ಸೋಮವಾರ, ಮಾರ್ಚ್ 26, 2012

"ದಡ ಬಿಟ್ಟ ದೋಣಿ"ಯ ಒಂದಷ್ಟು ಪ್ರಯಾಣದ ಪದ್ಯಗಳು !


-ರವಿ ಮೂರ್ನಾಡು.
ಆ ಕೊಂಬೆಗೆ ನೇತವನು, ಹಣ್ಣೆ ತೂಗಿದ೦ತಿಹನು... !  ತನ್ನ ಊರಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡವನ ಪ್ರತಿಮೆ ಕಂಡಾಗ ,ಭಾವ ಹೀಗೂ ಆಗಬಹುದಲ್ಲ? ನೇರವಾಗಿ ನಿಂತು ಅನುಕಂಪ ಸೂಚಿಸುವಾಗ, ಶವ ತೂಗುತ್ತಿದ್ದ  ಮರದಲ್ಲಿ ಹಣ್ಣುಗಳು ಇದ್ದವೋ ? ಇಲ್ಲದಿದ್ದರೂ ಶವವನ್ನು ಹಣ್ಣಿಗೆ ಹೋಲಿಸಿ, ಕೊಂಚ ಬೀಸುವ ಗಾಳಿಗೆ ಅದುರಿಸಿ , ಶ್ರೇಷ್ಠತೆ ಮುಟ್ಟಿಸುವ ಕವಿ ನಮ್ಮೆಲ್ಲರ ನಡುವೆ ಸರಿದಾಡಿದರೂ ಎತ್ತರಕ್ಕೆ ಕುಳಿತು ಬಿಡುತ್ತಾರೆ. ಕೆ.ಪಿ. ಸುರೇಶರ ಕವಿತೆ ಇದು. ಸುಳ್ಯದ  ಕುಕ್ಕುಜಡ್ಕ ಗ್ರಾಮದಲ್ಲಿ  ಮರವೊಂದಕ್ಕೆ ಹಗ್ಗದ ಕುಣಿಕೆಗೆ ನೇತು ಹಾಕಿಕೊಂಡವನ ಕತ್ತು ಒಂದಷ್ಟು ಓರೆಯಾಗಿ ನೋಡುತ್ತಿದ್ದಾಗ ಜಗತ್ತನ್ನೇ ಅಳೆದ ದೃಷ್ಠಿ  ಪ್ರತಿಮೆಯ ಆಳೆತ್ತರವನ್ನು ಪರೀಕ್ಷಿಸುತ್ತಿದೆ.
ನಾನು ಮೊದಲ ಬಾರಿಗೆ ಬಂಟಮಲೆಯಲ್ಲಿ ಇವರ ಮನೆಗೆ ಹೋದಾಗ,ಮರದ ಕುರ್ಚಿಗೆ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಗೆಳೆಯ ದಿನೇಶ್ ಕುಕ್ಕುಜಡ್ಕ ,ಹರೀಶ್ ಕೇರ ಮತ್ತು ನನ್ನನ್ನು ನೋಡಿದ್ದೇ ತಡ ಬಾಯಿ ಕೆಂಪಗೆ ಮಾಡಿ ನಕ್ಕಿದ್ದು ಬಿಟ್ಟರೆ, ಅಲ್ಲಿ ಅಪರಿಚಿತ ಎಂಬ ಲವಶೇಷವೂ ಇರಲಿಲ್ಲ. ಭಾವವನ್ನು ಸಲೀಸಾಗಿ ಸ್ವಾಗತಿಸುವ ರೀತಿ ಅದು. ಬದುಕಿನ ಪಯಣದಲ್ಲಿ ತೇಲುತ್ತಿರುವ ದೋಣಿಯ ತಳಪಾಯದಲ್ಲಿ ಹುದುಗಿಸಿಕೊಂಡ ಭಾವ ಸ್ಥಿರತೆಯನ್ನು ಕಂಡುಕೊಂಡಿದ್ದೇನೆ. ಕೃತಿಗೆ ಎದುರಾಗಿ, ನನ್ನನ್ನೇ ಕೃತಿಯಾಗಿ, ನನ್ನನ್ನೇ ಓದಿಸಿದೆ. ಅಲ್ಲಿಂದ ಹೊರಡುವಾಗ ನನ್ನ ಅರಿವಿಗೆ ಒಂದಷ್ಟು ಚುರುಕುಗಳನ್ನು ತಿಕ್ಕಿದ " ದಡ ಬಿಟ್ಟ ದೋಣಿ" ಪುಸ್ತಕ ಕೊಟ್ಟಿದ್ದರು. ಅದರಲ್ಲಿ ಶುಭಾಶಯಗಳೊಂದಿಗೆ  ಕೆ.ಪಿ .ಸುರೇಶ ಅಂತ ಬರೆದಿದ್ದಾರೆ. ನಾನು ಹೋದಲ್ಲೆಲ್ಲಾ ಈ ಪುಟ ತೆರೆದಾಗ ,ಮತ್ತೆ ಮತ್ತೆ ಶುಭಾಶಯ ಹೇಳುತ್ತಿರುವ ಮೊದಲ ಪುಸ್ತಕ ಅಂತ ಒತ್ತಿ ಹೇಳುತ್ತಿದ್ದೇನೆ. ಏಕೆಂದರೆ ಅಲ್ಲಿ ಜಗದ ತಿಗರಿ ಮಣ್ಣಿಂದ ರೂಪುಗೊಂಡ ಮನುಷ್ಯನ ಓರೆಕೋರೆಗಳನ್ನು ತಿದ್ದುವ ಬದುಕಿನ ಪ್ರಾರ್ಥನೆಯನ್ನು ಆಲಿಸುತ್ತಿದ್ದೇನೆ.
ಡಾ.ಯು.ಆರ್.ಅನಂತಮೂರ್ತಿಯವರು ಒಂದಷ್ಟು ಮಾತಾಡಿದ್ದಾರೆ. ಹೇಗೆಂದರೆ ಕಂಜರ್ಪಣೆ ಪಿ. ಸುರೇಶರ  ಕವಿತೆಗಳನ್ನು ಮತ್ತು  ಒಟ್ಟು ಸೇರಿಸಿದ ಎಲ್ಲರ ಕವಿತೆಗಳು ಶಬ್ಧಗಳ ಆಕೃತಿಯೋ  ಅಥವಾ ಮಾತಿನ ಆಗ್ರಹವೋ ಎಂದು. ಏಕೆಂದರೆ, ಓದುವಾಗ ಹಾಗೇ ಅನ್ನಿಸುತ್ತದೆ. ಕೃತಿಗೆ ಎದುರಾಗಿ ಗಾಳಿಗೆ ತೇಲಿಸಿದಂತೆ ಓದುವುದು ಮತ್ತು ತಾನೇ ಕೃತಿಯಾಗಿ ಓದುವುದು ಎರಡು ವಿಧ. ವಿಭಿನ್ನ ನೋಟವಿಲ್ಲದಿದ್ದಲ್ಲಿ  ಅಭಾಸವೆನಿಸುವ ಆಸ್ವಾಧನೆಗೆ ದಾರಿಯಾಗುವುದು ಅನ್ನುವ ಮಾತನ್ನು ಕವಿತೆಗಳಿಗೆ ಪ್ರಶ್ನೆಗಳನ್ನು ಕಟ್ಟಿಕೊಡಬೇಕಾಗುವುದು. ಇದಕ್ಕೆ ಉತ್ತರವಾಗಿ ಕೆ. ಪಿ. ಸುರೇಶರ ಕವಿತೆಯಲ್ಲಿ ನಿತ್ಯರೂಡಿಯ ಕ್ಷಣಗಳಲ್ಲಿ ಅಸಾಧಾರಣವನ್ನು ಎತ್ತಿ ಕೊಡುವಂತಹದ್ದು. "ನನ್ನೆದುರು ಬಾಹುಬಲಿ" ಕವಿತೆಯಲ್ಲಿ  ಕಂಬಳಿ ಹುಳು ಕೋಶವಾಗುವ ಮುಂಚೆ, ತಪಸ್ಸಿಗೆ ಕುಳಿತ ಯೋಗಾಸನದ ಭಂಗಿಯ ಚಿತ್ರಣವನ್ನು ಕಾಣುತ್ತದೆ. ಕಂಬಳಿ ಹುಳುಗಳನ್ನು ನಾವೆಲ್ಲರೂ ನೋಡಿದ್ದೇವೆ. ಕಲ್ಲು ಬಂಡೆಗಳ ಮೇಲೆ , ನಮ್ಮ ಮನೆಯ ಗೋಡೆಯಗಳ ಮೇಲೆ ಇವುಗಳನ್ನು ಕಂಡ ನಾವುಗಳು, ಕೋಶವಾಗುವ ಮುಂಚೆ ಅದರ ಆಧ್ಯಾತ್ಮಿಕ ಭಂಗಿಯನ್ನು ಕಾಣಲೇ ಇಲ್ಲ. ಅನಂತಮೂರ್ತಿಯವರ  ಒಟ್ಟು ಮಾತು ಕವಿತೆಯ ಲಯದ ಬಗ್ಗೆ . ಅದಕ್ಕೆ ಫ್ರೆಂಚ್ ಲೇಖಕ ಫ್ಲಾಬೇ ತನ್ನ ಬರಹಗಳಲ್ಲಿ ಮೇಜು ಕುಟ್ಟಿ ಲಯ ಪರೀಕ್ಷಿಸುವ ತಾಳ್ಮೆಯ ಬಗ್ಗೆ ಮಾತಾಡುತ್ತಾರೆ.  "ಕೊಂಬೆಗೆ ನೇತ ಶವ" ಕವಿತೆಯಲ್ಲಿ ಪದಗಳು ತೂಗುತ್ತಿದೆ ಹೀಗೆ :
ಈ ಮರದ ಕೊಂಬೆಗೆ ನೇತವನು
ಹಣ್ಣೇ ತೂಗಿದಂತಿಹನು !
ಕತ್ತಷ್ಟು ಓರೆಯಾಗಿ
ಅದಾವ ಕೋನದಲೋ
ಜಗವ ಅಳೆವಂತಿಹನು !
ಗಾಳಿ ತುಯ್ದಂತೆಲ್ಲಾ
ಜೀವವದೆಷ್ಟು ಭಾರ ?
ಅದು ಚಿವ್ವನೆ ಶುಕ್ರದೋಪಾದಿಯಲಿ ಚಿಮ್ಮಿ
ಹೆಣವೂ ಅದೆಷ್ಟು ಗಾಳಿ ಹಗುರ !
ಒಂದೋ ಶವ ನೋಡುವಾಗ ಕೊಂಚ ಬೀಸಿದ ಗಾಳಿಗೆ ಶವದೊಂದಿಗೆ ಹಣ್ಣು- ಎಲೆಗಳು ಅದುರಿರಬೇಕು. ಇಲ್ಲಿ  ಶವ ನೋಡಿದಾಗ ಸತ್ತವನನ್ನೇ ನೋಡಿದ ಕಣ್ಣು , ಅವನ ಜೊತೆಗಿದ್ದ ಹಣ್ಣು- ಎಲೆಗಳನ್ನು ನೋಡಿದ್ದು ಒಳಗಣ್ಣು. ಅದು ಕವಿತೆಯಾಗುವುದು. ನಿತ್ಯ ನಮ್ಮನ್ನೇ ಕಾಡುವ ವಿಚಾರಗಳು, ಕಾಣುವ- ಸಲಹುವ ಸಂತಸಗಳು, ದುಃಖ್ಖಗಳು ಮತ್ತೆ ಮತ್ತೆ ಓದುವ ಬರಹಗಳಲ್ಲಿ ರೂಪ ಪಡೆದಾಗ ಮತ್ತಷ್ಟು ಕಾಡದೆ ಇರದು. ಹಾಗೇ ಕಾಡಿದ 2003 ರ ಸಾಲಿನ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪ್ರಶಸ್ತಿ ವಿಜೇತ "ದಡ ಬಿಟ್ಟ ದೋಣಿ" ಸಂಕಲನ. ಬಿಡುಗಡೆ ಮಾಡಿದ ನಂತರ ಕೆ. ಪಿ. ಸುರೇಶರನ್ನೂ ಅಷ್ಟಾಗಿ ಕಾಡಲಿಲ್ಲ ಅನ್ನುತ್ತೇನೆ.
ಭೂಮಿಯನ್ನು ಅವಕಾಶದಾಕಾಶಕ್ಕೆ ಹೋಲಿಸಿ ನಾನು ಕಂಡುಕೊಂಡ ಬಗೆ, ಕೊಲ್ಲಿ ರಾಷ್ಟ್ರ ಬಹರೈನ್‍ನಲ್ಲಿ ಐದು ತಿಂಗಳು ಈ ಕವಿತೆಗಳು ಮಾತಾಡಿದ್ದವು. ಜೀವನದ ವ್ಯಾಪಾರಕ್ಕೆ ಮುಂಬೈಗೆ ಬಂದಾಗಲೂ ಒಂದೂವರೆ ವರ್ಷಗಳ ಕಾಲ " ಆ ಮುದುಕಿ" ಕವಿತೆ ,ಈ ಎಲ್ಲ ಎಲ್ಲಗಳನ್ನು ಮರು ಹುಟ್ಟು ಪಡೆಯುವ ನಾಳೆಗಳಿಗೆ ,ಸುಳಿವ ಜನ-ಇಳಿವ ಮಳೆಗೆ ತೂಗಿಸಿ, ಹಲವು ಬೀದಿ ಬದಿಯ ವ್ಯಾಪಾರಿ ಜೀವಗಳನ್ನು ಕಂಡಿದ್ದವು.  2004 ರಿಂದ ನನ್ನೊಂದಿಗೆ ಜಗತ್ತು ಸುತ್ತಾಡಿದ ಈ ದೋಣಿ, ಆಫ್ರೀಕಾದ ಕ್ಯಾಮರೂನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮತ್ತೆ ಮತ್ತೆ ಪುಟ ತೆರೆದಾಗ ಒಂದಷ್ಟು ಪ್ರಯಾಣದ ಪದ್ಯಗಳಾಗಿ ಗುನುಗಿಸುತ್ತಿದೆ.
ಯಾಕೆ ಹೀಗೆ , ನಮ್ಮ ಮುಂದೆಯೇ ಹಾದು ಹೋಗುವ ವಿಷಯಗಳು ಇಲ್ಲಿ ಕವಿತೆಗಳಾದವು?. ವಿದೇಶಕ್ಕೆ ಬಂದಾಗ ಕಾಡಿದ  ತಾಯ್ನೆಲದ ನೆನಪೆಲ್ಲವೂ ಒಟ್ಟಾಗಿ ತೆರೆದು ಈ ಕವಿತೆಗಳನ್ನು ಓದುವಾಗ ಜೊತೆ ಸೇರಿದವೋ ಅಂತ ಕೆದಕಿದಾಗ ಸಿಗುವ ಕವಿತೆಗಳೆ ಬೇರೆ. ಮುಂಗಾರು ಮಳೆಯ ಕವಿ ಜಯಂತ ಕಾಯ್ಕಿಣಿ ಯಾವುದೇ ಸಿಲೆಬಸ್‍ ಇಟ್ಟುಕೊಳ್ಳದೇ  ನಿಜ ಬದುಕಿನ ಸೋಜಿಗಗಳನ್ನು ಉತ್ತಿ ಬಿತ್ತಿ ಹದ ಮಾಡಿದ ನಿಜ ಸಾರದ ಕವಿತೆಗಳು ಅಂತ ಒಂದು ಕಡೆ ಬರೆದಿದ್ದಾರೆ. ದೇವನೂರು ಮಹಾದೇವರು ನಗರ-ಪಟ್ಟಣದ ಜೀವನಕ್ಕೆ ತಿಲಾಂಜಲಿಯಿತ್ತು , ದೇವನೂರು ಎಂಬ ಗ್ರಾಮ್ಯ ಸೊಗಡಿಗೆ ಜೀವನವನ್ನು ಒಪ್ಪಿಸಿ " ಕುಸುಮ ಬಾಲೆ" ಬರೆದಾಗ , ಕೆ.ಪಿ.ಸುರೇಶರ ಬಗ್ಗೆಯೂ ಒಂದಷ್ಟು ಮಾತುಗಳು ಬದುಕಿನ ಪಯಣವನ್ನು ಅವಲೋಕಿಸುತ್ತದೆ. ಬದುಕಿನ ನೂರಾಂಶ ಕೃಷಿಗೆ ಒಗ್ಗಿಸಿಕೊಂಡ ಈ ಕವಿಯ ಕವಿತೆಗಳು ನಿಜಕ್ಕೂ ಸಹಜ ಕೃಷಿಯ ಫಲಗಳೇ. ಗ್ರಾಮದ ಜನ ಸಾಮಾನ್ಯರ ಸಹಜ ಜೀವನದಲ್ಲಿ ಜಗತ್ತನ್ನು ಅನಾವರಣಗೊಳಿಸಿದ ಪರಿ ಕಾಯ್ಕಿಣಿ ಹೇಳಿದಂತೆ ಸ್ವಾಧಭರಿತ ಕೃಷಿ ಪದಾರ್ಥಗಳು. ಇದು ಹೊಗಳುವುದಲ್ಲ. ನಿಜವನ್ನು ತೆರೆದಿಟ್ಟು, ಅದನ್ನು ಮೀರಿದ ಸತ್ಯಗಳು ಅವರ ಕವಿತೆಯ ಮೂಸೆಯಲ್ಲರಳಿದ ಸಾವು  ಅನ್ನುವ ಅನುಭವಿಸುವ ಸತ್ಯ. ಅದನ್ನು ಹೇಳಲೇ ಬೇಕು. ಏಕೆಂದರೆ ಸಾವು ನಮ್ಮನ್ನು ಕಾಡದೇ ಬಿಡದು. ಅದು ಯಾರಾದರೂ ಸರಿ. ಇಲ್ಲಿ ಸಾವು-೨ ಎಂಬ ಪದ್ಯ ಹೀಗೆ ಸಾಗುತ್ತದೆ.
ಸಾವಂಥ ಸಾವೂ
ಇವನ ಒಳ ಹೊಕ್ಕು
ಹೊರಡಿಲಿಂಬಿಲ್ಲದಂತೆ
ಒಳಗೆ ಹೂತಿದೆ !
ಊರಜನ,ಕಾಗೆ-ನಾಯಿಗಳು
ಬಂದು
ಸಾವ ಬಿಡುಗಡೆಗೊಳಿಸಿ-
ಇದೇ ದೇಹದಲಿ ಬಂಧಿಯಾದರೆ
ಇನ್ನುಳಿದವರ ಸೇರುವುದೆಂತು?
ಶವದಲ್ಲಿ ಕುಳಿತಿದೆ ಸಾವು. ಆ ಸತ್ಯ ಹೊರ ಬಿದ್ದಿದ್ದೆ.  ಅದನ್ನು ಬಿಡುಗಡೆ ಮಾಡಬೇಕು ಹೇಗೆ? ಕಾಣುವ ಸಾಧಾರಣದಲ್ಲಿ ವಿಶೇಷಣಗಳನ್ನು ಕಾಣುವ ಈ ಕವಿತೆ, ಅಂಗಾತ ಬಿದ್ದ ಹೆಣದಲ್ಲಿ ಏನನ್ನೋ ಹುಡುಕುತ್ತಿದೆ. ಸಾವಂಥ ಸಾವನ್ನು  ಬಿಡುಗಡೆಗೊಳಿಸಿದಾಗ ಮಾತ್ರ ಶವಕ್ಕೆ ನಿಜವಾದ ಮುಕ್ತಿ ಸಿಗುವುದು ಅನ್ನೋದು ಇನ್ನೊಂದು ಮಾತು. ಮನುಷ್ಯ ಜೀವನದ ಬಹುಮುಖ್ಯ ದೃಶ್ಯ ಈ ಸಾವು. ಅದರ ಒಳ ಹೊಕ್ಕಿ ಹುಡುಕಾಡಿದಾಗ ಸಿಗುವ ಇನ್ನೊಂದು  ವಿಚಾರ ಹೆಣದೊಳಗೆ ಕುಳಿತ ಸಾವು ಎನ್ನುವ ನೆರಳು ! ಇಷ್ಟು ಸಾಕು ನಮ್ಮನ್ನು ನಾವೇ ಚುರುಕುಗೊಳಿಸಲು. ಹಗಲೆಂಥ ಸರಳ ವಿವರಗಳ ಪಟ್ಟಿ  ಅನ್ನುವ ಕವಿ, ಹೆಜ್ಜೆ ಹೆಜ್ಜೆಗಳನ್ನು ಅರಿವಿನ ಸೊಕ್ಕಿನೊಳಗೆ ತೆರೆದು ಮನುಷ್ಯ ಸದಾ ಕತ್ತಲೆಯ ಪ್ರವೇಶಿಸುತ್ತಿರಲಿ ಅನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಕವಿತೆ ಓದುವಾಗ ಪ್ರತಿಮೆ ಕಟ್ಟಿದ ರೀತ್ಯವನ್ನು ಹಲವರು ಹುಡುಕುತ್ತಾರೆ. ಕೆಲವರು ಪ್ರತಿಮೆಯನ್ನು, ಉಪಮೆ , ಅಲಂಕಾರವನ್ನು ಹುಡುಕುತ್ತಾರೆ. ಅಲ್ಲಿರುವ ಸಂದೇಶವನ್ನು  ಮತ್ತು ಕವಿತೆ ಲಯ-ಸಂಗೀತಕ್ಕೆ ಒಗ್ಗಿ ಗುನುಗಿಸುವುದನ್ನು ಹುಡುಕುತ್ತಾರೆ. ಇದೆಲ್ಲವನ್ನೂ ಬದಿಗಿಟ್ಟು ಮಾತ್ರೆಗಳನ್ನು ಹುಡುಕುತ್ತಾರೆ. ನಮ್ಮ ಪರಿಚಯಸ್ಥರು ಅನ್ನುವ ಕಾರಣಕ್ಕೆ ಶಹಬ್ಬಾಶ್‍ಗಿರಿ ಕೊಡುತ್ತಾರೆ. ಇದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ.  ನನ್ನ ಪ್ರಕಾರ  ಇವೆಲ್ಲವನ್ನೂ ಅರಗಿಸಿ ಕುಡಿದ ನಂತರ ಪದ ಬಳಕೆ, ಅನುಭಗಳನ್ನು ಹಿಗ್ಗಿಸಿ, ನಿಜ ಭಾವಗಳ ಒಳ ಹೊಕ್ಕಿ ವಿಸ್ತಾರಗೊಳಿಸಿ , ಹೊಸ ಅಂದಾಜನ್ನು ಕರುಣಿಸುವ ಕವಿತೆ ಗಮನ ಸೆಳೆಯುತ್ತವೆ. ಮತ್ತು ಕವಿತೆಯಾಗುತ್ತದೆ, ಕಥೆಯಾಗುತ್ತದೆ. ಏಕೆಂದರೆ ಅದು ನಿಜದ ಅನುಭವ.ಅದು ಬೇಕು. ಅದಿಲ್ಲದೆ ಸಮಯ ವ್ಯರ್ಥದ ಬದುಕಿನಲ್ಲಿ ಪದಗಳು ಮಕ್ಕಳಾಟಕ್ಕೆ ಸಿಲುಕಿ ,ಇಂದು ಇದ್ದು ನಾಳೆ ಸಾಯಬಹುದು. ಇವತ್ತು ಪತ್ರಿಕೆಗಳಲ್ಲಿ ಬರುವ ಕವಿತೆಗಳ ಬಗ್ಗೆ  ಕೆ. ಎಸ್. ನರಸಿಂಹ ಸ್ವಾಮಿಯವರು ಹೇಳಿದ ಮಾತು ನೆನಪಿಗೆ ಬರುತ್ತವೆ. ಭಾವಾವೇಷವಿಲ್ಲದೆ ನಾವು ಇಂದಿನ ಕೆಲವು ಮಿತಿಗಳಲ್ಲಿ ಕಳೆದುಹೋಗಿದ್ದೇವೆ. ಇವತ್ತಿನ ಸಾಪ್ತಾಹಿಕಗಳಲ್ಲಿ ಪ್ರಕಟವಾಗುತ್ತಿರುವ ಕವಿತೆ ಜೀವವಿಲ್ಲದಂತಾಗಿದೆ. ಅನಂತ ಮೂರ್ತಿಯವರ ಮಾತುಗಳನ್ನು ಪುಷ್ಠಿಕರಿಸಿ ಹೇಳಿದಂತೆ " ಸಂಡೇ ಪದ್ಯ"ಗಳಾಗಿ ಇವತ್ತು ಕೊಟ್ಟ ಕವಿಯ ಸಂತಸಕ್ಕೆ ನಾಳೆಗೆ ಇನ್ನಿಲ್ಲದ ಹುಡುಕಾಟದ ಅನಾಥ ಪ್ರಜ್ಞೆಗಳನ್ನು ಮೂಡಿಸುತ್ತಿವೆ.
ನಾವು ನಮ್ಮ ನಮ್ಮ ಸ್ವಾಭಿಮಾನದ ಗತ್ತಿನಲ್ಲಿ ನಮ್ಮತನವನ್ನು ಕಳೆದುಕೊಂಡಾಗ ಸಮಾಜದಲ್ಲಿ ಹೊಸತನ್ನು ಹುಡುಕಿ ಕೊಡುವುದಾದರೂ ಏನು? ಇದು ನರಸಿಂಹ ಸ್ವಾಮಿ ಅವರ ಪ್ರಶ್ನೆ. ಹಾಗೇ ಆಗಿದೆ ಇಂದಿನ ಕವಿತೆ ಕಟ್ಟುವ ಪರಿ. ಸೋಷಿಯಲ್ ಐಡೆಂಟಿಗಾಗಿ ಹುಟ್ಟಿದ ಕವಿತೆ  ಯಾವುದನ್ನೂ ಉಳಿಸಲಾರದು. ಅನಂತ ಮೂರ್ತಿಯವರು  ಹೇಳಿದಂತೆ ಮನುಷ್ಯನಿಗಿರುವುದು  ದೊಡ್ಡ  ಅಪಾಯ ಅಂಹಕಾರ..  ಅವನ ನಾನೆಂಬ ಗತ್ತಿನಲ್ಲಿ  ಕೃತಕವಾದ ಘನತೆ ಸತ್ಯವನ್ನು ಮರೆಮಾಚುತ್ತದೆ.
ಒಂದು ಭಾವಚಿತ್ರ ನೋಡಿದಾಗ ಮೂರ್ತಗೊಳ್ಳುವ ಭಾವ, ಭಾವಚಿತ್ರವಿಲ್ಲದೆಯೂ ಭಾವಚಿತ್ರದಂತೆ ಮೂರ್ತಗೊಳ್ಳುವುದು ಹೇಗೆ? ಅದು ಪದ ಬಳಕೆ. ಅದಕ್ಕೆ ಉದಾಹರಣೆಯಾಗಿ ಕಂಬಳಿ ಹುಳು ಕೋಶಾವಸ್ಥೆಗೆ ಜಾರುವ ಮುನ್ನ ಬರುವ ಸ್ಥಿತಿಗಳು, ಅದರ ನಂತರದ ತನ್ನ ಕಣ್ಣು ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಹಾಕಿ ಯೋಗಾಸನದ ಭಂಗಿಗೆ ಬಂದ ಆಧ್ಯಾತ್ಮಿಕ ನಿಜ ಸ್ವರೂಪವನ್ನು ವ್ಯಕ್ತಗೊಳಿಸಿದ ಭಾವಸ್ರಾವದ ಪದ ಬಳಕೆ ಕವಿತೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಚಪ್ಪಾಳೆ ತಟ್ಟಬೇಕಾಗಿರುವುದು ಕಂಬಳಿ ಹುಳುವಿನ ಬಗ್ಗೆ ಸಾಹಿತ್ಯಕ ಅನ್ವೇಷಣೆ. ಅದು ಭಾವಚಿತ್ರವನ್ನು ಅನಾವರಣಗೊಳಿಸುತ್ತವೆ. ಕೆ. ಪಿ. ಸುರೇಶರ ಕವಿತೆ ಹೀಗೆ ತೆರೆದು ನಿಲ್ಲುವುದನ್ನು ಅವಲೋಕಿಸಿದಾಗ  ಡಾ.ಅನಂತಮೂರ್ತಿಯವರ ಓದಿನ ಪಟ್ಟಿಗೆ ಸಿಗದ ಕವಿತೆಗಳ ಒಳ ಹೊಕ್ಕುತ್ತೇನೆ. ಏನದು?
ಹಳೆ ಕೊಡೆಗಳ ಬಗ್ಗೆ ಒಂದು ಕವಿತೆ ಬಂದಿದೆ. ಮಳೆಗೆ ನಾವುಗಳು ಕೊಡೆ ಹಿಡಿಯುತ್ತೇವೆ, ಬಿಸಿಲು ಬಂದಾಗ ಹೆಂಗಸರು ಬಣ್ಣದ ಕೊಡೆ ಹಿಡಿದು ಹೋಗುವುದು ವಾಡಿಕೆ. ಕೊಡೆ ತೆರೆದು ಅದರ ಮೇಲ್ಭಾಗ ನೋಡಿದಾಗ
ಎಂಟು ದಿಕ್ಕುಗಳಿಗೂ ಚಾಚಿ ಕೊಕ್ಕೆ
ಕಡ್ಡಿಗಳೊಳಗೆ ಎಂಥ ಅರಳಿದ ಕಮಲ !
ಕಮಲದ ಹೂವೇ ಈ ಕವಿತೆ ಅಂತ ಕೊಡೆಯೊಳಗೆ ಕುಳಿತು ಮತ್ತಷ್ಟು ಒಳ ಹೊಕ್ಕಿ ಇಣುಕಿದ್ದೇನೆ. ಆಗಸದ ಚಪ್ಪರದಲಿ ಏಳು ಬಣ್ಣಗಳ ಕಾಮನ ಬಿಲ್ಲನ್ನು ಕಂಡ ಕಣ್ಣು, ಕೊಡೆಯೊಳೆಗೆ  ಕಾಣುವುದು ಸರಿ. ಏಕೆಂದರೆ ಕೊಡೆಯನ್ನು ಹಿಡಿದು ಅದರ ಕೇಂದ್ರ ದಂಡದಲ್ಲಿ ಮಳೆಯನ್ನು  ತಡೆದಿದ್ದೇನೆ ಅನ್ನುವ ಹಂಬಾಕು..! ಅದು ಸತ್ಯ ಅಲ್ಲ ಅಂತ ಗೊತ್ತಿತ್ತು. ಮಡಿಸಿಟ್ಟು ಕಂಕುಳಿಗಿಸಿ ನಡೆದಾಗ ಅರಿವಾಗಿದ್ದು , ಮಸಣದ ಯಾತ್ರೆಗೆ ಈ ಕೊಡೆ  ಪ್ರೇತಾತ್ಮಕ್ಕು ಹಿಡಿದಿತ್ತು ಅನ್ನೋದು. ದುಃಖ್ಖ ಮಡುಗಟ್ಟುತ್ತದೆ ಅಲ್ಲಿರುವ ಮನುಷ್ಯನ ಮಸಣ ಯಾತ್ರೆಯ ಸೌಭಾಗ್ಯಕೆ. ಹೌದಲ್ವ..! ಆಗಸದ ಕೊಡೆಗೆ ಎಂಟು ದಿಕ್ಕುಗಳನ್ನು ಹೆಣೆದರೂ ಭೂಮಿಗೆ ಕೊಡೆ ಹಿಡಿದ ಅಂಭರದ ಬಗ್ಗೆ ಯಾರೂ ವಿಚಾರಿಸಲಿಲ್ಲ..ಸೂರ್ಯನಾದರೂ ಬಿರು ಬೇಸಿಗೆಯಲ್ಲೂ  ಬೆವರು ಸುರಿಸಿದ ಪರಿ ಚದುರಿ ನಿಂತಿರುವ ಬಣ್ಣದ ಕೊಡೆಯೊಳಗೆ ಧರಣಿಯ ಲಾವಣ್ಯಕ್ಕೆ ಸಡ್ಡು ಹೊಡೆದು ಕೊಂಚ ಸೌಂದರ್ಯವೆಚ್ಚಿಸಿದೆ. ಅಂತೂ ಸೂರ್ಯ ಬಿಸಿ ಮುಟ್ಟಿಸದೇ ಇರಲಾರ. ಹೇಗಾದರೂ ಕೊಡೆಯ ಅಡ್ಡಗೋಡೆಯನ್ನೂ ಮೀರಿ. !
ಕವಿತೆಗಳನ್ನು ಲೆಕ್ಕವಿಲ್ಲದಷ್ಟೂ ಬಾರಿ ಕಳೆದೆ ಎಂಟು ವರ್ಷಗಳಲ್ಲಿ ಓದಿದ್ದೇನೆ. ಬಾಳೆ ಹಣ್ಣು ತಿನ್ನುವಾಗಲೆಲ್ಲ ಬಾನೆತ್ತರಕೆ ಅಡರಿ ,ಹೀಗೆ ಚಿಗಿತು, ಕೈಚಾಚಿ, ಗೊನೆ ಹೆರಿಗೆಗಾಗಿ ಬಾಗಿದ ಬಾಳೆ ಗಿಡದ  ಬಗ್ಗೆ ಆಲೋಚಿಸಿದ್ದೇನೆ. ಬಾಳೆಗೇಕೆ ರೆಂಬೆಗಳಿಲ್ಲ ? ದ್ರಾಕ್ಷಿ ಹಣ್ಣುಗಳು, ಕಾಫಿ ಹಣ್ಣುಗಳು, ಕರಿಮೆಣಸು ಬಳ್ಳಿಗಳು, ಬಾಳೆ ಹಣ್ಣುಗಳ ಶಿಸ್ತನ್ನು ಕಂಡು ಅಚ್ಚರಿಸಿಗೊಂಡಿದ್ದೇನೆ. ಚಿಪ್ಪಲ್ಲಿ ಶಿಸ್ತಾಗಿ ನಿಂತ ಬಾಳೆ ಹಣ್ಣುಗಳಿಗೆ " ಕದಳಿಗೊಂದು ಕವನ" ಬರೆದ  ಕೆ. ಪಿ. ಸುರೇಶರು ತಾವೇ ಬಾಳೆಯಾಗಿ, ಮಾತಾಡುತ್ತಾರೆ.
ಒಂದು ಪಿಳ್ಳೆ
ನೆಲವ ಭೇದಿಸಿ ಮತ್ತೆ....
ಎಲ್ಲ ಹೀಗೆ, ಮೃದು ಸಾತ್ವಕತೆಯೆಂದೂ
ಸ್ವಭಾವ ಬಿಡದು
ಇನ್ನೇಕೆ ರೆಂಬೆಗಳು?
ಬೆಳಿಗ್ಗೆ ಎದ್ದು  ಮನೆಯ ಹೊರಗೆ ಬಂದಾಗ ಅಂಗಳದಲ್ಲಿ ಹಲವು ಸೋಜಿಗಗಳು , ಮನೆಯ ಹಿತ್ತಲಿಗೆ ಬಂದಾಗ ಇನ್ನಷ್ಟು ಅವಿತು ಕುಳಿತ ವಿಸ್ಮಯಗಳು ಎದೆಯೊಳಗೆ ಕುಳಿತು ಒಂಟಿಯಾಗಿ ಮರ್ಮರವಾದಾಗ ಒಂದಷ್ಟು ಖಾಲಿ ಮಾಡುವ ಅಥವಾ ಇನ್ನಷ್ಟು ಅಂದಗೊಳಿಸುವ ಇರಾದೆಯಿತ್ತು.  ಅಸ್ತವ್ಯಸ್ತ ಮನಸ್ಸಿನ ಕಿಟಕಿಗಳ ಕದ ತೆರೆದು ಭಾವಗಳನ್ನು ಸ್ವಾಗತಿಸಿದ ಪರಿಗೆ ವಿಸ್ಮಯಗೊಂಡಿದ್ದೇನೆ. ಸುರೇಶರಿಗೆ ಒಂದೇ ಒಂದು ದಾರಿಯಿದ್ದದ್ದು ಪದಗಳ ಲಾಲಿತ್ಯ. ದುಃಖ್ಖಗಳನ್ನು  ಪದಗಳಲ್ಲಿ ಅವರ ಕೈಗಳು ತೊಟ್ಟಿಲು ತೂಗಿದವು. ಈ ಪದಗಳಲ್ಲಿ ಲಾಲಿತ್ಯ ಹಾಡಿದ ಬೆರಳುಗಳ ಬಗ್ಗೆ  ಅಚ್ಚರಿಗೊಂಡಿದ್ದಾರೆ. ಈ ಬೆರಳೇಕೆ ಹೀಗೆ? ಮುಷ್ಠಿ ಬಿಗಿಯುವಾಗ ನರ ಸೆಟೆಯುವುದು. ಮಡಚಿದ ನಾಲ್ಕು ಬೆರಳುಗಳು ಹೆಬ್ಬರಳಿನ ಅಜ್ಞೆಗೆ ಸೋಲುತ್ತವೆ. ಕೊಂಚ ಸಡಿಲಿಸಿದರೆ ಬೆರಳುಗಳು ಸಂತಸಗೊಳ್ಳುತ್ತವೆ. ಇದೇ ಸಂತಸದಲ್ಲಿ  ದೂರದ ಚಂದಿರನನ್ನು ಕರೆಯುತ್ತವೆ, ಹಾಗೇ ಮೂರು ಬೆರಳುಗಳು ಗುಲಾಬಿ ಹೂವನ್ನು ಎತ್ತಿ ಮೂಗಿಗೆ ತಂದಾಗ ಇನ್ನೊಂದಷ್ಟು ವಿಸ್ತಾರಗೊಳ್ಳುತ್ತವೆ ಭಾವಗಳು
ನಾಲ್ಕು ಸೇರಿ ಹೆಬ್ಬೆಟ್ಟು ಬಾಗಿದತ್ತ
ತರ್ಪಣ ಬಿಡಲಿ ಸಂದ ಹಿರಿಯರಿಗೆ !
ಬೆರಳುಗಳು ಈಗ ಬೆಲೆ ಕಂಡುಕೊಂಡಂತಾಗಿದೆ ಈ ಕವಿತೆಯಲ್ಲಿ. ನೂರಂಶ ಕೃಷಿಕರಾದ ಕವಿ  ಹಾಗೇ ಮತ್ತೆ ಅದೇ ಐದೂ ಬೆರಳುಗಳನ್ನು ಸೇರಿಸಿ ಹಸಿ ಮಣ್ಣಲ್ಲಿ  ಬೀಜ ಬಿತ್ತಿದ್ದಾರೆ, ಬಿಸಿಲಿಗೆ ದುಡಿದು ಬೆವರು ಸುರಿದು ದೇಹ ತುರಿಸಿದಾಗ, ಅದೇ ಬೆರಳುಗಳಿಂದ ನಿರುದ್ದಿಶ್ಯ ಸುಖಕೆ ತನ್ನ ಬೆನ್ನನ್ನು ಕೆರೆದುಕೊಂಡಿದ್ದಾರೆ. ಅದೇ ಹೊಲದಿಂದ ಮನೆಗೆ ಬಂದು ಕಾಫಿ ಕುಡಿಯುವಾಗ, ಲೋಟದ ಬಾಯಿಗೆ ಮುತ್ತಿಟ್ಟ ನೊಣವನ್ನು " ಬಾ"  ಎಂದು ಕರೆದು  ಮೀಸೆಯನ್ನಷ್ಟೇ ಇಳಿಸು, ಕಾಲು ಕುಣಿಸು ಎಂದು ಹೇಳಿದವರು, ನೀನೇಷ್ಟು ಹಗುರ ಜೀವಿ ಎಂದು ಮತ್ತೆ ಅದನ್ನೇ ಪ್ರಶ್ನಿಸುತ್ತಾರೆ.  ಮತ್ತೆ  ತಮ್ಮ ಊಟವಾದ ಮೇಲೆ  ಕುಡಿವ ದ್ರಾಕ್ಷಿ ರಸದ ಲೋಟದ ಮೇಲೆ ಕುಳಿತ ಅದೇ ನೊಣ, ಆಯಾ ತಪ್ಪಿ ಬಿದ್ದು ಸತ್ತು ತೇಲುತ್ತಿದ್ದಾಗ ಹೀಗೆ ಮಾತಾಡುತ್ತಾರೆ " ನಾನು ಈ ಕಪ್ಪಿನಂಚನಷ್ಟೇ ತುಟಿಗೆ ತಾಗಿಸಿ ಕುಡಿಯುವೆನು, ಅರಿವಿನ ನಿಧಾನದಲಿ ಸಾವ ಅಷ್ಟಷ್ಟೇ ತಬ್ಬಲು...!
ಕವನ ಇದರ ಬಗ್ಗೆ ಬೇಕಾದಷ್ಟು ಗ್ರಂಥಗಳುಹಿರಿಯರ ಮಾತುಗಳು ನಮಗೆ ಪಾಠ ಮಾಡುತ್ತವೆ. ಸಣ್ಣ ಕಥೆಗಳೂ ಕವಿತೆಗಳಲ್ಲಿ ಅಡಗಿಸಿಕೊಳ್ಳಲಾಗದ್ದನ್ನು  ಎದೆಗೆ ನುಗ್ಗಿಸುತ್ತವೆ. ನನಗೆ ಕವಿತೆಯ ಬಗ್ಗೆ ಅಚ್ಚರಿಸಿ ಮೂಡಿಸಿದ ವಿಚಾರ, ಈ ಕವಿತೆ ಅಂದರೆ ಏನದು ಅಂತ. ಹಲವು ಕವಿತೆಗಳನ್ನು ಓದುವಾಗ ನಾನೇ ಅಲ್ಲಿದ್ದೇನೆ ಅನ್ನಿಸಿತು. ಅದೇ ಕವಿತೆಯ ಶಕ್ತಿಯೋ ? ಅಂದರೆ ಹತ್ತು ಕೋನಗಳಲ್ಲಿ ಉತ್ತರವಾಗುವುದು.ಓದುತ್ತಿದ್ದಂತೆ ಸಂಗೀತದಂತೆ  ಭಾಸವಾಗುತ್ತವೆ. ನಾವು ನಡೆದ ಬದುಕಿನ ಹತ್ತು ಹಲವು ಘಟ್ಟಗಳಲ್ಲಿ ಅರೋಹಣಗಳು ಅಲ್ಲಿ ಕಂಡು ಬರುತ್ತವೆ.ಕೆಲವು ಗೊತ್ತಿಲ್ಲದಂತೆ , ಗೊತ್ತಿದ್ದಂತೆ ಹೇಳುತ್ತಿರುತ್ತವೆ. ನನಗನ್ನಿಸಿತು ಕವಿತೆ ಗೊತ್ತಿದ್ದು ಗೊತ್ತಿಲ್ಲದೆ ಭಾಸವಾಗುವ ಭಾವ. ಒಮ್ಮೆ ತೆರೆದು ಮತ್ತೊಮ್ಮೆ ಒಳಗಣ್ಣನ್ನು ತೆರೆದು  ಪಲ್ಲಟವಾಗುತ್ತಲೇ ಇರುವಂತಹವು. ಕವಿತೆಗೆ ಒಂದಷ್ಟು ಭಾಷ್ಯ ಬರೆದಾಗ ಕನ್ನಡಿಯ ಮುಂದೆ ನಿಂತು, ಅಲ್ಲಿರುವ ಪ್ರತಿಮೆ ನಾವಾಡಿಸಿದಂತೆ ಆಡುತ್ತಿದೆ. ಎಷ್ಟೇ ತುಳಿದರೂ ರಚ್ಚೆ ಹಿಡಿದು ಹಿಂಬಾಲಿಸಿ ಕಾಡುತ್ತಿರುವ ನೆರಳು.ಅದು ಕವಿತೆ. ಹತ್ತು ಕೋನಗಳಲ್ಲಿ ಎದೆ ತೆರೆದು ಬಿಡುವಂತಹದ್ದು.
2006 ರಲ್ಲಿ ಕೊಲ್ಲಿ ರಾಷ್ಟ್ರ ಬಹರೈನ್‍ಗೆ  ಕೇರಳದ ಮಾರ್ಗದಲ್ಲಿ ಹೋಗುವಾಗ ಕ್ಯಾಲಿಕಟ್‍ನಲ್ಲಿ ಎರಡು ದಿನ ಉಳಿದುಕೊಂಡಿದ್ದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ. ವಾಸುದೇವನ್ ನಾಯರ್ ಅವರು ಇದೇ ಸ್ಥಳದಲ್ಲಿ ಇದ್ದಾರೆ ಅನ್ನುವ ವಿಚಾರ ಗೊತ್ತಿತ್ತು. ಸಿಕ್ಕಿದ ಅವಕಾಶಕ್ಕಾಗಿ ಅವರನ್ನು ಭೇಟಿ ಮಾಡಿದ್ದು ಒಂದು ನೆನಪಿಗೆ  ಉತ್ತರವನ್ನು  ಮೇರು ಮಟ್ಟಕ್ಕೆ ಏರಿಸುತ್ತೇನೆ. ಅವರನ್ನು ಭೇಟಿಯಾಗಿದ್ದೇ ತಡ "ನೀವು ಕನ್ನಡದವರು, ನಿಮಗೆ ಮಲಯಾಳಂ ಹೇಗೆ ಬರುತ್ತದೆ" ಅನ್ನುವುದು ಅವರ ನೇರ ಪ್ರಶ್ನೆಯಾಗಿತ್ತು . ಶ್ರೇಷ್ಠ ಕಾದಂಬರಿ "ಕಾಲ" ದ  ಕೆಲವು ಘಟ್ಟಗಳ ಸಾಲಿನಲ್ಲಿ ಪಾತ್ರಧಾರಿ ಕೇಳುವ ಧಾಟಿ ಅಲ್ಲಿದೆಯೋ ಅನ್ನಿಸಿತು.ಏಕೆಂದರೆ, ಅಲ್ಲಿ ನಾನೇ ಇದ್ದೆ. ಕೊಡಗಿನ ವೀರಾಜಪೇಟೆಯ ಹೆಸರು ಹೇಳಿದಾಗ ತಲೆಯಾಡಿಸಿದ್ದರು. ಅಕೃತಿ ಸಣ್ಣದಾಗಿ ಕಂಡಿತು. ಅಷ್ಟೇ ಇರುವುದು ಕೇರಳ ಸಂಸ್ಥಾನದ ಹಲವು ಮೂಕ ಜೀವಿಗಳ ಮನ ಹೊಕ್ಕು ಮಾತಾಡಿದ ಕಥೆಗಾರ. ನನ್ನಲ್ಲಿ ಕೇಳಿದ್ದರು " ನೀವೆಲ್ಲಾ ಕವಿತೆ ಹೇಗೆ ಬರೆಯುತ್ತೀರಿ? " ಅಂತ. ಒಂದೆರಡು ಮಲೆಯಾಳಂ ಭಾಷೆಯಲ್ಲಿ ಭಾವ ವಿಸ್ತರಿಸಿ ಕವಿತೆಗಳನ್ನು ಹೇಳಿದ್ದೇ ತಡ, ಬಾಳೆ ಹಣ್ಣುಚಹಾದೊಂದಿಗೆ ಕೈ ಬಾಯಿ ಒಂದಾಗಿಸಿ ಮಾತಾಡಿದ್ದಾರೆ. " ನನಗೆ ಕವಿತೆ ಬರೆಯುವವರನ್ನು ಕಂಡರೆ ಹೊಟ್ಟೆಕಿಚ್ಚು " ಅಂತ ನಗು ಉಕ್ಕಿಸಿದರು. ಹಲವು ಬಾರಿ ಪ್ರಯತ್ನ ಪಟ್ಟೆ, ಅದು ಸಾಧ್ಯವಾಗದ ವಿಚಾರವಾದಾಗ ಸಣ್ಣ ಕಥೆಗಳು ನನಗೆ ಸಾಥ್‍ ನೀಡಿದವು ಅಂತ ಎಂಟಿವಿ  ತೆರೆದು ಹೇಳಿದರು. ಕೇರಳದ ಅಳಿಯಕಟ್ಟು ಸಂಪ್ರದಾಯದ  ಉಸಿರು ಬಿಗಿದು ಬದುಕಿದ ಹಲವು ಜೀವಗಳ ಮನಸ್ಸಿಗೆ ನುಗ್ಗಿ ಮರ್ಮರಗಳನ್ನು ಅನಾವರಣಗೊಳಿಸಿದ ಪಾತ್ರಗಳು ಇಂದು ಸಮಾಜದಲ್ಲಿ ಕಾಣುತ್ತಿದ್ದೇನೆ. ಇಲ್ಲಿ ಇರುವ ಒಂದೇ ವ್ಯತ್ಯಾಸ, ಇದೇ ಮನುಷ್ಯರ ನಿತ್ಯ ಚಟುವಟಿಕೆಗಳಲ್ಲಿ  ಹಾಸುಹೊಕ್ಕಾದ  ಹಲವು ಪುನರಾವರ್ತನೆಯಾಗುವ ಸಂದರ್ಭಗಳನ್ನು ಒಂದೂ ಬಿಡದೆ ತೆರೆದಿಟ್ಟ  ಕೆ. ಪಿ.ಸುರೇಶರು ನೆನಪಾಗುತ್ತಾರೆ.ಬರೆದ ಬರವಣಿಗೆ ಓದುಗನಿಗೆ ಇಷ್ಟು ಕೊಟ್ಟರೆ ಸಾಕು. ಸದಾ ಸಮಾಜದ ಪಾತ್ರಗಳಲ್ಲಿ ಎದ್ದು ಕಾಣುತ್ತಾರೆ.
ಮಳೆಗೆ ಗೊರಬೆ ಹೊತ್ತ ಆ ಮುದುಕಿಯನ್ನು ಕೂರ್ಮಾವತಾರಿ ಎಂದಾಗ, ಅವಳ ನಡೆಗೆ ಜಗತ್ತನ್ನೇ ಝಲ್ಲೆನಿಸಿದ  ಭಾವ ವಿಧಾನ, ಹಲವು ಬಾರಿ  ಪುಟ ತೆರೆದಾಗಲೆಲ್ಲಾ  ಅಲ್ಲಿರುವ ಹೂವಗಳನ್ನು ಬೆರಳ ಸ್ಪರ್ಶಕ್ಕದ್ದಿ ಗಂಧವಿಲ್ಲದ್ದಲ್ಲಿ, ಗಂಧ ಲೇಪಿಸಿ, ಇಲ್ಲದಿದ್ದರೆ ಬರೇ ಬಣ್ಣಗಳಲ್ಲಿ ಹನಿ ತೊಟ್ಟಿಕ್ಕಿಸಿದ  ಕ್ಷಣಗಳು ಕಾಲ ಕಾಲಕ್ಕೂ ನಿಲ್ಲುವಂತಹದ್ದು. ಈಗ " ದಡ ಬಿಟ್ಟ ದೋಣಿ" ಯ ಪ್ರಯಾಣವನ್ನು ಕಣ್ಣೆತ್ತಿ ಮತ್ತೊಮ್ಮೆ ನೋಡುತ್ತಿದ್ದೇನೆ. ಅಲ್ಲಿಯ ನಾವಿಕ ನಾನೇ ಆಗುತ್ತೇನೆ, ದಡ ಸಿಗುವವರೆಗೆ...! 
-----------------------------------------------------------------------------------------


'ದಡ ಬಿಟ್ಟ ದೋಣಿ' ಯ ಪ್ರಯಾಣದ ಪದ್ಯಗಳು !

ನಾನು ಮೊದಲ ಬಾರಿಗೆ ಬಂಟಮಲೆಯಲ್ಲಿ ಇವರ ಮನೆಗೆ ಹೋದಾಗ,ಮರದ ಕುರ್ಚಿಗೆ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದರು.ಗೆಳೆಯ ದಿನೇಶ್ ಕುಕ್ಕುಜಡ್ಕ ,ಹರೀಶ್ ಕೇರ ಮತ್ತು ನನ್ನನ್ನು ನೋಡಿದ್ದೇ ತಡ ಬಾಯಿ ಕೆಂಪಗೆ ಮಾಡಿ ನಕ್ಕಿದ್ದು ಬಿಟ್ಟರೆ, ಅಲ್ಲಿ ಅಪರಿಚಿತ ಎಂಬ ಲವಶೇಷವೂ ಇರಲಿಲ್ಲ. ಭಾವವನ್ನು ಸಲೀಸಾಗಿ ಸ್ವಾಗತಿಸುವ ರೀತಿ ಅದು.ಬದುಕಿನ ಪಯಣದಲ್ಲಿ ತೇಲುತ್ತಿರುವ ದೋಣಿಯ ತಳಪಾಯದಲ್ಲಿ ಹುದುಗಿಸಿಕೊಂಡ ಭಾವ ಸ್ಥಿರತೆಯನ್ನು ಕಂಡುಕೊಂಡಿದ್ದೇನೆ.

4 ಕಾಮೆಂಟ್‌ಗಳು:

  1. ಕವಿತೆ ಅಂದರೆ ಹೇಗಿರಬೇಕು ಎಂಬುದನ್ನು ತುಂಬಾ ಚೆಂದವಾಗಿ ವಿಸ್ತರಿಸಿದ್ದೀರಾ ರವಿಯವರೇ , ನಿಮ್ಮ ವಿಮರ್ಷಣೆಯ ಬರವಣಿಗೆಗಳು ಹಾಗೂ ಕೆ ಪಿ ಸುರೇಶರವರ ಕವನಗಳು ಯುವಸಾಹಿತಿಗಳಿಗೆ ಸ್ಪೂರ್ತಿಯಾಗಿರಲಿ .

    ಪ್ರತ್ಯುತ್ತರಅಳಿಸಿ
  2. ಮೂರು ಸಲ ಓದಿದ್ದೇನೆ ರವಿಯಣ್ಣ. ನಾನು ಬರಹಗಳನ್ನು ಕವನವೆಂದುಕೊಳ್ಳಲೇ ಬೇಡವೇ ಎಂಬ ಭಾವ ನನಗೆ ಬಂದು ನಿಂತಿದೆ. ಒಂದು ದಾರ್ಶನಿಕ, ಮಾರ್ಗದರ್ಶಿ ಲೇಖನ ನನ್ನ ಮಟ್ಟಿಗೆ.

    ಪ್ರತ್ಯುತ್ತರಅಳಿಸಿ
  3. ಗಲ್ಫ್ ಕನ್ನಡಿಗರು ವೆಬ್’ಸೈಟ್ ನಲ್ಲಿ ಓದಲು ಮಿಸ್ ಆಗಿದ್ದರಿಂದ ನಿಮ್ಮ ಬ್ಲಾಗ್ ಗೇ ಲಗ್ಗೆ ಇಟ್ಟು ಹೆಕ್ಕಿ ತೆಗೆದಿದ್ದೇನೆ ರವಿಯಣ್ಣ.. ಲೇಖನದಲ್ಲಿ ಕವಿತೆ, ಕಾವ್ಯ ಮತ್ತು ಸಾಹಿತ್ಯದಲ್ಲಿ ಅಮೂರ್ತವಾದದ್ದೇನನ್ನೋ ಲೇಖಕ ಹುಡುಕುತ್ತಿರುವಂತಿದೆ.. ಹಾಗೇ ಲೇಖಕನ ಮನದಲ್ಲಿ ಶುರುವಾದ ಹುಡುಕಾಟ ಓದುಗನ ಮನದಲ್ಲೂ ಶುರುವಾಗ ಓದುಗನನ್ನು ಹಿಡಿದು ಕೂರಿಸಿ ಓದಿಸಿಕೊಂಡಿದೆ.. ನನ್ನ ಅಸ್ಸೆಸ್’ಮೆಂಟ್ ಟೈಮ್ ನಲ್ಲಿ ಬಂದು ಓದಿದ್ದರೂ ನನ್ನನ್ನು ನಿರಾಶೆ ಮಾಡಿಲ್ಲ ನಿಮ್ಮ ಲೇಖನ.. ಮುಂದಿನ ಸಾಹಿತ್ಯ ಕೃಷಿಗೆ ಒಂದಷ�0�� ರವಿಯಣ್ಣ.. ಲ�ಳುಗಳನ್ನು ಸೇರಿಸಿ ಬುತ್ತಿ ಕಟ್ಟಿಕೊಂಡಿದ್ದೇನೆ.. ಮಾರ್ಗದರ್ಶಿ ಲೇಖನ ರವಿಯಣ್ಣ.. ನಿಮ್ಮ ಸಾಹಿತ್ಯ ಕೃಷಿ ನಿರಂತರವಾಗಿರಲಿ, ನಿಮ್ಮ ಮಾರ್ಗದರ್ಶನ ನನ್ನಂತಹ ನೂರಾರು ಯುವ ಬರಹಗಾರರಿಗೆ ಸಿಗಲಿ..:))

    ಪ್ರತ್ಯುತ್ತರಅಳಿಸಿ
  4. ಅಬ್ಬಾ...! ಕವಿತೆಯ ಹಾದಿಯಲ್ಲಿ ಸಾಗುವ ಬಂಡಿಗಳಿಗೆ ಸರಿ ದಾರಿ ತೋರಿಸುವ ಬರಹ... ಶ್ರೇಷ್ಟ ಲೇಖನ... ನಮ್ಮನ್ನು ಬೆಳೆಸುವವರು ಎಲ್ಲಾದರೂ ಒಂದು ಕಡೆ ಪ್ರೋತ್ಸಾಹಿಸುತ್ತಿರುತ್ತಾರೆಂಬುದು ಸತ್ಯವಾದ ಮಾತು....

    ಪ್ರತ್ಯುತ್ತರಅಳಿಸಿ