ಗುರುವಾರ, ಅಕ್ಟೋಬರ್ 27, 2011

“ಫೇಸ್ಬುಕ್‍” ನಿಸ್ತಂತು ಕನ್ನಡ ಸಾಹಿತ್ಯ - ಒಂದು ಇಣುಕು ನೋಟ !

 ನವೆಂಬರ‍್ ತಿಂಗಳು ಬಂತಲ್ಲ...!  ಸಂತಸದ ಸಂಗತಿಯೆಂದರೆ, ಮಾನ್ಯ ಕಂಬಾರರು  ಜ್ಞಾನಪೀಠ ಪ್ರಶಸ್ತಿ ತಂದು,ಈ "ನವೆಂಬರ‍್ ಕನ್ನಡದ ಹಬ್ಬ" ವನ್ನು ಶ್ರೀಮಂತಗೊಳಿಸಿದರು. ಹನ್ನೊಂದು ತಿಂಗಳು ನಿದ್ದೆಗೆ ಬಿದ್ದು, ಒಂದು ತಿಂಗಳು ಭಾರೀ ಪ್ರಚಾರ ಪಡೆದುಕೊಳ್ಳುವ ಈ "ಕನ್ನಡದ ಹಬ್ಬ" ಅಂದಾಗ ಅದರ ಇನ್ನಿಲ್ಲದ ದೌರ್ಬಲ್ಯಗಳು ಬೀದಿಗೆ ಬರುತ್ತವೆ. ಕನ್ನಡದ ಕಾರ್ಯಕ್ರಮಗಳಲ್ಲಿ ವಿದೇಶಿ ಮೇಕಪ್‍ ಮೆತ್ತಿಕೊಂಡು, ಅರೆಬರೆಯ ಫ್ಯಾಷನ್‍ ಷೋ ವೇದಿಕೆಯಲ್ಲಿ ಇಂಗ್ಲೀಷ್‍- ಹಿಂದಿ ಹಾಡಿಗೆ ನೃತ್ಯ ಮಾಡುವ  ಅವೇಶಗಳು ಮೈಮೇಲೆ ಬರುತ್ತವೆ. ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಆಡಂಭರ ಇದು !. ಅಭಿಮಾನದ ಬಗ್ಗೆ ಮಾತು ಒಕ್ಕಣಿಸುವಾಗ ಹೊರಗೆಡವಲಾರದ ನೋವು. ದೇಶದ ಇತರ ರಾಜ್ಯಗಳ ಜನರಲ್ಲಿರುವ ಅವರ ಮಣ್ಣಿನ ಭಾಷಾಭಿಮಾನಕ್ಕೆ ಹೋಲಿಸಿದಾಗ, ನಮ್ಮಲ್ಲಿ ಪ್ರಚಾರಕ್ಕೆ ಅಭಿಮಾನದ ಸೋಗು ಹಾಕಿದ ಉದಾಹರಣೆಗಳೇ ಹೆಚ್ಚು. ಒಂದು ಕಡೆ ರಾಜ್ಯದ ಹೃದಯ ಭಾಗಗಳೇ ತಾಯಿ ಭಾಷೆಯನ್ನು ಹರಾಜಿಗಿಟ್ಟಿವೆ. ಇನ್ನೊಂದೆಡೆ ನೆಲ ನಮ್ಮದು ಅಂತ ಕಾಳಗಕ್ಕಿಳಿದು, ಜೈಲೊಳಗೆ ಬಂಧಿಯಾದಂತೆ, ಕನ್ನಡ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದೆ.  ಯಾಕೆ ಹೀಗೆ? ಈ ನವೆಂಬರ‍್ ತಿಂಗಳಲ್ಲಿ ಮಾತ್ರ ಏಕೆ ಕನ್ನಡಕ್ಕೆ ಆವೇಶ..?
          ಎಲ್ಲವನ್ನು ಮೌನದ ಕನ್ನಡಿಯಲ್ಲಿ ನೋಡಿದಾಗ ಕನ್ನಡದ ಭಾವಚಿತ್ರ ಒಡೆದ ಗಾಜಿನಂತೆ ನೂರಾರು ಬಿರುಕುಗಳು ಅಟ್ಟಹಾಸಗೈಯ್ಯುತ್ತಿವೆ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ಪರಭಾಷಿಗರು ಕನ್ನಡದ ಬಗ್ಗೆ ಹಿಗ್ಗಾಮುಗ್ಗ ಮಾತಾಡಿದರು. ಕನ್ನಡದ ಮನಸ್ಸುಗಳು ನೋವು ಅನುಭವಿಸಿದ್ದು  ಯಾವತ್ತಿಗೂ ಮರೆತಿಲ್ಲ. ಎಲ್ಲಿ ಹೋದವು ಭಾಷಾಭಿವೃದ್ಧಿಗೆ ಸರಕಾರ ತಂದ ನೀತಿಗಳು ?. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಬಗೆಗಿನ ಲಘು ವಿಚಾರಗಳು ವಿದ್ಯಾರ್ಥಿಗಳಲ್ಲಿ ಅಸಡ್ಡೆಗೆ ದಾರಿ ತೋರಿಸುತ್ತಿದೆ. ಕನ್ನಡ ಸಂಘಟನೆಗಳಲ್ಲಿ ಮುತುವರ್ಜಿ ವಹಿಸಿ ಬೀದಿ-ಬೀದಿಯಲ್ಲಿ ಕನ್ನಡದ ಆವೇಷ ಉಕ್ಕಿಸುವ ಉಮ್ಮಸ್ಸು ಮಂಕಾಗಿದೆ. ಗಣ್ಯ ವ್ಯಕ್ತಿಗಳ ರಣ ಕಹಳೆ ಮೊಳಗಿಸುವ ಕನ್ನಡದ ಬಗೆಗಿನ ಮಾತುಗಳು ಜಡ ಹಿಡಿದು ಮಲಗಿವೆ. ಇದು ಇಂದಿನ ಕನ್ನಡದ ದೌರ್ಬಲ್ಯಗಳಲ್ಲಿ ಮೊದಲು ಕಾಣುವಂತಹದ್ದು. ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ಬೇಧಭಾವ  ಭಿತ್ತಿದ ಹಲವು ಉದಾಹರಣೆಗಳು ಹಲವು ವಿಧದಲ್ಲಿ ಅಭಿಮಾನ ಕುಸಿಯುವಂತೆ ಮಾಡಿದೆ ಅಂತ ಖೇಧ ವ್ಯಕ್ತಪಡಿಸುವುದು ಅನಿರ್ವಾಯ.  ಪ್ರಶಸ್ತಿ ಕೊಡುವುದು ಪ್ರಚಾರಕ್ಕೆ ಅಲ್ಲ. ಅದು ಹೊಣೆಗಾರಿಕೆಯನ್ನು ಹೆಚ್ಚಿಸಲಿಕ್ಕೆ. ಪ್ರಶಸ್ತಿ ಅನ್ನುವ ಪದದ  ಇನ್ನೊಂದು ಅರ್ಥ ಇದು. ಟಿ.ವಿ.ಮಾಧ್ಯಮ, ಆಕಾಶವಾಣಿ ಮಾಧ್ಯಮಗಳಂತೂ ಕನ್ನಡದ ಹೆಸರಿಟ್ಟು ಕನ್ನಡಿಗರನ್ನೇ ಬೀದಿಗೆ ತರುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದವರಿಗೆ ಕನ್ನಡದ ನೆಲದಲ್ಲೇ ಕನ್ನಡತನದ ಚುಕ್ಕಾಣಿ ಹಿಡಿದವರ ಉತ್ತರ ಮೌನ.
          ಇಷ್ಟೆಲ್ಲಾ ದೌರ್ಬಲ್ಯಗಳಿದ್ದರೂ ಕನ್ನಡ ಸಾಹಿತ್ಯ ಮತ್ತು ಭಾಷೆ, ಫೇಸ್ಬುಕ್‍ ಎಂಬ  ನಿಸ್ತಂತು ವೇದಿಕೆಗಳಲ್ಲಿ ಹೇಗೆ ಅಗಾಧವಾಗಿ ಬೆಳೆದಿದೆ ಅನ್ನುವ ಒಂದು ಅವಲೋಕನ ಇಲ್ಲಿದೆ. ಜಗತ್ತಿನ ಎಲ್ಲೆಂದರಲ್ಲಿ ಬೇರು ಬಿಟ್ಟಿರುವ ಕನ್ನಡಾಭಿಮಾನಿಗಳ ಸಾಹಿತ್ಯದ ಮಾತುಗಳಿಗೆ ಅಂತರ್ಜಾಲ ತಾಣ ,ಕನ್ನಡದ ನೆಲದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕಡಿಮೆಯಲ್ಲ. ಫೇಸ್ಬುಕ್ ಎಂಬ ಅಂತರ್ಜಾಲ ತಾಣವನ್ನು ಸಮರ್ಥವಾಗಿ ಸಾಹಿತ್ಯಕ್ಕೆ  ಬಳಸಿಕೊಂಡ ಹಲವು ಕನ್ನಡ ಸಮೂದಾಯಗಳ ನಿರ್ವಾಹಕರುಗಳು ಕನ್ನಡವನ್ನು ಹೀಗೂ ಬೆಳೆಸಬಹುದು ಅಂತ ಸಾಧಿಸಿಕೊಟ್ಟಿದ್ದಾರೆ. ಅದೇ ರೀತಿ ನೇರವಾಗಿ ಸಾಹಿತ್ಯಕ್ಕೆ ಧುಮಕದ ಬ್ಲಾಗ್ ಪ್ರತಿಭೆಗಳು ತಮ್ಮದೇ ಆದ ಅಂತರ್ಜಾಲ ತಾಣಗಳಲ್ಲಿ ಸಾಹಿತ್ಯವನ್ನು ತೆಕ್ಕೆಗೆ ತೆಗೆದುಕೊಂಡಿದೆ ಅಂತ ಸಂತಸ ಪಡುತ್ತೇವೆ.
          ಕನ್ನಡ ನೆಲದಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲಾಗದಷ್ಟು  ಸಮಸ್ಯೆಗೆ ಸಿಲುಕಿದಾಗ ಉತ್ತರವಾಗಿ ಬಂದಿದ್ದು ಈ ಫೇಸ್‍ ಬುಕ್ಕ್.! ತುಂಬಿ ತುಳುಕುವಷ್ಟು ಸಾಹಿತ್ಯಗಳು ಬೆಳೆದು ನಿಂತಿದೆ. ಅದರ ಜಾಡನ್ನು ಜಾಲಾಡಿದಾಗ ಸಿಗುವ ಉತ್ತರವಿದು. ಹಲವು ಪ್ರತಿಭೆಗಳು ತಮ್ಮದೇ ಆದ ಸ್ವಂತ ವಿಳಾಸದ ಅಂತರ್ಜಾಲ ತಾಣಗಳಲ್ಲಿ ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ  ಸದ್ದಿಲ್ಲದಂತೆ ಬರೆಯುತ್ತಿವೆ. ಪತ್ರಿಕಾ ಮಾಧ್ಯಮಗಳು ಮತ್ತು ಸಂಘ-ಸಂಸ್ಥೆಗಳ ಕಣ್ಣಿಗೆ ಕಾಣದ ಹಲವು ಪ್ರತಿಭೆಗಳು ಸಮೃದ್ದವಾಗಿವೆ. ಅವುಗಳನ್ನು  ಮುಂದೆ ತರುವ ಕೆಲಸವನ್ನು ಕನ್ನಡ ನಾಡು ಮಾಡಬೇಕು. ರಾಜಧಾನಿ ಬೆಂಗಳೂರಿನಲ್ಲಿ ಅಥವಾ ರಾಜ್ಯದ ಯಾವುದೋ ಗಲ್ಲಿಯಲ್ಲಿ ನಡೆಯುವ ಸಮಾರಂಭಕ್ಕೆ  ದೂರದಿಂದ ಬರುವುದು ಅಸಾಧ್ಯದ ಮಾತು ಅಥವಾ ತನ್ನ ಕೆಲಸದ ಒತ್ತಡದ ನಡುವೆ ಬರಹಗಾರ ಪಾಲ್ಗೊಳ್ಳಲಾಗದೆಯೂ ಇರಬಹುದು. ಸಮಾರಂಭದಲ್ಲಿ ಭಾಗವಹಿಸಿದವರಿಗಿಂತಲೂ ಮೇಲ್ಮಟ್ಟದಲ್ಲಿ  ಪ್ರತಿಭೆಯನ್ನು ಅನಾವರಣಗೊಳಿಸಿದ ಉದಾಹರಣೆ ಫೇಸ್‍ ಬುಕ್ಕ್ ವೈರ್ ಲೆಸ್‍ ವೇದಿಕೆಯಲ್ಲಿ ಮತ್ತು  ಅವರದ್ದೇ ಆದ ಅಂತರ್ಜಾಲ ತಾಣಗಳಲ್ಲಿ ಬೆಳಕಿಗೆ ಬಂದಿವೆ. ಪುಸ್ತಕ ಬಿಡುಗಡೆಯ ಗೊಡವೆಗೇ ಹೋಗದೆ , ತಮ್ಮದೇ ಅಂತರ್ಜಾಲದ ಸ್ವಂತ  ತಾಣಗಳಲ್ಲಿ ಯಾವ ಅಕಾಡೆಮಿಕ್‍ ಸಾಹಿತ್ಯಕ್ಕೂ ಕಡಿಮೆಯಿಲ್ಲದ ಕನ್ನಡ ಸಾಹಿತ್ಯ ಭಂಡಾರದ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.                   
          ಫೇಸ್ಬುಕ್ಕಿನಲ್ಲಿ ಕನ್ನಡ ನಿಸ್ತಂತು ವೇದಿಕೆ ತೆರೆದು ಮೊದಲು ಸಾಧಿಸಿ ತೋರಿಸಿಕೊಟ್ಟ ಗೌರವ ಕೊಡಗಿನ ಶನಿವಾರಸಂತೆಯ  ಅಬ್ದುಲ್‍ ಸತ್ತಾರ್ ಅವರದು. ಅದು ’ ಕನ್ನಡ ಬ್ಲಾಗ್" ನಿಸ್ತಂತು ಕನ್ನಡ ಸಾಹಿತ್ಯ ಗೋಷ್ಠಿ ವೇದಿಕೆ. ಪ್ರೇರಿತಗೊಂಡ ಹಲವು ಕನ್ನಡ ಸಮೂದಾಯಗಳು ಇದೀಗ  ಈ ಫೇಸ್ಬುಕ್ ತಾಣದಲ್ಲಿ  ಅಮೋಘವಾದ ಕನ್ನಡ ಬೆಳೆಸುವಲ್ಲಿ ತಲ್ಲೀನವಾಗಿವೆ. ಮಲ್ಲಿಕಾರ್ಜುನ ಗೌಡರ " ಕನ್ನಡ ಕಲ್ಪವೃಕ್ಷ", ಹಾಸನದ  ಜ್ಞಾನದೇವ್ ಬೋಳ್ದೆಯವರ " ಕನ್ನಡ ಸಾಹಿತ್ಯ ಮಂಚ",ದುಬೈನ ಬಿಜೂರು ಗೋವಿಂದಪ್ಪ ಮೋಹನ್ ದಾಸರ ಗಲ್ಫ್ ಕನ್ನಡಿಗರ ಒಕ್ಕೂಟ, ಅದೇ ರೀತಿ ವಿಸ್ಮಯ ವಿಜ್ಞಾನ, ಭವ್ಯ ಭಾರತ ನವ ನಿರ್ಮಾಣ ವೇದಿಕೆ, ನಮ್ಮ ಕನ್ನಡ ನಾಡು, ಕನ್ನಡ ಕವನಗಳು, ಫೇಸ್ಬುಕ್ ಕನ್ನಡ ಗೆಳೆಯರ ಬಳಗ, ಕನ್ನಡಿಗರ ಒಕ್ಕೂಟ, ವಿಶ್ವ ಕನ್ನಡಿಗರ ಒಕ್ಕೂಟ,ನಮ್ಮ ಕನ್ನಡ ಬಹ್ರೆರೈನ್‍, ಕರುನಾಡ ಸ್ನೇಹಿತರು,ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ. ಇತ್ಯಾದಿ.ಶರಣ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುತ್ತಿರುವ " ಅನುಭವ ಮಂಟಪ" ಪರದೇಶದ ಜನರಲ್ಲಿಯೂ  ಶರಣ ಸಾಹಿತ್ಯವನ್ನು  ಶ್ರೀಮಂತಗೊಳಿಸುತ್ತಿವೆ ಅನ್ನೋದು ಇನ್ನೊಂದು ಶ್ರೇಷ್ಠ ಮಾತು. ನಮ್ಮ ಮಾಹಿತಿಗೆ ಸಿಗದ ಹಲವು ಸಮೂದಾಯಗಳು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಶೇ 100 ರಷ್ಟು ಆಂಗ್ಲ ಭಾಷೆಗೆ ಮೀಸಲಾಗಿರುವ ಫೇಸ್ಭುಕ್‍ ತಾಣದಲ್ಲಿ , ಪ್ರತಿಯೊಬ್ಬ ಕನ್ನಡಿಗ ಸದಸ್ಯನನ್ನು ಸೇರಿಸುವಾಗ ಕನ್ನಡದಲ್ಲಿ ಮಾತುಗಳಿಗೆ " ಲಿಂಕ್" ಸಹಾಯಗಳನ್ನು ತೋರಿಸಿದರು. ಹಲವು ಕನ್ನಡಿಗರು  ಇದರಿಂದ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸಿದರು ಅನ್ನುವಾಗ ಒಂದು ವಿಧದ ಸಾರ್ಥಕ್ಯ ಭಾವವಿದೆ. ಕನ್ನಡ ಬ್ಲಾಗ್ ಸಮೂದಾಯದ ಬಗ್ಗೆ ಮಾತು ಬಂದಾಗ ಹೆಗಲುಕೊಟ್ಟು ಸೂಕ್ತ ನಿರ್ವಹಣೆಗೆ ಜೊತೆಯಾದವರು ಉಡುಪಿ ಮೂಲದ ದುಬ್ಯೆನ ಪ್ರಮೋದ್‍ ಶೆಟ್ಟಿ, ಬೆಂಗಳೂರಿನ ಪುಷ್ಪರಾಜ್ ಚೌಟ, ಕೊಳ್ಳೇಗಾಲದ  ಮೋಹನ್‍ ವಿ. ಬಬ್ಲಿ, ಸೋಮಶೇಖರ ಬನವಾಸಿ. ದಿನದಿಂದ ದಿನಕ್ಕೆ ಸಾವಿರಾರು ಕನ್ನಡಿಗರನ್ನು ಒಂದೆಡೆಯಲ್ಲಿ  ಕೂರಿಸುತ್ತಿದೆ ಈ ಕನ್ನಡ ಬ್ಲಾಗ್ . ತೆರೆಮರೆಯಲ್ಲಿ ದುಡಿಯುತ್ತಿರುವ ಮೈಸೂರಿನ ವಿಜ್ಞಾನಿ ಮಾನ್ಯ ರಾಜುರಾಮ, ಹಾಸ್ಯ ಸಾಹಿತಿ ಕೋಮಲ್‍ ಕುಮಾರ್, ರಾಜೇಶ್ ದಾವಲ್‍ ನಾಯಕ್, ಪ್ರಕಾಶ್ ಹೆಗಡೆ ಅವರಿಂದಲೂ ಕನ್ನಡ ಸೇವೆ ನಿಂತಿಲ್ಲ. ಸಾಹಿತ್ಯದ ಘಟಾನುಘಟಿಗಳು ಇದರ ಹಿಂದೆ ವ್ಯವಹರಿಸಿದ ರೀತಿ ಕನ್ನಡ ನಾಡು ಹೆಮ್ಮೆ ಪಡುವಂತಹದ್ದು. ಮಾನ್ಯ ವಸಂತ ಕುಮಾರ್,ಬೆಳಗಾಂನ  ಗಂಗಾಧರ್ ದಿವಾಟರ ಹಾಗೂ ರಾಜು ವಿನಯ್‍ ದಾವಣಗೆರೆ  ಮುಂತಾದವರು ಟೊಂಕ  ಕಟ್ಟಿ ನಿಂತು ಕನ್ನಡತನದ ಸಂತಸಕ್ಕೆ ಕಾರಣರಾಗಿದ್ದು ಕನ್ನಡಿಗರ ಧಾರಾಳತನ ಮೇರು ಮಟ್ಟದ್ದು ಅಂತ ತೋರಿಸಿತು.. ಇದು ಇನ್ನಷ್ಟು ಬೆಳೆಯುತ್ತದೆ, ಅದಕ್ಕೆ ಪ್ರತಿಭೆಗಳ ಸಾಹಿತ್ಯ ಬೆಳವಣಿಗೆಯೇ ಸಾಕ್ಷಿ.
          ಇವತ್ತು ಸಾಹಿತ್ಯಗೋಷ್ಠಿ ಅನ್ನುವ  ವಿಚಾರಕ್ಕೆ  ಮಾತಾಡುವುದಾದರೆ,ಸುದ್ಧಿ ಭಿತ್ತರಿಸಿ, ಬರಹಗಳನ್ನು ಆಹ್ವಾನಿಸುವುದು. ಆಯ್ಕೆಯಾದ ಕವಿತೆಗಳಿಗೆ ಅಲ್ಲಿ ಅವಕಾಶಗಳು ಲಭಿಸುವಂತಹದ್ದು. ನಿಗಧಿತ ಸ್ಥಳದಲ್ಲಿ ನಾಲ್ಕು ಗೋಡೆಯ ಕಟ್ಟಡದಲ್ಲಿ ನಡೆಯುವ ಈ ಸಾಹಿತ್ಯ ಗೋಷ್ಠಿಗಳಿಗೆ ಮೊದಲ  ಹಿನ್ನಡೆ ಸಭಾ ಪ್ರೇಕ್ಷಕರು .ಈ ರೀತಿಯ ಸಾಹಿತ್ಯದ  ಕಾರ್ಯಕ್ರಮ ಫೇಸ್ಬುಕ್ ಅಂತರ್ಜಾಲ ತಾಣದಲ್ಲಿ  ಸಾಧ್ಯವುಂಟಾ..!? ಹಾಗಂತ, ನಮ್ಮಲ್ಲಿ ನಾವೇ ಕೇಳಿಕೊಳ್ಳುವ ಸಾಂದರ್ಭಿಕ ಪ್ರಶ್ನೆಯಿತ್ತು. ಸೂಕ್ತ ನಿರ್ವಹಣೆ, ಅದರ ಬಗೆಗಿನ ಆಸಕ್ತ ತಂಡದ ವ್ಯವಸ್ಥಿತ ನಿರ್ಧಾರಗಳು, ಕನ್ನಡಿಗರನ್ನು ಒಗ್ಗೂಡಿಸಿ ನಡೆಸಲು ಸಾಧ್ಯವಿದೆ ಅಂತ ಉದಾಹರಣೆಗಳು ಸಾಭೀತಾಯಿತು. ಇವತ್ತು ಇದೇ ಫೇಸ್ಬುಕ್  ಎನ್ನುವ ಅಂತರ್ಜಾಲ ತಾಣದಲ್ಲಿ ಹಲವು ಕನ್ನಡ ಸಮೂದಾಯಗಳನ್ನು ಕಟ್ಟಿ, ನಿರ್ವಾಹಕರ ಸತತ ಮುತುವರ್ಜಿಯಿಂದ ನಡೆಸಬಹುದು ಅಂತ ಉತ್ತರ ದಟ್ಟವಾದಾಗ, ಹಿಂದಿಗಿಂತಲೂ ಸಾಹಿತ್ಯ ಮುಂದೆ ಸಾಗುತ್ತಿದೆ ಅಂತ ಸಾಕ್ಷಿಗಳು ಸಿಕ್ಕಿದವು. ಅದನ್ನು ಕನ್ನಡ ಸಾಹಿತ್ಯ ಸಂಘಟಕರು ಮತ್ತು ಪತ್ರಿಕಾ ಮಾಧ್ಯಮದ ಮಾನ್ಯರು ಗಮನಿಸಿದರೆ ಉತ್ತರ ಸ್ಪಷ್ಟವಾಗುವಂತಹದ್ದು.
          ಸಾವಿರದ ಗಡಿಯಲ್ಲಿರುವ ಬ್ಲಾಗ್ ಪ್ರತಿಭೆಗಳ ಅಂತರ್ಜಾಲ ಸಾಹಿತ್ಯ ಭಂಡಾರ, ಒಂದಕ್ಕಿಂತ ಒಂದು ಶ್ರೇಷ್ಠ. ಸಾಹಿತ್ಯದ ಹಲವು ಪ್ರಾಕಾರಗಳು ಬೆರಗು ಹುಟ್ಟಿಸುವಂತಹದ್ದು. ಅವುಗಳಲ್ಲಿ ಎಷ್ಠು ಸಾಹಿತ್ಯಗಳು ಪುಸ್ತಕರೂಪದಲ್ಲಿವೆ ಅಂತ ಮಾಹಿತಿಗೆ ಲಭ್ಯವಾಗಿಲ್ಲ. ಕನ್ನಡ ಭಾಷೆ ಮನಸ್ಸಿನ ಭಾವಗಳನ್ನು ಸುಲಭವಾಗಿ ಆಳದಿಂದ ಅರಳಿಸಬಲ್ಲ ಶಕ್ತಿವುಳ್ಳದ್ದು. ಅದು ಬೇರೆ ಭಾಷೆಗಿಂತ ಮನಸ್ಸನ್ನು ಸುಲಭ ರೀತಿಯಲ್ಲಿ ಅನಾವರಣಗೊಳಿಸುವ ಪಂಕ್ತಿಯಲ್ಲಿ ಮೇಲ್ಮಟ್ಟದಲ್ಲಿ ನಿಲ್ಲುವಂತಹದ್ದು. ಅದಕ್ಕೆ ಸಾಕ್ಷಿ ಕನ್ನಡದ ನೆಲ ಬಿಟ್ಟರೂ , ಹೋದೆಡೆಯಲ್ಲಿ ಪದಗಳಾಗಿ ಮಾತಾಡುವಂತಹದ್ದು. ಖ್ಯಾತ ಕಥೆಗಾರ ಮಾನ್ಯ ಅಬ್ದುಲ್ ರಶೀದರ "ಕೆಂಡ ಸಂಪಿಗೆ", ಮಾನ್ಯ ರಾಕೇಶ್ ಶೆಟ್ಟಿ,ಅರವಿಂದ್ ಎಚ್‍, ಎನ್‍.ವಿ.ಸಾತ್ವಿಕ ಅವರ ನೇತೃತ್ವದ " ನಿಲುಮೆ" ಇದರಲ್ಲಿ ಮೇರು ಮಟ್ಟದಲ್ಲಿ ನಿಂತು ಪ್ರತಿಭೆಗಳ ಬೆಳಕಿಗೆ ದಾರಿ ತೋರಿಸುತ್ತಿವೆ. ಹೊರನಾಡ ಕನ್ನಡಿಗರನ್ನು ಕನ್ನಡದ ತೆಕ್ಕೆಯಲ್ಲಿ ಸಿಕ್ಕಿಸಿದ ಮೋಹನ್‍ದಾಸ್ ಬೈಜೂರರ " ಗಲ್ಫ್ ಕನ್ನಡಿಗ" ಅಂತರ್ಜಾಲ ತಾಣವಂತೂ ಇನ್ನಿಲ್ಲದ ಕನ್ನಡದ ಸೊಗಸು. ಕನ್ನಡ ಒನ್‍ ಇಂಡಿಯಾ, ದಟ್ಸ್ ಕನ್ನಡ,ವೆಬ್‍ ದುನಿಯಾ, ಯಾಹೂ ಮುಂತಾದ ಮಾಹಿತಿಗೆ ಲಭ್ಯವಿಲ್ಲದ ತಾಣಗಳು ಕನ್ನಡದ ಕಂಪನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವಾಗ ಕನ್ನಡಕ್ಕೆ ತನ್ನದೇ ಆದ  ಅಂದಾಜು ಇದೆ ಅಂತ ಮನದಟ್ಟಾಯಿತು. ಇದು ಜಗತ್ತಿನ ಯಾವ ಭಾಷೆಗೂ ಸ್ಪರ್ಧಿಸುವಂತಹದ್ದು.
          ಹಲವು ಪ್ರತಿಭೆಗಳು  ಕನ್ನಡ ನೆಲದಲ್ಲಿ  ಮಾತ್ರವಲ್ಲದೆ, ದೇಶದ ಇತರ ರಾಜ್ಯ, ವಿದೇಶಗಳಲ್ಲಿ ಉಂಟು. ಅವರೆಲ್ಲರನ್ನೂ ಒಗ್ಗೂಡಿಸಿ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಒದಗಿಸಿದ ಕೀರ್ತಿ ಈ ಫೇಸ್ಬುಕ್ ಕನ್ನಡ ಸಮೂದಾಯಕ್ಕೆ ಸಲ್ಲಬೇಕು. ಇದರಿಂದ ಸೃಜನಶೀಲ ಸಾಹಿತ್ಯ ಪ್ರಾಕಾರಕ್ಕೆ ಬುನಾದಿ  ಬಂತು. ಪತ್ರಿಕೆಗಳಲ್ಲಿ ಬರುವ ಸಾಹಿತ್ಯ ವಿಚಾರಗಳ ಓದುವಿಕೆ ಸಂಖ್ಯೆ ಹೆಚ್ಚಿರಬಹುದು ಅಥವಾ ಬರೆಯುವವರ ಬರವಣಿಗೆಯಲ್ಲಿ ಪ್ರೌಢತೆ ಸಾಧಿಸಿರಬಹುದು ಅಂತ ಸಂತಸ ಪಡುತ್ತೇವೆ. ಸಮಾಜದಲ್ಲಿ ವಿಚಾರವಂತಿಕೆಗೆ, ಆಲೋಚನಾಭರಿತ ವ್ಯವಸ್ಥೆಗೆ ಪರೋಕ್ಷವಾಗಿ ಬೆಳವಣಿಗೆ ಕಾರ್ಯತಂತ್ರ ರೂಪಿತವಾಗಿರುವುದು ಕಂಡು ಬಂದಿದೆ.
          ದೈನಂದಿನ ಪತ್ರಿಕೆಯಲ್ಲಿ ಭಿತ್ತರವಾಗುವ ಸಾಹಿತ್ಯ ವಿಷಯಗಳಿಗೆ ಸಡ್ಡು ಹೊಡೆಯುವಂತ ಬರವಣಿಗೆಗಳನ್ನು ಕಂಡು ಆಶ್ಚರ್ಯ ಪಡುವಂತಿದೆ ಕನ್ನಡ ಸಾಹಿತ್ಯ ನೆಲ. ಮುಖಾಮುಖಿ ಕವಿಗೋಷ್ಟಿ, ಕಥೆ, ವಿಮರ್ಶೆಗಳು, ಲೇಖನಗಳು, ಬೆಚ್ಚಿ ಬೀಳಿಸುವ  ಅಲೋಚನಾಭರಿತ ಮಾತುಗಳು, ಅಲ್ಲೇ ವ್ಯಕ್ತವಾಗುವ  ಪರ-ವಿರೋಧ ಪ್ರತಿಕ್ರಿಯೆಗಳು, ಸಲಹೆಗಳು ಅಥವಾ ಇನ್ನೊಬ್ಬರ ಸಾಹಿತ್ಯ ಕೃಷಿಯನ್ನು ಓದಿ ತಮಗೆ ತಾವೇ ಉತ್ತೇಜನಗೊಂಡು ಇನ್ನೊಂದು ಬರಹಕ್ಕೆ  ತೊಡಗಿಸಿಕೊಳ್ಳುವ ಕಾರ್ಯ ಫೇಸ್ಬುಕ್‍ ನಿಸ್ತಂತು ವೇದಿಕೆಯಲ್ಲಿ ನಡೆಯುತ್ತಿರುವಾಗ, ಕನ್ನಡ ಸಾಹಿತ್ಯಕ್ಕೆ  ಸಲ್ಲುವ ಅಮೂಲ್ಯ ಕೊಡುಗೆ ಅಂತ  ಭಾಷ್ಯ ಬರೆಯಬೇಕಾಗುತ್ತದೆ.
          ಪತ್ರಿಕೆಯಲ್ಲಿ  ಪ್ರಕಟಣೆಗೆ  ಕಳುಹಿಸುವ ಅದೇಷ್ಟೋ ಬರಹಗಳು  ಸಂಪಾದಕರ ಕಸತೊಟ್ಟಿಗೆ ಆಹಾರವಾಗುತ್ತಿದೆ. ಆಯ್ಕೆ ಮಾಡಿದ ಬರಹಗಳು ಮಾತ್ರ ಅಲ್ಲಿ ಪ್ರಕಟಣೆಗೆ ಸೂಕ್ತ ..ಹೌದು, ಅದು ನಿಜವೂ ಹೌದು.ಇದರಲ್ಲಿ ಪರಿಷ್ಕರಿಸುವಾಗ ಕೆಲವು ನೈಜ ಪ್ರತಿಭೆಗಳೂ ಕಸದ ತೊಟ್ಟಿಗೆ ಹೋದ ಉದಾಹರಣೆಗಳು ಉಂಟು. ಅಥವಾ ಅದು ಮುಂದೆಯೂ ನಡೆಯಬಹುದು. ಸಾಹಿತ್ಯವನ್ನು ಬೆಳೆಸುವ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಇವತ್ತು ಕನ್ನಡ ನಾಡಿನ ಬೀದಿ-ಬೀದಿಯಲ್ಲಿ ಅದ್ಧೂರಿಯ ಸಮಾರಂಭಗಳಲ್ಲಿ ಕಾಣುತ್ತಿದ್ದೇವೆ. ಸಾಹಿತ್ಯವೆಂದರೆ ಅಂತಹ ನಾಲ್ಕು ಗೋಡೆಗಳ ನಡುವೆ ಒಂದಷ್ಟು ಸಾಹಿತ್ಯದ ಗಟ್ಟಿಗರನ್ನು ವೇದಿಕೆಯ ಮೇಲೆ ಕೂರಿಸಿ ಮಾಡುವುದು. ಅವರಿಂದ  ಒಂದಷ್ಟು ಹಿತನುಡಿಗಳನ್ನು ಸಮಾಜಕ್ಕೆ ಭಿತ್ತರಿಸುವಂತಹದ್ದು. ಹಾಗಂತ ಸಾವಿರಾರು ರೂಪಾಯಿಗಳಷ್ಟು ವೆಚ್ಚ ಮಾಡಿ , ಕರಪತ್ರ ಹಂಚಿ.ಪತ್ರಿಕೆಯಲ್ಲಿ ಆಹ್ವಾನಿಸಿದರೂ ಬರುವುದು ಬೆರಳೆಣಿಕೆಯಷ್ಟು ಮಂದಿ. ಅದರಲ್ಲಿ ಸಾಹಿತ್ಯ ಅನ್ನುವ ಮರ್ಮದ ಆಳಕ್ಕೆ ಇಳಿದವರೇಷ್ಟು ಅಂತ ನಮ್ಮಲ್ಲಿ ನಾವೇ ಕೇಳಿಕೊಳ್ಳುವ ಪ್ರಶ್ನೆ.ಕನ್ನಡಿಗರಲ್ಲಿ  ಬೇರೆ ಭಾಷೆಗೆ ಹೋಲಿಸಿದಲ್ಲಿ ಕನ್ನಡದ ಅಭಿಮಾನ ಕಡಿಮೆ ಅಂತ ನೇರವಾಗಿ ಹೇಳುವ ಮಾತಿದು.
          ಹಾಗಾದರೆ, ರಾಜ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು, ಹಲವು ಕೇಂದ್ರ ಸಾಹಿತ್ಯ ಅಕಾಡೆಮಿ,ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುವುದಕ್ಕೆ ಮೊದಲು ಈ ಫೇಸ್ ಬುಕ್‍ ಎಂಬ ತಾಣ ಇರಲಿಲ್ಲ  ಅನ್ನುವ ಪ್ರಶ್ನೆ ಉದ್ಬವಿಸುವುದು ಸಹಜ. ಅಂದು ಮುಕ್ಕೋಟಿ- ಪಂಚಕೋಟಿ ಕನ್ನಡಿಗರು ಮೂರು ಸಾವಿರದಷ್ಟು ಸಾಹಿತಿಗಳನ್ನು ಪತ್ರಿಕೆ ನೋಡಿ ಬೆಳೆಸಿದರು.ಈಗ ಅದು ಹತ್ತು ಕೋಟಿಗೂ ಮೀರಿದೆ. ಹದಿನೈದು ಸಾವಿರಕ್ಕೂ ಅಧಿಕ ಸಾಹಿತ್ಯ ಕುಸುಮಗಳಿವೆ. ಅವರಿಗೆಲ್ಲಾ  ಪತ್ರಿಕಾ ಮಾಧ್ಯಮದಲ್ಲಿ ಗುರುತಿಸಿಕೊಳ್ಳುವ ಅವಕಾಶಕ್ಕೆ ತೊಡಕಾಗಿದೆ. ಅಂತಹ ಸಂದರ್ಭದಲ್ಲಿ ಅಂತರ್ಜಾಲ ತಾಣಗಳಲ್ಲಿ ತಮ್ಮ ಸಾಹಿತ್ಯವನ್ನು ಹರಿಯ ಬಿಡುತ್ತಿದ್ದಾರೆ. ಹಿಂದಿಗಿಂತಲೂ ಇಂದು, ಈ ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಹುಲುಸಾಗಿ ಬೆಳೆದಿದೆ. ಅದು ಸದ್ದಿಲ್ಲದಂತೆ.
          ಬಹಳ ದೊಡ್ಡ ಅಭಾಸವೆಂದರೆ, ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸುವುದು. ಇದು ಇಂದಿನ ಪ್ರಸ್ತುತ ಯುಗದಲ್ಲಿ ಸಾಧನೆಯನ್ನು ಅಳತೆ ಮಾಡುವ ಮಾಪನವಾಗಿ ಮಾರ್ಪಟ್ಟಿರುವುದು ದುರಾದೃಷ್ಟ.ಸಾಧನೆ ಅನ್ನುವುದು ಎಲ್ಲಾ ಕಟ್ಟುಪಾಡು- ಬಂಧನವನ್ನು ಮೀರಿದ್ದು. ಆದರೆ ನಾವು ಈಗ ಕಾಣುತ್ತಿರುವುದು ಜಾತಿ-ಪಂಥವನ್ನು ಗಣನೆಗೆ ತೆಗೆದುಕೊಳ್ಳುವ ರಾಜಕೀಯ ನಾಟಕ. ಅದು ನಾಡಿನ ಸಂಸ್ಕೃತಿ,ಭಾಷೆ-ನೆಲೆಯನ್ನು ಹರಾಜಿಗಿಟ್ಟಷ್ಟು ಬೆಲೆ ಕಟ್ಟಿದಂತಾಯಿತು. ತಮ್ಮ ತಮ್ಮೆ ಸಾಧನೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಪ್ರಶಸ್ತಿಗಳ ಅಗತ್ಯತೆ  ಎಲ್ಲಾ ಶ್ರೀಮಂತಿಕೆಯನ್ನು ಮೀರಿ ನಿಲ್ಲುತ್ತವೆ. ಕೋಟ್ಯಾಂತರ ರೂಪಾಯಿ ಹಣವನ್ನು ಸಾಹಿತ್ಯದ ಅಭಿವೃದ್ಧಿಗೋಷ್ಕರ ಯೋಜನೆ ರೂಪಿಸಿ ವ್ಯಯಿಸುವ ಮುನ್ನ ಸರಕಾರ ಮತ್ತು ಕನ್ನಡ ಸಾಹಿತ್ಯ ಸಂಘಟನೆಗಳು ಈ ಲೇಖನದ ಆಶಯವನ್ನು ಗುರುತಿಸಬೇಕು. ಎಲ್ಲರಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸಿ,ಸಮಾಜವನ್ನು ಉದ್ಧೀಪನಗೊಳಿಸುವ ಕಾರ್ಯಕ್ಕೆ ಹಿನ್ನಡೆಯಿದೆ. ಆ ದಾರಿಯಲ್ಲಿ ನಡೆಯಲು  ಕನ್ನಡ ನಾಡಿನ ಸಂಘಟನೆಗಳಿಗೆ ಹಲವು ಅಡ್ಡಿ ಆತಂಕಗಳನ್ನು ಕಾಣುತ್ತಿದ್ದೇವೆ. ಅದರಲ್ಲಿ ಮೊತ್ತ ಮೊದಲನೆಯದು ಸಾಹಿತ್ಯದಲ್ಲೇ ತೊಡಗಿಸಿಕೊಂಡಿರುವ ಕನ್ನಡಿಗರು ನೆಲ ಬಿಟ್ಟು  ವಿದೇಶದಲ್ಲಿ ಅಥವಾ ದೇಶದ ಇತರೆ ರಾಜ್ಯಗಳಲ್ಲಿ ನೆಲೆಸಿರುವುದು. ಬದುಕು ಗಟ್ಟಿಯಾದಾಗ ಸಾಹಿತ್ಯ ಗಟ್ಟಿಯಾಗುತ್ತದೆ, ಅದು ಕನ್ನಡ ನೆಲದಲ್ಲಿ ಉದ್ಯೋಗದ ಕೊರತೆ.. ಅದಕ್ಕೆ ಸರಕಾರ ನೀತಿಗಳು, ಸಂಸ್ಥೆಗಳ ನಿಯಮಗಳು ಬದಲಾಗಬೇಕು. ಕನ್ನಡಕ್ಕಾಗಿ ದುಡಿಯುತ್ತಿರುವ  ಹಲವು  ಬ್ಲಾಗ್ ಸಾಹಿತ್ಯ ಪ್ರತಿಭೆಗಳನ್ನು ಹಾಗೂ  ಅಂತರ್ಜಾಲ ತಾಣಗಳನ್ನು ಕನ್ನಡ ನಾಡು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ.
-ರವಿ ಮೂನಾಡು.  

11 ಕಾಮೆಂಟ್‌ಗಳು:

  1. ಉತ್ತಮ ಲೇಖನ. ಚೆನ್ನಾಗಿದೆ ಸರ್
    ಕೋಮಲ್

    ಪ್ರತ್ಯುತ್ತರಅಳಿಸಿ
  2. ನಿಮ್ಮಗಳ ನಡುವೆ ನನ್ನಂತಹ ನವ ಪ್ರತಿಭೆಗಳು ಇನ್ನೂ ಹೆಚ್ಚು ಅರಳುವಂತಾಗಲಿ ಎಂದು ಆಶಿಸುತ್ತೇನೆ

    ಪ್ರತ್ಯುತ್ತರಅಳಿಸಿ
  3. ಕನ್ನಡಾಭಿಮಾನಕ್ಕೆ ಕನ್ನಡಿ ಹಿಡಿದಂತಿದೆ ನಿಮ್ಮೀ ಲೇಖನ. ಉತ್ತಮ ಮಾಹಿತಿ ಕಲೆಹಾಕಿ ಕನ್ನಡ ರಾಜ್ಯೋಸ್ತವಕ್ಕೆ ಮೆರುಗು ಕೊಟ್ಟಿದ್ದೀರಿ. "ಕನ್ನಡಕ್ಕಾಗಿ ದುಡಿಯುತ್ತಿರುವ ಹಲವು ಬ್ಲಾಗ್ ಸಾಹಿತ್ಯ ಪ್ರತಿಭೆಗಳನ್ನು ಹಾಗೂ ಅಂತರ್ಜಾಲ ತಾಣಗಳನ್ನು ಕನ್ನಡ ನಾಡು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ"

    ಪ್ರತ್ಯುತ್ತರಅಳಿಸಿ
  4. ನವೆಂಬರ್ ತಿಂಗಳಲ್ಲಿ ಮಾತ್ರ ಯಾಕೀ ಆವೇಶ?
    ನಿಮ್ಮ ಪ್ರಶ್ನೆ ಸರಿಯಾಗಿ ಸರ್...ನಾವೆಲ್ಲರೂ ಕೂಡ ಅದೇ ಗೊಂದಲದಲ್ಲಿ ಇರುವವರೇ...
    ಫೇಸ್ಬುಕ್, ಬ್ಲಾಗ್ ಗಳ ಬಗ್ಗೆ ಈ ಮೂಲಕ ಬೆಳೆಯುತ್ತಿರುವ ಯುವ ಪ್ರತಿಭೆಗಳ ಬಗ್ಗೆ ಚೆನ್ನಾಗಿ ಹೇಳಿದ್ದಿರಿ...
    ಕನ್ನಡ ದ ಕುರಿತ ಈ ಕಳಕಳಿಯ ಲೇಖನವೇ ಒಂದು ಸ್ಪೂರ್ತಿ....

    ಪ್ರತ್ಯುತ್ತರಅಳಿಸಿ
  5. ರವಿ
    ಲೇಖನ ಸಕಾಲಿಕವಾಗಿದೆ, ಕನ್ನಡ ಬ್ಲಾಗ್ ಅಕ್ಷರಷ: ಕನ್ನಡವೇ ಆಗಿದೆ , ಮೊದ ಮೊದಲು ಕನ್ನಡದಲ್ಲಿಯೇ ಬರೆಯಿರಿ ಎಂಬ ಆಭಿಮಾನ ಬೆರೆತ ಆಕ್ಷೇಪ ನೋಡಿದಾಗ ಸಿಟ್ಟು ಬಂದಿತ್ತು. ಆದರೆ ಅದೆಷ್ಟು ಉತ್ತಮ ನಿರ್ಧಾರ ಎಂಬುದು ಈಗ ತಿಳಿಯುತ್ತಿದೆ.ಒಂದೊಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು
    ROOPA Rao

    ಪ್ರತ್ಯುತ್ತರಅಳಿಸಿ
  6. ತುಂಬಾ -ತುಂಬಾ ಚೆನ್ನಾಗಿತ್ತು ಲೇಖನ ..ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು .........ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  7. ರವಿ ಸರ್ ಅದ್ಭುತವಾದ ಲೇಖನ :) ಒಂದೊಂದು ಪದಗಳನ್ನು ತುಂಬ ಆತ್ಮೀಯತೆ ಇಂದ, ಹೆಮ್ಮೆ ಇಂದ ಓದಿ ಸಂತಸ ಪಟ್ಟೆ. ಮತ್ತೊಮ್ಮೆ ಓದಬೇಕೆನಿಸುವ ಲೇಖನ, ತುಂಬ ಮೌಲ್ಯಗಳನ್ನು ಹೊಂದಿದೆ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ