ಬುಧವಾರ, ಫೆಬ್ರವರಿ 27, 2013

ದೇವರು ನಕ್ಕರು ಜನರಿಗೆ !


ಭಾನಿನಿಂದ ಈರ್ವರು ಇಳಿದರು
ಇಲ್ಲೇ ಉಳಿದರು
ಹೋಗಲಾಗದೆ ಬಂದ ದಾರಿಗೆ

ಮುಖಾಮುಖಿ ನಡೆದರು ಮನೆಗೆ
ಜೋಗುಳ ಹಾಡಿದರು,
ಮಕ್ಕಳೇ ನೀವೇ ನಮ್ಮ ಬಾಳಿಗೆ |

ಬತ್ತಿಯಾದರು ಹಗಲು-ರಾತ್ರಿಗೆ
ಬೆರಳ ಹಿಡಿದರು,
ಮನೆಯಂಗಳ ತೋರಿ ಜಗತ್ತಿಗೆ

ಭಾವವಾದರು ನಕ್ಕು ಅಳುವಿಗೆ
ಪ್ರೀತಿ ಸುರಿದರು,
ಜಗದ ಬದುಕು ಗೆಲುವಿಗೆ |

ಭೂಮಿ ತಾಯಿ-ಸೂರ್ಯ,ತಂದೆಗೆ
ದೇವರು ನಕ್ಕರು ಜನರಿಗೆ
ಚರ್ಚು-ಮಸೀದಿ-ಗುಡಿಯೊಳಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಪದ ಬೀಜ ಬಿತ್ತಿದ ಬಯಲು !



ಬಿಳಿಹಾಳೆ ಮೇಲೆ ತಿರುಗುತ್ತವೆ
ಇಕ್ಕಟ್ಟಾದ ಅಕ್ಷರಗಳು |
ಹಿಡಿದೆಳೆದು ಹಾರುವ
ಕೈ-ಕಾಲುಗಳಂತೆ |

ಚಂದ್ರನ ಮುಖ ಅಡ್ಡಲಾದ 
ತೆಂಗು ಗರಿ ಬೆರಳುಗಳಂತೆ |

ಅಥವಾ

ಕಿಟಕಿ ಸರಳಿಗೆ ನುಸುಳಿ
ಸದ್ದಾಗದ ನೆರಳಾಗಿ
ಬೆತ್ತಲೆ ನೆಲ ಮುಚ್ಚಿದ
ಬೆಳದಿಂಗಳಿನಂತೆ |

ಚತುರ ಪದೋಕ್ತಿ ಬಿತ್ತಿ
ಬೆಳವ ಬೀಜ ಚಮತ್ಕಾರಗಳು
ನವಜಾತ ಶಿಶು ಚರ್ಮದ ಮೃದುವಿನಂತೆ |

ಈ  ಕಚ್ಚಾ ಕಾಗದ
ಮೃದುವಾಗಿ, ಗರಿಗರಿಯಾಗಿ
ಕನ್ಯತ್ವ ಕಳೆಯದ ಪ್ರೀತಿಯಾಗಿ
ಹೊಸ ಹುಟ್ಟಿಗೆ ಹೊರಟಿದೆ
ನನ್ನ ಕೈ ಕೆಳಗೆ |

ದಣಿದ ನಾನು,
ಹೃದಯ ಬಯಸಿದ ಭಾವಕೆ
ಮುಖ ಮಲಗಿ ಪ್ರಕಟವಾಗುತ್ತೇನೆ
ಚೆಲ್ಲಿ ,ಒಂದು ಹನಿ ಶಾಯಿಗೆ |

ನೆಲೆಯಾಗುತ್ತೇನೆ
ಅದ್ಬುತ ಶೂನ್ಯ ಪ್ರಕಾಶದಡಿಯ
ಮಾತುಗಳಿಗೆ ಶಬ್ಧವಿಲ್ಲದಂತೆ |
-ರವಿ ಮೂರ್ನಾಡು

ಭಾನುವಾರ, ಫೆಬ್ರವರಿ 24, 2013

ಆ ಅಕ್ಕಸಾಲಿಗ ।



ಕವಿತೆ ಬರೆಯಲು ಕುಳಿತಾಗಲೆಲ್ಲ
ಆ ಅಕ್ಕಸಾಲಿಗನ
ಸುತ್ತಿಗೆ ಧ್ವನಿ ಕೇಳಿಸುತ್ತಿದೆ |

ಪಟ್ಟಣಕೆ ಸಂತೆಗೆ ಹೋದಾಗಲೆಲ್ಲಾ
ಅಂಗಡಿ ಮುಂದೆ ನಿಲುತ್ತೇನೆ,
ಕುಲುಮೆಗೆ ಬಿದ್ದ ಚಿನ್ನ
ಆಭರಣವಾಗುವರೆಗೆ

ಅವನಲ್ಲಿ ಪ್ರಶ್ನಿಸಿದ್ದೆ,
ಯಾರವರು ಸುತ್ತಿಗೆಯೊಳಗೆ ?!

ಅವನು ನಗುತ್ತಾನೆ,  
ಅದಾಗಲೇ ಹೆಂಗಸೊಬ್ಬಳು-
ಕೊಟ್ಟ ಮಾಸಲು ಚಿನ್ನಕೆ
ತದೇಕ ದೃಷ್ಟಿ ಹಾಯಿಸುತ್ತಾನೆ |

ಬಟ್ಟೆಗೆ ಉಜ್ಜಿ, ನೀರಿಗೆ ತಿಕ್ಕಿ
ಉಫ್ ಉಫ್ ಗಾಳಿಸಿ
ಭೂತ ಕನ್ನಡಿ ಕಣ್ಣಗಲಿಸಿ
ದೊಡ್ಡದು ಮಾಡಿ ಮೇಲೆ -
ಕೆಳಗೆ ನೋಡುತ್ತಾನೆ,
ಕೊಳೆ ಬಿಟ್ಟ ಮೈ
ತೆಳ್ಳಗೇ ಹೊಳೆವವರೆಗೆ |

ಅಲ್ಲೇ ಮಣ್ಣ ಕುಲುಮೆಗೆ ಹಾಕಿ,
ಅದರ ಬಾಯಿಗೆ ಇಕ್ಕಳ ಸಿಕ್ಕಿಸಿ
ಎತ್ತಿ ನೋಡುತ್ತಾನೆ,
ಹೊಳಪಿಗೆ ಒಳಗಿದೆಯೇ ನಿದ್ದೆ ?
ಮತ್ತೆ ಕಣ್ಣಿಗೆಳೆದು, ಇಳಿದು 
ಇಣುಕಿ ನೋಡುತ್ತಾನೆ
ಇಲ್ಲ ! ಸಿದ್ದವಾಗಿದೆ ಯುದ್ದಕೆ
ಮತ್ತೊಂದು ಒಲುಮೆಗೆ |

ಬೂದಿ ಮುಚ್ಚಿದ ಕೆಂಡಕೆ ಮುಂದೆ
ಮೈ ತಬ್ಬಿದ ಪಾತ್ರೆಯಲಿ
ಕೊಳವೆ ಎದೆಯಿಂದ ಗಾಳಿಸಿ
ರೂಯ್ಯೋ ರೂಯ್ಯೋ ಬಾರಿಸಿ
ಕುಲುಮೆ ಇರಿಸಿ ನೋಡುತ್ತಾನೆ
ಸೂರ್ಯ ಮಾತ್ರ ಇದ್ದಾನೆ ಬೆಂಕಿ ಮುಂದೆ |

ನೋಡುತ್ತಲೇ ಇದ್ದ ನನಗೆ
ಪಕ್ಕನೆ ಕುಲುಮೆಯೆತ್ತಿ
ನೀರಿಗೆ ಮುಳುಗಿಸಿದವನ
ಕೈಯಲ್ಲಿ ದುಂಡಗೆ ಹೊಳೆದ ಕಲ್ಲಿದೆ |
ಮಡಿಲ ಬಟ್ಟೆಗೆ ಹಾಕಿ, ಎತ್ತಿ
ಮುಂದಿರುವ ಕಲ್ಲಿಗೆ ತಟ್ಟುತ್ತಾನೆ
ನವಿರು ಮಾತು ಕಿವಿಗಿಳಿಯುತ್ತಿದೆ

ಮನೆಗೆ ಬಂದ ನಾನು,
ಬರೆಯಬೇಕೆಂದಾಗಲೆಲ್ಲ
ಆ ಸುತ್ತಿಗೆ ಧ್ವನಿ ಕೇಳುತ್ತಿದೆ |
ಪತ್ನಿಯ ಮೂಗುತಿಯಲಿ
ಸೂರ್ಯ ಕಿರಣವೊಂದು
ಕಾಯುತಿದ್ದ ಮಿಂಚಿನಂತೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಗುರುವಾರ, ಫೆಬ್ರವರಿ 21, 2013

ಭುಜಕ್ಕೇರಿ ಕುಳಿತ ಎರಡು ಕತ್ತಲೆ ಹಿಂಡುಗಳು !



ಅಪ್ಪ ಸತ್ತ ಮಾರನೇ ದಿನ
ಮನೆಯ ಕಿಟಕಿ ಸರಳುಗಳೆಡೆಗೆ
ಕಣ್ಣು ಬಿಟ್ಟಿದ್ದೆ
ಹುಲ್ಲು ಹಾಸಿನ ಬಯಲ ಕತ್ತಲೆಯಲಿ
ಅವರು ನಡೆದ ಹೆಜ್ಜೆ ಧ್ವನಿ ಆಲಿಸುತ್ತಿದ್ದೆ |

ನನಗೆದುರಾಗಿ, ಅವರ ಪಾದಗಳಲಿ
ಚಂದ್ರ ಹೊಳೆಯುತ್ತಿದ್ದ  |
ಎರಡೂ ಬದಿ ಧೂಳಿಗೆ
ಗಾಳಿ ಬೊಗಸೆಗಿಡಿದು ಒರೆಸುತ್ತಿದ್ದ
ಕೈಗಳಲ್ಲಿ ರಾತ್ರಿಯೊಂದು
ಕಡಿವಾಣವಿಲ್ಲದ ಕುದುರೆಯಂತೆ
ಓಡುತ್ತಿತ್ತು |

ನಾನು ಪ್ರಶ್ನಿಸಿದ್ದೆ
ಎಷ್ಟು ದಿನ ಹೀಗೆ ನಡೆಯುವಿರಿ ?
ಇದು ವಯಸ್ಸು,
ಗಾಳಿ ಉತ್ತರಿಸಿತು
ಖಂಡಿತವಾಗಿ, ಇದು ಗಾಳಿ ಗೀತೆ

ಊಟದ ತಟ್ಟೆ ,ಲೋಟಗಳಿಗೆ
ಬೆರಳುಗಳು ತಿರುಗುತ್ತಾ,
ಬಾಲ್ಯದ ಪೀಠೋಪಕರಣಗಳು
ಬಣ್ಣದ ಕುದುರೆಗಳ ಓಟಕೆ
ಬದಲಾಗುತ್ತಿವೆ  |
ಮತ್ತೊಮ್ಮೆ ತಿರುಗುತ್ತಿವೆ
ಹಳೆ ಸಲಕರಣೆಗಳಂತೆ

ಎಕರೆಗಟ್ಟಲೆ, ಬಯಲು ದಾಟಿ
ನಡೆಯುತ್ತಲೇ ಇದ್ದಾರೆ |
ಅವರ ನಾಲಗೆ ತುದಿಯಲಿ
ನಶಿಸಿದ ಸಾಮ್ರಾಜ್ಯವೊಂದರ
ನಾಣ್ಯದ ಬೆಳಕು ಕಂಗೊಳಿಸುತ್ತಿದೆ

ಸುಗಂಧ ,ಇನ್ನೊಂದು ಚಿನ್ನದ- 
ಪರಿಮಳಗಳ ಜೊತೆಗೆ,
ಎರಡು ಕತ್ತಲೆ ಹಿಂಡುಗಳು
ಭುಜಕ್ಕೇರಿ ಕುಳಿತು ಚಲಿಸಿವೆ |
ಅದೋ.. ಇದೀಗ
ಮುಖ ತಿರುಗಿಸುತ್ತಿದ್ದಾರೆ ತಂದೆ |

ಮತ್ತೆ ಹೋಗಲು ಹವಣಿಸಿದಾಗ
ಭಾರೀ ಮಳೆಗೆ ಹುಟ್ಟಿಕೊಂಡ
ಭಯಾನಕ ರಭಸಗಳ ಭೇದಿಸಲು
ಮುಂದೋಳುಗಳು ಗಾಳಿಗೆ ಬಾಚುತ್ತಿವೆ |

ಕಿಟಕಿ ಪಕ್ಕದ ಹೊರಾಂಗಣಕೆ
ಕುರ್ಚಿಗೆ ಕುಳಿತಿದ್ದೇನೆ |
ಮುಕ್ತ ನೆಲೆ ಕಂಡ ಗಾಳಿ
ಕಾಲ ಸೋಕಿ ಸರಿದಾಗ,
ಜೀವನ ಮೌಲ್ಯದ ಬೆಲೆ
ಅಳತೆಗೆ ಸಿಗಲಿಲ್ಲ  |

ನಾನೀಗ ಬೆಳೆದಿದ್ದೇನೆ
ನನ್ನ ಕೋಣೆಗೆ ಹಿಂತಿರುಗಿ
ಗೊತ್ತಿರುವುದನು ಪುನರಾವರ್ತಿಸುತ್ತೇನೆ |
ಭೂಮಿಯೊಂದು ಮನೆಯಲ್ಲ
ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ |

ಬಯಲು ದಾಟುವ ಮನುಷ್ಯನ
ಕೈಯಲ್ಲಿದೆ ಹಳೆ ರೇಶಿಮೆ 
ಜೊತೆಗೆ,ಹೊಸ ಚಂದ್ರನ ತುಣುಕು |
ಸಾವಿನಿಂದ ಪಲಾಯನಗೈಯ್ಯಲು 
ಉಪಾಯಗಳ ಹುಡುಕಾಡುತ್ತೇವೆ 
ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ  |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಮಂಗಳವಾರ, ಫೆಬ್ರವರಿ 19, 2013

ಕನ್ನಡ ನಮ್ಮದು !



ತಾಯ ಗರ್ಭವದು
ನನ್ನ ಮಣ್ಣದು
ಮರಳಿ ಸೇರುವೆನು ಮನೆಗೆ |

ತ್ರಿವರ್ಣ ಸೀರೆಗೆ
ಜೀವನ ಚಕ್ರವಿದೆ
ಬಂಡಿ ಉರುಳಿ ತೆರೆದ ಹಣತೆ |

ತಂದೆ ಕಿರೀಟವಿದೆ
ತಾಯಿ ಪಲ್ಲಕಿಯಿದೆ
ರಾಜಹಂಸಕೆ ತಾಯ್ನೆಲದ ಕನಸು |

ಪತ್ನಿಯ ನಗುವಿದೆ
ಮಡಿಲಿಗೆ ಹೂವಿದೆ
ಚಿಗುರು ಗಿಡವಾಗಿ ಬೆಳೆದ ಮನಸು |

ತಾಯ ಭಾಷೆಯಿದು
ಕನ್ನಡ ನಮ್ಮದು
ಅಲ್ಲಿರಲಿ ಕೊನೆಗೆ ಉಸಿರು |
-ರವಿ ಮೂರ್ನಾಡು

ಭಾನುವಾರ, ಫೆಬ್ರವರಿ 17, 2013

ನಿದ್ರೆಯ ಬಾಗಿಲು !



ಬೆಳಕೊಂದು ಕಟಕಟಾಯಿಸುತ್ತಿದೆ
ನಿದ್ರೆಯ ಬಾಗಿಲು |
ದೋಣಿ ಬದಿಗೆಳೆವ
ಹಗ್ಗದ ಶಬ್ದದಂತೆ |

ನೀರೊಳಗೆ ಕೇಳುತ್ತಿದೆ
ಎರಡೂ ಬದಿಯೆತ್ತುವ ಮಾತು
ಪರಸ್ಪರ ವಿರುದ್ದವಾಗಿ
ಅಂಗಾತ ಮಲಗಿದ ಮೇಲ್ಮೈ
ಕೆಳಗೆ ಉಜ್ಜಿದಂತೆ|

ಅಲೆಅಲೆಗಳುಕ್ಕಿ
ನಿದ್ರೆಗೆ ಹೊರಟಿದೆ ಮೌನ
ತೆಳು ಹೆಜ್ಜೆಯಿಕ್ಕಿ |

ಈ ನಕ್ಷತ್ರ ನಕ್ಷೆಯಲಿ
ಮುಂಚೋಣಿಯಲ್ಲಿದೆ ಅಂಕುಶ
ಲಗಾಮಿಲ್ಲದ ಓಟಕೆ
ದಾರಿಯ ಸೂತ್ರವಾಗಿ |

ಎಲ್ಲಾ ವಿಫಲ ಪ್ರತಿಧ್ವನಿಗಳಿಗೆ
ಮುಚ್ಚಿಬಿಡಿ ಕಿವಿ
ಭಿತ್ತಿ ಮೇಲಿನ ಚಿತ್ರಗಳಿಗೆ
ಬಣ್ಣ ಚೆಲ್ಲಿ ಬಿಡಿ |

ಮಂದ ನಕ್ಷತ್ರ ದೀಪದಿಂದ
ತೂರಿ ಬರುವುದು ದಾರಿ |
ಉತ್ತುಂಗದ ಸ್ಥಿತಿ ಚದುರಿ
ಶೂನ್ಯಕ್ಕೆ ಜಾರುತ್ತಿದೆ ತುದಿ |

ಗಾಳಿಗೆ ಕೈಮುಗಿದು ಪ್ರಾರ್ಥನೆ
ತಿರುಗಲಿ, ಕೈವಾರದ ಹುಲ್ಲಿನ ತಂತಿ
ಯಾವುದಾದರೂ ದಿಕ್ಕಿದ್ದರೆ
ಆ ಕಡೆಗೆ ಮಗ್ಗಲು ಮಗುಚಲಿ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಗುರುವಾರ, ಫೆಬ್ರವರಿ 14, 2013

ಮೊದಲ ಮಲ್ಲಿಗೆ ಹೂವಿನ ತಲೆ ಕತ್ತರಿಸಿದ ರಾತ್ರಿ !



ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |

ಎಲ್ಲವೂ ಅಲ್ಲೇ ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ |

ಎಲ್ಲೆ ಮೀರದ ಆಸುರಕ್ಷಿತ ಕೋಟೆ |

ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |

ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |

ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |

ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |

ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |

ಎಲ್ಲವೂ ಅಲ್ಲೇ  ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಅದೋ ರಾತ್ರಿ ಚಲಿಸಿದೆ...
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |
-ರವಿಮೂರ್ನಾಡು

ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ….

http://avadhimag.com/?p=77539 

ಬುಧವಾರ, ಫೆಬ್ರವರಿ 6, 2013

"ಪ್ರೀತಿ" ಹೇಳಿದ ಪದಗಳನು ಗಂಟಲಿಗಿಳಿಸಿ ..!



ಒಪ್ಪಿಕೊಂಡ ಮೇಲೆ
ನಮ್ಮ ಮನೆಗೆ ಹಿಂತಿರುಗಿದೆವು
ನಾವು ಪ್ರೇಮಿಗಳು |
ಇಬ್ಬರಿಗೂ ತಡೆಯಿಲ್ಲದ ಪ್ರೀತಿ
ನಿಲ್ಲಿಸದಾದೆವು

ಬಂದು ನಿನ್ನ ಪ್ರೀತಿಯ
ಏಕಾಏಕಿ ಕಸಿದುಕೊಳ್ಳುತ್ತೇನೆ
ನೀನೇನು ಮಾಡಬಲ್ಲೆ?

ಸಣ್ಣ ಪೊದೆಯೊಳಗೆ
ಬೆಳೆಯುತ್ತಿದೆ ಕಪ್ಪು ಎಳೆ |
ಹಳದಿಗರಳಿದ ಸೂರ್ಯ
ಕಿಟಕಿ ಸರಳಿಗಿಣುಕಿ ಕಿರಣ
ಇದೀಗ ಬೆತ್ತಲೆ |

ನೀ ನನ್ನ ನೋಡುತ್ತಿದ್ದೆ
ತಿನ್ನುವಂತೆ |
ನಾಲಗೆಯಿಳಿಸಿ ಬಾಯೊಳಗೆ
ತಿರುಗುವಂತೆ |

ಒಬ್ಬರಿಗೊಬ್ಬರು
ಅಭಿನಂಧನೆಗೆ ಕಾದೆವು
ಆದರೆ,
ಎಲ್ಲರಿಗೂ ಗೊತ್ತಿದೆ
ಪ್ರೀತಿ ದಿವಾಳಿಯಂತೆ !

ಎದೆಗಳಿಗೆ, ಮುಂದಿನ ವೆಚ್ಚದ ಪಟ್ಟಿ
ಉಡುಪು ತೊಟ್ಟ ಬೊಂಬೆಯ
ಶೂನ್ಯ ಮಧ್ಯಕೆ ಛೇದಿಸಿ 
ಸಮಾನ ಜನರ ಹಾಯುತಿದೆ
ಖಾಲಿ ಗಾಜು ಪ್ರತಿಫಲಿಸಿ |

ನಿಷೇಧಾತ್ಮಕವಾಗಿ,
ಹೇಳಿದ ಪದಗಳನು ಎಂಜಲಿಗದ್ದಿ
ಗಂಟಲಿಗಿಳಿಸುತ್ತಿದ್ದೇನೆ |
ನಾ ನಿನ್ನ ಪ್ರೀತಿಸುತ್ತೇನೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ 

ಮಂಗಳವಾರ, ಫೆಬ್ರವರಿ 5, 2013

ತೊರೆದ ಪ್ರೀತಿಗೊಂದು ಪ್ರಶ್ನೆಗಳ ಸಾಂತ್ವನ !



ನೀನೊಮ್ಮೆ ಬಂದಿದ್ದೆ
ಈ ಪ್ರೀತಿ ಪರಿಧಿಯೊಳಗೆ
ಅದೀಗ ತೆರೆದಿದೆ
ನನ್ನ  ಪ್ರೀತಿಸಿದ ಜನರನ್ನೇ
ನಿನಗಿಂತ ಪ್ರೀತಿಸುವೆನು
ಇದೀಗ ಮುಂದಿದೆ

ಪ್ರೀತಿ ಒಳಗೋಳ ಸೀಳಿ-
ನಂಬಿಕೆ ಮೇಲ್ಮುಖ ಹೊರಳಿ
ಕತ್ತರಿಸುವ ರಾತ್ರಿಗಳಿಗೆ
ಪ್ರೀತಿ ಮಿತಿಯಿದೆಯೇ?
ನೀರವತೆ ತಬ್ಬಿ ಪ್ರಶ್ನೆಗಳ 
ವರ್ತುಲ ವರ್ತುಲದೊಳಗೆ
ಶೋಧ, ಅಸ್ವಸ್ಥಗಳಿಗೆ
ಚಿಂತೆಯಿದೆಯೇ?

ಕಥೆ ಹೆಣೆದ ನಿದ್ದೆಗಳಿಗೆ
ಒಂದೊಮ್ಮೆ ಸ್ನೇಹತನವಿತ್ತು
ಇದೀಗ ಎಚ್ಚರವಿದೆ ಶತ್ರುವಿಗೆ
ಯಾವ ಕಥೆಗೆ?
ನಿನ್ನ ಪ್ರೀತಿಸಿದ ದಿನಗಳಿಗೆ
ಅದೆಂಥ ಮೂರ್ಖತನವಿದೆ
ನೆನಪು ಹಲಗೆಯ ಕಪ್ಪಿಗೆ
ಬಳಪವಿದೆಯೆ?

ಪ್ರೀತಿ ಕಡಲೆದೆಯೊಳಗೆ
ಉಬ್ಬಿ ಕಂಪನದ ಉರಿ
ಅಲೆಯುತ್ತಿರಲಿ ತಂಪಾಗಿ
ತಡಿಯವರೆಗೆ |
ನೆನಪು ಒಳಗೋಳ ಸೀಳಿ
ನಂಬಿಕೆ ಮೇಲ್ಮುಖ ಚಿಮ್ಮಿ
ಹೆಜ್ಜೆಗಳ ಸವೆಯುತಿರಲಿ
ಜನರ ಕಡೆಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಶನಿವಾರ, ಫೆಬ್ರವರಿ 2, 2013

"ಕವಿತೆ" ಬರೆವ ಗೆಳೆಯನಿಗೊಂದು ಪತ್ರ !



ಪ್ರೀತಿಯ ಕವಿಮಿತ್ರ, ನಮಸ್ಕಾರಗಳು.
ನೀವು ಕಳುಹಿಸಿದ್ದ ಈ ಮೈಲ್ ಪತ್ರ ಸಿಕ್ಕಿ ಹಲವು ಸಮಯಗಳೇ ಕಳೆಯಿತು. "ಕವಿತೆ ಹೇಗೆ ಬರೆಯುವುದು" ಅಂತ ಅಲ್ಲಿ ಸಲಹೆ ಕೇಳಿದ್ದೀರಿ. ಉತ್ತರ ಬರೆಯಲು ತಡಕಾಡಿ ಇಷ್ಟು ಸಮಯವಾಯಿತು. ಕ್ಷಮೆಯಿರಲಿ. ಇದೊಂದು ಕ್ಲಿಷ್ಟಕರ ಆಲೋಚನೆ ಅನ್ನಿಸಿತು. ಅಂದಿನಿಂದ ಇಂದಿನವರೆಗೆ ನೂರಾರು ಕವಿತೆಗಳನ್ನು ಓದಿ ಒಂದೆರಡು ಬರೆಯಲು ಪ್ರಯತ್ನಿಸಿದ್ದೇನೆ. ಅದಕ್ಕೊಂದು ಉತ್ತರ ಕಂಡುಕೊಳ್ಳಲು ಹವಣಿಸಿದ್ದೇನೆ. ಆಳವಾದ ಮತ್ತು ನಂಬಿಕೆಯ ಪ್ರೀತಿಯಿಟ್ಟು ವಿಶ್ಲೇಷಣೆಯ ಪ್ರಶ್ನೆ ಕೇಳಿದ್ದಕ್ಕೆ ಮೊದಲು ಧನ್ಯವಾದ ಅರ್ಪಿಸುತ್ತೇನೆ. ಪತ್ರದೊಂದಿಗೆ ನೀವು ಕಳುಹಿಸಿದ ಕವಿತೆಗೆ ಹೆಚ್ಚಿನದನ್ನು ಹೇಳಲಾರೆ. ಕವಿತೆ ಬರೆದ ಶೈಲಿಗೆ ಅಭಿಪ್ರಾಯ ವ್ಯಕ್ತಪಡಿಸಲಾರೆ. ಕಟು ವಾಸ್ತವದ ಅಭಿಪ್ರಾಯ ಮಂಡಿಸುವ ಅಭ್ಯಾಸವನ್ನು ಬಹಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದೇನೆ. ಬರಹಗಾರ ತಾನೇ ಕರಗತ ಮಾಡಿಕೊಂಡ ಬರಹದ ಕಲೆಯನ್ನು ಯಾವುದೇ ಕಟು ಅಭಿಪ್ರಾಯದ ಮಾತುಗಳು ಉತ್ತೇಜಿಸುವುದಿಲ್ಲ. ದುರಾದೃಷ್ಟವಶಾತ್, ವ್ಯಕ್ತಪಡಿಸುವ ಪ್ರತ್ರಿಕ್ರಿಯೆಗಳು ಯಾವಾಗಲೂ ತಪ್ಪಾಭಿಪ್ರಾಯಗಳನ್ನು ಸೃಷ್ಟಿಸುವುದೇ ಹೆಚ್ಚು. ಅದು ದೊಡ್ಡ ಮಟ್ಟದಲ್ಲಿರಬಹುದು ಅಥವ ಸಣ್ಣ ಪ್ರಮಾಣದಲ್ಲಿರಬಹುದು. ಮನಸ್ಸಿನ ಪ್ರಾಮಾಣಿಕತೆಯನ್ನು ಅದು ಅವಲಂಭಿಸಿದೆ. ಅದಕ್ಕೆ ಏನೆಂದು ಹೇಳಲಿ ಮಿತ್ರ ? ಸಾಮಾನ್ಯವಾಗಿ ಜನರು ಇಷ್ಟಪಡಲು ಇಚ್ಚಿಸುವಂತೆ ಅವರ ವಿಚಾರವನ್ನು ಸುಲಭವಾಗಿ ಅರ್ಥೈಸುವುದು ಕಷ್ಟ. ಅಥವಾ ಅಭಿಪ್ರಾಯ ಮಂಡಿಸುವುದು ಅಷ್ಟೇ ಕಷ್ಟ. ಬಹುಪಾಲು ಸಂದರ್ಭಗಳು ಮಾತಿನ ಪದಗಳಿಗೆ ಸಿಗದೆ ಅಡಗಿಕೊಂಡಿರುತ್ತವೆ. ಕೆಲವಷ್ಟು ಶಬ್ದಗಳನ್ನೇ ಹುಟ್ಟಿಸದೆ ಹಿಂದೆ ಬಿದ್ದಿರುತ್ತವೆ. ಕಲೆಯ ತಂತ್ರಗಾರಿಕೆ , ನೈಪುಣ್ಯತೆಗಳು ಪ್ರತಿಕ್ರಿಯೆಗಳನ್ನು ಕೆಲವೊಮ್ಮೆ ತಡೆದು ಬಿಡುತ್ತವೆ. ಏಕೆಂದರೆ, ಅಲ್ಲಿರುವ ಅತ್ಯಾದ್ಬುತ ಪ್ರತಿಮೆ ಸೃಷ್ಠಿಸಿದ ನೆಲೆ ಮತ್ತು  ದಿವ್ಯಾನೂಭೂತಿ. ಯಾರದ್ದೋ ಬದುಕಿನ ವಿವರಣೆಯನ್ನು ನಾವು ಓದುವಾಗ, ನಮ್ಮದೇ ಅನುಭವಗಳು, ಭಾವಗಳು ಅಲ್ಲಿ ಸ್ಪೋಟಗೊಳ್ಳುತ್ತವೆ.

ಈ ವಿಷಯಗಳನ್ನು ಮೊದಲು ಹೇಳುವ ಮೂಲಕ, ಈಗ ಧೈರ್ಯವಾಗಿ ನಿಮ್ಮ ವಿಷಯದ ಮೂಲಕ್ಕೆ ಬರುತ್ತೇನೆ. ಇದಕ್ಕಾಗಿ "ನಾನು" ಮತ್ತು "ನಮ್ಮದು" ಎನ್ನುವ ಎರಡು ಪದ ಸಂಬೋಧನೆಯ ಅರ್ಥ ವಿಶಾಲತೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. "ನಾನು" ಎನ್ನುವ ಪದ ವಿನ್ಯಾಸವೇ ವ್ಯಯಕ್ತಿಕ ಶೈಲಿ. ಯಾವುದೋ ವ್ಯಕ್ತಿಗತ ವಿಚಾರವನ್ನು ವಿವರಿಸಿ, ತನ್ನ ಮನಃಶಾಂತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಲ್ಲಿರುವ ತನ್ನ ಗುಪ್ತ ಓರೆ ಕೋರೆಗಳನ್ನು ತೋರ್ಪಡಿಸುವುದು ಆಗಿದೆ. ಅಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ಮನದೊಳಗಿನ ಯಾವುದೋ ತನ್ನ ಆಸೆಗಳನ್ನು ಪೂರೈಸುವ ಸಲುವಾಗಿ ಪದಗಳ ಮೂಲಕ ಪ್ರತಿಕ್ರಿಯಿಸಿ ಓದುಗರನ್ನು ಒತ್ತಾಯಿಸುತ್ತಿರುತ್ತವೆ. ’ನನ್ನನ್ನು" ಮಾತ್ರ ತೃಪ್ತಿಪಡಿಸುವ ಮಾತುಗಳೇ ಹೊರತು ನನ್ನಂತೆಯೇ ಇರುವ ಹಲವರನ್ನು ತಲುಪಲು ಶಕ್ತಿ ಕಳೆದುಕೊಳ್ಳುವುದು.  ರಂಜನೀಯ ಪದಗಳ ಶೈಲಿ ಮತ್ತು ವಿನ್ಯಾಸಗಳ ಮೂಲಕ ವಸ್ತು ವಿವರಣೆ ಕಡಿತಗೊಳ್ಳುತ್ತವೆ. ಮಾತುಗಳು ನೇರವಾಗಿ ಅಪ್ಪಳಿಸದೆ ಓರೆಕೋರೆಯಾಗಿ ನೇರವಾಗಿ ನಿಲ್ಲಲು ಹವಣಿಸುತ್ತವೆ.  ಓರೆಕೋರೆಯ ಏಕ ಬದುಕನ್ನು ಪ್ರತಿನಿಧಿಸಿ ಬಹು ವ್ಯಕ್ತಿತ್ವಕ್ಕೆ ವಿಸ್ತಾರಗೊಂಡ ಜಗತ್ತಿನಲ್ಲಿ  ಕೊಡುವ ವಿವರಣೆ ನಿಮಗೆ ಮಾತ್ರ ಧ್ವನಿಸುವುದು. ಅದಕ್ಕೆ ಉತ್ತರವನ್ನೂ ಕೂಡ ಸ್ವತಃ ಕಂಡುಕೊಳ್ಳುವುದು ಬದುಕಿನ ಪ್ರಯತ್ನ. ಆದರೆ, "ನಮ್ಮದು" ಎನ್ನುವ ಹಲವು ಜನರನ್ನು ಪ್ರತಿನಿಧಿಸುವ ಪದವೇ ತುಂಬಾ ಸುಂದರವಾಗಿದೆ. ಸಮಾನವಾದ ಯಾವುದೋ ಹೆಚ್ಚುಗಾರಿಕೆ ಅಲ್ಲಿ ಅಪೂರ್ವತೆಯ ಅಂಚಿನಲ್ಲಿರುವ ಜನರ ಆಸೆಗಳನ್ನು ನೆರವೇರಿಸುವಂತಿದೆ ಅಥವ ಅದನ್ನು ವಿವರಿಸುವಂತಿದೆ ಅಥವ ಅಲ್ಲೊಂದು ಬದಲಾವಣೆಯ ಪ್ರಕ್ರಿಯೆಗೆ ಪ್ರಚೋದಿಸುತ್ತದೆ. ಇದು ತನ್ನಂತೆ ಇರುವ ಇತರರನ್ನು, ಜನರೇ ಒಂದಾದ ಸಮಾಜವನ್ನು , ಸಮಾಜವೇ ಒಂದಾದ ಜಗತ್ತನ್ನು ಪ್ರತಿನಿಧಿಸುವುದು. ಸ್ವಂತ ಬುದ್ದಿವಂತಿಕೆ, ಸ್ವತಂತ್ರವಾಗಿ ನಿಲ್ಲಲು ಶಕ್ತಿಯಿಲ್ಲದಿದ್ದರೆ "ನಾನು" ಎಂಬ ಪದದ ಸುತ್ತ ಹೆಣೆದ ಕವಿತೆಯ ಸಾಮಾರ್ಥ್ಯ "ನಮ್ಮದು" ಎನ್ನುವ ಪದದ ಸುತ್ತ ಹೆಣೆದ ಬಲಿತ ಕವಿತೆಯ ಮುಂದೆ ಗೌಣವಾಗುವುದು.

"ನಾನು ಕಳುಹಿಸಿದ ಕವಿತೆ ಉತ್ತಮವಾಗಿದೆಯೇ" ಎಂದು ನೀವು ಕೇಳಬಹುದು. ಅದಕ್ಕೊಂದು ಪ್ರತಿಕ್ರಿಯೆ ಬರೆಯಿರಿ ಎನ್ನಬಹುದು. ಬರೆಯದಿದ್ದರೆ ಅಪಾರ್ಥವಾಗಬಹುದು. ಅದೇ ನಿಮ್ಮ ಕವಿತೆಯನ್ನು ಪತ್ರಿಕೆ ಪ್ರಕಟಣೆಗೆ ಕಳುಹಿಸುತ್ತೀರಿ. ಅಂತರ್ಜಾಲ ಈ-ಮಾಧ್ಯಮದ ಸಂಪಾದಕರಿಗೆ ಕಳುಹಿಸುತ್ತೀರಿ. ಅದೇ ಕವಿತೆಯನ್ನು ಇತರರ ಕವಿತೆಗಳೊಂದಿಗೆ ಹೋಲಿಸಿ ನೋಡುತ್ತೀರಿ. ನಿಮ್ಮ ಮೆಚ್ಚಿನವರು,ಗೆಳೆಯರು ಅದಕ್ಕೊಂದು ಪ್ರತಿಕ್ರಿಯೆ ಕೊಡದಿದ್ದರೆ ಉತ್ಸಾಹ ಕುಸಿದ ಭಾವ ಆವರಿಸಿಕೊಳ್ಳುತ್ತೀರಿ.  ಕಳುಹಿಸಿದ ನಿಮ್ಮ ಕವಿತೆಗಳನ್ನು ಕೆಲವು ಪತ್ರಿಕೆಯವರು ಪ್ರಕಟಿಸದೆ ತಿರಸ್ಕರಿಸಿದರೆ ನೊಂದುಕೊಳ್ಳುತ್ತೀರಿ. ಈಗ ನಿಮ್ಮ ಕವಿತೆಯ ಬಗ್ಗೆ ಸಲಹೆ ಕೊಡಲು ನಾನು ಅನುಮತಿ ಪಡೆದುಕೊಂಡಿದ್ದೇನೆ. ಈ ಮೇಲಿನ ಪತ್ರಿಕೆ, ಅಂತರ್ಜಾಲ ಮಾಧ್ಯಮ, ಇತರ ಕವಿತೆಗಳ ಹೋಲಿಕೆ, ಉತ್ಸಾಹ ಕುಸಿದ ಭಾವ, ತಿರಸ್ಕಾರ ಸೇರಿದಂತೆ  ನೊಂದುಕೊಂಡ ಎಲ್ಲಾ ವಿಷಯಗಳನ್ನು ಏಕಕಾಲದಲ್ಲಿ ಸೂಚಿಸುತ್ತದೆ. ನೀವು ಯಾವುದನ್ನೂ ಅಗತ್ಯವಾಗಿ ಮಾಡಲಾಗದೆ, ಹೇಳಲಾಗದ ಸ್ಥಿತಿಯಲ್ಲಿದ್ದಾಗ ಹೊರಗೆ ಬಂದು ಇನ್ನೊಬ್ಬರಿಂದ ಈ ಎಲ್ಲವನ್ನೂ ಅಪೇಕ್ಷಿಸುತ್ತೀರಿ. ಆದರೆ, ಕವಿತೆಯ ವಿಷಯದಲ್ಲಿ ಯಾರೂ ನಿಮಗೆ ಸಲಹೆ ಕೊಡಲಾರರು ಕವಿಮಿತ್ರ. ಯಾರೂ ಸಹಾಯ ಮಾಡಲಾರರು. ಯಾರೂ ಇಲ್ಲ. ಕೇವಲ ಅಭಿಪ್ರಾಯಿಸಬಹುದಷ್ಟೇ. ಸ್ವಲ್ಪಮಟ್ಟಿಗೆ ಅದು ಪರ ಅಥವ ವಿರುದ್ಧವಾಗಿ ಮೆಚ್ಚಿಸಬಹುದಷ್ಟೇ. ಇದರಿಂದ ಉತ್ತೇಜಿತರಾಗಿ ಮತ್ತೊಂದು ಇಂತಹದ್ದೇ ಶಕ್ತಿಹೀನ ಬರಹಕ್ಕೆ ತೊಡಗಿಸಿಕೊಳ್ಳಬಹುದಷ್ಟೆ . ಅದು ನಿಮಗೆ ಶಕ್ತಿ ಕೊಡಲಾರದು. ನಿಮ್ಮ ಕವಿತೆಯ ದೌರ್ಬಲ್ಯಗಳನ್ನು ಕಂಡು ಹಿಡಿಯಲಾರಿರಿ.

ಪ್ರೀತಿಯ ಕವಿಮಿತ್ರ ,ಈ  ಸಮಸ್ಯೆಗೆ ಇರುವ ಒಂದೇ ಒಂದು ದಾರಿಯೆಂದರೆ, ನಿಮ್ಮ ಕವಿತೆಯ ಆಳಕ್ಕಿಳಿದು ಓದಿದಾಗ, ಅಲ್ಲಿ  ಕೆಲವು ಪ್ರಶ್ನೆಗಳು ಸಿಗುತ್ತವೆ. ಯಾವ ಕಾರಣಗಳು, ಏಕಾಗಿ  ನಿಮ್ಮನ್ನು ಈ ಕವಿತೆ ಬರೆಯಲು ಪ್ರಚೋಧಿಸಿತು. ಇದನ್ನೇ ಪರೀಕ್ಷೆಗೊಳಪಡಿಸಿದಾಗ , ಇದು ನಿಮ್ಮ ಹೃದಯದಾಳದಲ್ಲಿ ಗಾಢವಾಗಿ ಬೇರು ಬಿಟ್ಟಿರುವ ಗುಪ್ತ ಜೀವ ಸಂಚಲನದಿಂದ ಬರೆಯಲ್ಪಟ್ಟಿದೆಯೇ?. ಬರಹಗಾರರಾಗಿ ನೀವು ಬರೆಯಬಾರದೆಂದು ನಿಷೇಧ ಹೇರಿದರೆ ಸಾಯಲು ಸಿದ್ಧರಾಗಬಹುದೇ? ಈ  ಮೇಲಿನ ಎಲ್ಲವನ್ನು ಒಂದು ನಿಶ್ಯಬ್ಧ ಪ್ರಶಾಂತ ರಾತ್ರಿಯಲ್ಲಿ  ನಿಮ್ಮನ್ನು ನೀವೇ ಕೇಳಿಕೊಳ್ಳಿ. ನಿಜವಾದ ಸತ್ಯದ ಉತ್ತರಕ್ಕಾಗಿ ಆಳದಲ್ಲಿ ಸಮರ್ಪಣಾಭಾವವಿರಲಿ. ಅದು ಬೇಕು. "ನಾನು ಖಂಡಿತವಾಗಿ ಬರೆಯಬಹುದೆ?". ಈ ಮಾರ್ಧನಿಸುವ  ಪ್ರಶ್ನೆಗಳನ್ನು ಒಪ್ಪಿ ಸರಳ ವಿಶ್ವಾಸ ಹೊರಹೊಮ್ಮಿದರೆ "ಹೌದು ನಾನು ಖಂಡಿತಾ ಬರೆಯಬೇಕು" ಎಂಬ ಉತ್ತರ ಸಿದ್ಧವಾಗುವುದು. ಅದರ ನಂತರ ಸಿಕ್ಕಿದ ಈ ಉತ್ತರದ ಮೇಲೆ ನಿಮ್ಮ ಬದುಕನ್ನು ಬೆಳೆಯಲು ಬಿಡಿ. ಈ ಉತ್ತರ ನಿಮ್ಮ ಅಗತ್ಯಗಳನ್ನು ಪೂರೈಸಲು ಪ್ರಾರಂಭಿಸುವುದು . ಬದುಕಿನ ಬಹುಮುಖ್ಯ ಪ್ರಾಪಂಚಿಕ ನಡೆಗಳು ಮತ್ತು ಗೋಚರಿಸಲಾಗದ ಅರ್ಥಪೂರ್ಣ ಘಳಿಗೆಗಳು ಚಿತ್ರಣಗಳ ರೂಪದಲ್ಲಿ ಸಾಕ್ಷ್ಯ ನುಡಿಯಲು ಪ್ರೇರೇಪಿಸುತ್ತದೆ. ಕೆಲವು ಅಸ್ತವ್ಯಸ್ತತೆಗಳು ಮನಸ್ಸಿನಾಳದಲ್ಲಿ ಭಾರವಾಗಿ ತಳವೂರಿ ಹಗುರವಾಗಲು ದಾರಿ ಹುಡುಕಾಡುತ್ತಿರುತ್ತದೆ. ಇದೇ ದಿವ್ಯಾನೂಭೂತಿಯ ನಿಜವಾದ ಘಟ್ಟ.. ಹಲವು ಸಮಯಗಳಿಂದ "ಏಕಾಂತಗಳು" ಮಾಡಿದ ತಪಸ್ಸಿಗೆ ಸ್ಪಂದಿಸುವ ಬೆಳಕಿನ ಸಂದರ್ಭ . ಆಂಗ್ಲ ಭಾಷೆಯಲ್ಲಿ "ಮೆಟಫರ್" ಅನ್ನುತ್ತೇವೆ. ವಿಶಾಲ ಭಾವವಿಲ್ಲದೆ, ಪ್ರಕೃತಿ ಮತ್ತು ಸಮಾಜದ ಭಕ್ತಿಯಿಲ್ಲದೆ "ಕೇವಲ ಬರಹಗಾರ"ನಿಗೆ ಈ ಸಿದ್ದಿ ಅಸಾಧ್ಯ .

ಇಲ್ಲಿಂದಲೇ ನಿಜವಾದ ಬರಹದ ನಟನೆ ಆರಂಭವಾಗುವುದು. ಹೇಗೆಂದರೆ, ಪ್ರಕೃತ್ತಿಗೆ ,ಸಮಾಜಕ್ಕೆ ಹತ್ತಿರವಾಗುವ ವಿಚಾರವನ್ನು ಕಲ್ಪಿಸಿಕೊಳ್ಳಿ. ಯಾವುದನ್ನು ಕಣ್ಣಾರೆ ಕಂಡಿದ್ದೀರಿ , ಅದರಲ್ಲಿ ಅನುಭವಿಸಿದ್ದೀರಿ, ಯಾವುದನ್ನು ಮೆಚ್ಚಿದ್ದೀರಿ, ಎಷ್ಟು ಪಡೆದಿದ್ದೀರಿ ಮತ್ತು ಎಷ್ಟನ್ನು ಕಳೆದುಕೊಂಡಿದ್ದೀರಿ. ಇವೆಲ್ಲವನ್ನೂ ನೀವೇ ಪ್ರಪಂಚಕ್ಕೆ ಜನ್ಮ ತಾಳಿದ ಪ್ರಥಮ ವ್ಯಕ್ತಿಯಂತೆ ಅನುಭವಿಸಿ ಮತ್ತು ಅದರಂತೆ ನಟಿಸಿ. ಪ್ರಾರಂಭಿಕ ಹಂತದಲ್ಲಿ ಯಾವುದೇ ಕಾರಣಕ್ಕೂ ಪ್ರೇಮ ಕವಿತೆ ಬರೆಯಲು ಪ್ರಯತ್ನಿಸಬೇಡಿ. ಏಕೆಂದರೆ,ಇದು ದೊಡ್ಡ ಸವಾಲನ್ನು ತಂದೊಡ್ಡುತ್ತದೆ. ಇದಕ್ಕೆ ಉತ್ತುಂಗ ಸ್ಥಿತಿಯ, ಪೂರ್ಣವಾಗಿ ಪಕ್ವಗೊಂಡ ವ್ಯಯಕ್ತಿಕವಾಗಿ ಅಪೂರ್ವತೆಗಳನ್ನು ಉತ್ಪಾದಿಸುವ ಕೆಲವು ಶಕ್ತಿಯ ಅಗತ್ಯವಿದೆ. ಅಥವಾ  ಹಲವು ದಿಕ್ಕುಗಳಿಗೆ ಪ್ರತಿಫಲಿಸುವ ಹಲವು ಒಳ್ಳೆಯತನಗಳನ್ನು ಪ್ರತಿನಿಧಿಸುವ  ಸಮಾಜದ ಜನರಿಗೆ ವಿಸ್ತರಿಸಿ ಹೋಲಿಸುವ ಅಗತ್ಯವಿದೆ, ಇಲ್ಲಿ ಸಾಮಾಜಿಕ ಪರಿಕಲ್ಪನೆಯ ಎಚ್ಚರವಿರಬೇಕು. ಪ್ರತಿ ದಿನದ ನಿಮ್ಮ ಬದುಕಿನಲ್ಲಿ ಈ ವಿಚಾರಗಳು ಮುತ್ತಿಗೆ ಹಾಕಲು ಹವಣಿಸಬಹುದು ಅಥವಾ ಆಹ್ವಾನಿಸಬಹುದು. ನಿಮಗೆ ಸುಂದರವಾಗಿ ಕಂಡ ಯಾವುದೇ ವಿಚಾರದಲ್ಲಿ ವಿಶ್ವಾಸವಿದ್ದರೆ ಅದರ ಬಗ್ಗೆ ಬರೆಯಿರಿ. ನಿಮ್ಮ ದುಃಖ್ಖ, ನಿಮ್ಮ ಆಶಯಗಳು, ಹಂಚಿಕೊಳ್ಳಬಹುದಾದ ಸ್ಪಷ್ಟ ನುಡಿಗಳ ಬಗ್ಗೆ ಬರೆಯಿರಿ. ಇವೆಲ್ಲವನ್ನೂ ವಿವರಣೆಗಳೊಂದಿಗೆ ತುಂಬಾ ಸುಡುತ್ತಿರುವ ಮಾತುಗಳಿಂದ ವಿನಯ ಪೂರ್ವಕವಾಗಿ ಒಪ್ಪಿಸಿಕೊಳ್ಳಬೇಕು. ಇದರ  ಜೊತೆಗೆ ನಿಮ್ಮ ಬಗ್ಗೆ ವಿಸ್ತರಿಸುತ್ತಾ, ಸುತ್ತಮುತ್ತಲಿನ ವಿಷಯಗಳನ್ನು ಸೇರಿಸಿ, ಕನಸುಗಳ ಚಿತ್ರಣ ಮತ್ತು ಮಾಸಿ ಹೋಗದ ನೆನಪಿನ ವಸ್ತು ವಿಷಯಗಳು ಬರಹವಾಗಲಿ.

ನಿತ್ಯದ ನಿಮ್ಮ ಜೀವನದಲ್ಲಿ ಅನಗತ್ಯ ವಿಚಾರಗಳು ಬಂದು ಹೋಗಬಹುದು. ಅಥವ ಗೊತ್ತಿಲ್ಲದೆ ಪ್ರಕಟಗೊಳ್ಳಬಹುದು. ಆದರೆ, ಇದಕ್ಕಾಗಿ ಬದುಕನ್ನು ದೂಷಿಸಬೇಡಿ. ನಿಮ್ಮನ್ನು ದೂಷಿಸಿಕೊಳ್ಳಿ. ಕವಿ ಎಂದು ಕರೆಸಿಕೊಳ್ಳುವ ಅಮೂಲ್ಯ ಸಂಪತ್ತಿಗೆ ಸೋಲುಗಳು,ವಿಲಾಪಗಳು ಮಾತ್ರ ಸಾಕಾಗುವುದಿಲ್ಲ. ಓರ್ವ ಸೃಜನಶೀಲ ಕಲೆಗಾರನಿಗೆ, ಚಿಂತಕನಿಗೆ ಯಾವುದೇ ಬಡತನವಿಲ್ಲ. ಅವನೊಬ್ಬ ಸಕಲ ಖನಿಜ ಸಂಪತ್ತನ್ನು ಹುದುಗಿಸಿಕೊಂಡ ಭೂಮಿ ಗರ್ಭದಂತಿರುವನು. ಯಾವುದೂ ಗುಪ್ತವಾಗಿ ಮರೆಯಾಗುವುದಿಲ್ಲ ಮತ್ತು ಯಾವುದೇ ವಸ್ತುಗಳು,ಘಟನೆಗಳು, ಘಳಿಗೆಗಳು, ಅನುಭವಗಳು ಮುಖವಲ್ಲ ಎಂದೆಣಿಸುವುದೇ ಇಲ್ಲ.  ಸರ್ವವ್ಯಾಪಿಯಾಗಿ ಎಲ್ಲವೂ ಅವನಿಗೆ ಮುಖ್ಯವಾಗುವುದು. ಅವನು ಕಲೆಗಾರಿಕೆಯಲ್ಲಿ ಯಾವತ್ತಿಗೂ ಶ್ರೀಮಂತ. ಜೈಲಿನಲ್ಲಿಟ್ಟು ಹೊರಗಿನ ಪ್ರಪಂಚದಿಂದ ನಿಮ್ಮ ಜ್ಞಾನದ ಬಾಗಿಲನ್ನು ಮುಚ್ಚಿಟ್ಟರೂ ಮತ್ತೊಮ್ಮೆ ನಿಮ್ಮ ಬಾಲ್ಯ ಕಾಲಾವಸ್ಥೆಗಳ ಕುತೂಹಲಗಳು ಮೊಳೆಕೆಯೊಡೆಯುವುದು. ಇದು ಓರ್ವ ವ್ಯಕ್ತಿ ಗಳಿಸುವ ಅತ್ಯಾದ್ಬುತ ಜೀವನದ ಸಂಪತ್ತು. ನಿಮ್ಮ ದಿಕ್ಕಿಗೇ ನೋಟವಿರಿಸಿ ನೆನಪುಗಳ ಸ್ಪಷ್ಟತೆಗಳು ಅವುಗಳು ಕುಳಿತುಕೊಂಡ ಮನೆಗಳನ್ನು ಹುಡುಕಾಡಿ ಬಾಗಿಲು ಕಟಕಟಾಯಿಸುವುದು. ಬಹುಕಾಲದಲ್ಲಿ ಕುಸಿದ ಸಂವೇಧನೆಗಳು ಪುನರುತ್ಥಾನಕ್ಕೆ ಪ್ರಯತ್ನಿಸುವುದು. ಇಲ್ಲಿ ನಿಮಗೆ ವಿಶ್ವಾಸ ಭರವಸೆಗಳು ಢಾಳಾಗಿ ದೊರೆಯುವುದು ಮಾತ್ರವಲ್ಲ, ನಿಮ್ಮ ಒಂಟಿತನ ವಿಸ್ತಾರವಾಗುತ್ತ ನಿಮ್ಮ ಮನೆಯನ್ನೂ ಆವರಿಸಿ ಮೆಚ್ಚಿಕೊಳ್ಳುವ ಶುಭಾಶಯಗಳು ಮುಂಜಾನೆಯ ನಿಶ್ಯಬ್ಧಕ್ಕೆ ಒಗ್ಗಿಕೊಳ್ಳಬಹುದು. ಹೊರ ಜಗತ್ತಿನ ಗೊಂದಲಗಳು ಬಲುದೂರಕೆ ನಿಧಾನವಾಗಿ ಕಣ್ಣ ಮುಂದೆ ಹಾದು ಹೋಗಬಹುದು.

ಈ ಪರಿಣಾಮಗಳು ಒಳತೋಟಿಯಲ್ಲಿ ಸುತ್ತಿ ತಿರುಗಿ ನಿಮ್ಮದೇ ಸ್ವಂತ ಪ್ರಪಂಚದಲ್ಲಿ ಮುಳುಗಲು ಪ್ರಯತ್ನಿಸಿದ ಅಮೂಲ್ಯ ಗಳಿಗೆಗಳು ಕವಿತೆಯನ್ನು ಪ್ರಚೋದಿಸುತ್ತದೆ. ಬರೆದು ಮುಗಿಸಿದ ಮೇಲೆ "ನಾನು ಬರೆದ ಕವಿತೆ ಚೆನ್ನಾಗಿದೆಯೇ" ಎಂದು ಯಾರ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ನಿಮಗೆ ಇರುವುದಿಲ್ಲ. ಈ ಕವಿತೆಗಳನ್ನು ಪತ್ರಿಕೆಗಳು, ಸಾಪ್ತಾಹಿಕಗಳು, ಅಂತರ್ಜಾಲ ಈ-ಮಾಧ್ಯಮಕ್ಕೆ ಕಳುಹಿಸುವ ಆಸಕ್ತಿಯನ್ನೂ ನೀವು ತೋರುವುದಿಲ್ಲ. ಏಕೆಂದರೆ, ನೀವು ಬರೆದ ನಿಮ್ಮದೇ ಕವಿತೆಯಲ್ಲಿ ನಿಮ್ಮದೇ ಧ್ವನಿ ಕೇಳುತ್ತಿರುತ್ತವೆ. ಅದರಲ್ಲಿ ಪ್ರಾಕೃತ್ತಿಕವಾಗಿ ಸ್ವಾಧೀನಪಡಿಸಿಕೊಂಡ ನಿಮ್ಮ ಬದುಕಿನ ಒಂದು ಅಂಶವನ್ನು ಕಾಣುತ್ತೀರಿ. ಜೀವಂತ ಇರುವುದಕ್ಕಾಗಿಯೇ ಕಲೆಯ ಒಂದು ತುಣುಕು ಹುಟ್ಟಿದ್ದರೆ, ಅದು ಉತ್ತಮ. ಅದೇ ಅದರ ಮೂಲ, ಮಾನದಂಡ ಮತ್ತು ಅದಲ್ಲದೆ ಬೇರೆ ಯಾವುದೂ ಅಲ್ಲಿಲ್ಲ.

ಕವಿ ಮಿತ್ರ, ನನಗೆ ಗೊತ್ತಿರುವಂತೆ ಇದಕ್ಕಿಂತ ದೊಡ್ಡ ಸಲಹೆ ಇನ್ನೊಂದಿಲ್ಲವೇನೋ ಎಂದು ಅನ್ನಿಸುತ್ತದೆ . ಆಳದಾಳಕ್ಕೆ ಹೋಗಿ ನಿಮ್ಮ ಚಿಂತನೆಯ ವಿಸ್ತಾರವನ್ನು ನಿಮ್ಮದೇ ಸಾಮಾರ್ಥ್ಯದ ಅಳತೆಗೋಲುಗಳಿಂದ ಅಳತೆ ಮಾಡಿ, ಅಲ್ಲಿಂದ ಮುಂದಕ್ಕೆ ಬದುಕಿನ ಅತ್ಯಮೂಲ್ಯ ವಸಂತಗಳು ಒಂದೊಂದಾಗಿ ತೆರೆದುಕೊಳ್ಳಲು ಆರಂಭಿಸುವುದು. ನೀವು ಖಂಡಿತವಾಗಿ ಬರೆಯಬೇಕೋ ಬೇಡವೋ ಎಂಬ ಪ್ರಶ್ನೆಗಳಿಗೆ ಈ ಮೂಲಗಳಿಂದಲೇ ಉತ್ತರ ದೊರಕುವುದು. ಇದನ್ನು ಒಪ್ಪಿಕೊಳ್ಳಿ. ಹೇಗೆಂದರೆ, ಯಾವುದೇ ಅಂದಾಜಿಗೆ ಸಿಗದೆ, ಯಾರದ್ದೇ ಮುಲಾಜಿಗೆ ಸಿಗದೆ  ಇದು ನಿಮ್ಮನ್ನು ಧ್ವನಿಸುತ್ತದೆ. ನಿಮ್ಮನ್ನು ಬರಹಗಾರರೆಂದು ಕರೆಸಿಕೊಳ್ಳಲು ನಿಮ್ಮದೇ ಧ್ವನಿ ನಿಮಗೆ ಒಪ್ಪಿಗೆ ಕೊಡಬಹುದು. ಅದರ ನಂತರ ಇದರ ಬದುಕನ್ನು ಒಪ್ಪಿಕೊಳ್ಳಿ, ಇದರ ಎಲ್ಲಾ ಆಗು ಹೋಗುಗಳಿಗೆ ಭಾಧ್ಯಸ್ಥರಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇದರ ಪ್ರಸಿದ್ದಿ-ಗಟ್ಟಿತನಕ್ಕೆ ಒಗ್ಗಿಕೊಳ್ಳಿ . ಪರಿಣಾಮಗಳು ನಿಮಗೆ ಗೊತ್ತಿಲ್ಲದಂತೆ ಅತೀ ಎತ್ತರಕ್ಕೆ ಕೊಂಡೊಯ್ಯಬಹುದು. ಓರ್ವ ಸೃಜನಶೀಲ ಕಲೆಗಾರನಿಗೆ ಖಂಡಿತವಾಗಿ ಅವನದ್ದೇ ಆದ ಒಂದು ಪ್ರಪಂಚವಿರುತ್ತದೆ ಮತ್ತು  ಪ್ರಕೃತ್ತಿಯಲ್ಲಿ ಪ್ರಭಾವ ಬೀರುವ ಮತ್ತು ಹಾದು ಹೋಗುವ ಎಲ್ಲಾ ನಡೆಗಳಲ್ಲಿ, ಕ್ಷಣಗಳಲ್ಲಿ ಸ್ವತಃ ಹುಡುಕಾಟ ನಡೆಸುತ್ತಿರುತ್ತಾನೆ.

ಹೃದಯದಾಳದ ಏಕಾಂತತೆಯ ಗುಪ್ತ ಸ್ಥಳದಲ್ಲಿ ನಿಮ್ಮ ಪ್ರಾಮಾಣಿಕತೆ ಖಂಡಿತವಾಗಿ ಕವಿಯೋರ್ವನನ್ನು ಗುರುತಿಸಿ ನಿಮಗೆ ಒಪ್ಪಿಸುವುದು. ನಾನು ಹೇಳಿದ ವಿಚಾರಗಳು ಬರಹ ಖಂಡಿತವಾಗಿ ಬರೆಯಲೇಬೇಕಾದ ಅನುಭವಗಳನ್ನು ನಿಜವಾದ ಓರ್ವ ಬರಹಗಾರನಿಗೆ ಸೂಚಿಸುವಂತಹದ್ದು. ಆದರೆ ಒಂದರ್ಥದಲ್ಲಿ ಅದಿಲ್ಲದೆಯೂ ಅವನು ಬರಹಗಾರನಾಗಿ ಜನರನ್ನು ತನ್ನೆಡೆಗೆ ಕೇಂದ್ರೀಕರಿಸುವ ಜಾಯಮಾನಕ್ಕೆ ಒಗ್ಗಿಸಿಯೂ ಬದುಕಬಹುದು.ಆದಾಗ್ಯೂ, ಇದರ ಪ್ರಕ್ರಿಯೇ ಒಳಮುಖವಾಗಿ ತಿರುಗಿಸಿಕೊಳ್ಳಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಏಕೆಂದರೆ, ನಿಮ್ಮ ಬರಹ ಟೊಳ್ಳಾಗಬಾರದು. ನಿಸ್ಸಂಶಯವಾಗಿ, ಬದುಕು ಅದರದ್ದೇ ಆದ ಸ್ವಂತ ದಾರಿಯನ್ನು ಕಂಡುಕೊಳ್ಳುತ್ತದೆ. ಇದು ಮಾತ್ರ ಬೆಲೆ ಕಟ್ಟಲಾಗದ ಮತ್ತು ಶ್ರೀಮಂತ ಆಸ್ತಿಯೊಂದನ್ನು ನಿರ್ಮಿಸಿಕೊಡುತ್ತದೆ. ಇದಕ್ಕಿಂತ ದೊಡ್ಡ ಆಶಯವನ್ನು ನನ್ನಿಂದ ನಿರೀಕ್ಷಿಸುವುದು ಕಷ್ಟ ಸಾಧ್ಯ

ಇದಕ್ಕಿಂತ ಹೆಚ್ಚಿನದಾಗಿ ಏನು ಹೇಳಲಿ ಮಿತ್ರ? ನನ್ನ ಅನಿಸಿಕೆಯಂತೆ ಮಹತ್ವ ಎನಿಸಿದ ಎಲ್ಲ ಒಳ್ಳೆಯದನ್ನೂ ಹೇಳಿದ್ದೇನೆ.  ಸಲಹೆಯ ಉದ್ದೇಶವೇನೆಂದರೆ, ನಿಮ್ಮ  ಬರಹದದಲ್ಲಿ ಸದ್ದಿಲ್ಲದೆ, ಗಂಭೀರವಾಗಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಪ್ರಯತ್ನವಲ್ಲದೆ ಬೇರೇನೂ ನನ್ನಿಂದ ಅಸಾಧ್ಯ . ಹೊರ ಪ್ರಪಂಚದಲ್ಲಿ ನೀವು ಇಣುಕುವುದಾದರೆ,ಶ್ರೇಷ್ಠ ಸೂಕ್ಷ್ಮಗಳು ಎಡತಾಕುವುದು ಮತ್ತು ನೀವು ಹಾಕಿದ ಪ್ರಶ್ನೆಗಳಿಗೆ ಹೊರಗಿನಿಂದಲೇ  ಉತ್ತರ ಲಭ್ಯವಾಗುವುದು. ಏಕೆಂದರೆ, ಕೆಲವೇ ಗಂಟೆಗಳ ದಿವ್ಯಾನೂಭೂತಿಯಲ್ಲಿ ಉತ್ತರಗಳನ್ನು ಕಂಡುಕೊಳ್ಳುವುದು ಮಾತ್ರ ನಿಮ್ಮ ಹೃದಯಾದಾಳದಲ್ಲಿ ಜಾಗ ಕೊಡಲು ನಾನು ಹೇಳಿದ ತಪಸ್ಸಿನ ದಾರಿ. ಕವಿತೆಯ ದಿವ್ಯಾನೂಭೂತಿ ಎಂದರೆ ತಪಸ್ಸು ಮಾತ್ರ. ಕಾಡುಗಲ್ಲು ಶಿಲ್ಪವಾಗುವುದು ಅಷ್ಟು ಸುಲಭವಲ್ಲ. ಶಿಲ್ಪವನ್ನು ನೋಡಿದ ಮಂದಿಯನ್ನು ಅತ್ಯಾಶ್ಚರ್ಯಪಡಿಸುವ ಕಲೆ ನಟನೆಯೂ ಅಲ್ಲ. ಅದೊಂದು ತೋರುಗಾಣಿಕೆಯೂ ಅಲ್ಲ. ಅದೇ ಬರಹದ ಮೂಲ.

ನನಗೆ ಒಪ್ಪಿಸಿದ ನಿಮ್ಮ ಕವಿತೆಯನ್ನು ಹಿಂತಿರುಗಿಸಿದ ಮಾತ್ರಕ್ಕೆ, ನನ್ನ ಚಿತ್ತಸ್ಥೈರ್ಯದೊಂದಿಗೆ ನಂಬಿಕೆ ಅಬಾಧಿತವಾಗಿರಲಿ. ಈ ಕವಿತೆಗೆ ನಿಜವಾಗಿ ನಾನೊಬ್ಬ ಅಪರಿಚತನಾಗಿರಬಹುದು. ಕಳೆದುಹೋದ ಜೀವ ಸ್ವಚ್ಛತೆಯನ್ನು ಸಾಮಾರ್ಥ್ಯಕ್ಕನುಗುಣವಾಗಿ ಕಂಡುಹಿಡಿಯಲು ಪ್ರಯತ್ನಿಸಿದೆ. ಇದರ ಪರಿಪೂರ್ಣತೆಗೆ ಅಲ್ಪ ಮಟ್ಟದ ನನ್ನತನವನ್ನು ತೋರಿಸಿದ್ದೇನೆ. ಏಕೆಂದರೆ, ನನ್ನೊಳಗೆ ಜಗತ್ತನ್ನು ಸಮೀಕರಿಸಿದ್ದೇನೆ. ಅದು ವಿಧೇಯತೆ ಎಂಬ ದೃಢತೆಯ ನನ್ನ ಆಸಕ್ತಿಗಾಗಿ ಮತ್ತು ಕವಿತೆಯ ಬಗೆಗಿನ ಭಕ್ತಿಗಾಗಿ.
ಇತೀ ನಿಮ್ಮ ವಿಶ್ವಾಸಿ
-ರವಿ ಮೂರ್ನಾಡು

(ಟಿಪ್ಪಣಿ: 2011ರ ಮಧ್ಯಂತರದ ಆಸುಪಾಸಿನಲ್ಲಿ ಅನಾಮದೇಯ ಫೇಸ್ಬುಕ್ ಗೆಳೆಯರೊಬ್ಬರು ನನ್ನ ಈಮೈಲ್ ವಿಳಾಸಕ್ಕೆ ಪತ್ರ ರವಾನಿಸಿ ಈ ಮೇಲಿನ ಸಲಹೆ ಕೇಳಿದ್ದರು.ಆ ಸಂದರ್ಭ ಕವಿತೆ ಹುಟ್ಟಿಗಾಗಿ ತಡಕಾಡುತ್ತಿದ್ದ ನನ್ನ ದಿನಗಳಾಗಿತ್ತು. ಹಾಗಾಗಿ ಅದನ್ನು ಪೂರೈಸಲಾಗಲಿಲ್ಲ. ಆದರೆ " ಕವಿತೆ ಹೇಗೆ ಬರೆಯುವುದು" ಎಂಬ ಅವರ ಪ್ರಶ್ನೆ ದಿನನಿತ್ಯ ಕಾಡಿತ್ತು. ಪತ್ರ ಬಂದು 1 ವರ್ಷಗಳ ನಂತರ 2012ರಲ್ಲಿ ಈ ಪತ್ರವನ್ನು ಅವರಿಗೆ ರವಾನಿಸಲು ಪ್ರಯತ್ನಿಸಿದ್ದೆ.ಆದರೆ ಅವರ Email ID ನನ್ನಿಂದ ಕಿತ್ತುಹೋಗಿತ್ತು. ಅವರಿಗೆ ಅದು ತಲುಪಲೇ ಇಲ್ಲ. ಅವರು ಕ್ಷಮಿಸಲಿ. ಈ ಮೇಲಿನ ನನ್ನ ಪತ್ರದ ಮಾತಿನಿಂದ ಅವರು ಮಾತ್ರವಲ್ಲ, ಅವರಂತೆಯೇ ಇರುವ "ಬರಹದ ಹಸಿವಿನ ಕವಿಗಳು" ಸಾಹಿತ್ಯದ ಶ್ರೇಷ್ಠ ಕಾವ್ಯವನ್ನು ಕೊಡುವ ಪ್ರತಿಭಾವಂತರಾಗಬಹುದು ಎನ್ನುವ ನಂಬಿಕೆಯಿಟ್ಟಿದ್ದೇನೆ. ನನ್ನ ಬ್ಲಾಗ್ ಮೂಲಕ ಈ ಪತ್ರವನ್ನು ಸಾರ್ವಜನಿಕವಾಗಿ ಅವರಿಗೆ ರವಾನಿಸಿದ್ದೇನೆ.-ರವಿಮೂರ್ನಾಡು)