ಬುಧವಾರ, ಅಕ್ಟೋಬರ್ 31, 2012

ಆಫ್ರೀಕಾದ ಕ್ಯಾಮರೂನಿನಲ್ಲಿ ಕನ್ನಡದ ಭಾವುಟ ಹಾರುತ್ತಿತ್ತು !



ಕನ್ನಡದ ಭಾವುಟ ಹಾರುತ್ತಿತ್ತು
ಮೇಲೆರೆಡು ಕೋಗಿಲೆ ಹಾಡುತ್ತಿತ್ತು
ಜಯ ಕನ್ನಡ ಮಾತೆ
ವಾತ್ಯಲ್ಯ ದಾತೆ
ಕೆಳಗದರ ನೆರಳು ಕುಣಿಯುತ್ತಿತ್ತು !

ಮಗುವೊಂದು ಕತ್ತೆತ್ತಿ ನೋಡುತ್ತಿತ್ತು
ಅ ಆ...ಇ ಈ.. ಹುಡುಕಿ
ಕನ್ನಡದ ಬಳಪದಲಿ ಬರೆಯುತ್ತಿತ್ತು
ಕನಸೊಂದು ಭಾವುಟದಿ ಮೆರೆಯುತ್ತಿತ್ತು !

ಪಂಪ ರನ್ನ ಬೇಂದ್ರೆ
ಕುವೆಂಪು ಕವಿನುಡಿ ತಂದೆ
ಎದೆಯೊಳಗೆ ಕನ್ನಡ ಬೆಳೆಯುತ್ತಿತ್ತು
ಕಾರಂತಜ್ಜನ ಬೆರಳು ನಡೆಸುತ್ತಿತ್ತು. !
ಜಯ ಕನ್ನಡ ಮಾತೆ
ವಾತ್ಸಲ್ಯ ದಾತೆ

ನಡೆದೆಡೆ ನೆಲತೊರೆ ಝರಿ
ಮೈದುಂಬಿ ಕಾವೇರಿ
ನದಿಯಾಗಿ ನರಗಳಲಿ ಹರಿಯುತ್ತಿತ್ತು
ಕಡಲಾಗಿ ನೊರೆ ಉಕ್ಕಿ ಅಲೆಯುತ್ತಿತ್ತು !

ಶಿಲೆಯಲ್ಲಿ ಕಲೆಯಾಗಿ
ಶ್ರೀಗಂಧಕೆ ಮರವಾಗಿ
ನಾಲಗೆಗೆ ಜನಪದ ತೊದಲುತ್ತಿತ್ತು
ಮಳೆ ನೆನೆದು ಹಸಿರಾಗಿ ಉಸುರುತ್ತಿತ್ತು !

ಹೊತ್ತಗೆಯಿದು ಶಾರದೆ
ಪುಟ ತೆರೆದು ಎದೆಗೆ
ತಾಯಿ ಭಾರತಿ ಪೂಜೆಗೆ ಓದುತ್ತಿತ್ತು
ಹಣೆಗೆ ಕನ್ನಡ ತಿಲಕ ಹೊಳೆಯುತ್ತಿತ್ತು !

ಮಗುವೊಂದು ಶಾಲೆಯಲಿ ಹಾಡುತ್ತಿತ್ತು
ಜಯ ಕನ್ನಡ ಮಾತೆ
ವಾತ್ಸಲ್ಯ ದಾತೆ
ಪಟಪಟನೇ ಭಾವುಟ ಹಾರುತ್ತಿತ್ತು
ಕೆಳಗದರ ನೆರಳು ಕುಣಿಯುತ್ತಿತ್ತು !
-ರವಿ ಮೂರ್ನಾಡು


ಶನಿವಾರ, ಅಕ್ಟೋಬರ್ 13, 2012

ಮರಳುಗಾಡಿನಲಿ "ಬೀಜಿ" ಬರೆದ ಅ ಆ ಇ ಈ ಅಕ್ಷರ !

ಹೌದಲ್ವಾ...! ಇದು ಮರಳುಗಾಡು ದೇಶದಲ್ಲಿ ಕನ್ನಡ ಅಕ್ಷರ ಭಿತ್ತಿದವರ ಮಾತು. ಹಾಗೇ ಹಲವು ವರ್ಷಗಳಿಂದ ಈ "ಗಲ್ಪ್ ಕನ್ನಡಿಗ" ಅಂತರ್ಜಾಲ ಸುದ್ದಿ ಪುಟವನ್ನು(http://gulfkannadiga.com/ )ಓದುತ್ತಲೇ ಇದ್ದೇನೆ. ಇದರ ಕನ್ನಡದ ಅಭಿಮಾನವನ್ನು ಆಸ್ವಾಧಿಸಿದಾಗ ನನಗನ್ನಿಸಿದ್ದು ಇಷ್ಟು. ಮಾರುದ್ದದ ಸಾಧನೆ ಪಟ್ಟಿಯ ದಾಖಲೆಗಳನ್ನು ಒದಗಿಸಿ ಅರ್ಜಿ ಗುಜರಾಯಿಸುವ ಬದಲು ಹೊರದೇಶದ ಏಕೈಕ ಕನ್ನಡದ ಈ ಸುದ್ದಿ ಮಾಧ್ಯಮದ ಕಡೆಗೆ ಕಣ್ಣಾಯಿಸಿದ್ದರೆ, ಪ್ರಶಸ್ತಿಗೆ ತಾಮುಂದು ನಾಮುಂದು ಎನ್ನುವವರ ಸಾಲಿನಲ್ಲಿ ಬಿ.ಜಿ. ಮೋಹನ್ ದಾಸರು ಕರ್ನಾಟಕದಲ್ಲಿ ಕಾಣಿಸದೆ ಹೋದಾರು. ಹಾಗಾಗಿ, ಅನಿವಾಸಿ ಕನ್ನಡಿಗರು ಸಂಭ್ರಮಿಸುವ ರಾಜ್ಯೋತ್ಸವ ಮಾತು ಹೀಗೆ ಬಂತು. ಕನ್ನಡಕ್ಕೆ ನೆಲೆಯೇ ಇಲ್ಲದ ಒಂದು ಪ್ರದೇಶದಿಂದ ಮಾಡಿದ್ದು ಅತಿಶಯೋಕ್ತಿ ಅನ್ನಿಸಿತು. ಎಲ್ಲೆಂದರಲ್ಲಿ ಚದುರಿ ಹೋದ ಹೊರನಾಡ ಕನ್ನಡಿಗರನ್ನು ಅಂತರ್ಜಾಲ ಪುಟವೊಂದರಲ್ಲಿ ದಿನನಿತ್ಯ ಒಂದೆಡೆ ಸೇರಿಸಿ ಕನ್ನಡತನವನ್ನು ಹಂಚಿಕೊಳ್ಳುವ ಸಂಭ್ರಮದ ಹಿಂದಿರುವ ಕೆಲಸ ಸೋಜಿಗವೆನಿಸಿತು."ಬೀಜಿ" ಎಂದರೆ ಮತ್ತೊಂದು ಹೆಸರು ದುಬೈ ಕನ್ನಡವೇ ?! ಇದು ಹೇಗೆ?

        ಬೇಕಾಬಿಟ್ಟಿ ಪರಾಕು ಸಂಸ್ಕೃತಿಯಲ್ಲಿ ನೈಜ ಸಾಧನೆಯ ಸರಕು ಮೂಲೆ ಗುಂಪಾಗುತ್ತಿರುವುದು ಒಂದು ಕಡೆ. ಸಮಾಜ ಸುಧಾರಣೆಯ ಹೆಸರಿನಲ್ಲಿ ನೈಜ ಕಾರ್ಯಗಳಿಗೆ ತಮ್ಮವರಿಂದಲೇ ಕಾಲೆಳೆಸಿಕೊಂಡು ಮೇಲೇಳದಂತೆ ಮುಗ್ಗರಿಸಿ ಬೀಳುವ ಮಂದಿಯ ಉತ್ಸಾಹ ಕುಗ್ಗಿಸುವ ಕಾರ್ಯ ಮತ್ತೊಂದು ಕಡೆ. ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸುವ ಶಿಕ್ಷಕ-ಶಿಕ್ಷಕೀಯರಿಗೆ ಶಿಕ್ಷಣ ಕ್ಷೇತ್ರದ ಪ್ರಶಸ್ತಿ ಕೊಡಲು ಅರ್ಜಿ ಸಂಗ್ರಹಿಸುವ ನಿಯಮದ ಪರಿಪಾಟಲು ನೋಡುವಾಗ ಅಭಿನಂದನೆ ಸಲ್ಲಿಸುವ ಚಪ್ಪಾಳೆಗಿಂತ ಅಳುವೇ ಬರುವುದು. ಇದು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರವನ್ನೂ ಬಿಟ್ಟಿಲ್ಲ.  ಶಂಕೆ ಮೂಡಬಹುದು ! ಇದೇನು ಹೊಗಳಿಕೆಯಂತೂ ಅಲ್ಲವೇ ಅಲ್ಲ . ಬೀಜಿಯವರಿಗೆ ಅದರ ಅಗತ್ಯವೂ ಇಲ್ಲ. ಕನ್ನಡದ ಕೆಲಸ ವಿದೇಶದಿಂದ ಮಾಡುತ್ತಿದ್ದೇನೆ ಅಂತ ಯಾರ ಮುಂದೆಯೂ ಹೇಳಲಿಲ್ಲ. ಅದನ್ನು ಮಾಡಬೇಕಾದವರು ಕನ್ನಡದ ವಿಶಾಲ ಮನಸ್ಸಿನ ತಾಯ್ನೆಲದ ಸಮಾಜ. ಆ ಕೆಲಸ ಈಗ ನಡೆಯುತ್ತಿದೆ. ದಿನ ನಿತ್ಯ ಅಂತರ್ಜಾಲ ಪುಟ ತೆರೆದು ಸುದ್ದಿ, ಸಾಹಿತ್ಯ, ಸ್ವಾರಸ್ಯ ಹುಡುಕಿ ಸಂಭ್ರಮ ಪಟ್ಟ ಓದುಗರೇ ಇವರ ಕನ್ನಡ ಅಭಿಮಾನದ ಶಿಲ್ಪಿಗಳು. ಇವರೇ ಬೀಜಿಯವರ ಕನ್ನಡದ ಜವಾಬ್ದಾರಿಯನ್ನು ಹೆಚ್ಚಿಸಿದರು. ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಈಗ ಈ "ಗಲ್ಪ್ ಕನ್ನಡಿಗ" ಅಂತರ್ಜಾಲ ಪುಟದ ಬಗ್ಗೆ  ಬರೆದು ತಿಳಿಸಿದ್ದೂ ಇದೇ ಕನ್ನಡ ಅಭಿಮಾನದ ಧರ್ಮ.

          ಕನ್ನಡದ ಹಬ್ಬದಲ್ಲಿ ನೆನಪಿಸಿಕೊಳ್ಳದಿದ್ದರೆ ತುಂಬಾ ದೊಡ್ಡ ದ್ರೋಹವಾದೀತು ಅಂತ ಅನ್ನಿಸಿತು. ನೆಲದ ನಾಡಿಗೆ ಒಂದಷ್ಟು ಋಣಭಾರದ ಪದಗಳೇ ವಿಜೃಂಭಿಸಬಹುದು.ಮತ್ತೆ ಮತ್ತೆ ಆ ಅಭಿಮಾನದ ಭಾರಕ್ಕೆ ನೆಲವೂ ಭಾರವಾಗಿದೆ ಅನ್ನಿಸುವುದು. ಕನ್ನಡ ನೆಲದಲ್ಲಿದ್ದು ಸೇವೆ ಮಾಡುವುದು ಕರ್ತವ್ಯ ಮತ್ತು ಧರ್ಮ. ನೆಲ ಬಿಟ್ಟು ಜೀವನ ವ್ಯಾಪಾರಕ್ಕಾಗಿ ಹೋದವರು ಸೇವೆ ಸಲ್ಲಿಸುತ್ತಾರೆ ಅಂದರೆ ಅದು ಅತಿಶಯೋಕ್ತಿಯೂ ಹೌದು. ತನ್ನ ಬದುಕಿಗಾಗಿ ದುಬೈ ಸೇರಿದ ಮೋಹನ್ ದಾಸ್ ಅವರು ತಮ್ಮ ಜೀವನವನ್ನೇ ಭದ್ರಪಡಿಸಿಕೊಳ್ಳಬಹುದಿತ್ತು. ವೃತ್ತಿಯಲ್ಲಿ ವೈದ್ಯರಾದ ಇವರಿಗೆ ಅದು ಕಷ್ಟವಲ್ಲ. ಆದರೆ, ಕನ್ನಡ ಅವರನ್ನು ಹೋದಲ್ಲಿಯೂ ಕಾಡದೇ ಬಿಡಲಿಲ್ಲ ಏಕೆ ಎಂಬ ಪ್ರಶ್ನೆ. ಸಮಾಜ ಸುಧಾರಣೆ  ಅನ್ನೋದು ಸಮಾಜದಲ್ಲಿ ಒಂದಾದ ಹಲವು ಮನೆಗಳಿಂದ ಸಾಧ್ಯ. ಅದು ಸಮಾಜದ ಆಸ್ತಿ. ಅಂತಹ ಕನ್ನಡದ ಆಸ್ತಿಯೊಂದನ್ನು "ಗಲ್ಪ್ ಕನ್ನಡಿಗ" ಹುಟ್ಟು ಹಾಕುವ ಮೂಲಕ ಕನ್ನಡ ನಾಡಿಗೆ ಸಮರ್ಪಿಸಿದ್ದಾರೆ ಕರ್ನಾಟಕದ ಅಭಿಮಾನ ಬೀಜಿ. ಅಂದಾಜು ದಿನವೊಂದಕ್ಕೆ 1೦ ಸಾವಿರಕ್ಕೂ ಮಿಕ್ಕಿ ಓದುಗರು "ಗಲ್ಪ್ ಕನ್ನಡಿಗ" ಅಂತರ್ಜಾಲ ಪುಟಕ್ಕೆ ಲಗ್ಗೆ ಹಾಕುವಾಗ ಅದು ನಿಜವಾಯಿತು. 

          ಕನ್ನಡ ನೆಲದಲ್ಲೇ ಇತರ ಭಾಷೆಗಳ ಕಿರಿಕಿರಿ ಇದೆ. ಅವಹೇಳನ ಮಾಡುತ್ತಾರೆ. ಕನ್ನಡಿಗರೇ ಕನ್ನಡಿಗರ ಕೆಲಸಕ್ಕೆ ಕಾಲೇಳೆಯುವ ಸಂದರ್ಭಗಳಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರ ಮುಖ ಹುಬ್ಬು ಗಂಟಿಕ್ಕುವುದು. ಒಬ್ಬರನ್ನು ಪ್ರೋತ್ಸಾಹಿಸಿದರೆ ಒಂದಷ್ಟು ಕಿಚ್ಚು ಹಚ್ಚುವ ಸಾವಿರ ಶಂಕೆಯ ಸಂಕೋಲೆಯಲ್ಲಿ ಸಿಲುಕಿಸುವವರಿದ್ದಾರೆ. ಜಾತಿ,ರಾಜಕೀಯ,ಪಂಥ ಅನ್ನುವಾಗ ಕನ್ನಡಿಗರಲ್ಲೇ ಒಡಕುಂಟಾಗಿ ಇತರ ಭಾಷಿಗರಿಗೆ ದೌರ್ಬಲ್ಯ ಹೀನರಾಗಿ ನಾವು ಕಾಣುತ್ತೇವೆ. ಇಂತಹ ಸ್ಥಿತಿ ತಾಯಿ ನೆಲದಲ್ಲೇ ಇರುವಾಗ, ಭಾಷೆಯ ಮಾನ್ಯತೆಯೇ ಇಲ್ಲದ ನಾಡಿನಿಂದ ಕನ್ನಡದ ಕೆಲಸ ಕಷ್ಟ ಸಾಧ್ಯ. ಅಂತಹದ್ದರಲ್ಲಿ ದಿನನಿತ್ಯ ತೆರೆದುಕೊಳ್ಳುವ ಈ "ಗಲ್ಪ್ ಕನ್ನಡಿಗ" ಎಂಬ ಕನ್ನಡತನ ಅಂತಹ ಬಾಧೆಯಿಂದ ದೂರ ಉಳಿಸಿಕೊಂಡಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ನನ್ನ ಸಂವಾದಕ್ಕೆ ಸಿಕ್ಕಿದ ಅಮೇರಿಕ,ಇಂಗ್ಲೇಂಡ್, ನೈಜಿರಿಯಾ, ಆಸ್ಟ್ರೇಲಿಯಾ ಮುಂತಾದ ಹೊರನಾಡ ಕನ್ನಡಿಗರು "ಗಲ್ಪ್ ಕನ್ನಡಿಗ"ದ  ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಅವಲೋಕಿಸುವಾಗ ಬಿ.ಜಿ. ಮೋಹನ್ ದಾಸರು ಕೈ ಹಾಕಿದ ಕನ್ನಡ ಕೆಲಸ ಅಷ್ಟು ಸುಲಭದ್ದಲ್ಲ ಅನ್ನಿಸಿತು.

           ರಾಜ್ಯದ ರಾಜಕೀಯ, ಅರ್ಥಿಕ , ವಿಮಾನ ಯಾನ, ಆಮದು-ರಫ್ತು ಉದ್ಯಮ, ಶಿಕ್ಷಣ, ವೈದ್ಯಕೀಯ, ಉದ್ಯೋಗ, ಸಾಂಸ್ಕೃತಿಕ ವರ್ಚಸ್ಸು ಮತ್ತು ಸಮಾಜ ಕಲ್ಯಾಣ ಮುಂತಾದ ಕ್ಷೇತ್ರಗಳಿಗೆ ಅನಿವಾಸಿಗರ ಸಹಕಾರ ಹಸ್ತಗಳಿವೆ. ಕನ್ನಡದ ಸುದ್ದಿ ಸಂಸ್ಕೃತಿಯ ಕನ್ನಡ ಪುಟವೊಂದು ವಿದೇಶದಲ್ಲಿ ತೆರೆಯಬೇಕಾದರೆ ಅದರ ಶ್ರಮದ ಏಕೈಕ ಭಾಜನಸ್ಥ ಬೀಜಿ. ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ರಾಯಭಾರತ್ವದ ಮುಂಚೋಣಿಯಲ್ಲಿ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುವ ಅನಿವಾಸಿ ಕನ್ನಡಿಗರ ಪ್ರತಿನಿಧಿ. ಹೀಗಾಗಿ ನ್ಯಾಯ,ಸಂಭ್ರಮ,ಬದ್ದತೆ ಮತ್ತು ಜೀವನದ ದಾರಿಯ ಸಮಸ್ಥಿತಿಯನ್ನು ಪರಿಚಯಿಸಿದ್ದಾರೆ. ಇಷ್ಟೆಲ್ಲಾ ಏಕೆ ಪೀಠಿಕೆ ಬಂತು ಅಂದರೆ, ನಮ್ಮದು ನವೆಂಬರ್ ಕನ್ನಡಿಗರ ಹಬ್ಬ. ರಾಜ್ಯ ಸರಕಾರ ಕನ್ನಡದ ಏಳಿಗೆಗಾಗಿಯೇ ಇದೇ ತಿಂಗಳಲ್ಲಿ ಕೈಯಾಡಿಸುತ್ತದೆ. ಕೆಲವಷ್ಟು ಮಂದಿಯನ್ನು ಈ ಸಂದರ್ಭದಲ್ಲಿ ಗುರುತಿಸುವುದಕ್ಕೆ ಪ್ರತ್ಯೇಕ ಸಮಿತಿಯನ್ನು ರಚಿಸುತ್ತದೆ. ಅಂತಹ ಸಮಿತಿಗೆ "ಗಲ್ಪ್ ಕನ್ನಡಿಗ"ದ ಸಾಧನೆಯ ಪುಟ ತೆರೆಯಲು ಹೊರನಾಡ ಲಕ್ಷಾಂತರ ಕನ್ನಡಿಗರು ಸರಕಾರಕ್ಕೆ ಒಕ್ಕೊರಲಿನ ಸಹಮತ ಸೂಚಿಸುವರು ಅನ್ನುವ ಪರೋಕ್ಷ ಮಾತಿದು. ಹಾಗಂತ, ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರ ಸಾಲಿನಲ್ಲಿ ನಿಲ್ಲುವುದು ತ್ರಾಸದಾಯಕ ಮತ್ತು ಅದು ಸಾಧನೆಯ ಸಂಸ್ಕೃತಿಯೂ ಅಲ್ಲ.  

            ಕನ್ನಡದ ನೆಲದ ಬಗ್ಗೆ, ಭಾಷೆಯ ಬಗ್ಗೆ ಏಕೆ ಅಲ್ಲಲ್ಲಿ, ಆಗಾಗ್ಗೆ ಚಳವಳಿಗಳು, ಹೋರಾಟಗಳು ನಡೆಯುತ್ತಲೇ ಇರುತ್ತವೆ ಅನ್ನುವ ನೋವು ಗಂಭೀರವಾದುದು. ಕಾರಣಗಳಿಲ್ಲದೆ ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲ. ನಮ್ಮ ಭಾಷೆಯನ್ನ, ನೆಲವನ್ನ ಕಡೆಗಣಿಸಿದರು ಅನ್ನುವ ಒಳ ಬೇಗುಧಿ ಇಲ್ಲಿದೆ. ಅಲ್ಲಿ ಬೀದಿಗೆ ಬಂದು ನ್ಯಾಯ ಕೇಳುತ್ತಿದೆ. ಇದಕ್ಕೆ ಕಾರಣವೇನು? ಸಂಖ್ಯೆಯಲ್ಲಿ ಅತಿಯಾದರೂ , ಅಭಿಮಾನದಲ್ಲಿ ಎತ್ತರದಲ್ಲಿರುವ  ಇತರ ಭಾಷಿಗರ ಭಾಷೆಯ ಹಮ್ಮು ಕನ್ನಡದಲ್ಲಿ ಯಾಕಿಲ್ಲ ಅಂತ ಪ್ರಶ್ನೆಗಳಿವೆ. ನಾವು ಅಭಿಮಾನ ಶೂನ್ಯರಂತೂ ಅಲ್ಲವೇ ಅಲ್ಲ.  ಇವತ್ತು ನವೆಂಬರ್ ತಿಂಗಳಲ್ಲಿ ನಾವು ಕನ್ನಡಿಗರು ಅಂತ ಬೀದಿಗಿಳಿದು ನ್ಯಾಯಕ್ಕಾಗಿ ಬೊಬ್ಬೆ ಹೊಡೆದು, ದಣಿವಾರಿಸಿಕೊಳ್ಳಲು ಮಿಕ್ಕ 11 ತಿಂಗಳು ನಿದ್ದೆಗೆ ಜಾರುವ ಪ್ರವೃತ್ತಿ ಉಂಟು. ಕನ್ನಡಿಗರೆಂದರೆ ಹಾಗೇ ಉದಾರಿಗಳು. ಎಲ್ಲವನ್ನೂ ಬಿಟ್ಟು ಕೊಡುವುದು,ಎಲ್ಲರೂ ಎಲ್ಲವನ್ನೂ ಹೊಡೆದುಕೊಂಡು ಹೋದ ನಂತರ ಬಡವರಾದೆವು ಎಂದು ಬೊಬ್ಬೆ ಹೊಡೆಯುವುದು. ಇತರ ಭಾಷಿಗರ ಅಭಿಮಾನದ ಮುಂದೆ ಕನ್ನಡಿಗರ ಅಭಿಮಾನದ ವೀರಾವೇಶವನ್ನು ತೋರಿಸುವುದು ನಮ್ಮ ಕನ್ನಡ ಹಬ್ಬ. 
         ಇಂತಹ ಹಬ್ಬದಲ್ಲಿ ಒಂದಷ್ಟು ಮಹನೀಯರನ್ನು ಗೌರವಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಭಾಷೆಯನ್ನು ವಿದೇಶದಿಂದ ಅಭಿಮಾನಿಸಿ, ಶ್ರಮ ವಹಿಸಿ ಮೊತ್ತ ಮೊದಲ ಬಾರಿಗೆ ಅನಿವಾಸಿ ಕನ್ನಡಿಗರಿಗೆ ಅಕ್ಷರ ಸಂಪತ್ತನ್ನು ಉಣ ಬಡಿಸಿದ ಕೀರ್ತಿ ಬಿ. ಜಿ. ಮೋಹನ್ ದಾಸರಿಗೆ ಸಲ್ಲಿಕೆಯಾಗುವುದು. ಉದ್ಯೋಗಕ್ಕಾಗಿ ನೆಲ ಬಿಟ್ಟು ಬಂದ ಅಸಂಖ್ಯ ಅನಿವಾಸಿ ಕನ್ನಡಿಗರು ವಿಶ್ವದಾದ್ಯಂತ ಇದರ ಸವಿ ಸವಿಯು ವುದಕ್ಕೆ ಕಾರಣವಿದೆ. ಇದನ್ನು ಇದುವರೆಗೆ ಯಾರೂ ಗಮನಿಸಲಿಲ್ಲವೇ ಅನ್ನುವ ಮಾತು ಇಲ್ಲಿಲ್ಲ. ಕನ್ನಡದ ಭಾಷಾ ಬೆಳವಣಿಗೆಯಲ್ಲಿ "ಗಲ್ಪ್ ಕನ್ನಡಿಗ" ವಿದೇಶದ ನೆಲದಲ್ಲಿ ಮಾಡಿದ ಸಾಧನೆ ಅಭೂತ ಪೂರ್ವ ಅಲ್ಲವೇ ಅನ್ನುವ ಪ್ರಶ್ನೆಯೂ ಇಲ್ಲಿಲ್ಲ. ಇದರ ಸಾಧನೆಗೆ ಇಷ್ಟುದ್ದದ ಸಾಧನೆಯ ಪಟ್ಟಿಗಿಂತ ಇದರ ಪುಟ ತೆರೆದುಕೊಂಡರೆ ಅದೇ ಉತ್ತರವಾದೀತು.

          ಮುಕ್ಕೋಟಿ ಕನ್ನಡಿಗರಿದ್ದ ನವೋದಯ ಕಾಲದ ಕರ್ನಾಟಕ ಏಕೀಕರಣದ ಸಂದರ್ಭದಿಂದ ನವ್ಯ ಕಾಲಕ್ಕೆ ಮುಂದಡಿಯಿಟ್ಟ ಕನ್ನಡಿಗರು ಹತ್ತು ಕೋಟಿಗೂ ಮೀರಿದ್ದಾರೆ. ಕನ್ನಡದ ಭಾಷಾ ಉಳಿವು, ಜಾಗೃತಿ ಹಲವು ಗೊಜಲುಗಳ ಹಂತವನ್ನು ಮುಟ್ಟಿವೆ.ಆದರೂ ದೌರ್ಬಲ್ಯಗಳು ಮರೆಯಾಗಿಲ್ಲ. ಗೊಜಲುಗಳ ಸಿಕ್ಕುಗಳಲ್ಲಿ ಕಗ್ಗಂಟಾಗುತ್ತಿದ್ದೇವೆ. ಸಂಘ-ಸಂಸ್ಥೆಗಳಿಗೆ ದೇಣಿಗೆ ಕೊಟ್ಟು ಪ್ರಶಸ್ತಿ ಪಡೆದುಕೊಳ್ಳುವ ಸಂಸ್ಕೃತಿ ಉಂಟು. ಪ್ರಶಸ್ತಿಗಾಗಿ ಅರ್ಜಿ ಕರೆದು, ಅರ್ಜಿದಾರರಿಂದಲೇ ಪ್ರಶಸ್ತಿಯ ಮೊತ್ತ ಸಂಗ್ರಹಿಸಿ ಫಲಕ ಕೊಡುವ ದಾರಿಯೂ ಉಂಟು. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು, ಜಿಲ್ಲಾ ಪಂಚಾಯಿತಿ, ರಾಜ್ಯ ಸರಕಾರ, ರಾಷ್ಟ್ರದ ಮಟ್ಟ ಪ್ರಶಸ್ತಿಯವರೆಗೆ ಪ್ರಶಸ್ತಿಗಾಗಿ  ಅರ್ಜಿ ದಾಖಲಿಸುವ ಪರಿಪಾಠ ಬಂದಾಗ ಸಾಧನೆ ಅಂದರೇನು ಎಂಬ ಅನುಮಾನ ಕಾಡುತ್ತದೆ. ಇಂತಹ ಸಾಧನೆಯ ಅವಲೋಕನದಲ್ಲಿ ನವೆಂಬರ್ ತಿಂಗಳ ಕನ್ನಡ ಹಬ್ಬದಲ್ಲಿ "ಗಲ್ಫ್ ಕನ್ನಡಿಗ" ಸುದ್ದಿ ಪುಟವನ್ನು ಓದಿ... ಮತ್ತೊಮ್ಮೆ ಓದಿ ನೆಲದ ಅಭಿಮಾನವನ್ನು ಎದೆಯಲ್ಲಿ ತುಂಬಿಸಿಕೊಳ್ಳುತ್ತೇವೆ. ಇದು ಅನಿವಾಸಿ ಕನ್ನಡಗರ ಹೃದಯ ವಿಶಾಲತೆಯ ಸತ್ಯ. ಹಾಗಾಗಿ  ಅನಿವಾಸಿ ಕನ್ನಡಿಗರು ಬೀಜಿ ಅನ್ನುವ ಹೆಸರಿನಲ್ಲಿ ಅಪ್ಪಟ ದುಬೈ ಕನ್ನಡವನ್ನು ಓದುತ್ತಿದ್ದಾರೆ. ಅದು ನಿರಂತರ. -ಜೈ ಕನ್ನಡ ಭುವನೇಶ್ವರಿ..!
-ರವಿ ಮೂರ್ನಾಡು.

ಸೋಮವಾರ, ಅಕ್ಟೋಬರ್ 8, 2012

ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು !

(ನ್ಯೂ ಇಂಗ್ಲೇಂಡ್ (ಬಾಸ್ಟನ್) ಮಂದಾರ ರತ್ನ ಮಹೋತ್ಸದ "ದೀವಿಗೆ" ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಹಾಗಂತ, ಎದೆ ತಟ್ಟಿ ಹೇಳುವ ಮಾತಿದು. ಕನ್ನಡದ ನೆಲ ಸಂಸ್ಕೃತಿಯನ್ನು ಹೊತ್ತೊಯ್ಯುವ ನಡೆದಾಡುವ ಜಾಹೀರಾತುಗಳು. ಅದನ್ನು ಉದ್ಯೋಗಕ್ಕಾಗಿ ಜಗತ್ತಿಗೆ ಅಂಡಲೆದ ಕನ್ನಡಿಗರು ಮಾಡುತ್ತಿದ್ದಾರೆ. ಹುಬ್ಬೇರಿಸುವ ಪ್ರಶ್ನೆಯೂ ಅಲ್ಲ. ಹೊರನಾಡ ಕನ್ನಡಿಗರು ಕನ್ನಡ ನೆಲದ ರಾಯಭಾರಿಗಳು. ಜಗತ್ತಿನ ದಿಕ್ಕು ದಿಕ್ಕುಗಳಿಗೆ ಕನ್ನಡದ ಉಸಿರನ್ನು ಹೊತ್ತೊಯ್ದ ಇವರು, ನಾಡಿನ ಜಾನಪದ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಆಚಾರ-ವಿಚಾರ, ಕ್ರೀಡೆಯ ಸಾರ್ವಭೌಮತ್ವವನ್ನು ನೆಲೆ ನಿಲ್ಲಿಸಿದರು. ಈ ರಾಯಭಾರತ್ವದ ಸವಿಯನ್ನು ಕರ್ನಾಟಕದ ಜನತೆ ಉಣ್ಣುತ್ತಿದೆ.

ಮನುಷ್ಯ ಮನಸ್ಸು ಮತ್ತು ಊರನ್ನು ಖಾಲಿ ಮಾಡಿಕೊಳ್ಳಬಾರದು. ಹೊರನಾಡ ಕನ್ನಡಿಗರ ಬಗ್ಗೆ ಒಂದಿಷ್ಟು ಬರೆಯಿರಿ ಅಂತ ಸಹೃದಯಿಗಳು ಹೇಳಿದರು. ಪ್ರಕೃತಿಯ ಸಿರಿ, ಕರ್ನಾಟಕದ ಸ್ವಿಟ್ಜರ್ಲ್ಯಾಂಡ್, ಕೊಡಗಿನಿಂದ ಅಂಡಲೆದು, ಕನ್ನಡದ ಈ ಮಾತನ್ನು ಆಫ್ರಿಕಾದ ಕ್ಯಾಮರೂನಿನಲ್ಲಿ ಕುಳಿತು ಬರೆಯುತ್ತಿದ್ದೇನೆ. ವ್ಯವಸ್ಥೆಯ ಬಂಧನದಲ್ಲಿ ನೆಲವನ್ನು ಬಿಟ್ಟು ಇನ್ನೊಂದು ನೆಲದಲ್ಲಿ ಮತ್ತೆ ಮತ್ತೆ ಕರೆಯುವ ಆ ನೆನಪುಗಳನ್ನು ಹೊರನಾಡಿನಲ್ಲಿದ್ದವನು ಮಾತ್ರ ಅರಗಿಸಿಕೊಳ್ಳಬಲ್ಲ. ಆ ನೆನಪಿನ ಕ್ಷಣಗಳ ನಿಟ್ಟುಸಿರು ಮನಸ್ಸನ್ನು ಇನ್ನಷ್ಟು ವಿಶಾಲಗೊಳಿಸುವುದು. ಎದೆ ತೆರೆದು ಜಗತ್ತಿಗೆ ನಿಂತು ರೆಪ್ಪೆ ಮಿಟುಕಿಸುವುದು.

ನೆಲದ ಸಂಸ್ಕೃತಿಯನ್ನು ಜಗತ್ತಿಗೆ ಹೊರನಾಡಿನಿಂದ ತೆರೆದು ತೋರಿಸಿದಾಗ  ಕನ್ನಡಿಗರು "ಬೇಷ್" ಅಂದರು. ಅದು ನಡೆದದ್ದೇ ಹೊರನಾಡಿನಿಂದ. ಹಿಂದೆಯೂ ಹೊರನಾಡಿಗರು ಮಾಡಿದರು, ಮುಂದೆಯೂ ಮಾಡುವರು, ನೆಲ ಬಿಟ್ಟವರು ಅಲ್ಲಿನ ಉಸಿರು ಬಿಡಲಾರರು ಅನ್ನೋದಕ್ಕೆ ಭಾಷ್ಯ ಬರೆದರು. ತನ್ನ ನೆಲದಲ್ಲಿ ರೂಢಿಸಿಕೊಂಡ ಕಲೆ,ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ದಿನ ನಿತ್ಯದ ಬದುಕಿನಂತೆ ಬದುಕಿಸಿದರು,ಬದುಕಿದರು. ಕನ್ನಡ ನಾಡು ಹೊಸ ಜಗತ್ತೊಂದನ್ನು ವಾಸ್ತವಕ್ಕೆ ತೆರೆಯಿತು. ಜಗತ್ತು ಕನ್ನಡದ ಕಣ್ತೆರೆಯಿತು. ನೆಲದ ಸಂಸ್ಕೃತಿ ವಿಶ್ವದ ಸಾಂಸ್ಕೃತಿಕ ಪರದೆಯಲ್ಲಿ ಸದಾ ಜೀವಂತವಾಗಿರುವಂತವು. ಕರ್ನಾಟಕದಿಂದ ಹೊತ್ತು ತಂದು ವಿಶ್ವದ ಪರದೆಯಲ್ಲಿ ಬಣ್ಣ ಹಚ್ಚಿ ತೋರಿಸಿದರು. ನೆಲದ ಪ್ರತಿಭಾ ಹಕ್ಕಿಗಳನ್ನು ಹಿಡಿದು ವಿದೇಶಿಗರ ಹೃದಯ ಮಂದಿರದಲಿ ಹಾರಲು ಬಿಟ್ಟರು. ಅಲ್ಲಿ ಕನ್ನಡದ ಸಂಸ್ಕೃತಿಗೆ ವಿದೇಶಿಗರು ಬೆರಗುಗೊಂಡರು.

ಆಶ್ಚರ್ಯವಾಗಬಹುದು. ತಂತ್ರಜ್ಞಾನಕ್ಕೆ ಭಾರತೀಯರಿಗೆ ತಲೆಬಾಗುವಷ್ಟು ಜಗತ್ತಿನ ರಾಷ್ಟ್ರಗಳು ಇನ್ಯಾವ ದೇಶಕ್ಕೂ ಮಂಡಿ ನೆಲಕ್ಕೆ ಮುಟ್ಟಿಸುವುದೇ ಇಲ್ಲ. ಅಷ್ಟೊಂದು ಅಗಾಧವಾಗಿದೆ ಭಾರತದ ಜ್ಞಾನ ಸಂಪತ್ತು. ಅದರಲ್ಲೂ ಭಾರತ ಅರ್ಧ ಜಗತ್ತಾಗಿದೆ. ವಿಶ್ವದ ಯಾವುದೇ ಭಾಷೆಗೆ ಸಡ್ಡು ಹೊಡೆಯುವ ನವೀರು ಭಾವಗಳನ್ನು ಕನ್ನಡದ ಅಕ್ಷರ ಪಡೆದುಕೊಂಡಿದೆ ಅಂತ ಹೆಮ್ಮೆ ಪಡುತ್ತೇವೆ. ಯಾಕೆ ಅಂತ ಪ್ರಶ್ನೆ. ಕನ್ನಡ ಹೃದಯದ ಭಾಷೆ. ಸುಲಲಿತವಾಗಿ, ಅಷ್ಟೇ ಬಲಿಷ್ಠ ಪದಪ್ರಯೋಗದಿಂದ ಪ್ರಸ್ತುತಪಡಿಸುವ ಪದ ಸ್ವಾರಸ್ಯದ ಮನಸ್ಸಿನ ಭಾಷೆ ಜಗತ್ತಿನಲ್ಲಿ ಇನೊಂದಿಲ್ಲ. ಊರು ಬಿಟ್ಟು ಖಾಲಿಯಾದ ಮನಸ್ಸನ್ನು ಅಷ್ಟೇ ಗಂಭೀರವಾಗಿ ಅವುಚಿಕೊಂಡಿದೆ. ನೋಡುವ ಭಾವಗಳಲ್ಲಿ ಸೂಕ್ಷ್ಮಗಳನ್ನು ಅತ್ಯಂತ ಸುಲಭವಾಗಿ ಕನ್ನಡದ ಚಿನ್ನದ ಪದಗಳಲ್ಲಿ ಮಾತನಾಡಿಸಬಹುದು. ಜಗತ್ತಿನ ಹೃದಯ ತೆರೆಯುವುದು ಕನ್ನಡದ ಪದಕ್ಕಿರುವ ಲಾಲಿತ್ಯ. ನೇರವಾಗಿ ಹೃದಯದಿಂದ ಹೃದಯಕ್ಕೆ ಹರಿಯುವ ಮನಸ್ಸು ಮಾತಾಡುವ ಭಾಷೆ. ಬೇಕಾದಷ್ಟು ಸಾಹಿತ್ಯಗಳು ಹೊರನಾಡಿನಿಂದ ಕನ್ನಡ ನಾಡಿಗೆ ಹರಿದು ಬಂದಿದೆ. ಫೇಸ್ಬುಕ್ಕು, ಟ್ವಿಟ್ಟರ‍್ ಸೇರಿದಂತೆ ಹಲವು ಸಾರ್ವಜನಿಕ ಅಂತರ್ಜಾಲ ತಾಣಗಳು ಕನ್ನಡವನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ಇಂತಹ ಅಂತರ್ಜಾಲ ತಾಣಗಳಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ವಿಸ್ತಾರಗೊಳಿಸಿದ ಫೇಸ್ಬುಕ್ಕಿಗೆ ಅನಂತ ನಮನಗಳು ! ಹೊರನಾಡ ಕನ್ನಡಿಗರು ಧನ್ಯರಾದರು. !

ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯಶಿವ... ಅಂತ ಸತ್ತಂತಿಹರನ್ನು ಬಡಿದೆಚ್ಚರಿಸುವ ತಾಕತ್ತು ಹರಿದು ಬಂತು, ಕುವೆಂಪು ತಂದ ನವಿರು ಗಾಳಿಯ ತಂಪು. ಸತ್ತಂತೇ ಬದುಕುವವರೆಲ್ಲರಲ್ಲೂ ಹೊಸ ಚೈತನ್ಯ ತುಂಬಿದ ರಾಗ ಜೀವ ಲಾಲಿತ್ಯವಿದು. ಅದು ಭಾರತ ಸಿಂಧು ರಶ್ಮಿಯ ಗೋಕಾಕರ ಪುಸ್ತಕದಲ್ಲಿ, ಮೌನಕ್ಕೆ ಒಗ್ಗಿಕೊಂಡ ನಾಕು ತಂತಿಯ ಬೇಂದ್ರೆಯಲ್ಲಿ, ಕನ್ನಡದ ಕನಸಿನಲ್ಲಿ ನಿದ್ದೆಗೆ ಜಾರಿದ ಕಾರಂತರ ಮೂಕಜ್ಜಿಯ ಕನಸುಗಳಲ್ಲಿ, ಕಾಡು ಕುದುರೆಯನ್ನು ಕಾಡಿನಿಂದ ನಾಡಿಗೆ ಅಟ್ಟಿದ ಕಂಬಾರರಲ್ಲಿ ಮಿಳಿತವಾಗಿತ್ತು. ಅನಂತ ಮೂರ್ತಿಯವರು ಕನ್ನಡದ ಅಸ್ತಿತ್ವವಿಲ್ಲದ ಭಾರತ ದೇಶದ ಇತರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯವನ್ನು ಹರವಿದ್ದಾರೆ. ಬದುಕು ನಾಟಕ ರಂಗ. ನಾವು ಅದರಲ್ಲಿ ಪಾತ್ರಧಾರಿಗಳು. ಅದನ್ನು ಗಿರೀಶ್ ಕಾರ್ನಾಡರು ಜೀವವಿದ್ದವರ ತಲೆಗೆ ದಂಡವಿದೆ ಎಂದು ತೆರೆದು ತೋರಿಸಿದರು. ಮಾಸ್ತಿ ಕನ್ನಡ ಆಸ್ತಿ ಎಂದು ಬಹಳ ಗೌರವಿಸುವರು ಕನ್ನಡದ ಜನತೆ.

ಭಾಷೆ ನಾಡಿನ ತಾಯಿಬೇರು. ಸಾಹಿತಿಗಳು ಮತ್ತು ಬರಹಗಾರರು ಅದರ ಪ್ರವಾದಿಗಳು. ಅದನ್ನು ಉಳಿಸುವವರು ಓದುಗರು ಮತ್ತು ಉತ್ತೇಜಕರು. ವಿದೇಶಕ್ಕೆ ಬಂದಾಕ್ಷಣ ನಮ್ಮನ್ನು ಬಾಧಿಸುವ ಮೊದಲ ದೌರ್ಬಲ್ಯ ಭಾಷೆಕೊಲ್ಲಿ ರಾಷ್ಟ್ರದಲ್ಲಿ ಮಲೆಯಾಳಂ,ಹಿಂದಿ, ಅರೆಬಿಕ್, ತಮಿಳು, ಆಂಗ್ಲ ಮಾಧ್ಯಮಕ್ಕೆ ಮುಖ ಮಾಡುವಾಗ ಒಂದಿಷ್ಟು ಕನ್ನಡದ ಪರದೆಯನ್ನು ಸರಿಸಿ ಕಂಪನ್ನು ಬೀರಿದವರು ಇದ್ದಾರೆ. ಅದು ವಿವಿಧ ಸಂಘಟನೆಗಳು ಮಾಡಿದರೂ, ಕೊಲ್ಲಿ ರಾಷ್ಟ್ರದ ಮತ್ತು ಕನ್ನಡಿಗರ ಸುದ್ದಿಗಳನ್ನು, ಕನ್ನಡ ಸಾಹಿತ್ಯವನ್ನು ನಾಡಿಗೆ ತೆರೆದು ತೋರಿಸಿದ್ದು ಕೆಲವರು ಮಾತ್ರ. ಅವರ ಸಾಹಿತ್ಯಕ್ಕೆ ನೀರೆರೆದವರು ಹಲವರು. ಕೊಲ್ಲಿ ರಾಷ್ಟ್ರದಲ್ಲಿ, ಆಫ್ರಿಕಾದ ನೈಜೀರಿಯಾ, ಸೌತ್ ಆಫ್ರಿಕಾದಲ್ಲಿ ಕನ್ನಡ ಸೊಗಸಾಗಿದೆ. ಇವು ಜಾತಿ-ಮತ-ಬೇಧ ಮರೆತ ಕನ್ನಡದ ನೆಲದಿಂದ ಹೊತ್ತು ತಂದಂತಹ ಸಾಂಸ್ಕೃತಿಕ ಚಿಲುಮೆಗಳು.

ಕನ್ನಡದ ವಿಷಯದಲ್ಲಿ ಮನಸ್ಸಿನ ಮಾತಿಗೆ ಒಗ್ಗಿಸಿಕೊಂಡ ವಿಚಾರದಲ್ಲಿ ಕೊಲ್ಲಿ ರಾಷ್ಟ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಗಲ್ಲಿಗಲ್ಲಿಗಳಲ್ಲಿ ಸಿಗುವ ಕನ್ನಡಿಗರು, ಅಂಗಡಿ ಮುಂಗಟ್ಟುಗಳಲ್ಲಿ  ನಕ್ಕವರು, ಹೋಟೆಲ್ ಉದ್ಯಮದಲ್ಲಿ ಕ್ಷೇಮ ವಿಚಾರಿಸಿದವರು, ಬ್ಯಾಂಕ್, ವಾಣಿಜ್ಯ ವಿನಿಮಯ ಕೇಂದ್ರಗಳಲ್ಲಿ ಕೈ ಕುಲುಕಿದ ಕನ್ನಡಿಗರು ಅಚ್ಚರಿಗೆ ಕಾರಣರಾಗುತ್ತಾರೆ. ಬಹ್ರೈನಿನಲ್ಲಿ ಐದು ತಿಂಗಳ ಕಾಲ ಹೊರನಾಡ ಕನ್ನಡಿಗನಾಗಿ ಅಲೆದಾಡಿದ ದಿನಗಳುಂಟು.  ಬಹುಮುಖ್ಯವಾಗಿ ಗಮನ ಸೆಳೆದದ್ದು, "ತುಳಸಿ ಗಿಡ". ಬಹ್ರೈನಿನ ಮನಾಮ, ಹೂರಾ, ಗುದಾಬಿಯಾ, ಸಲ್ಮಾನಿಯಾ ಗಲ್ಲಿಗಳಲ್ಲಿ ಸಂಚರಿಸಿದಾಗ ಕೆಲ ಹೊರನಾಡಿಗರ ವಸತಿಗೃಹದಲ್ಲಿ ಈ ಬಹುಮಾನ್ಯ ಭಕ್ತಿ ಭಾವಪ್ರಧಾನ ಗಿಡಗಳನ್ನು ಕಂಡು ಖುಷಿಪಟ್ಟ ಕ್ಷಣಗಳಿವೆ. ಆ ಗಿಡಗಳಲ್ಲಿ ಪೂಜೆ ಸಲ್ಲಿಸಿದ ಕುರುಹಾಗಿ ಊದುಬತ್ತಿಯ ಕಡ್ಡಿಗಳು, ಅದೀಗ ತಾನೆ ಗಿಡದ ಮಡಿಲಿಗೆ ಮಲಗಿದ ಹೂವುಗಳು ಈಗಲೂ ನೆನಪಿನ ಪರದೆಯಲ್ಲಿ ದಳಗಳರಳಿಸುತ್ತಿವೆ. ಈ ಅಪೂರ್ವ ಸನ್ನಿವೇಶಗಳನ್ನು, ಆಚರಣೆಯನ್ನು ಸಾವಿರಾರು ಮೈಲು ದೂರದ ಕೊಲ್ಲಿ ರಾಷ್ಟ್ರದಲ್ಲಿ ನೋಡುವಾಗ ಮನೆ ಕೈಗೆ ಬಂದಷ್ಟು ಅಳತೆಯಲ್ಲಿರುತ್ತದೆ. ಕನ್ನಡ ನಾಡಿನ ನಾಡಿ ಮಿಡಿಯುವ ಆಚಾರಕ್ಕೆ ಮನೆ-ಮನಗಳು ಅರಳುತ್ತವೆ .

ಅಂತರ್ಜಾಲ-ವೃತ್ತ ಪತ್ರಿಕೆಗಳು ಇಡೀ ಕೊಲ್ಲಿ ರಾಷ್ಟ್ರಗಳ ಜನತೆಯನ್ನು ಪದಗಳಲ್ಲಿ ಮಾತನಾಡಿಸಿದ್ದು ದೊಡ್ಡ ಉಪಕಾರವೇ ಸರಿ. ಅದರಲ್ಲಿ ಅಂತರ್ಜಾಲದ ಅಪ್ಪಟ ಕನ್ನಡದ ಸುದ್ದಿ ಮಾಧ್ಯಮ "ಗಲ್ಫ್ ಕನ್ನಡಿಗ". ದುಬೈ, ಒಮಾನ್, ಕುವೈತ್, ಕತಾರ್ ರಾಷ್ಟ್ರಗಳಲ್ಲಿ ತಮ್ಮದೇ ಆದ ಗುರುತರ ಜವಾಬ್ದಾರಿಗೆ ಕನ್ನಡದ ಸಮಾರಂಭಗಳನ್ನು ಆಯೋಜಿಸುವ ಅನಿವಾಸಿ ಕನ್ನಡಿಗರ ಮುತುವರ್ಜಿಗಳು ಸದಾ ನೆಲದ ನೆನಪನ್ನು ಹಚ್ಚ ಹಸಿರಾಗಿಸಿದೆ. ಕನ್ನಡದ ಹಲವು ಸಮೂದಾಯಗಳ ಒಕ್ಕೂಟ ತಮ್ಮದೇ ಆದ ಕಾರ್ಯ ಯೋಜನೆಗಳು, ತಮ್ಮ ನೆಲದಲ್ಲಿ ಕುಟುಂಬ ಬಾಂಧವರೊಂದಿಗಿನ ಕ್ಷಣಗಳ ನೆನಪುಗಳನ್ನು ಕೆದಕಿ ಕಳೆಯುತ್ತಿರುವುದನ್ನು ಕಾಣಬಹುದು. ಸಾಹಿತ್ಯ, ಕಲೆ, ಜಾನಪದ ಸೊಗಡುಗಳು ಇಲ್ಲಿ ಮೈನೆರೆಯುತ್ತವೆ. ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕತಿಕ ರಾಯಭಾರಿಗಳು ಅನ್ನೋದಕ್ಕೆ ಅಪ್ಪಟ ಸಾಕ್ಷಿಗಳು..!

ಕನ್ನಡದ ಉಳಿವಿಗಾಗಿ, ಅದರ ಪ್ರಗತಿಯನ್ನು ಕೊಲ್ಲಿ ರಾಷ್ಟ್ರ ಮಾತ್ರವಲ್ಲ ಆಫ್ರಿಕಾ ಖಂಡದ ಸೌತ್ ಆಫ್ರಿಕಾ, ನೈಜೀರಿಯಾ ತಮ್ಮದೇ ಆದ ಕೊಡುಗೆ ಸಲ್ಲಿಸುತ್ತಿವೆ ಅಂತ ದಾಖಲೆ ಬರೆಯಬೇಕಾಗುವುದು. ಮೊದಲೇ ಕಗ್ಗತ್ತಲ ಖಂಡವೆಂಬ ಖ್ಯಾತಿ ಪಡೆದ ಆಫ್ರಿಕಾದಲ್ಲಿ ಈ ಎರಡು ರಾಷ್ಟ್ರಗಳಲ್ಲಿನ ಕನ್ನಡದ ಚಟುವಟಿಕೆ ಕೊಲ್ಲಿಯ ಮತ್ತು ವಿಶ್ವದ ಇತರ ರಾಷ್ಟ್ರಗಳಷ್ಟೇ ವಿಸ್ತಾರವನ್ನು ಪಡೆದಂತವು. ಅಲ್ಲಿ ವಾರಕ್ಕೊಮ್ಮೆ ಸಿಗುವ ಭಾನುವಾರವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿರುವುದು ಕಗ್ಗತ್ತಲೆಯಲ್ಲಿ ಕನ್ನಡದ ಹಣತೆ ಬೆಳಗಿರುವುದಕ್ಕೆ ಸಾಕ್ಷಿ. ಇದರಲ್ಲಿ ಕನ್ನಡದ ಸಂಸ್ಕೃತಿ, ಜಾನಪದದ ಸೊಗಡನ್ನು ಅಚ್ಚುಕಟ್ಟಾಗಿ ಪಾಲಿಸುವ ನೈಜೀರಿಯಾದ ಕನ್ನಡದ ಸಂಘಗಳು ಮೇಲು ಪಂಕ್ತಿಯಲ್ಲಿ ನಿಲ್ಲುತ್ತವೆ. ಮುಕ್ತ ಮಾರುಕಟ್ಟೆಗೆ ಯಥೇಚ್ಛವಾಗಿ ಜಗತ್ತನ್ನು ತೆರೆದಿಟ್ಟಿರುವ ನೈಜೀರಿಯಾ ಮತ್ತು ಸೌತ್ ಆಫ್ರಿಕಾಗಳಲ್ಲಿ ಕನ್ನಡಿಗರ ಚಟುವಟಿಕೆ ಮತ್ತು ಸೌಹಾರ್ದ ಕೂಟ ಬೆಳಕಿಗೆ ಬಂದಿದೆ.
           
ಜಗತ್ತಿನ ಮೂಲೆ ಮೂಲೆಗಳಿಂದ ಉದಯೋನ್ಮುಖ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಕೊಲ್ಲಿ ರಾಷ್ಟ್ರಗಳಲ್ಲಿ ನಡೆದಿದೆ. ಆಶ್ಚರ್ಯವಾಗಬಹುದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ದುಡಿತದ ವೇತನದಲ್ಲಿ ಗಲ್ಫ್ ಕನ್ನಡಿಗ" ಅಂತರ್ಜಾಲದ ಮೂಲಕ ಕನ್ನಡದ ಸವಿಯನ್ನು ಕರುಣಿಸುತ್ತಿರುವ, ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಪಾದಕರಾಗಿ, ಕನ್ನಡಾಭಿಮಾನ ಮೆರೆದವರು ಅಲ್ಲಿದ್ದಾರೆ. ಕತಾರಿನಲ್ಲಿರುವ ತಮ್ಮದೇ ಸಂಸ್ಥೆಯಲ್ಲಿ ಸುಮಾರು 200ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಬದುಕು ಕರುಣಿಸಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಇತಿಹಾಸ ಬರೆದ ಯಕ್ಷಗಾನ ರಂಗ ಪ್ರದರ್ಶನವೇರ್ಪಡಿಸಿದ್ದ ಹಿರಿಮೆ ಗಳಿಸಿದವರೂ ಇದ್ದಾರೆ. ಇವರೊಂದಿಗೆ ಇನ್ನೋರ್ವ ಕನ್ನಡಿಗ ಹಿಂದಿ ಸಂಗೀತ ಮತ್ತು ಸುದ್ದಿ ಲೋಕದಲ್ಲಿ ಯುಎಇ ಸುತ್ತಮುತ್ತ ಮನೆ ಮಾತಾಗಿರುವ 105.4 ಎಫ್.ಎಂ.ರೇಡಿಯೋ ಸ್ಪೈಸ್ ಮೂಲಕ ಕನ್ನಡವನ್ನೂ ಬೆಳಗಿಸಿದರು. ವಾರದ ಪ್ರಮುಖ ಒಂದು ದಿನದ ಒಂದಿಷ್ಟು ಸಮಯವನ್ನು ಕನ್ನಡಕ್ಕಾಗಿ ಮೀಸಲಿಟ್ಟು ಕನ್ನಡ ಶ್ರೋತೃಗಳ ಕನ್ನಡದ ಹಸಿವನ್ನು ನೀಗಿಸುತ್ತಿದ್ದಾರೆ.

ಅಬುಧಾಬಿ ಕನ್ನಡ ಸಂಘ, ನಮ್ಮ ತುಳುವೆರೆ ಸಂಸ್ಥೆ, ಯುಎಇ ಕನ್ನಡ, ಬಹ್ರೈನ್ ಕನ್ನಡ ಸೇರಿದಂತೆ ಕರ್ನಾಟಕ ಸಂಘ ಶಾರ್ಜಾ, ಅಜ್ಮನ್ ಕರ್ನಾಟಕ ಸಂಘ, ಒಮಾನ್ ಕನ್ನಡಿಗರ ಸಂಘಗಳು ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದು ಹೊರನಾಡ ಕನ್ನಡಿಗರು ನಡೆದ ಕನ್ನಡದ ಹಾದಿ. ಇದು ಕನ್ನಡಿಗರ ಎದೆಯಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿರಬಹುದು.

ಅಚ್ಚ ಕನ್ನಡ  ಅಂತರ್ಜಾಲ ಸಾಹಿತ್ಯ ಪುಟಗಳಾದ "ಕೆಂಡ ಸಂಪಿಗೆ",  "ಅವಧಿ ಮಾಗ್", "ನಿಲುಮೆ", ಕನ್ನಡ ಸಾಹಿತ್ಯ ಸಾರಕ್ಕೆಂದೇ ಕನ್ನಡಿಗರೇ ಒಗ್ಗಟ್ಟಾಗಿ ಹುಟ್ಟು ಹಾಕಿರುವ ಫೇಸ್ಬುಕ್ ಅಂತರ್ಜಾಲ ಸಮೂದಾಯ "ಕನ್ನಡ ಬ್ಲಾಗ್" ,ಕನ್ನಡ ಸಾಹಿತ್ಯ”,  “ಚುಟುಕು ಸೇರಿದಂತೆ ಇನ್ನೂ ಹತ್ತು ಹಲವಾರು ತಾಣಗಳು ಅನಿರ್ವಚನೀಯ ಆನಂದವನ್ನು ಜಗತ್ತಿನಾದ್ಯಂತ ತೆರೆದಿದೆ. ಸಂಪೂರ್ಣತೆಯ ಕನ್ನಡದ ಸವಿಯೂಟವನ್ನು ಸಾಹಿತ್ಯಕ್ಕೆ, ಕನ್ನಡಿಗರಿಗೆ, ಹೊರನಾಡ ಕನ್ನಡಿಗರಿಗೆ ಕೊಡುಗೆಯನ್ನಾಗಿ ನೀಡುತ್ತಿದೆ ಎಂಬುದು ಹೊರನಾಡಿನಲ್ಲಿ ಕನ್ನಡದ ಇತಿಹಾಸ ಪುಟ ಮಗುಚಿದಷ್ಟೇ ಸತ್ಯ. ಜಗತ್ತಿನ ವಿವಿಧ ಭಾಗದಲ್ಲಿ ಬೇರು ಬಿಟ್ಟಿರುವ ಕನ್ನಡಿಗರನ್ನು ಸಾಹಿತ್ಯ ಸಾಗರಕ್ಕೆ ಧುಮುಕಿಸುತ್ತಿರುವುದು ಮಾತ್ರವಲ್ಲ, ಅದರ ಆನಂದವನ್ನು ದಿನನಿತ್ಯ ಉಣ ಬಡಿಸುತ್ತಿದೆ. ಅದು ಕಗ್ಗತ್ತಲೆ ಖಂಡ ಆಫ್ರಿಕಾದ ರಾಷ್ಟ್ರಗಳನ್ನೂ ಬಿಟ್ಟಿಲ್ಲ.

          ಹಾಗೆಯೇ, ನಾವು ಕನ್ನಡಿಗರು, ಕನ್ನಡಿಗರಂತೆ ಇತರರನ್ನೂ ಪ್ರೀತಿಸುವವರು, ವಿಶ್ವಕ್ಕೆ ಮಾನವತೆಯ ಸಾಂಸ್ಕೃತಿಕ ರಾಯಭಾರಿಗಳು.
-ರವಿ ಮೂರ್ನಾಡುಕ್ಯಾಮರೂನ್.

ಭಾನುವಾರ, ಅಕ್ಟೋಬರ್ 7, 2012

ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ..?!


-ರವಿ ಮೂರ್ನಾಡು
ಸೃಜನಶೀಲತೆ ಅಂದರೆ ಸೃಷ್ಟಿಯ ನಿಯಮದಲ್ಲಿ ಹೊಸತೊಂದು ಮಗುವನ್ನು ಹುಟ್ಟಿಸುವ ಚೇತನದಷ್ಟೇ ಸತ್ಯ. ಅದಿಲ್ಲದೆ ಹೊಸತನ ಅನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.  ಸುಖಾ ಸುಮ್ಮನೆ ಕುಳಿತವನನ್ನೂ ಕವಿತೆಯ ಜಾಗಟೆಗೆ ಎಚ್ಚರಿಸುವ ಪದ ವಿನ್ಯಾಸವನ್ನು ಎದೆಗೆ ಸುರಿದು ಹೋದರು ಕುವೆಂಪು. ಮಾಸ್ತಿ ಕನ್ನಡ ಆಸ್ತಿ, ಇದೊಂದು ಪ್ರಾಸಬದ್ಧ ಗೌರವಕ್ಕೆ ಸೀಮಿತಗೊಳಿಸುವ ಕನ್ನಡದ ಜನತೆ, ಮಾಸ್ತಿಯ ಸಾಹಿತ್ಯ ಸ್ಥಿತಿಯನ್ನು ವಿಸ್ತೃತಗೊಳಿಸಲಿಲ್ಲ ಅನ್ನುವ ಅನುಮಾನಗಳ ಹುತ್ತವನ್ನು ಕೆದಕತೊಡಕುತ್ತೇವೆ. ಕನ್ನಡದ ನೆಲದಲ್ಲಿ ಇದರ ಸಂಸ್ಕಾರಕ್ಕೆ ನೆಲೆ ಹುಡುಕುತ್ತಿದ್ದೇವೆ. ನಮ್ಮನ್ನು ನಾವು ತೆರೆಯುತ್ತಾ ಹೋದಂತೆ, ಅದರ ಮಾನವೀಯ ಮೌಲ್ಯಗಳಲಿ ಕೆಲವನ್ನು ಕಳೆದುಕೊಂಡಿದ್ದೇವೆ ಅನ್ನುತ್ತಲೇ ಅದರ ಒಂದಷ್ಟು ಬೆಲೆಗಳು ಅಭಿಮಾನದ ಸೆಲೆಗಳಲ್ಲಿ ಸುಳಿಯುತ್ತಿವೆ. ಅದು ನಡೆಯಲಿಲ್ಲ ಅಂತ ಬೊಟ್ಟು ಮಾಡುತ್ತೇವೆ.

ಇವತ್ತು ಡಿವಿಜಿಯವರು ಬರೆದ ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ " ನೊಬೆಲ್ ಪ್ರಶಸ್ತಿ" ಅನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವ ಹಣೆಬರಹ ಕನ್ನಡಿಗರಾದ ನಮ್ಮಲ್ಲಿತ್ತು. ತಮ್ಮ ಮನೆಯಲ್ಲಿರುವ ಮನುಷ್ಯರ ಅಳಲನ್ನು ಆಲಿಸದ ಕನ್ನಡಿಗ ಸಮಾಜದಲ್ಲಿ ನಾಲ್ಕು ಜನರ ಚಪ್ಪಾಳೆಗೆ ಸಮಾರಂಭದಲ್ಲಿ ಭಾಗವಹಿಸಿ ಮುಖಬೆಲೆಯನ್ನು ಆಶಿಸುತ್ತಾನೆ. ಬಹಳ ದೊಡ್ಡ ಸಾಮಾಜಿಕ ದೌರ್ಬಲ್ಯದ ಈ ಸ್ಥಿತಿಯಲ್ಲಿ ಭಾರತದೊಳಗೇ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗದ ಮಂಕುತಿಮ್ಮನ ಕಗ್ಗ ಯಾವ ಮನಸ್ಸಿನ ಪ್ರಶಸ್ತಿಯನ್ನೂ ಮೀರಿ ನಿಂತ ಕಾವ್ಯ ಪ್ರತಿಮೆ. ಅದನ್ನು ಡಿವಿಜಿಯವರು ಅಪೇಕ್ಷಿಸಲಿಲ್ಲ ಅನ್ನುವಾಗ ಸಾಹಿತ್ಯದ ಯಾವುದೇ ಮುಖಬೆಲೆಗೆ ಮನುಷ್ಯ ಬದುಕುವುದಿಲ್ಲ ಅನ್ನಿಸಿತು. ಅದು ನಿಜವಾದ ಸಾಹಿತ್ಯದ ಸತ್ಯ. ಇಂತಹ ಸಾಹಿತ್ಯಗಳು ಈ ಭೂಮಿಯ ಅಂತ್ಯದವರೆಗೆ ಬದುಕುತ್ತವೆ ಮತ್ತು ಮನಸ್ಸಿದ್ದ ಮನುಷ್ಯರನ್ನು ಬದುಕಿಸುತ್ತವೆ.
         
ಇವತ್ತು ಹೇಳುವ ಸಾಹಿತ್ಯದ ಮಾತಿದು. ಸಾಹಿತ್ಯ ರಾಜಕೀಯಕ್ಕೆ ಒಗ್ಗಿಕೊಂಡಾಗ ಕ್ರಮೇಣ ನಶಿಸುತ್ತದೆ. ಬರಹ-ಸಾಹಿತ್ಯದದ ಆಳಕ್ಕೆ ಇಳಿಯದಿದ್ದರೆ, ಪ್ರಶಸ್ತಿಯ ಮಾನದಂಡಕ್ಕೆ ಗುಮಾನಿಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯ ವಿಶ್ವದ ನೊಬೆಲ್ ಪ್ರಶಸ್ತಿಯ ಅಡ್ಡಗೋಡೆಗೆ ಸವಾಲು. ಭಾಷೆಯ ತಳಪಾಯದಲ್ಲಿ ಮುಖ ತಿರುಗಿಸಿಕೊಂಡ ಇಂತಹ ಖ್ಯಾತ ಪ್ರಶಸ್ತಿಗಳು ಮಾನವೀಯ ಮೌಲ್ಯಗಳನ್ನು ಎಷ್ಟು ಎತ್ತಿ ಹಿಡಿಯಬಹುದು? ಸಾಹಿತ್ಯದ ಹೂರಣಕ್ಕೆ ಬಾಧ್ಯಸ್ಥವಾಗದ ಪ್ರಶಸ್ತಿಯ ಮಾನದಂಡ ಯಾವುದನ್ನೂ ಪ್ರತಿನಿಧಿಸುವುದೇ ಇಲ್ಲ. ಅದನ್ನು ಇಂದಿನ ಸಮಾಜ ಮಾಡಿತು. ಅದರಲ್ಲಿ ಕೆಲವು ಆಳದ ಹವಳದ ಸಾಹಿತ್ಯದ ಪ್ರಾಕಾರಗಳು ನಶಿಸಿದವು. ಡಿವಿಜಿಯ ಮಂಕು ತಿಮ್ಮನ ಕಗ್ಗ ,ಬಸವಣ್ಣ- ಅಕ್ಕಮಹಾದೇವಿಯ ವಚನಗಳು, ದಾಸರ ಪದಗಳು, ಸರ್ವಜ್ಞನ ವಾಕ್ಯಗಳು,ಶಿಶುನಾಳ ಷರೀಫರು, ಗುರುನಾನಕರ ವಾಕ್ಯಗಳಲ್ಲದೆ, ಹೆಸರಿನ ಮುಖಬೆಲೆಗೆ ಸಿಗದೆ ಪದ ಹಾಡಿದ ಕನ್ನಡದ ಜಾನಪದಗಳು ಪ್ರಶಸ್ತಿಯನ್ನು ಮೆಟ್ಟಿ ನಿಂತವು. ಕನ್ನಡದ ಜಾನಪದ ವಿಶ್ವವನ್ನು ಆಳುವಂತವು.ಅದನ್ನು ಕನ್ನಡದಲ್ಲಿ ನಾವು ಆಳಿಸಿಕೊಂಡಿದ್ದೇವೆ. ಅವುಗಳಿಗೆ ವಿಶ್ವದ ಯಾವುದೆ ಪ್ರಶಸ್ತಿಗಳು ಸರಿ ಸಾಟಿಯಲ್ಲ ಅನ್ನಿಸಿತು. ಹಾಗಾಗಿ ಯಾವುದೇ ಪ್ರಶಸ್ತಿಗಳು ಇವುಗಳ ಜವಾಬ್ದಾರಿಯನ್ನು ಪ್ರಶ್ನಿಸಲೇ ಇಲ್ಲ.

ಬಹಳಾ ಸಂತೋಷ. ವಿಶ್ವ ಮಾನ್ಯವಾಗಿರುವ ವಚನಗಳು ನೊಬೆಲ್ ಪ್ರಶಸ್ತಿ ಆಯ್ಕೆದಾರರ ಕಣ್ಣಿಗೆ ಕಾಣಲೇ ಇಲ್ಲ. ಡಿವಿಜಿಯ ಮಂಕು ತಿಮ್ಮನ ಕಗ್ಗ ಕಾಣಲೇ ಇಲ್ಲ. ಅದನ್ನು ಭಾರತೀಯರು,ವಿಶ್ವ ಪಂಡಿತರು ಮಾಡಲೇ ಇಲ್ಲ. ಎಂತಹ ಅಭಾಸ..!? ಇವತ್ತು ಅಮೇರಿಕಾದಲ್ಲಿ ಹುಟ್ಟಿದ ಕವಡೆ ಕಾಸಿನ ಬರವಣಿಗೆಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಗೆ ವಿಶ್ವದ ಜನತೆ ಚಪ್ಪಾಳೆ ತಟ್ಟುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದೇವೆ. ಪ್ರಶಸ್ತಿಗಳು ಕನ್ನಡ ಸಾಹಿತ್ಯವನ್ನು ಬೆಳಸಲೇ ಇಲ್ಲ. ಅದರ ಅಗತ್ಯವೂ ಇಲ್ಲ. ಕನ್ನಡ ಸಾಹಿತ್ಯ ಇಡೀ ಮಾನವ ಜಗತ್ತಿಗೆ ಬದುಕಿನ ಭಾಷ್ಯ ಬರೆದವು.
         
ನಾವು ಅವಸರದ ಈ ತಂತ್ರಜ್ಞಾನದ ಯುಗದಲ್ಲಿ ಕೆಲವಷ್ಟನ್ನು ಮರೆತಿದ್ದೇವೆ. ಉಳಿಸಿಕೊಳ್ಳುವ ಭರದಲ್ಲಿ ಕೆಲವನ್ನು ನಾಶಪಡಿಸಿದ್ದೇವೆ. ಕೆಲವು ಯಾರಿಗೂ ಗೋಚರಿಸದೆ ಕಣ್ಮರೆಯಾಗಿವೆ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವ ಕಾಲ ಪರಿಜ್ಞಾನದಲ್ಲಿ ಕೆಲವಷ್ಟನ್ನು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮ ನವೆಂಬರ್ ಒಂದು ತಿಂಗಳಲ್ಲಿ ಮರೆತು ಹೋಗುವಂತಹವು. ಕನ್ನಡ ಅನ್ನುತ ಇಂಗ್ಲೀಷ್-ಹಿಂದಿ-ತಮಿಳು ಪದ್ಯದ ಆವೇಶಕ್ಕೆ ಮೈ ಕುಲುಕಿಸುವವರಾಗಿದ್ದೇವೆ. ತಮ್ಮ ನೆಲದ ಜತನದಿಂದ ಬಂದ ಅಮೂಲ್ಯ ಸಂಸ್ಕೃತಿಗಳು ಎಲ್ಲಾ ಎಲ್ಲಗಳನ್ನು ಮೀರಿ ಅಚಲ ವಿಶ್ವಾಸಗಳ ಮೇಲೆ ಇವತ್ತು ವಿದೇಶದಲ್ಲಿ ಕನ್ನಡಿಗರು ಮತ್ತು ಭಾರತ ದೇಶದಲ್ಲಿ ಹೊರರಾಜ್ಯದಲ್ಲಿದ್ದು ಮಾಡುತ್ತಿದ್ದಾರೆ. ಹಾಗೇ ನಡೆಯುತ್ತಿದೆ ಅನ್ನುವಾಗ ಕನ್ನಡದ ನೆಲದಲ್ಲಿ ನಡೆಯುವ ಕನ್ನಡದ ಸಮಾರಂಭಗಳಿಗಿಂತ ಶ್ರೇಷ್ಠವೆನ್ನುತ್ತವೆ. ಕನ್ನಡದ ಅಭಿಮಾನಕ್ಕೆ ಸಲ್ಲಿಕೆಯಾಗುವ ನಿಸ್ವಾರ್ಥ ಸೇವೆ ಇದು. ಆತ್ಮಾವಲೋಕನ ಮಾಡಿಕೊಳ್ಳುವ ಕಾಲದ ಮಾತಿದು.