ಬುಧವಾರ, ಅಕ್ಟೋಬರ್ 31, 2012

ಆಫ್ರೀಕಾದ ಕ್ಯಾಮರೂನಿನಲ್ಲಿ ಕನ್ನಡದ ಭಾವುಟ ಹಾರುತ್ತಿತ್ತು !



ಕನ್ನಡದ ಭಾವುಟ ಹಾರುತ್ತಿತ್ತು
ಮೇಲೆರೆಡು ಕೋಗಿಲೆ ಹಾಡುತ್ತಿತ್ತು
ಜಯ ಕನ್ನಡ ಮಾತೆ
ವಾತ್ಯಲ್ಯ ದಾತೆ
ಕೆಳಗದರ ನೆರಳು ಕುಣಿಯುತ್ತಿತ್ತು !

ಮಗುವೊಂದು ಕತ್ತೆತ್ತಿ ನೋಡುತ್ತಿತ್ತು
ಅ ಆ...ಇ ಈ.. ಹುಡುಕಿ
ಕನ್ನಡದ ಬಳಪದಲಿ ಬರೆಯುತ್ತಿತ್ತು
ಕನಸೊಂದು ಭಾವುಟದಿ ಮೆರೆಯುತ್ತಿತ್ತು !

ಪಂಪ ರನ್ನ ಬೇಂದ್ರೆ
ಕುವೆಂಪು ಕವಿನುಡಿ ತಂದೆ
ಎದೆಯೊಳಗೆ ಕನ್ನಡ ಬೆಳೆಯುತ್ತಿತ್ತು
ಕಾರಂತಜ್ಜನ ಬೆರಳು ನಡೆಸುತ್ತಿತ್ತು. !
ಜಯ ಕನ್ನಡ ಮಾತೆ
ವಾತ್ಸಲ್ಯ ದಾತೆ

ನಡೆದೆಡೆ ನೆಲತೊರೆ ಝರಿ
ಮೈದುಂಬಿ ಕಾವೇರಿ
ನದಿಯಾಗಿ ನರಗಳಲಿ ಹರಿಯುತ್ತಿತ್ತು
ಕಡಲಾಗಿ ನೊರೆ ಉಕ್ಕಿ ಅಲೆಯುತ್ತಿತ್ತು !

ಶಿಲೆಯಲ್ಲಿ ಕಲೆಯಾಗಿ
ಶ್ರೀಗಂಧಕೆ ಮರವಾಗಿ
ನಾಲಗೆಗೆ ಜನಪದ ತೊದಲುತ್ತಿತ್ತು
ಮಳೆ ನೆನೆದು ಹಸಿರಾಗಿ ಉಸುರುತ್ತಿತ್ತು !

ಹೊತ್ತಗೆಯಿದು ಶಾರದೆ
ಪುಟ ತೆರೆದು ಎದೆಗೆ
ತಾಯಿ ಭಾರತಿ ಪೂಜೆಗೆ ಓದುತ್ತಿತ್ತು
ಹಣೆಗೆ ಕನ್ನಡ ತಿಲಕ ಹೊಳೆಯುತ್ತಿತ್ತು !

ಮಗುವೊಂದು ಶಾಲೆಯಲಿ ಹಾಡುತ್ತಿತ್ತು
ಜಯ ಕನ್ನಡ ಮಾತೆ
ವಾತ್ಸಲ್ಯ ದಾತೆ
ಪಟಪಟನೇ ಭಾವುಟ ಹಾರುತ್ತಿತ್ತು
ಕೆಳಗದರ ನೆರಳು ಕುಣಿಯುತ್ತಿತ್ತು !
-ರವಿ ಮೂರ್ನಾಡು


2 ಕಾಮೆಂಟ್‌ಗಳು:

  1. ಇದಕಿಂತಲೂ ಖುಷಿಯ ವಿಚಾರ ಬೇರಿಲ್ಲ. ಹುಟ್ಟಿದ ಕರು ನಾಡಲ್ಲೇ ಅಭಿಮಾನ್ಯ ಶೂನ್ಯರಾದ ನಮಗಿಂತ ನೀವೇ ಅಪ್ಪಟ ಕನ್ನಡಾಭಿಮಾನಿಗಳು.

    ನಿಮ್ಮ ಸಾಹಿತ್ಯ ಸೇವೆ ಮತ್ತು ಕನ್ನಡ ಪ್ರೀತಿಯು ಇತರರಿಗೂ ಮಾದರಿಯಾಗಲಿ.

    ರಾಜ್ಯೋತ್ಸವ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಕ್ಯಾಮರೂನ್ ಎಷ್ಟೇ ದೂರ ಇದ್ದರೂ , ನೀವು ನಮಗೆ ಹತ್ತಿರದಿಂದಲೇ ಕಾಣುತ್ತೀರಿ ರವಿಯಣ್ಣ,ನೀವು ಕನ್ನಡದ ,ಕರ್ನಾಟಕದ ಆಸ್ತಿ . ದೂರದ ಊರಿನಲ್ಲಿ ಕನ್ನಡದ ಕಹಳೆ ಊದುತ್ತಿರುವ ನಿಮ್ಮ ಹುಮ್ಮಸ್ಸು ಇಮ್ಮಡಿ ಗೊಳ್ಳಲಿ ,ನಮ್ಮಂತಹ ಕಿರಿಯರಿಗೆ ನಿಮ್ಮಿಂದ ಪ್ರೋತ್ಸಾಹ ,ಬೆನ್ನು ತಟ್ಟುವಿಕೆ ಸದಾ ಲಭಿಸುತ್ತಿರಲಿ .ಜಯ ಕರ್ನಾಟಕ ಮಾತೆ

    ಪ್ರತ್ಯುತ್ತರಅಳಿಸಿ