. ಜೀವಿತಾವಧಿಯಲ್ಲಿ ಕೊಡಲಾಗದ್ದನ್ನು ಕೊಟ್ಟು, ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳುವುದು ನಡೆದು ಬಂದ ಹಾದಿ.. ಒಂದು ವಿಭಿನ್ನ ಆಲೋಚನೆಯಲ್ಲಿ ಬದುಕಿ, ಸಮಾಜಕ್ಕೆ ಹೊಸ ಆಯಾಮವನ್ನು ಒದಗಿಸಿದ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಪಡೆದುಕೊಂಡ ವ್ಯಕ್ತಿಯ ಜವಾಬ್ದಾರಿಯನ್ನು  ಹೆಚ್ಚಿಸುತ್ತವೆ ಅನ್ನೋದು ಸತ್ಯ. ಪ್ರಶಸ್ತಿ ವ್ಯಕ್ತಿಯ ಉತ್ಕೃಷ್ಟ ಕಾರ್ಯಗಳಲ್ಲಿ ಗರಿಮೆಯಾಗಿ, ಪ್ರತಿನಿಧಿಸುವ ಸಮಾಜದ ಹಿರಿಮೆಯಾಗಿ, ಮಾಡಬೇಕಾದ ಸಾಧನೆಯಲ್ಲಿ ಹೆಚ್ಚಿನ ಮುತುವರ್ಜಿಗೆ ನಾಂದಿ ಹಾಡುವುದು. ಸಾಧನೆಗೆ ಬೆನ್ನು ತಟ್ಟುವುದು, ಮಾಡುವ ಕಾರ್ಯಕ್ಕೆ ಪ್ರೋತ್ಸಾಹಿಸುವುದು ಎಲ್ಲರಿಗೂ ಬರುವ ಗುಣವಲ್ಲ. ಅದು ವಿಶಾಲ ಹೃದಯಕ್ಕೆ ಸಂಬಂಧಿಸಿದ ವಿಶಿಷ್ಟ ಗುಣ. ಪ್ರಶಸ್ತಿಯ ಬೆನ್ನು ಹತ್ತಿ ಹೋಗುವ ಗುಣವನ್ನು ಮೀರಿದ್ದು. ಪದ್ಯಾಣ ಗೋಪಾಲಕೃಷ್ಣರು ಪ್ರಶಸ್ತಿಯನ್ನು ಮೀರಿ ನಿಂತ ಸಾಧನೆಯ ಹರಿಕಾರ. ಈಗ ದೊಡ್ಡ ವಿಪರ್ಯಾಸವೆಂದರೆ ಪ್ರಶಸ್ತಿಯ ಹೆಸರಿನಲ್ಲಿ ಚರ್ಚೆ ಅವರ ಬೆನ್ನು ಹತ್ತಿರುವುದು ದಟ್ಟ ಚಿಂತನೆಯ ಬೆಳಕುಗಳು. ಅದು ಅವರನ್ನು ಇನ್ನಷ್ಟು ಎತ್ತರಕ್ಕೇರಿಸಿದೆ.
ಇಷ್ಟೆಲ್ಲಾ ಮಾತುಗಳು ಯಾಕೆ ಪೀಠಿಕೆಯಾಗುತ್ತವೆ ಅಂದರೆ ,ದಿವಂಗತ ಪದ್ಯಾಣ ಗೋಪಾಲಕೃಷ್ಣರು ಈ ಸಮಾಜದ ಸಂಸ್ಕೃತಿಯಲ್ಲಿ ಪ್ರಶಸ್ತಿ ಅನ್ನುವ ಹೆಸರಿನ ಮೂರ್ತ ರೂಪದಲ್ಲಿ ಇದ್ದಾರೆ ಅನ್ನುವ ಸಂತೋಷಕ್ಕಾಗಿ. ಕಳೆದುಕೊಂಡದ್ದನ್ನು ಮತ್ತೆ ಜೀವಂತವಿರಿಸಿದೆ " ಪ.ಗೋ ಪ್ರಶಸ್ತಿ". ಇದು ಯಾವುದೇ ಮೌಲ್ಯವನ್ನು ಮೀರಿ ನಿಂತಿದೆ. ಕಟ್ಟು ನಿಟ್ಟಿನ ಮನುಷ್ಯಯಾರಿಗೂ ಭಾರವಾಗದ , ವಿಭಿನ್ನವಾಗಿರುವ ಚೌಕಟ್ಟಿನಲ್ಲೇ ಆದರ್ಶವಾಗಿರುವ ಬದುಕು ಪದ್ಯಾಣ ಗೋಪಾಲಕೃಷ್ಣರದು. ಪ್ರಶಸ್ತಿಯನ್ನು ಯಾರೇ ಕೊಡಲಿ, ಯಾವುದೇ ಹೆಸರಿನಲ್ಲಿ ಕೊಡಲಿ. ಅದು ಅದರ ಸುತ್ತ ನಿಂತಿರುವ ವ್ಯಕ್ತಿಯ ಜೀವನದ ಸ್ಪಷ್ಟ ಸಂದೇಶವನ್ನು ರವಾನಿಸುತ್ತವೆ . ಮಾಡುವ ಕಾರ್ಯ ಸ್ಮರಿಸುವಂತಿದ್ದರೆ ಸಮಾಜ ನಮ್ಮ ಹಿಂದಿರುತ್ತದೆ. ಹಲವು ಸಾಧಕರ ಬದುಕಿನಲ್ಲಿ ಕಂಡುಕೊಳ್ಳಬೇಕಾದ ಅಂಶವಿದು. ಪ್ರಶಸ್ತಿಗಾಗಿಯೇ  ಸಾಧನೆ ಮಾಡಿದವರು ಅಲ್ಪಕಾಲದಲ್ಲಿ ಮರೆಯಾಗುವರು. ಗುರುತಿಸಿಕೊಂಡವರು ತಮ್ಮ ತಮ್ಮಲ್ಲೇ ಹೊಸತನವನ್ನು ಕಂಡುಕೊಂಡು ನಮ್ಮಲ್ಲೇ ಉಳಿದುಕೊಳ್ಳುವರು. 
ಸರ್ವ ಕಾಲಕ್ಕೂ ಅನುಕರಣೀಯವಾದ ಈ ಪ. ಗೋ. ಸಂಸ್ಮರಣಾ ಸಮಾರಂಭ 2004 ರಲ್ಲಿ  ಇನ್ನಷ್ಟು ಉತ್ಕೃಷ್ಟ ಮಟ್ಟಕ್ಕೇರಿದ ಕುರುಹು ಇದೆ. ನಾಡಿನಾದ್ಯಂತ ಧರ್ಮಸ್ಥಳದ  ಧರ್ಮಾಧಿಕಾರಿಗಳ ಸಾನ್ನಿಧ್ಯದಲ್ಲಿ  ನಿರಂತರ  ಪ. ಗೋ . ಒಂದು ಹಬ್ಬದಂತೆ ಕಂಗೊಳಿಸುವುದು  ದ. ಕ. ಜಿಲ್ಲಾ ಪತ್ರಕರ್ತರ  ಸಹಯೋಗದಲ್ಲಿ ರಾಜ್ಯ- ರಾಷ್ಟ್ರ- ಅಂತರ್ರಾಷ್ಟ್ರೀಯ ಮಟ್ಟಕ್ಕೆ ಬದುಕು ಕಲಿಸಿದ ನಡೆಗಳ ಸಂದೇಶ ರವಾನೆಯಾಗುವುದು.
ಪದ್ಯಾಣರು ವೇದಿಕೆಯಲ್ಲಿದ್ದಾರೆ ಅನ್ನಿಸುತ್ತದೆ. ಅಲ್ಲಿರುವ ಮಹನೀಯರು, ತುಂಬಿದ ಸಭಿಕರು, ಅವರ ಕುಟುಂಬದ ಕೊಂಡಿಗಳು ನಗುವಿನಲ್ಲಿ ಒಂದಾದಂತೆ ಭಾಸವಾಗುವುದು. ಪ್ರಶಸ್ತಿ ಪಡೆದುಕೊಳ್ಳುವ ಸಾಧಕನಿಗೆ ಅದು ಆನಂದದ ಮೌನ ಪ್ರೇರಣೆಯ ಸಮಯ. ಪದ್ಯಾಣ ಗೋಪಾಲ ಕೃಷ್ಣರ ಬದುಕು, ಈ ಜಗತ್ತಿನಲ್ಲಿ  ಅಳಿಸಲಾಗದ  ಹೆಗ್ಗುರುತಾಗಿ ನಿಂತವು. ನಡೆದು ಬಂದ ಹಾದಿಯಲ್ಲಿ  ಪದ್ಯಾಣ ಗೋಪಾಲಕೃಷ್ಣರಂತೆ ಕಂಗೊಳಿಸುವ ಮುತ್ಸದ್ಧಿಗಳು ಪ್ರತೀ ಭಾರಿ ನೆನಪಾಗುವ ಬದುಕುಗಳು.  ಅವರದು ಸಾರ್ಥಕದ ಬದುಕು ಅಂತ  ಹೆಮ್ಮೆಯಿಂದ ಹೇಳುವುದು ನುಡಿ ನಮನಗಳು. ಪ.ಗೋ. ಎಂಬುದು ಹೆಸರಲ್ಲ.  ನಿತ್ಯ ಕಾಲ ಕಾಲಕ್ಕೆ ನಡೆದಾಡುವ ಪತ್ರಿಕೆ. ಸದಾ ಸುದ್ಧಿಯಲ್ಲಿ ಸುತ್ತಮುತ್ತ ಬೆಳಗುವ ಆತ್ಮ ದೀಪಿಕೆ.

ಭಾನುವಾರ, ಏಪ್ರಿಲ್ 29, 2012

ಲೇಖನಿ


ಲೇಖನಿಯೊಂದು  
ಮಾತಿಗಿಳಿದಿದೆ
ಬಿಳಿ ಹಾಳೆಗೆ......!
ಏನ ಬರೆವುದು ?

ನರನರಗಳು ಸೆಟೆದು
ಗಂಟಿಕ್ಕಿ ಹೆಬ್ಬಲಕೆ ಉಬ್ಬಿ
ಬಿಡಲೊಲ್ಲದು ಹೆಬ್ಬೆರೆಳು-
ಆಣತಿಗೆ ಜಗ್ಗಲೆತ್ನಿಸುವುದು
ಬಗ್ಗಿ ಗಂಟಲ ನರಗಳುಬ್ಬಿ
ತೋರ್ಬೆರಳು !

ಅದಕ್ಕಷ್ಟೂ ಹೆಗಲೊತ್ತುಗಳು
ಹಿಡಿದೆತ್ತಿದೆ ನಡುಬೆರಳ ಸೊಂಟ
ಎಣಿಕೆ ನಾಲ್ಕರ ಬೆರಳು !
ಹಾಳೆ ಸ್ಪರ್ಶಕ್ಕದ್ದಿ
ತಿಕ್ಕಿ ಕಿರುಬೆರಳು ಸಿದ್ದ !
ಅಂಗೈಗೆ ಮುಖವಿಟ್ಟು
ಬಿಸಿ ಚೀಪುತ್ತಿದೆ !

ತೆರೆದು ಅಂಗಾಂಗದ ಕಣ್ಣು
ಮೌನ ಮಾತಿಗಿಳಿವುದು.......
ಉಕ್ಕೇರಿ ಎದೆಯಗಲಕೆ
ಮನೋ ತರಂಗಾಂತರ
ನರನರಗಳ ಕೊಳವೆಗೆ
ನುಗ್ಗಿ ಭೋರ್ಗರೆವದು ......
ಯಾವುದೀ ಸೃಷ್ಠಿ ಸಮಸ್ಥಿತಿ ಶಕ್ತಿ ?!
ಬೆರಳ ಖಂಡಗಳದುರಿಸಿ
ಲೇಖನಿ ಚಲಿಸಲೊಲಿಸಿದೆ  ...

ಕಿವಿ ನಿಮಿರಿ ಹುಬ್ಬೆತ್ತಿ
ಕಣ್ತೆರೆದು ಮೂಗ ಹೊಳ್ಳೆಗಳ
ಇಷ್ಟಗಲದ ಕೆಳಗೆ
ಬಾಯ್ತೆರೆದು ನಾಲಗೆ
ಅಕ್ಷರ ಸ್ಖಲಿಸಿದೆ !
ಈಗ.......
ಬಾಣಂತಿ ಬಿಳಿ ಹಾಳೆಗೆ ಕನಸು !
ಲೇಖನಿ ಆಕಳಿಸಿದೆ
ಮತ್ತೊಂದು ಬೆಳಿಗ್ಗೆಗಳ ಎಚ್ಚರಕೆ !
-ರವಿ ಮೂರ್ನಾಡು

ಶನಿವಾರ, ಏಪ್ರಿಲ್ 28, 2012

  ನಮ್ಮ ಅನ್ನ ಕದ್ದ ಕಳ್ಳ..!

          ಹೊಡೆಯಬೇಡಿ ನನ್ನನ್ನು... ಹೊಡೆಯಬೇಡಿ.... ಇನ್ನು ಮುಂದೆ ಕದಿಯುವುದಿಲ್ಲ...! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. "ಕಳ್ಳ" ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ  ಹೆದರಿ ಹಸಿಯದೆ ಒಳೊಗೊಳಗೆ ಕುದಿಯುತ್ತಾ ಸುಮ್ಮನಾಗುತ್ತಿತ್ತು..!
          ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ , ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ  ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ...!. ನನ್ನದೇ  ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ.... ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು ...!
          ಅದು ಕಾರ್ಮಿಕರ ಲೈನ್‍ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ  ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ " ಕಾರೆಕೊಲ್ಲಿ" ಕಾಫಿ ಎಸ್ಟೇಟಿಗೆ. ಅಲ್ಲಿಂದ   "ಕಂಟ್ರೋಲ್‍" ಎಸ್ಟೇಟಿಗೆ ಮೂರು ಕಿ.ಮೀ. ದೂರ .  ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ  ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ.
          ವಾರದ ಸಂತೆ ಸುಂಟಿಕೊಪ್ಪದಲ್ಲಿ ಭಾನುವಾರ. ನಾನೂ ಸಂತೆಗೆ ಹೋಗುತ್ತಿದ್ದೆ  ಅಮ್ಮನೊಂದಿಗೆ. ಎಲ್ಲಾ ಮುಗಿಸಿ ಬರುವಾಗ ನನ್ನ ಕೈಯಲ್ಲೊಂದು ಬ್ಯಾಗು. ಅಮ್ಮನ ತಲೆಯಲ್ಲೊಂದು ವಾರಕ್ಕೆ ಬೇಕಾದ ದಿನಸಿಗಳ ದೊಡ್ಡ ಗಂಟು. ಬೆಳಗ್ಗಿನ ಉಪಹಾರಕ್ಕೆ ಬೇರೆ ಆಹಾರ ತಿಂದ ರುಚಿಯ ನೆನಪಿಲ್ಲ. ಮೂರು ಹೊತ್ತು ಗಂಜಿಯೇ ತಿನ್ನುವುದು. ಹಾಗಾಗಿ ಅಕ್ಕಿಯೇ ಹೆಚ್ಚಿತ್ತು ಅಮ್ಮನ ಗಂಟಿನ ಭಾರದಲ್ಲಿ. ಹಾಗೇ ಅಜ್ಜಿಯ ಕಾರೆಕೊಲ್ಲಿ ಎಸ್ಟೇಟಿಗೆ ಬಂದು, ಕಾಫಿಯೋ, ಗಂಜಿ ಅನ್ನವೋ ತಿಂದು ಕಂಟ್ರೋಲ್‍ ಎಸ್ಟೇಟಿಗೆ ಬರುವುದು ವಾಡಿಕೆ.
          ನಾಲ್ಕೂವರೆ- ಐದು ವರ್ಷದ ಬಾಲಕ . ಮೂಗಲ್ಲಿ ಗೊಣ್ಣೆ ಸುರಿಯುತ್ತಿತ್ತು. ಆಗ ಮೂರು ಜನ ಮಕ್ಕಳಲ್ಲಿ ನಾನೇ ದೊಡ್ಡವನು. ಅಪ್ಪ-ಅಮ್ಮ ತೋಟಕ್ಕೆ ಹೋದ ಮೇಲೆ ಮೂರನೆಯ ಮಗುವನ್ನು ಎತ್ತಿ ಆಡಿಸುವುದು ನನ್ನ ಕೆಲಸ. ಮಗು ನೋಡಿಕೊಳ್ಳುವವನು. ಅಳುವಾಗ ಬಾಟಲ್‍ ಹಾಲು ಕೊಡುವುದು. " ಅಮೂಲ್‍ ಸ್ಪ್ರೇ...! ಒಂದು ಗ್ಲಾಸು ಹಾಲಿಗೆ ಒಂದು ಲೀಟರ್ ನೀರು ಹಾಕಿ ಕಲ್ಲು ಸಕ್ಕರೆ ಮಿಶ್ರಣ ಮಾಡಿದ್ದು. ನಿದ್ದೆ ಬಂದಾಗ ನಿದ್ದೆ ಮಾಡಿಸುವುದು. ಎಚ್ಚರವಿದ್ದಾಗ ಅದನ್ನು ಒಂದು ಮೂಲೆಗೆ ಕುಳ್ಳಿರಿಸಿ ಓಗರೆಯ ಮಕ್ಕಳೊಂದಿಗೆ ತಿಪ್ಪರಲಾಗ ಆಟವಾಡುವುದು. ಕೆಲವೊಮ್ಮೆ ಮಗು "ಎತ್ತಿಕೋ" ಎಂದು ಅಳುವಾಗ ಹೊಡೆದು ಸುಮ್ಮನಾಗಿಸಿ ಆಟವಾಡುವುದು. ನಾನೊಬ್ಬ ಮಗು ನೋಡಿಕೊಳ್ಳುವವನು.
          ಸಂಜೆ ಅಮ್ಮ ತೋಟದ ಕೆಲಸ ಬಿಟ್ಟು ಬಂದರು. ನೋಡಿದ್ದೇ ತಡ ಮಗು ಅಳಲು ಪ್ರಾರಂಭಿಸಿತು.
"ಏನೋ ಮಗುವಿಗೆ ಹಾಲು ಕೊಟ್ಟೆಯೇನೋ?"
" ಕೊಟ್ಟೆ ಅಮ್ಮ"
"ಮತ್ಯಾಕೆ ಅಳುತ್ತಿದೆ?"
" ಗೊತ್ತಿಲ್ಲ ಅಮ್ಮ"
          ಮೊಲೆ ಹಾಲಿಗೆ ತಡಕಾಡುತ್ತಿದೆ ಮಗು. ಎತ್ತಿ ಮಡಿಲ್ಲಲ್ಲಿರಿಸಿ ಹಾಲು ಕುಡಿಸುತ್ತಿದ್ದಳು. ಮುಂಗುರುಳಿಗೆ ಬೆರಳು ಹಾಕಿ, ತಲೆ-ಮುಖ- ಶರೀರವನ್ನು ಒಮ್ಮೆ ತಡವಿದಳು. ಮಗು ಶಾಂತವಾಯಿತು.
"ಇದೇನೋ ಮಗುವಿನ ಕೆನ್ನೆ ಮೇಲೆ ಕೆಂಪು ಗೆರೆಗಳಿವೆ?"
"ಗೊತ್ತಿಲ್ಲ ಅಮ್ಮ, ಬೆರಳು ಪರಚಿರಬಹುದು.."
"ಇಷ್ಟೊಂದು ದಪ್ಪದ ಗೆರೆಯೇ?"
          ಕೈ ಕಾಲುಗಳು ನಡುಗುತ್ತಿತ್ತು. ಹೌದು..! ನಾನು ಆಟವಾಡುತ್ತಿದ್ದೆ. ಮಧ್ಯೆ ಮಗು ಅಳುತ್ತಿತ್ತು... ಹೊಡೆದೆ ಅಂತ ಕೂಗಿ ಹೇಳಬೇಕೆನಿಸಿತು. ಅದು ಆಟವಾಡುವುದೇ ... ನಾನು ಆಟವಾಡುವುದೇ...ಮಗುವೊಂದು ಮಗು ನೋಡುವ ಕೆಲಸದಲ್ಲಿ ಅಂತಹದ್ದು ನಡೆದು ಹೋಯಿತು ಅಮ್ಮ... ನನ್ನನ್ನ ಕ್ಷಮಿಸಿ ಬಿಡು..!
          ಆ ಲೈನ್‍ ಮನೆಯಲ್ಲಿ ಇನ್ನೊಂದು ಬಡ ಕುಟುಂಬವಿತ್ತು. ನನ್ನ ಅಮ್ಮ-ಅಪ್ಪನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುವುದು. ನಾಲ್ಕು ಮಕ್ಕಳಲ್ಲಿ ದೊಡ್ಡದು ಹೆಣ್ಣು ಮಗು, ಐದು ವರ್ಷದ್ದು. ಅದರ ಹಿಂದೆ ಮೂರು ಮಕ್ಕಳು. ಅದಕ್ಕೆ ಈ ಮೂರು ಮಕ್ಕಳನ್ನು ನೋಡುವುದೇ ಕೆಲಸ. ಮಕ್ಕಳಿಗೆ ಏನಾದರೂ ತೊಂದರೆಯಾದರೆ ಹೊಡೆತ ಬೀಳುವುದು ಇದಕ್ಕೆ. ದಿನವೂ ಅಕ್ಕಪಕ್ಕದ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ಈ ಹೆಣ್ಣು ಮಗುವಿಗೂ ಆಸೆಯಾಗಿತ್ತು.  ಒಂದು ದಿನ ಸಂಜೆ ಮನೆಗೆ ಬಂದ ತಾಯಿಗೆ ಅದು ಹೀಗೆ ಕೇಳಿತ್ತು. "ಅಮ್ಮ ಅವರೆಲ್ಲಾ ಶಾಲೆಗೆ  ಹೋಗುತ್ತಾರೆ, ಅವರ ಹೆಸರನ್ನು ಬರೀತಾರೆ, ನನ್ನದೂ ಬರೀತ್ತಾರೆ. ನಾನು ಶಾಲೆಗೆ ಹೋಗುತ್ತೇನೆ" ಅಂತ. ಅದಕ್ಕೆ ತಾಯಿಯ ಉತ್ತರ ಹೀಗಿತ್ತು. "ನೀನು ಶಾಲೆಗೆ ಹೋದರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರು?" . ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಅನ್ನುವ ಸ್ಲೋಗನ್‍ ಈ ಬಡ ಕುಟುಂಬದ ಮನೆ ಬಾಗಿಲಿಗೆ ಬರಲೇ ಇಲ್ಲ. ನಾನು ಗಂಡು ಮಗುವಾಗಿ ಹುಟ್ಟಿದ್ದೆ. ಅಡ್ಡಾದಿಡ್ಡಿಯ ಜಗತ್ತಿನಿಂದ ಸರಿ-ತಪ್ಪುಗಳನ್ನು ಅರಿತೆ. ಆ ಹೆಣ್ಣು ಮಗುವಿನ ಕನಸು....!?
          ಅಪ್ಪ-ಅಮ್ಮ ಸೇರಿ ನಾವು ಐದು ಜನ ಸಂತೆಯ ಅಕ್ಕಿಯಲ್ಲಿ ವಾರವನ್ನು ಅಳತೆ ಮಾಡುವುದು. ಹೊಟ್ಟೆ ತುಂಬಾ ಊಟ ಅಂತ ಅಲ್ಲಲ್ಲಿ ಬಾಯ್ಬಿಟ್ಟ  ಅಲುಮಿನೀಯಂ ತಟ್ಟೆಯಲಿ ಬರೆಯಲಿಲ್ಲ. ಎರಡು ಲೋಟ ಅಕ್ಕಿಯಲ್ಲಿ ಬೆಂದ ಅಮ್ಮ ಅನ್ನ ಮತ್ತು ಗಂಜಿ ನೀರು ಎಲ್ಲರಿಗೂ  ದೊಡ್ಡ ಚಮಚದಲ್ಲಿ ಎರಡು ಬಾರಿ ಬಡಿಸುತ್ತಿದ್ದಳು.. ಅನ್ನ ಬೇಯಿಸುವಾಗ ಇದಕ್ಕೆಂದೇ ಹೆಚ್ಚು ನೀರು ಹಾಕುತ್ತಿದ್ದರು ಅಮ್ಮ. ಅನ್ನ ಕಡಿಮೆಯಾದರೂ, ಗಂಜಿ ನೀರು ಕುಡಿಯುವ ಭರವಸೆಯಿಂದ. ರಾತ್ರಿ ಮಲಗಿದಾಗ ಹೊಟ್ಟೆ ತುಂಬಿದಂತೆ ಅನ್ನಿಸುತ್ತಿರಲಿಲ್ಲ. ಅನ್ನ ಕದಿಯುವ ಆಲೋಚನೆ ಇಲ್ಲಿಯೇ.. ಆ ರಾತ್ರಿಗಳಲ್ಲಿ ಮೊಳಕೆಯೊಡೆಯಿತು.
          ಕಾರ್ಮಿಕ ಕುಟುಂಬಗಳು ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೊರಟ ಮೇಲೆ ಎಲ್ಲವೂ ಖಾಲಿ ಖಾಲಿ . ಶಾಲೆಗೆ ಹೋಗುವವರು ಹೋಗುತ್ತಿದ್ದರು . ಉಳಿದ ಮಕ್ಕಳೊಂದಿಗೆ ನಾವು ಮತ್ತು ನಮ್ಮ ಮಗು ಮಾತ್ರ. ಆ ಮಕ್ಕಳೊಂದಿಗೆ ಆಟವಾಡುತ್ತಿದ್ದಂತೇ ಹತ್ತು ಗಂಟೆಗೆಲ್ಲಾ ಬೆಳಗ್ಗೆ ತಿಂದ ಗಂಜಿ ಅನ್ನ ಕರಗಿ ಹಸಿವಾಗ ತೊಡಗುತ್ತಿತ್ತು. ಮುಂದಿನ ಗಂಜಿ ಅನ್ನ ಸಿಕ್ಕುವುದು ಅಮ್ಮ ಮಧ್ಯಾಹ್ನ ಬಂದಾಗಲೇ. ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಲಿಲ್ಲ. ಲೈನ್ ಮನೆಯಲ್ಲಿ ಮಕ್ಕಳನ್ನು ಹೊರಗೆ ಬಿಟ್ಟು ಎಲ್ಲರೂ ಮನೆಗೆ ಬೀಗ ಹಾಕಿ ಹೋಗುತ್ತಿದ್ದರು. ಮೊದಲು ಲೈನಿನ ಕೊನೆಯ ಒಂದು ಮನೆಯನ್ನು ಆಯ್ಕೆ ಮಾಡಿಕೊಂಡೆ. ಮನೆಯ  ಮೇಲೆ ಹತ್ತಿ  ಹೆಂಚುಗಳನ್ನು ತೆಗೆದು ಅವರ ಅಡುಗೆ ಕೋಣೆಗೆ  ನೇರವಾಗಿ ಇಳಿಯುವುದು. ಹಾಗೇ ಕೈ ಹಾಕಿ ಅನ್ನ ತಿನ್ನುತ್ತಿದ್ದೆ. ಸ್ವಲ್ಪ ಸ್ವಲ್ಪವೇ ತೆಗೆಯುತ್ತಿದ್ದದ್ದು. ಗೊತ್ತಾಗಬಾರದೆಂದು. ಹಾಗೇ ಪಾತ್ರೆಗಳ ಮುಚ್ಚಳ ಮುಚ್ಚಿ ವಾಪಾಸು ಬಂದ ಹಾಗೆ ಬರ ತೊಡಗಿದೆ. ಹೆಚ್ಚಿಗೆ ಗಮನಕ್ಕೆ ಬರಲಿಲ್ಲ. ಯಾರಿಗೂ ಸಂಶಯವೂ ಬರುತ್ತಿರಲಿಲ್ಲ.
          ಒಂದೊಂದು ದಿನ ಒಂದೊಂದು ಮನೆಯನ್ನು ಆಯ್ಕೆ ಮಾಡಿದೆ. ಹಸಿವಿನ ಬಾಧೆಯೂ ಕಡಿಮೆಯಾಗುತ್ತಿತ್ತು. ಹೆಚ್ಚಿನ ಉಮ್ಮಸ್ಸಿನಿಂದ ಆಟವಾಡುತ್ತಿದ್ದೆ. ತೋಟ, ಗದ್ದೆ ಬಯಲೆಲ್ಲಾ ಓಡಾಡ ತೊಡಗಿತು ನನ್ನ ಮನಸ್ಸು...... ಹಕ್ಕಿಯ ಹಾಗೆ ಹಾರಾಟ... ಕುಣಿದು ಕುಪ್ಪಳಿಸುತ್ತಿದ್ದೆ. ಗೊತ್ತಿರಲಿಲ್ಲ ವ್ಯವಸ್ಥೆ ಬದಲಾಗುತ್ತದೆ ಅಂತ. ನಗು- ಉಮ್ಮಸ್ಸಿಗೆ ಕಡಿವಾಣ ಬೀಳುತ್ತದೆ...ನನ್ನೊಳಗಿನ ಹಕ್ಕಿಯ ರೆಕ್ಕೆ ಮುರಿದು ಬೀಳುತ್ತದೆ ಅಂತ.
          ದಿನವೂ ಅನ್ನ ಕದಿಯುತ್ತಿದ್ದೆ. ಆ ದಿನ ಸ್ವಲ್ಪ ಹೆಚ್ಚಿಗೆ ಕದ್ದುಬಿಟ್ಟೆ. ನನ್ನ ತಮ್ಮನಿಗೂ ತಂದು ಕೊಟ್ಟೆ. ಅವನು ಸಣ್ಣವನು ಎಲ್ಲಿಂದ ಅಂತ ಕೇಳಿದ. ಲೈನಿನ ಹಿಂಬದಿಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಇಬ್ಬರೂ ತಿಂದೆವು. ಯಾರಿಗೂ ಅನ್ನ ತಿಂದ ವಿಷಯ ಹೇಳಬಾರದೆಂದೆ.
ಮಧ್ಯಾಹ್ನ ಅಮ್ಮ ಊಟಕ್ಕೆ ಬಂದವಳು ತಟ್ಟೆ ತೊಳೆದು ಗಂಜಿ ಅನ್ನ  ಬಡಿಸುತ್ತಿದ್ದಂತೆ ಮನೆಯ ಹೊರಗಿನಿಂದ ಹೆಂಗಸು ಬೈಯ್ಯುವ ಸ್ವರ ಕೇಳಿಸಿತು.
" ನಮ್ಮ ಅನ್ನ ಕದೀತ್ತಿದ್ದಾರೆ ಇಲ್ಲಿ"
ಮತ್ತೊಮ್ಮೆ ಸ್ವರ ಹೆಚ್ಚಾಯಿತು.
" ಏನು ಬುದ್ಧಿ ಕಲಿಸ್ತಾರೆ ಮಕ್ಕಳಿಗೆ... ಹಾಳಾಗಿ ಹೋದವು"
ಅಮ್ಮ ಹೊರಗೆ ಬಂದರು. ನಾನು ಬೆವತು ಹೋಗಿದ್ದೆ. ಕುಳಿತಲ್ಲೇ  ದುಃಖ್ಖ ಒತ್ತರಿಸ ತೊಡಗಿತು. ಆ ಹೆಂಗಸು ನಮ್ಮ ಮನೆಯ ಮುಂದೆಯೇ ನಿಂತಿದ್ದಳು.
"ಯಾರು ಕದ್ದಿದ್ದು, ಏನಾಯ್ತು ಸುಂದ್ರಿ?" ಅಮ್ಮ ಕೇಳಿದಳು.
"ನಮ್ಮ ಮನೆ ಪಾತ್ರೇಲಿ ಅನ್ನ ಕಮ್ಮಿಯಾಗದೇ. ನಿಮ್ಮ ಮಗ ಅನ್ನ ಕದಿಯೋದು.ನನ್ನ ಮಗಳು ಹೇಳ್ತವ್ಳೆ"
          ತಮ್ಮನಿಗೆ ಅನ್ನ ಕೊಟ್ಟಿದ್ದೇ ತಪ್ಪಾಯಿತು. ಅವನು ಆ ಮನೆಯ ಹುಡುಗಿಗೆ ಹೇಳಿಬಿಟ್ಟ. ಆ ಹೆಂಗಸು  ಅಮ್ಮನ ಮಾತಿಗೆ ಮಾತು ಸೇರಿಸುತ್ತಿದ್ದಂತೆ ನನ್ನ ಅಪ್ಪನು ಬಂದ, ಜೊತೆಗೆ ಆ ಹೆಂಗಸಿನ ಗಂಡನು. ಅನ್ನದ ಜಗಳ ಶುರುವಾಯಿತು. ಸತ್ಯ ಹುಡುಕಲು ಕರೆದರು ನನ್ನನ್ನು. ಮೊದಲೇ ಅಳುತ್ತಿದ್ದೆ. ಅವರ ಮುಂದೆ ಇನ್ನೂ ಹೆಚ್ಚಾಯಿತು.
"ನೀನು ಅನ್ನ ಕದ್ದಿದ್ದಿಯೇನೋ?"
"ಹೌದು,, ನಾನೇ ಕದ್ದಿದ್ದಿದ್ದು. ತಮ್ಮನಿಗೂ ಕೊಟ್ಟೆ"
"ಅವಮಾನ.... ಅವಮಾನ..! ನಮ್ಮ ಮಾನ ಮರ್ಯಾದಿ  ಕಳೆದುಬಿಟ್ಟೆ"
          ಕಣ್ಣಲ್ಲಿ ನೀರಿಟ್ಟ ಅಮ್ಮ ಕೈಗೆ ಸಿಕ್ಕಿದ್ದಲ್ಲಿ ಭಾರಿಸ ತೊಡಗಿದಳು. ಅಪ್ಪನಿಗೆ ಸಿಕ್ಕಿದ್ದು ದೊಣ್ಣೆ. ಅಷ್ಟು ದಿನಗಳಿಂದ ತಿಂದ ಅನ್ನದ ಒಂದೊಂದು ಅಗಳು ಏಟಿನ ರೂಪದಲ್ಲಿ ತಾಂಡವಾಡ ತೊಡಗಿದವು. "ಇನ್ನು ಕದ್ದರೆ ಕೈ ಕಡಿದು ಬಿಟ್ಟೇನು" ಅಂದರು.
"ಇಲ್ಲ ಅಪ್ಪ ... ಇನ್ನು ಕದಿಯೋದಿಲ್ಲ ...! , ಅಮ್ಮ .. ಅಪ್ಪನಿಗೆ ಹೇಳು ನನ್ನ ಕೈ ಕತ್ತರಿಸಬೇಡ ಎಂದು".
          ಎಲ್ಲರೂ ಸುಮ್ಮನಾದರೂ. ಆ ಹೆಂಗಸು  "ಒಬ್ಬರಿಗೇ ಅನ್ನ ಇರೋದು, ಎಲ್ಲಾ ಕದ್ದು ತಿಂದು ಬಿಟ್ಟವ್ನೆ" ಅಂತ , ಹಿಡಿ ಶಾಪ ಹಾಕಿ ಒಳ ಹೋದಳು. ಕೊಂಚ ಆಲೋಚಿಸಿದ ಅಮ್ಮ , ಸೀದ ಮನೆ ಒಳಗೆ ಹೋಗಿ ಗಂಜಿ ಅನ್ನವನ್ನು ಅವಳ ಮನೆಗೆ ಕೊಟ್ಟು ಬಂದಳು. ಅಪ್ಪ ಮಾತ್ರ ಗಂಜಿ ಅನ್ನ  ತಿಂದ. ಆ ಒಂದು ಮಧ್ಯಾಹ್ನ ಅಮ್ಮನಿಗೂ ಅನ್ನ ಇಲ್ಲ. ನನಗೂ ಇಲ್ಲ, ತಮ್ಮನಿಗೂ. ಮಧ್ಯಾಹ್ನದಿಂದ ಸಂಜೆಯವರೆ ಕಳೆದ ಆ ನಮ್ಮೊಳಗಿನ ಭಾವಗಳು ಈ ಜಗತ್ತಿನ ಕಥೆಗಳಲ್ಲಿ ಪುಟವಾಗಿ ಉಳಿದಿಲ್ಲ. ಮಗುವಿಗೆ ಹಾಲು ಕೊಡುವ ತಾಯಿ, ತನ್ನ ಮಕ್ಕಳಿಗಾಗಿ ಹೊಟ್ಟೆಗಿಲ್ಲದೆ ಮರುಗಿದ ಕ್ಷಣಗಳು ಯಾವುದೇ ಧೀಮಂತ ಕಥೆಗಳಿಗೂ ಸಾಟಿಯಲ್ಲ ಅಂತ ಅನ್ನಿಸಿತು.
          ಅನ್ನ ಕದ್ದು ಹಸಿವು ಹಿಂಗಿಸುವುದನ್ನು ಕೈಬಿಟ್ಟೆ. ಆಟವಾಡುವ ಉಮ್ಮಸ್ಸು ಇಂಗಿ ಹೋದಂತಾಯಿತು. ಹಕ್ಕಿಯ ಹಾಗೆ ತೋಟ-ಗದ್ದೆ ಬಯಲಲ್ಲಿ ಹಾರಾಡುವ ಆನಂದ ಕಳೆದು ಹೋಯಿತು. ಒಂದು ದಿನ ಹಾಗೆಯೇ ಮನೆಗೆ ನೀರು ತರಲು ಕೆರೆಯ ಹತ್ತಿರ ಹೋದೆ. ಆ ಹೆಂಗಸು ಮತ್ತು ಅವಳ ಗಂಡ  ಬಟ್ಟೆ ಹೊಗೆಯುತ್ತಿದ್ದರು. ನನ್ನನ್ನು " ಕಳ್ಳ" ಅಂದರು. ಹಲ್ಲು ಕಡಿಯುತ್ತಿದ್ದರು.... ನೀರು ತುಂಬಿಸುವ ಬಿಂದಿಗೆ ಕಿತ್ತು ಅದರಲ್ಲೇ ಹಿಗ್ಗಾ ಮುಗ್ಗಾ ಹೊಡೆದರು. ಅವರ ಕಣ್ಣುಗಳಲ್ಲಿ ಅನ್ನದ ರೋಷವಿತ್ತು. ನಾನು ಅಳುತ್ತಿದ್ದೆ... ಇನ್ನೊಮ್ಮೆ ಅನ್ನ ಕದ್ದರೆ ಕೊಂದು ಈ ಕೆರೆಗೆ ಬಿಸಾಕೆವು ಅಂದರು... ಮತ್ತೆ ಮತ್ತೆ ಹೊಡೆದರು. ಅಂಗಲಾಚಿದೆ... ಹೊಡೆಯಬೇಡಿ ನನ್ನನ್ನು... ನಾನು ಕದಿಯುದನ್ನು ಬಿಟ್ಟಿದ್ದೇನೆ . ಎಲ್ಲವನ್ನು ಸಹಿಸಿಕೊಳ್ಳಬಹುದಿತ್ತು. ಅವರ ಪೆಟ್ಟು ತಿನ್ನಲಾಗಲಿಲ್ಲ. ಜೊತೆಗೆ ಕಂಡ ಕಂಡಲ್ಲಿ ಕಳ್ಳ ಅನ್ನುವುದು. ಅವರನ್ನು ಕಂಡಾಗಲೆಲ್ಲ ಅಡಗಿಕೊಳ್ಳಲು ಪ್ರಯತ್ನಿಸಿದೆ .ನಡುನಡುವೆ ಅಳುತ್ತಿದ್ದೆ. ಒಮ್ಮೊಮ್ಮೆ ಆಲೋಚಿಸುತ್ತಿದ್ದೆ, ಇಲ್ಲಿಂದ ಓಡಿ ಹೋದರೋ.. ಹೋದರೆ ಎಲ್ಲಿಗೆ ಹೋಗುವುದು...?!!!
ಸುಮ್ಮನೆ ಒಬ್ಬನೇ ಒಂದು ಮೂಲೆಯಲ್ಲಿ ಕುಳಿತುಕೊಳ್ಳವು ದಿನಗಳು ಪ್ರಾರಂಭವಾದವು. ಕಣ್ಣ ಮುಂದೆ ಹಾರಿ ಬರುವ ಏರೋಪ್ಲೇನ್‍ ದುಂಬಿಗಳನ್ನು ಹಿಡಿಯಬಹುದಿತ್ತು. ಗದ್ದೆ ಬಯಲಲ್ಲಿ ಮೀನು- ನಳ್ಳಿಗಳನ್ನು ಹಿಡಿದು ಮನೆಗೆ ತರಬಹುದಿತ್ತು. ಓಗರೆಯ ಮಕ್ಕಳೊಂದಿಗೆ ಲಗೋರಿ-ಗೋಲಿ ಆಟವಾಡಬೇಕಿನಿಸುತ್ತಿತ್ತು... " ಕಳ್ಳ" ಅಂತ ಕೆರೆದರೋ..?! ಭಯವಾಗುತ್ತಿತ್ತು. ಹಾಗಂತ ಮಕ್ಕಳ ತಂದೆ-ತಾಯಂದಿರು ನನ್ನೊಂದಿಗೆ ಸೇರಬಾರದೆಂದೂ ಕಟ್ಟಪ್ಪಣೆ ಮಾಡಿದ್ದರು.
          ಮತ್ತೊಮ್ಮೆ ಅರಳಿದ ಹೂ  ಮನದೊಳಗೇ ಬಾಡ ತೊಡಗಿದವು. ಹಾಗಂತ ಕರುಳ ಬಳ್ಳಿಯ ಬದಲಾವಣೆ ಅಮ್ಮನಿಗೆ ಗೊತ್ತಾಗದೆ ಇರಲಿಲ್ಲ.. ನನ್ನನ್ನು ಕಾರೆಕೊಲ್ಲಿ ಕಾಫಿ ಎಸ್ಟೇಟಿನ ಅಜ್ಜಿಯ ಮನೆಗೆ ಶಾಲೆಗೆ ಹೋಗಲು ಕಳುಹಿಸಿದಳು. ಅಲ್ಲಿಂದ ಹೇಗೋ  ಪಾರಾದೆ. ಇಲ್ಲಿಯೂ ಕಥೆಗಳು  ಹೆಣೆದುಕೊಳ್ಳುತ್ತವೆ.... ಹಾಗೆಯೇ ಭಾವಗಳು ಪದಗಳಾಗಿ ಸ್ಪರ್ಶಿಸುತ್ತವೆ.
----------------------------------------------------------------------------------
-ರವಿ ಮುರ್ನಾಡು

ಬುಧವಾರ, ಏಪ್ರಿಲ್ 25, 2012

ಬಾಲ(ಚಂದ್ರ)ನ ಕವಿತೆ


ಸುಂದರ ಚಂದಿರ ಮೋಡದಲಿಣುಕಿ
ಧರಣಿಯ ಸುಂದರ ಮಾಡಿದನು
ಚಿಕ್ಕೆಯ ಸಂಗಡ ಚುಕ್ಕಿಯನಾಡುತ
ಬಾನಿನ ಹೃದಯದಿ ಓಡಿದನು !

ಮಲಗಿದ ಸೂರ್ಯನ ಕಡಲಿದು ಕನ್ನಡಿ
ತೇಲಿವೆ ಚಂದ್ರನ ಬಿಂಬಗಳು
ದುಂಡನೆ ಮೊಗದಲಿ ಕಪ್ಪನೆ ಕಲೆಗಳು
ಚಿಕ್ಕೆಯು ತರಚಿದ ಗಾಯಗಳು !



ಭೂಮಿಗೆ ಹುಟ್ಟಿ ಬಾನಿಗೆ ಮುಟ್ಟಿ
ಚಿಲಿಪಿಲಿ ಕರೆದಿವೆ ಹಕ್ಕಿಗಳು
ಧರಣಿಗೆ ಹಾಸಿದ ಹೊದಿಕೆಗೆ ಬಿದ್ದಿವೆ
ಮಿಂಚುಳು ಸಾವಿರ ಚಿಕ್ಕೆಗಳು !

ಬಂಡೆಯ ಸೀಳುತ ಗಿಡಮರ ನುಸುಳುತ
ನದಿಗಳ ಹುಡುಕಿವೆ ತೊರೆಗಳು
ಚಂದ್ರನ ಬಿ೦ಬದ ಮೋಹಕೆ ಕೆನೆಯುತ
ಕಡಲಿಗೆ ಮುತ್ತಿವೆ ನದಿಗಳು ! 

ಕತ್ತಲು ಮುಚ್ಚಿದೆ ಧರಣಿಯ ನಿದ್ದೆಗೆ
ಮಡಿಲಲಿ ಮಲಗಿದ ಬಾಲಶಶಿ
ನಿದ್ದೆಯ ಉಸಿರಿಗೆ ಮರಗಳು ನಲಿದಿವೆ
ಜೋಗುಳ ಹಾಡುತಾ ತಂಗಾಳಿ..!

--------------------------------------
-ರವಿ ಮೂರ್ನಾಡು

ಶನಿವಾರ, ಏಪ್ರಿಲ್ 21, 2012

ಪಲವಳ್ಳಿ ಕವಿತೆ ಓದಿದ್ದೀರಾ ?


-ರವಿ ಮೂರ್ನಾಡು
ತಿಳಿ ನೀರಿಗೆ ಬೆರಳಾಡಿಸಿದಾಗ ಅಲೆ ಅಲೆಗಳ ಉಂಗುರ. ಬೆರಳಿಗೆಂಥ ಉಮ್ಮಸ್ಸು ..! ಉಬ್ಬುಬ್ಬಿ ತಬ್ಬಿಕೊಳ್ಳುವುದು ತೀರಕೆ. ಸಂವೇಧನೆಯ ಸೂಕ್ಷ್ಮಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಕವಿತೆ, ತಾಳ್ಮೆಯಿಲ್ಲದಿದ್ದರೆ ಓದಿಸುವುದೇ ಇಲ್ಲ. ಬರೆದ ಕವಿಯ ಬರವಣಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಕವಿತೆ ಅನ್ನುವ ಹೆಸರೇಳಿಕೊಂಡೇ ಉಳಿದು ಬಿಡುವ ಇಂತಹ ಕವಿತೆಗಳಲ್ಲಿ ಸತ್ವಗಳು ಬೆಳೆಯುತ್ತಲೇ ಇರುತ್ತವೆ. ಅದರ ನಿಜತ್ವದ ಸಾರವನ್ನು  ನಿಜವಾದ ಮನಸ್ಸು ಹೀರುವವರೆಗೆ. ಪಲವಳ್ಳಿಯ ಕವಿತೆ ಅಂತ ಬರೆದರೆ ಹೇಗಿರುತ್ತದೆ ? ಅಂದರೆ, ಭಾವ ಪಲ್ಲಟಗಳು .ಇದು ಮೂರ್ತ ಹೆಸರು. ಈಗ ನೋಡಿದ ಚಂದ್ರ, ಕಣ್ಣು ಮಿಟುಕಿಗೆ  ಕ್ಷಣಾರ್ಧದಲ್ಲೇ ಬೆಟ್ಟದ ಮರೆಯಲ್ಲಿ  ಇಣುಕುತ್ತಾನೆ ಇವರ ಕವಿತೆಗಳಲ್ಲಿ.  ಅಗಾಗ್ಗೆ ಕವಿತೆಗಳಲ್ಲಿ ಸಿಕ್ಕಿದ್ದನ್ನು ಹೆಕ್ಕಿ ಭಾವಕ್ಕೆ ಸಿಕ್ಕಿಸಿಕೊಳ್ಳುವಾಗ ನಿಜದ ಕವಿಯ ನಿಜ ಕವಿತೆಗಳ ಬಗ್ಗೆ ಕಟುವಾಗಿ ಹೇಳಬೇಕೆನಿಸಿತು.. ಅಲ್ಲಿ ಯಾವುದೇ ಮುಲಾಜಿಗೆ ಬೀಳುವ ಅಗತ್ಯ ಕಾಣುವುದಿಲ್ಲ.  ಯಾವುದೇ "ಸರ್ಟಿಫಿಕೇಟು" ಬೇಕಾಗಿಲ್ಲ. ಅಂದ ಹಾಗೇ ನೀವುಗಳು ಬದ್ರಿನಾಥ ಪಲವಳ್ಳಿಯವರ ಕವಿತೆಗಳನ್ನು ನಿಜವಾಗಿ ಓದಿದ್ದೀರಾ?. ಅದು ಪದಗಳಲ್ಲಿ ಸಿಕ್ಕಿಸುವ ಉಪಾಯಗಳು. ಮುಟ್ಟಿದರೆ ಅಂಟಿಕೊಳ್ಳುವುದು.. ಅಲ್ಲಿರುವುದು ಬಲಿಷ್ಠ ಪದಗಳೊಂದಿಗೆ ಮೇಳೈಸುವ ಭಾವಗಳ ತಿಕ್ಕಾಟಗಳು.
ನೃತ್ಯಗಾತಿಯ ನರ್ತನ ಆಸ್ವಾಧಿಸುವಾಗ ಹಾವ-ಭಾವ-ಭಂಗಿಯ ಮತ್ತು ತೀಕ್ಷಣತೆಗೆ ಕಣ್ಣಾಲಿಗಳು ತಿರುಗುವುದು. ಹಾಗೇ ಮನಸ್ಸು. ಮೂರ್ತತೆಯ ದೃಶ್ಯವನ್ನು ನೋಡುವಾಗಲೂ ಅಷ್ಟೇ, ಮನಸ್ಸಿನೊಳಗೆ ಆ ಚಿತ್ರ  ಜೀವಂತ ಹರಿದಾಡಬೇಕು. ಅದಿಲ್ಲದೆ, ಚಿತ್ರ ಚಿತ್ರವಾಗಿಯೇ ಇರುತ್ತವೆ. ನಾವು ನಾವಾಗಿಯೇ ಇರುತ್ತೇವೆ. ಸಂಪೂರ್ಣವಾಗಿ ಒಪ್ಪಿಸಿ, ಭಾವ ಪರವಶವಾಗುವಾಗ ಒಂದು ಗೊತ್ತಿಲ್ಲದ ಸ್ವರ "ಅಹಾ..!" ನಮ್ಮನ್ನೇ ಮರೆತಂತೆ. ಅದು ಒಪ್ಪಿಸಿಕೊಳ್ಳುವಿಕೆ. ಇಂತಹ ನೃತ್ಯ ಮತ್ತು ಚಿತ್ರಗಾರಿಕೆಯ ಕಲೆ ಸಾಹಿತ್ಯಕ್ಕೆ ಬಂದಾಗ ಬದ್ರಿನಾಥರ ಪದ ಬಳಕೆ ಸಲೀಸಾಗಿ ನಮ್ಮನ್ನು " ಮನಸ್ಸಿನ ಇಕ್ಕಳಕ್ಕೆ" ಸಿಕ್ಕಿಸಿದೆ. ಒಂದಷ್ಟು ಅರ್ಥವಾದಂತೆ , ಇನ್ನೊಂದಷ್ಟು ಅರ್ಥವಾಗದಂತೆ, ಹಲವು ಬಣ್ಣಗಳು ಒಂದಕ್ಕೊಂದು ಮಿಲನಗೊಂಡಂತೆ.
ಒಂದು ಅಂದಾಜಿಗೆ ತೆಗೆದುಕೊಂಡಾಗ , ಮೊತ್ತ ಮೊದಲು ಎದುರಾಗುವ ಪ್ರಶ್ನೆ . ಇವರ ಕವಿತೆಗಳು ನಿಜವಾಗಿ ಏಕೆ ಅರ್ಥವಾಗುತ್ತಿಲ್ಲ ? ಹಾಗಂತ ಹಲವು ಓದುಗರು ಅವರನ್ನೇ ಪ್ರಶ್ನೆ ಹಾಕಿದ್ದಾರೆ ಅಂದುಕೊಳ್ಳುತ್ತೇನೆ. " ಫೇಸ್ಬುಕ್‍" ಎಂಬ ಅಂತರ್ಜಾಲ ತಾಣದಲ್ಲಿ ಅಗಾಗ್ಗೆ ಹರಿದಾಡುತ್ತವೆ ಇವರ ಕವಿತೆಗಳು. ಕೇವಲ ಕವಿತೆಗಳು. ಅದಕ್ಕಷ್ಟೇ ಒಗ್ಗಿಸಿಕೊಂಡ ಕವಿತೆಗಳು, "ಕಬ್ಬಿಣದ ಕಡಲೇ ಕಾಯಿ" ಅಂದವರೆಷ್ಟೋ. ಒಂದಿಷ್ಟು ಪರಿಚಯಸ್ಥರು ಮೆಚ್ಚಿ , ಒಂದಷ್ಟು ಬೆನ್ನ ತಟ್ಟುವ ಪದಗಳು ಬಿಟ್ಟರೆ, ಈ ಕವಿತೆಗಳಿಗೆ ಸಿಕ್ಕಿದ್ದು ಕವಡೆ ಕಾಸಿನ ಮುಖಬೆಲೆಗಳು. ಅಷ್ಟರಲ್ಲೇ ತೃಪ್ತಿ ಹೊಂದುವ ಈ ಕವಿ, ಇನ್ನೊಂದು ಭಾವ ಸಂಕಲನಕ್ಕೆ ಲಯ ಹುಡುಕುತ್ತಾರೆ. ನಿಜ ಕವಿತೆಗೆ ಇಷ್ಟು ಸಾಕು ಅಂದುಕೊಳ್ಳುತ್ತೇನೆ.  ನಿಜವಾದ ಆಳಕ್ಕೆ ಹೋದಾಗ ಗೊತ್ತಾಗಿದ್ದು, ಅಲ್ಲಿರುವುದು ಓಭಿರಾಯನ ಹೊಕ್ಕಳ ಬಳ್ಳಿಯಲಿ ಸಿಗಿದಾಡುವ ಮನುಷ್ಯಾವಸ್ಥೆಯ ಪ್ರಸಕ್ತ  ಚಿತ್ರಗಳು. ಈ ಫ್ಯಾಷನ್ ಶೋ ಬದುಕಿನಲ್ಲಿ ಕಲಬೆರಕೆ ಬಣ್ಣ ಹಚ್ಚಿದ ಸಮಾಜದ ಬದುಕುಗಳು ನಾಲ್ಕಾರು ದೌರ್ಬಲ್ಯಕ್ಕೆ ಹಲ್ಲುಗಿಂಜಿ ಹರಾಜಾಗುತ್ತಿವೆ. ಈ ಕವಿತೆ " ಸಂಧ್ಯಾ ರಾಗ " ಓದಿ ನೋಡಿ.
ಹೊರಟು ನಿಂತಿರೇ ದೊರೆ..
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ !
-  ಕವಿತೆ ಏಕೆ ಇಷ್ಟೊಂದು ಕೈ ಮುಗಿಯುತ್ತಿದೆ  ಅಂತ ಪ್ರಶ್ನೆ ಬಂತು. ವಿದಾಯದ ಆ ಒಂದು ಕ್ಷಣ ಒಂದೇ ಮಾತಿನಲ್ಲಿ  ಮತ್ತೆ ಮತ್ತೆ  ತಿರುಗಿಸುವಷ್ಟು ಭಾವಗಳು ಸುರುಳಿಗಟ್ಟಿವೆ ಇಲ್ಲಿ. ಮತ್ತೆ ಬರಲಾಗದ ಜಗತ್ತನ್ನು ಸೃಷ್ಟಿಸಿದ ಪರಿಗೆ ಅಚ್ಚರಿಗೊಂಡಿದ್ದೇನೆ. ಮಾತುಗಳಲ್ಲಿ ಹೇಳಲಾಗದೆ ಕೊರಗಿದವರ ಧ್ವನಿ ಇಲ್ಲಿದೆ. ಅದು ಸ್ಪಷ್ಟವಾಗಿ ವಿವರಿಸುತ್ತಿದೆ.  ತಿರುಗಿ ಬಾರದವರ ಬಗ್ಗೆ ಹೇಳಲಾಗದ ಮಾತುಗಳಿಗೆ ಕಣ್ಣೀರು ಧ್ವನಿಯಾಗಬಹುದು. ಅಲ್ಲಿ ಮಾತುಗಳಿಗೆ ಸ್ವರ ಸೇರುವುದೇ ಇಲ್ಲ. ಅಂತರಾಳದ ಮೌನದ ಹರಳುಗಳನ್ನು ಪದಗಳಲ್ಲಿ ಸಮರ್ಥವಾಗಿ ಹರವಿ ಬಿಡಲಾಗಿದೆ. ಇದೇ ಕವಿತೆಯಲ್ಲಿ "ಸಾವಿರ ಬೇಸಿಗೆಯಲಿ ತಂಪಾಗಿ ಇದ್ದೇನು ದೊರೆಯೇ"  ಅನ್ನುವಾಗ ಮಂಜಿಗಿಂತಲೂ ತಂಪಾಗಿದೆ ಈ ನೆನಪಿನ ಮಾತು ಅನ್ನಿಸಿತು. ವಿದಾಯದ ಆ ಕ್ಷಣಕೆ ಒತ್ತರಿಸಿ ಬರುವ ಮೌನಗಳು ಹೆಪ್ಪುಗಟ್ಟುತ್ತಿವೆ.
ಒಂದೇ ಗುಕ್ಕಿನಲ್ಲಿ ಸೆರೆ ಹಿಡಿಯುವ ಪದಾರ್ಥಗಳು ಇವರ ಕವಿತೆಗಳಲ್ಲಿ ದೊರೆಯುವುದೇ ಇಲ್ಲ. ಪ್ರತಿಮೆಗಳಲ್ಲಿ ಸಿಂಗರಿಸಿದ ಪದಗಳು ಗಮನ ಸೆಳೆಯಬಹುದು. ಆದರೆ, ಭಾವಕ್ಕೆ ತಕ್ಕಂತೆ ಮತ್ತೆ ಮತ್ತೆ ಕೆದಕಿದಾಗ  ನಿಧಾನವಾಗಿ ಅಲ್ಲಿರುವ ಗಂಟುಗಳು ಬಿಚ್ಚಿಕೊಳ್ಳುವುದನ್ನು ಕಾಣಬಹುದು. ಯಾವತ್ತಿಗೂ ತೂಕಬದ್ಧ ಕವಿತೆಗಳ ಅರ್ಥವಾಗುವಿಕೆ ವಿಧಾನ ಹೀಗೆ. ಅಂತಹ ಅನುಭವಗಳು ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುತ್ತವೆ. ಬ್ಲಾಗಂಗಳ http://badari-poems.blogspot.com ಗೆ  ಸಮಯ ಸಿಕ್ಕಿದಾಗ ಭೇಟಿ ನೀಡುವುದು ಅಂದರೆ, ಕ್ಲಿಷ್ಟ ಪದಗಳ ಲಯಬದ್ಧ ಭಾವ ಸಮಾಧಿ ಅಂತ ಅರ್ಥೈಸಿಕೊಂಡಿದ್ದೆ. 
ಗುಡಿಯೇ ಅಂಗಡಿಯಾದ ಮೇಲೆ ಎಲ್ಲಿದೆ ಬಕುತಿ
ನೋಡಿ ನೋಡಿಯೇ ಅವನೂ ಕಲ್ಲಾಗಿ ಕುಳಿತ !
ಪ್ರಶ್ನೆ ಪತ್ರಿಕೆಯಲೇಕೆ ಹುಡುಕುವಿರಿ
ಉತ್ತರವನ್ನೇ.....!
-"ದೇವರು ದೇವರಂಥವನೇ" ಅನ್ನುವ ಕವಿತೆಯಲ್ಲಿ ದೇವರ ದೌರ್ಬಲ್ಯದ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಹೇಗೆಂದರೆ, ಯಾರಿಗೂ ಮಾತನಾಡಿಸಲಾಗದ ಕಲ್ಲು ದೇವರನ್ನು ಮಾತಿಗಿಳಿಸಿದ ಬಗೆ ಸೂಜಿಗವೆನಿಸುವುದು. ಮನುಷ್ಯನ ಅತ್ಯಂತ ಸೂಕ್ಷ್ಮ ದೌರ್ಬಲ್ಯಗಳಲ್ಲಿ ಭಕ್ತಿ ಕೂಡ ಒಂದು ಅನ್ನುವ ಸಂದೇಶ ಇಲ್ಲಿ ರವಾನೆಯಾಗಿದೆ. ಇದೇ ದೌರ್ಬಲ್ಯಗಳನ್ನು ಉಪಯೋಗಿಸಿ ವ್ಯಾಪಾರಕ್ಕಿಳಿದ ಹಲವರ ಬದುಕನ್ನು ಸಮಾಜಕ್ಕೆ ಅನಾವರಣಗೊಳಿಸಿ ಪ್ರಶ್ನಿಸಲಾಗಿದೆ. ಪರಮ ಪೂಜ್ಯತೆ ಮಂದಿರಗಳು , ಗುಡಿ ಗುಣ್ಣಾಣಗಳು ಪವಿತ್ರತೆಯನ್ನು ಸಾರಿದ ಸ್ಥಳದಲ್ಲೇ ಮೂಗು ಮುಚ್ಚುವ ಘಟನಾವಳಿಗಳ ದಾಖಲೆ ಬಿಚ್ಚುತ್ತಿವೆ. ಈ ಕವಿತೆಯಲ್ಲಿ ಸ್ಪಷ್ಟವಾಗಿ ಸಾರುವ ಸಂದೇಶದಂತೆ , ಇವೆಲ್ಲವನ್ನೂ ಕಂಡ ನಿಜವಾದ ದೇವರು ನಿಜವಾಗಿ ಕಲ್ಲಾಗಿ ಕುಳಿತಿದ್ದಾನೆ ಅನ್ನುತ್ತಾರೆ ಪಲವಳ್ಳಿಯವರು. ದೇವರು ಅನ್ನುವ ಮನುಷ್ಯ ಸೃಷ್ಟಿಯ " ಭಾವ ತೀವ್ರತೆಯೇ" ಒಂದು  ಪ್ರಶ್ನೆ. ಇಂತಹ ಒಂದು ಪ್ರಶ್ನೆಗೆ ಉತ್ತರ ಹುಡುಕುವುದು ಕತ್ತಲಲ್ಲಿ ಕತ್ತಲೆಯನ್ನು ಸಂಯೋಜನೆಗೊಳಿಸಿದಂತೆ ಅನ್ನುವಷ್ಟು ಸತ್ಯ.
" ಜೀ ಹುಜೂರ‍್" ಅಂತ ಒಂದು ಕವಿತೆ ಬರೆದಿದ್ದಾರೆ. ಓದುವಾಗ ನೆನಪಿಗೆ ಬಂದು ಮತ್ತೆ ಮತ್ತೆ ಕೆದಕುವ ಪದ " ಬಕೇಟು ಸಂಸ್ಕೃತಿ".  ನೀವು ಚೆನ್ನಾಗಿ ಬರೆದಿದ್ದೀರಿ ಅಂದರೆ " ಹೊಗಳುತ್ತಾರೆ" ಅಂತ ಸರ್ಟಿಪಿಕೇಟು ಕೊಡುವರೋ ಅನ್ನುವ  ಅನುಮಾನ. ಬಕೇಟು ಸಂಸ್ಕೃತಿ ಅಂದರೆ ಗುಲಾಮ. ಮನುಷ್ಯ ಮನುಷ್ಯನಿಗೆ ಮಾನವೀಯತೆಯನ್ನು ತೊರೆದು ಸ್ವಾರ್ಥಕೆ ಬಲಿಯಾಗುವ ಸಂದರ್ಭ ಎಂಥ ವಿಪರ್ಯಾಸದ ವರ್ತುಲ..!? ದಿ. ಪದ್ಯಾಣ ಗೋಪಾಲಕೃಷ್ಣರು ಇಂತಹ ನಡವಳಿಕೆ ಮನುಷ್ಯರಿಗೆ " ಹಿತ್ತಾಳೆ ದೂರು ಗಂಟೆ" ಅಂತ ನೇರವಾಗಿ ಹೇಳಿದ್ದಾರೆ. " ಜೀ ಹುಜೂರು" ಕವಿತೆ ಬಂದದ್ದು ಇದರ ಇನ್ನೊಂದು ಮುಖ. "ಬಾಸ್‍ ಈಸ್‍ ಅಲ್ವೇಸ್‍ ರೈಟ್‍" ಅನ್ನುವಾಗ ಪರೋಕ್ಷವಾಗಿ ತಿವಿದ ಈ ಜೀ ಹುಜೂರ‍್ ಕವಿತೆ ಹೊಗಳು ಭಟ್ಟರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ. ಹೊಗಳಿಕೆ ಅಂದರೆ ಮೇಲೇರಿಸುವುದು. ಇದನ್ನು ಈ ಜಗತ್ತು ಮೊದಲು ಕಲಿತದ್ದು  ದೇವರನ್ನು ಮತ್ತು ಹೆಣ್ಣನ್ನು ಓಲೈಸಿ. ಯಾವುದೇ ದೇವರ  ಶ್ಲೋಕ, ಭಜನೆ, ಭಕ್ತಿ ಪರವಶ ಸಂಗೀತಗಳು ದೇವರನ್ನು ಹೊಗಳಿಯೇ ಇದೆ. ಏಕೆ ಈ ರೀತಿ ಇದೆ? ಅಂದರೆ, ಹೊಗಳದಿದ್ದರೆ ನಮಗೆ ಸಿಗಬಾರದ್ದು ಸಿಗದು ಅನ್ನುವ ಕಾರಣವನ್ನು ಅಂದಾಜಿಸುತ್ತೇವೆ. ದೇವರು ಅನ್ನುವ ವಿಸ್ಮಯದಲ್ಲಿ ಏನೆಲ್ಲಾ ನ್ಯಾಯಗಳು ತೆರೆದುಕೊಂಡವು,ಎಷ್ಟೆಲ್ಲಾ ಅನ್ಯಾಯಗಳು ಮತ್ತೆ ಮತ್ತೆ ಬೀದಿಗೆ ಬಂದವು. ದೇವರು ಅನ್ನುವ ಮಾತಾಡದ ಅಗೋಚರ ಏನೂ ಅಲ್ಲದ ಶೂನ್ಯದಲ್ಲಿ ಕುಳಿತಿದೆ. ಮನುಷ್ಯ ಮಾತ್ರ ಅದನ್ನು ತನ್ನ ಸ್ವಾರ್ಥಕೆ, ತನಗೆ ಬೇಕಾದಂತೆ, ತನ್ನೊಳಗೆ ವರ್ತುಲ ಸೃಷ್ಟಿಸಿ ಮಂತ್ರ ಪ್ರೋಕ್ಷಣೆ ಮಾಡಿದ. ಅದು ಇಂದಿನ ಜಗತ್ತಿನ ಅನಾವರಣ. ಈ ಹೊಟ್ಟೆ, ಈ ಮೋಹ , ತನಗೋಷ್ಕರ ಹೊರಗೆ ಮಿರ ಮಿರ ಮಿಂಚುವ ಬಟ್ಟೆ ಧರಿಸಿ, ಒಳಗೊಳಗೇ ಬೆತ್ತಲೆ ನಡೆಯುತ್ತಿದ್ದಾನೆ. ಮನುಷ್ಯನಿಗೆ ಆಸೆ ಹೆಚ್ಚು. ಹಾಗಾಗಿ ಬುದ್ಧನಂತಹ ಹತ್ತು ಜನರು ಬಂದರೂ ಈ ದುಃಖ್ಖಕ್ಕೆ ಮರುಗಿ ಇಲ್ಲವಾಗುತ್ತಾರೆ. ಬದ್ರಿನಾಥರ ಕವಿತೆ ಇಷ್ಟರವರೆಗೆ ವಿಸ್ತಾರವಾಗುವುದು.
ಇದರ ಪರ್ಯಾಯವಾಗಿ ಉದ್ಭವಿಸಿದೆ  ಈ" ಬಕೇಟು ಸಂಸ್ಕೃತಿ". ಮನುಷ್ಯನನ್ನು ದೇವರನ್ನಾಗಿಸಿದ ಪರಿ.  ಕಚೇರಿಯ ಆಡಳಿತ ವ್ಯವಸ್ಥೆಗಳಲ್ಲಿ, ರಾಜಕೀಯದಲ್ಲಿ  ಇದನ್ನು ಹೆಚ್ಚಾಗಿ ಕಾಣುತ್ತೇವೆ. ಈ ಅಂತರ್ಜಾಲ ಯುಗದಲ್ಲಿ  ಈಗ ಎಲ್ಲಾ ಕ್ಷೇತ್ರದಲ್ಲೂ  ಇದಕ್ಕೆಂದೇ ಕೆಲವು ಮಂದಿಯನ್ನು ಸೃಷ್ಟಿಸಲಾಗುತ್ತಿದೆ. ಅದು "ಫೇಸ್ಬುಕ್‍" ಎಂಬ ತನ್ನಿಚ್ಚೆಯ ತಾಣವನ್ನೂ ಬಿಟ್ಟಿಲ್ಲ. ಸತ್ಯವನ್ನು ಮರೆಮಾಚುವ  ಕೈಲಾಗದ ಮನುಷ್ಯ ಇದನ್ನು ಮಾಡಿಯೇ ಸಿಗಬೇಕಾದದ್ದನ್ನು ದಕ್ಕಿಸುತ್ತಾನೆ. ಅದರಲ್ಲೂ " ಹೆಣ್ಣು" ಈ ಹೊಗಳಿಕೆಗೆ ಮೊದಲು ಬಾಧ್ಯಸ್ಥಳಾಗುವುದು. ಕರಗುವುದು  ಹೆಣ್ಣಿನ ಮೊದಲ ದೌರ್ಬಲ್ಯ. ಬದ್ರಿನಾಥರ ಕವಿತೆ " ಜೀ ಹುಜೂರ್" ಇದರ ಸ್ಪಷ್ಟ ಚಿತ್ರಣವನ್ನು ನೀಡುವುದು.  
ಗಂಡು ಮತ್ತು ಹೆಣ್ಣು ಎಂಬ ಈ ಎರಡು ವಿಭಿನ್ನ ಮೋಹಗಳ ಒಂದಕ್ಕೊಂದು ಅಂಟಿಕೊಂಡೇ ಸಾಗುವ ಜಗತ್ತಿನಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಆಸಕ್ತಿಗಳು, ಕುತೂಹಲಗಳು, ಆಕರ್ಷಣೆಗಳು. ಇವಿಷ್ಟೇ ಜಗತ್ತನ್ನು ಮುನ್ನೆಡೆಸುತ್ತಿದೆ ನೋಡಿ. ಅದರಲ್ಲೇ ಜಗತ್ತು ತುಂಬಿ ಹೋಗುವುದು. ಇಬ್ಬರಿಗೂ ಇಬ್ಬರ ಬಗೆಗಿನ ಚಿಂತನೆಗಳು, ಆಲೋಚನೆಗಳು ಕೆಲವು ಕೌತುಕಗಳನ್ನು ಸೃಷ್ಟಿಸುತ್ತಿವೆ. ಗಂಡು ಕಾಣುವ ಕನಸುಗಳಷ್ಟೇ ವಿಶಾಲವಾಗಿ ಹೆಣ್ಣು ಕೂಡ ಹೊಂದಿರುತ್ತಾಳೆ. ಅವರಿಬ್ಬರಿಗೂ ಇರುವ ಹೃದಯ ಮಿಡಿತಗಳು, ಮನೋವೇಗಗಳು, ಅತಿರೇಕಗಳು ಎಲ್ಲವೂ ಒಂದೇ. ಇಂತಹ ಹಲವು ವಿಶೇಷಣಗಳು ಪಲವಳ್ಳಿಯವರ ಕವಿತೆಗಳಲ್ಲಿ ಢಾಳಾಗಿ ಹುಟ್ಟಿಕೊಳ್ಳುತ್ತವೆ. ತಮಗೇ ತಾವೇ ತರ್ಕಕ್ಕೆ ಸಿಕ್ಕಿಸಿ, ಒಂದೇ ಸಾಲಿನಲ್ಲಿ  ಭಾವಗಳು ಒಂದರಿಂದ ಇನ್ನೊಂದಕ್ಕೆ ಪದಗಳಲ್ಲಿ ಘರ್ಶಿಸುತ್ತವೆ. ಕೆಲವೊಮ್ಮೆ ಗರ್ಜಿಸುತ್ತಿವೆ. ಹೊಗಳಿಕೆಗೆ ಉಬ್ಬಿಸುವುದಿಲ್ಲ, ತೆಗೆಳಿದರೆ ಮುಖ ಗಂಟಿಕ್ಕುವುದೂ ಇಲ್ಲ. ಒಟ್ಟಾರೆ ಪದಗಳಲ್ಲಿ ಮೈ ತಟ್ಟಿಸುವುದು ಇವರ ಕವಿತೆಗಳಿಗಂಟಿದ ಸೂಕ್ಷ್ಮ ಗುಣ. ದಿ. ಪಿ. ಲಂಕೇಶರ ಮಾತುಗಳು ನೆನಪಿಗೆ ಬರುತ್ತವೆ. ಬೆಂಗಳೂರಿನ " ಸಂಚಯ" ಸಾಹಿತ್ಯ ಮಾಸಿಕದ ಡಿ. ಪ್ರಹ್ಲಾದವರು ಒಂದು ಬಾರಿ ಮಾತಿಗಿಳಿಸಿದಾಗ ಹೇಳಿದ್ದಾರೆ " ಹೊಗಳಿಕೆ ಅಂದರೆ ನನಗೆ ಅಲರ್ಜಿ. ಯಾರಾದರೂ ಹೊಗಳುವಾಗ , ಅಲ್ಲಿ ಹಲವು ಅನುಮಾನಗಳು ಕಂಡು ಬರುತ್ತವೆ. ಅಂದರೆ, ಹೊಗಳುವ ವ್ಯಕ್ತಿ, ನಮ್ಮಲ್ಲಿರುವ ನಿಜವಾದ ನಿಜತ್ವವನ್ನು ಕುಗ್ಗಿಸುತ್ತಾನೆ" ಅನ್ನೋದು ಲಂಕೇಶರ ಮಾತುಗಳು. ನಿಜವನ್ನೇ ಹೇಳಿ, ಅದು ಒಳ್ಳೆಯದಿರಬಹುದು, ಕಲಿಯುವಂತಿರಬಹುದು ಅಂದಿದ್ದಾರೆ. ಹೊಗಳಿಕೆ ಅಂದರೆ ಓಲೈಸುವ ಕುಗ್ಗಿಸುವ ಇನ್ನೊಂದು ಮಾರ್ಗ. ಇಂದಿನ ರಾಜಾಧಿರಾಜ ರಾಜಕಾರಣಿಗೆಳಿಗೆ ಇವಿಲ್ಲದಿದ್ದರೆ  ಓಟೇ ಸಿಗುವುದಿಲ್ಲ. ಅದು ಮತದಾರರ ದೌರ್ಬಲ್ಯ.  !
ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸ್ವಂತಿಕೆ ಅನ್ನೋದು ಬೇಕು. ಅದಿಲ್ಲದೆ ಅನುಸರಿಸುವ ಮಾರ್ಗದಿಂದ ಹೊಸತನವನ್ನು ಹುಡುಕುವುದು ಕಷ್ಟ ಸಾಧ್ಯ. ಈ ಜನರ ಸಂತೆಯಲ್ಲಿ ಒಬ್ಬ ವ್ಯಕ್ತಿ ಹೇಗೆ ವಿಭಿನ್ನವಾಗಿ ಎದ್ದು ಕಾಣುತ್ತಾನೆ ಅಂತ ಪ್ರಶ್ನೆ. "ಗಿಂಡಿ ಮಾಣಿ" ಅನ್ನುವ ಕವಿತೆಯಲ್ಲಿ ಬದ್ರಿನಾಥರು ನೇರವಾಗಿ ಹೇಳುವ ಮಾತಿದು. ಅನುಸರಿಸುವುದೇ ಆದರೆ, ಬದುಕುವ ರೀತಿಯಲ್ಲಿ ಸೃಜನಶೀಲತೆ ಕಂಡುಕೊಳ್ಳುವುದು ಹೇಗೆ ಮತ್ತು ಯಾಕೆ?
ಪ್ರತಿಫಲನವೇ ಬದುಕೇ...ಸ್ವಂತಿಕೆ ಏಕಿಲ್ಲ ಜನಕೆ?
ಇಲ್ಲಿ ಮೊಗೆದ ನೀರು ...ಮತ್ತೆಲ್ಲೋ ಒಗೆವ ಕಲೆ
ಕಲಿತ ಬಿತ್ತಾಸುರರ ಲೀಲೆ,
-ತೋಚಿದಂತೆ ಬದುಕುವುದಕ್ಕೂ, ನಮಗೆ ನಮ್ಮಲ್ಲೇ ನಿರ್ಮಾಣಗೊಂಡ  ವರ್ತುಲಕ್ಕೆ ಒಗ್ಗಿಸಿಕೊಂಡು ಬದುಕುವುದಕ್ಕೂ ವ್ಯತ್ಯಾಸವಿದೆ. ಎಲ್ಲಾ ಬೇಕುಗಳ ನಡುವೆ ಹೊಯ್ದಾಡಿ ಎಲ್ಲಿಂದ ಎಲ್ಲಿಗೋ  ಕೊಂಡೊಯ್ಯುವುದು ಬದುಕು. ತೃಪ್ತಿ ಅನ್ನುವ ಗೋಡೆಗಳ ನಡುವೆ ಮೈ ಪರಚಿಕೊಳ್ಳುತ್ತೇವೆ. ಇಲ್ಲವೆಂದಾಗ ಇನ್ನೊಂದು ತೃಪಿಗಳಿಗೆ ಆಶಾಭಾವನೆಗಳನ್ನು ಮೈಗೂಡಿಸಿಕೊಂಡಿರುವ ಮನುಷ್ಯರು ನಾಳೆಗಳಿಗೆ ದಿನಗಳನ್ನು  ಕಾಯುತ್ತಾರೆ. ಇಲ್ಲಿ ಸ್ವಂತಿಕೆ ಬೇಕು. ಅವರಿವರು ಅನುಸರಿಸಿದಂತೆ ಬದುಕು ಪಾಠ ಕಲಿಸಿದ ನಂತರ ತನ್ನದೇ ಬದುಕು ಪರಿಚಯವನ್ನು  ಕುಟುಂಬ, ಸಮಾಜಕ್ಕೆ ಕೊಡುವುದು ಧರ್ಮ ಅಂತ ಈ ಕವಿತೆಯ ಒಟ್ಟಾಂಶ ಅಡಕವಾಗುವುದು.
ಬಿಗುಗೊಂಡ ಮನಸ್ಸನ್ನು ಒಂದೇ ಪದಗಳ ಓದಿಗೆ ಸಡಿಲಗೊಳಿಸುವ ಪದ ಬಳಕೆ ಕಂಡು ಬರುವುದು. ಯಾವುದೇ ಬರಹಗಾರನ ಆಲೋಚನೆಗಳನ್ನು ಸ್ವೀಕರಿಸುವುದು ಅಂದರೆ ಅವನ ಹೆಜ್ಜೆಗಳ ಪರಿಚಯ ಮಾಡಿಕೊಳ್ಳುವುದು ಎಂದರ್ಥ. ಓದುವ ಮನಸ್ಸು ಹೊಸತನವನ್ನು ಬಯಸುವುದಾದರೆ ಬರಹಗಳಲ್ಲಿ  ಅಂತಹ ಸಂದರ್ಭಗಳನ್ನು ಪಡೆದುಕೊಳ್ಳಬಹುದು. ಎಳೆ ಎಳೆಯಾಗಿ ಅವನ ಪದಗಳ ಎದೆಗಿಳಿದು ಓಡಾಡುವುದು. "ಕಿಟಕಿಯಾಚೆ ಮಳೆ" ಕವಿತೆಯಲ್ಲಿ ಈ  ಮಳೆಗೆ ತಣ್ಣಗಾದ ಮನಸ್ಸಿನ  ಹೊಸ ಅನಾವರಣ ಗೋಚರವಾಗುತ್ತಿದೆ.
ಇರುಳೆಲ್ಲ ಸುರಿದ ಮಳೆಗೆ...ಇವಳ ನರ ನಾಡಿಗಳೆಲ್ಲ ಮುದ್ದೆ ಮುದ್ದೆ...!
ಈ ಮಳೆಯ ಇಷ್ಟೊಂದು ತಂಪುಗಳು ನರ ನರಗಳನ್ನು ಹೆಪ್ಪುಗಟ್ಟಿಸಿದಾಗ, ಬೆಳಗ್ಗಿನ ಸೂರ್ಯನ ಬಿಸಿಗೆ ಕಾದು ಕುಳಿತುಕೊಳ್ಳುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಬದುಕು ಇಷ್ಟರಲ್ಲೇ ತೆರೆದುಕೊಳ್ಳುವುದು ಮತ್ತು ಅರ್ಥವಾಗುತ್ತಿದೆ. ಗಂಡು ಮತ್ತು ಹೆಣ್ಣಿನಿಂದಲೇ ಸಾಗುತ್ತಿರುವ ಜಗತ್ತಿನ ಜೀವ ಸಂಚಲನಕೆ ಇಲ್ಲಿನ ಸೂಕ್ಷ್ಮ ಹೆಜ್ಜೆಗಳು ಬೆಳಕು. ಯಾವುದೇ ಒತ್ತಡಗಳು  ಅಡ್ಡ ಬರುತ್ತಿಲ್ಲ. ತನ್ನನ್ನೇ ತಾನು ಒಪ್ಪಿಸಿಕೊಳ್ಳುವ ಬಗೆ ಹೀಗೆ "ತಾಲೀಮು" ಕವಿತೆಯಲಿ "ಎತ್ತಿಕೋ ಉಳಿ,ಕೆತ್ತು ಈ ಕಗ್ಗಲ್ಲು ,ದೇವರಾಗದಿದ್ದರೂ  ದ್ವಾರಪಾಲಕನಾಗಲಿ..." ಅನ್ನುವಾಗ ಕವಿಯ ಮನಸ್ಸಿನ ವಿಶಾಲತೆಯನ್ನು ತೆರೆಯುತ್ತಿದೆ. ಗುರುವಿನ ಬಗೆಗಿನ  ಹುಡುಕಾಟ , ಅದೇ ರೀತಿ ಪರಿಪೂರ್ಣತೆಯಲ್ಲಿಯೂ ಸ್ವಾಮಿನಿಷ್ಠೆಯನ್ನು ಪ್ರತಿಬಿಂಭಿಸುವ ಈ ಕವಿತೆಯ ಸಾಲಿನಲ್ಲಿ  ಯಾವುದಕ್ಕೂ "ನೀ ಕೊಡುವ ರಂಗ ತಾಲೀಮಿನಲಿ ಛಾಟೀ ಏಟಾದರೂ ಸೈ! ತಾಳಿಕೊಂಡೇನು..." ಅನ್ನುವ ಪರಾಕಾಷ್ಠತೆ ಮನಸ್ಸಿನಲ್ಲಿ ಒಂದಷ್ಟು ಗೀಚುವುದು. ಸಲೀಸಾಗಿ ಸಿಗುವ ಯಾವುದೇ ಕಾರ್ಯದಲ್ಲಿ ಆನಂದ ಸಿಗುವುದು ಅಲ್ಪ. ದೀರ್ಘ ಕಾಲದ ನಿರೀಕ್ಷೆಯಲ್ಲಿ  ಅಥವಾ ಅದರ  ಹುಡುಕಾಟದಲ್ಲಿ  ಹೊರಟವನಿಗೆ ಪ್ರತಿಫಲ ಸಿಗುವುದೆಂದರೆ ಅದರ ಆನಂದ ಬದುಕಿನಲ್ಲಿ ಮರೆಯಾಲಾಗದ ಕ್ಷಣಗಳು. ಪಲವಳ್ಳಿಯವರ ಹಲವು ಕವಿತೆಗಳು ಹೀಗೆ ಹುಡುಕಾಟದಲ್ಲಿ ಮರೆತು ಹೋದ ದಿನಗಳಿಗೆ ಸಿಕ್ಕಿದ ಅನಂತ ತಾಳ್ಮೆಗಳನ್ನು ಪರಿಚಯಿಸುತ್ತವೆ. ಹೇಗೆಂದರೆ "ಬದುಕಿನ ಓಟ" ಕವಿತೆಯಲ್ಲಿ  ಹುಚ್ಚು ಕುದುರೆಯ ಓಟವೀ ಬದುಕು..ಲಗಾಮು ಕಳೆದಿದೆ ಪಯಣ ಭೀಭಿತ್ಸ.. ಅಂತ ಹೇಳುತ್ತಾ ಓಡಿದ  ಭಾವಗಳುಅಹಂಕಾರದ ಪೊರೆ ಕಳಚಿದ ದಾಖಲೆ ಲಭ್ಯವಾಗುವುದು.  ಮತ್ತಷ್ಟು ಅನುಭವಕ್ಕೆ ತಿಕ್ಕಿಸಿಕೊಂಡ ಕವಿ ಅದ್ಭುತವಾದ ಸಮಾಧಿ ಮಾತಿಗೆ ಶರಣಾಗುತ್ತಾರೆ.
ಹೂವ ಹಾಸಿಗೆ ಎಂದೇನು ಹಿಗ್ಗದಿರು
ಕೆಳಗೆ ನಕ್ಕೀತು ವಿಷದ ಮುಳ್ಳು!
-ಇದು ಮೂರ್ತತೆ ಬದುಕಿನ  ಚಿಂತನೆಗಳು. ಹೆಜ್ಜೆ ಹೆಜ್ಜೆಗೆ  ಎಚ್ಚರ ತಪ್ಪದ ನಡಿಗೆ ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುವುದು. ಕೆಲವೊಮ್ಮೆ ಹರಿದಾಡುವಾಗ ನೇರವಾಗಿ, ಮಗದೊಮ್ಮೆ ಅಲ್ಲಿ ಸರಿದು, ಇಲ್ಲಿಗೆ ಬರುವಂತೆ ನಡಿಗೆಯಲಿ ತೊಡರುವಂತೆ ಕಾಣಿಸುವುದು.ಏಕೆಂದರೆ , ಬಿಳಿ ಹಾಳೆಯಲ್ಲಿ ದೃಷ್ಠಿಗೆಂದೇ ಅಮ್ಮ ಮಗುವಿನ ಗಲ್ಲಕೆ ಕಪ್ಪಿಟ್ಟಂತೆ. ಆಟವಾಡುತ್ತಲೇ ಕೆಲ ಸಮಯದಲ್ಲಿ ಮರೆಯಾಗುವುದು. ಅದು ಬೇಕು. ಕೆಲವಷ್ಟು ಪೌಡರು ಪರಿಮಳ, ಕಾಲ ಗೆಜ್ಜೆಯ ಸಪ್ಪಳ, ಸ್ವರಗಳ ನಿನಾದ, ಬಿಗುವಾದಾಗ  ಅಡುಗೆ ಕೋಣೆಯಲಿ ಪಾತ್ರೆಗಳನ್ನು ಎತ್ತಿ ಎತ್ತಿ ಕುಕ್ಕುವ ಕೈಬಳೆ ನಾದ, ಮುಖ ಸಿಂಡರಿಸಿ ಸಿಂಬಳ ಸುರಿಸುವ ಸಿಡುಕುಗಳು  ಓದುತ್ತಿದ್ದಂತೆ ಓದುಗನಿಗೆ ಇನ್ನೊಂದು ಭಾವಾವೇಷವನ್ನು ತೆರೆದುಕೊಳ್ಳುವುದು. ಇದು ಪ್ರತೀ ಬರಹಗಾರನ ಬರಹದಲ್ಲಿ ಬೇಕು. ಏಕೆಂದರೆ ಬರಹಗಾರನಂತೆ ಓದುಗನೂ ನಿಜ ಬದುಕಿನ ಮನುಷ್ಯನಾಗಬೇಕು.

ಗುರುವಾರ, ಏಪ್ರಿಲ್ 19, 2012

ಬೊಗಸೆ ಕನಸುಗಳು..!


ಚಿತ್ರ ಕೃಪೆ: ಗೂಗಲ್

ದಿನ ದಿನಕ್ಕೊಂದಷ್ಟು
ಕನಸುಗಳ ಬಾಚಿದ್ದೇನೆ
ಬೊಗಸೆಯೊಳಗೆ !

ನಿಲ್ಲಲಾರದ ಕೆಲವಷ್ಟು
ಪ್ರಾಣ ಬಿಡುತ್ತಿವೆ
ಚೆಲ್ಲಿ ಕಣ್ಣೆದುರೇ..!
ಒಂದಷ್ಟು ಬಾಯಾರಿ
ಒಣಗಿ ಬಿಸಿಲಿಗೆ..!
ಉಳಿದಷ್ಟು ಬೆರಳ ಸಂದಿಗೆ
ಕರಗಿ ಮಳೆಗೆ
ನದಿಯಾಗಿ
ಈಜಲಾಗದ ಕಡಲಿಗೆ !

ಕತ್ತಲಾಗುತ್ತಿದೆ....
ಬೊಗಸೆ ಕನಸುಗಳ
ಹುಡುಕಿ ಕುರುಡಾಗಿ  !
ಅವಶೇಷಗಳ ಲಾಲಿಸಿ
ಬೆಳಗಾಗಿದ್ದೇನೆ  !
ಅಂಗಳ ತುಂಬಾ ತುಂಬಿಸಿ
ಹುಟ್ಟಿವೆ ಜೀವಗಳು ಇನ್ನಷ್ಟು
ಮತ್ತಷ್ಟು ಬಾಚಿದ್ದೇನೆ !

ಬೊಗಸೆ ಕಿವಿಯೊಳಗೇ ..
ಉಸುರುತ್ತೇನೆ ....
 ಮತ್ತೇ ಹುಟ್ಟಿ ಬನ್ನಿ ಕನಸುಗಳೆ..!
ನಿಮ್ಮ ಅವಶೇಷಕೆ ಮಾತಾಗಿ
ಬರಲಿ ಜೀವಸೆಲೆ..!
-----------------------------------------------------------------------------------------------------
-ರವಿ ಮೂರ್ನಾಡು 

ಮಂಗಳವಾರ, ಏಪ್ರಿಲ್ 17, 2012

ಅವಳಿಗೊಂದಿಷ್ಟು ನಾಳೆಗಳು..!


ನಟ್ಟ ನಡುರಾತ್ರಿಯಲಿ
ಬೆಚ್ಚಿ ಬಿದ್ದಿದ್ದಾಳೆ ಹುಡುಗಿ
ಶೂನ್ಯಕೆ ಲಗ್ಗೆಯಿಟ್ಟ
ಭೀಕರ ಕನಸು ...!

ಮಂಚವನಪ್ಪಿದ ರಾತ್ರಿ
ಮತ್ತೆ ಮತ್ತೆ ಖಾತ್ರಿಯಾಗುತ್ತಿದೆ
ಒಂಟಿ ... ಒಂಟಿ... ಒಂಟಿ...!
ಸಾಂತ್ವನದ ಮಾತೆರಡು
ಬೆನ್ನ ತೀಡುತ್ತಿವೆ ..

ಅವಳಿಗೊಂದಿಷ್ಟು ಮಾತು...
ಸೌಂದರ್ಯ ಮೆಚ್ಚಿದವರು
ಸೌಮ್ಯತೆಯ ನೆಚ್ಚಿದವರು
ಮೌನಕೆ ಗದ್ದಲವೆದ್ದರು  !
ನೋವೇನೆಂದು ಅರಿಯಲಿಲ್ಲ

ಕಿಲಕಿಲ ನಕ್ಕ ಗೆಳತಿಯರು
ವಕ್ರದೃಷ್ಟಿಯ ಕಣ್ಣುಗಳು
ಅನುಮಾನಿಸಿ ಪಿಸುಗುಟ್ಟಿದರು !
ಕಣ್ಣೀರು ಏಕೆಂದು ಕೇಳುವುದಿಲ್ಲ

ಅಬ್ಬಾ .. ಬೆರಳ ಸ್ಪರ್ಶವೇ !
ಝಲ್ಲೆನಿಸಿದ ಸ್ವಾರ್ಥಕೆ
ನರನಾಡಿ ಪಲ್ಲಟಗಳು !
ನೆನಪು ತುಣುಕಿನೊಳಗೆ
ನೀನು ಮೆಚ್ಚಿದ ಹುಡುಗ
ಕನಸು ಏನೆಂದು ಅರ್ಥೈಸುವುದಿಲ್ಲ...!

ಗಲ್ಲವೆತ್ತುತ್ತೇನೆ ಹುಡುಗಿ...!
ಈ ಮಂದಿ ಕಿವುಡರಾಗಿದ್ದಾರೆ
ರೋಧನ ಕೇಳುವುದಿಲ್ಲ...!
ಕಣ್ಣಿದ್ದು ಕುರುಡರಾಗಿದ್ದಾರೆ
ಕಣ್ಣೀರು ಕಾಣುವುದಿಲ್ಲ  !
ಈ ಜಗತ್ತಿನ ಜನ ಹುಚ್ಚರಾಗಿದ್ದಾರೆ
ನೀನು ಯಾರೆಂದು ಗೊತ್ತಾಗುವುದಿಲ್ಲ...!

ಕ್ಷಮಿಸಿ ಬಿಡು.. ಮಾಯೇ...
ನಿನ್ನನ್ನು ನೀನೇ ಸಂತೈಸಿಕೋ
ನಾಳೆಗಳು ಸುಂದರವಾಗುತ್ತವೆ !
ನಿನ್ನನ್ನು ನೀನೇ ಅರ್ಥೈಸಿಕೋ
ನಾಳೆಗಳು ಅರ್ಥವಾಗುತ್ತವೆ
ನಾಳೆಗಳು ಹಿತವಾಗುತ್ತವೆ. !
-----------------------------------------------------------------------------------------------------------------
-ರವಿ ಮೂರ್ನಾಡು

ಭಾನುವಾರ, ಏಪ್ರಿಲ್ 8, 2012

ಗಡಿಯಾರ

Photo by : Google

ಗೋಡೆ ತಬ್ಬಿದ ಗಡಿಯಾರ
ಅದೆಷ್ಟು ತಾಳ್ಮೆಗೆ ಬಿದ್ದಿದೆ ?
ಇರುಳಲ್ಲೂ ಹಗಲಂತೆ
ದುಡಿವುದ ಕಲಿಸಿದೆ !
ಕೀಲಿ ಕೊಡುವ ದೇವ
ನಡೆಗೆ ಚಕ್ರವನ್ನಿಟ್ಟು
ಮುಳ್ಳನ್ನಷ್ಟೇ ತಿರುಗಿಸುವ ಎದೆಗೆ
ಲಯಬದ್ಧ ಬಡಿತ, ನಾಡಿ ಮಿಡಿತ !
ಟಿಕ್ ಟಿಕ್ ಟಿಕ್...!

ತಿರುವಿ ನೆನಪುಗಳ ತಡವಿ
ಕಣ್ಣಾಲಿಯ ಎತ್ತಿ ನೆಗೆವುದು
ರೆಪ್ಪೆ ಮುಚ್ಚಿ, ಇಲ್ಲಿ ಸಿಗಿದು
ಅದೋ ಅಲ್ಲಿ  ಓಡುತ್ತಿದೆ ಗುರಿ
ಭೂಮಿ ಹುಟ್ಟಿನಿಂದ ಬಿದ್ದ ಘಳಿಗೆ !
ಬಿಂದು ಬಿಂದುಗಳ ತಬ್ಬಿ
ಜಗದ ನೆಲಕೆ ಅಂಡಲೆದು
ಕ್ಷಣದ ಮುಳ್ಳು ದಿನಗಳ ಎಳೆವುದು !

ಇಷ್ಟಿಷ್ಟೇ ಜಾಗ ಬದಲಿಸುವುದು
ನಡೆ ನಡೆಯ ಬೆಳಕಿನೆಡೆಗೆ
ಕಿವಿ ಹಿಂಡಿ ಓಡುವ ಘಳಿಗೆಯ 
ಅರಿವಿಗೆದ್ದು ಕದಲಿ ನಿಮಿಷ ಮುಳ್ಳು  !
ಜಗದ ಕೇಂದ್ರ ಪಲ್ಲಟಕೆ
ನಿಮಿಷ ಘಳಿಗೆ ನಿಲುವುದು
ಕಾಯಕವೆಲ್ಲ ತಿಂಗಳು ತುಂಬುವುದು !

ನಿಗೂಢತೆಯ ಬಿಚ್ಚಿ
ತಾಳ್ಮೆಗೆ ಸರಿಯುತ್ತಿದೆ ಕಾಲ !
ಘಳಿಗೆ ಅರಿವಿಗೂ ಮೀರಿ
ನಿಮಿಷ ಜಾಗಕ್ಕಷ್ಟೇ ತೆವಳಿ
ಸಾವಕಾಶಕ್ಕೆ ತೆರಳುವುದು.....
ಅಹಾ  ! ಎಲ್ಲಾ ಎಲ್ಲಗಳ ಸೂತ್ರಕೆ
ಘಂಟೆಯೀಗ ವರ್ಷವಾಗುವುದು !

ಎಂಥ ಮಗುತನದ ಘಳಿಗೆ..!
ನಿಮಿಷದಲ್ಲೇ ಬದುಕೋಡಿ
ಸುಕ್ಕು ತೊಡೆಗಳಿಗೆ ಬಲವಿಟ್ಟು
ಮೇಲೇಳಲೆತ್ನಿಸುವುದು ಘಂಟೆ !

ಅವುಗಳೆಲ್ಲಾ...  ಸಮನಾಂತರಕೆ
ಮುಖಾಮುಖಿ ಅಪ್ಪಿದ 
ಆ ಒಂದು ನಿಶ್ಯಬ್ಧದ ಘಳಿಗೆ....
ಕರೆಗಂಟೆ ಶೂನ್ಯಕೆ ಜಾರುವುದು !
ಸುತ್ತ  ಧುಮ್ಮಿಕ್ಕಿ ದುಃಖ್ಖ
ನಿಶ್ಚಲ ಗೋಡೆ ಬಡಿದು
ತಿರುಗಿ ಕಿವಿ ಕಿವುಡಾಗುವುದು
ಗಡಿಯಾರವೀಗ ಸಂಪೂರ್ಣ !
-------------------------------------------------------------------------
-ರವಿ ಮೂರ್ನಾಡು



Gulf Kannadiga - a reflection of Karnataka in the Gulf
Link: http://www.gulfkannadiga.com/news-63885.html