ಬುಧವಾರ, ಏಪ್ರಿಲ್ 20, 2011

ಕವಿತೆ ಹುಟ್ಟಲಿಲ್ಲ

·         ರವಿ ಮೂರ್ನಾಡ್‍
ಕವಿತೆ ಹುಟ್ಟಲೆಂದು
ಕವಿದ ಕಾರಿರುಳಿನಲಿ
ಸುತ್ತ ಕತ್ತರಿಸುವ ಕತ್ತಲೆಯ
ಕಪ್ಪನ್ನೊದ್ದು
ಕರಿ ನೆರಳಾಗಿ ಕಾಯುತ್ತಿದ್ದೆ
ಮನಸ್ಸಿಗೂ- ಕಲ್ಪನೆಗೂ ಮಧ್ಯೆ
ಮೋಹದ ಬಲೆ ಬೀಸುತ್ತಿದ್ದೆ
ಕವಿತೆ ಹುಟ್ಟಲಿಲ್ಲ...!

ಆ ಕಾರಿರುಳಿನ ಎಷ್ಟೋ ರಾತ್ರಿ
ಋತುಚಕ್ರದ ಬಂಧನದಲ್ಲಿ
ಮೊನ್ನೆ-ಮೊನ್ನೆಯವರೆಗೂ
ಮನಸ್ಸಿಗೆ ಮುಟ್ಟು ನಿಂತಿತ್ತು !

ಶಭ್ಧಗಳ ಒರೆತದಲಿ
ಗದ್ದಲದ ತೀವ್ರತೆಯಲಿ
ದುಃಖ್ಖದ ಮೊರೆತದಲಿ
ಗರ್ಭಸ್ರಾವವಾಗಿತ್ತು..!

ಮನಸ್ಸು ಬಿರಿಯಲೇ ಇಲ್ಲ
ಕಲ್ಪನೆಯ ಮೈ ಸವರಲಿಲ್ಲ
ಮುದ್ದು ಕವಿತೆ ಹುಟ್ಟಲೇ ಇಲ್ಲ..!

ಬಿಳಿ ಹಾಳೆಯ ತೊಟ್ಟಿಲನು
ಲೇಖನಿಯ ದಾರ ತೂಗಲಿಲ್ಲ
ಜೋಗುಳದ ಹಾಡು ಹಾಡಲಿಲ್ಲ
ಕತ್ತಲೆಯ ಕತ್ತರಿಸಿದ ಬೆಳಕು
ಪ್ರಕಾಶಮಾನವಾಗಿ ಉರಿಯಲಿಲ್ಲ..!

ಈ ನೀರವತೆಯಲಿ
ಉಸಿರು ಪಿಸುಗುಟ್ಟುತ್ತಿದೆ
ಕಣ್ಣು ಭಾವನೆಯ ಬೆನ್ನೆಟ್ಟಿದೆ
ಕಲ್ಪನೆಯ ಹುಡುಕುತ್ತಿದೆ
ಮನಸ್ಸಿಗೆ ಬೇಗೆ ಬಂದಿದೆ..!

ಒಂಟಿ ಮನಸ್ಸಿಗೆ
ಕಲ್ಪನೆಯ ಬೆಸುಗೆ ಬೆಸೆಯಲೇ ಇಲ್ಲ
ಅವರಿಬ್ಬರ ಸಂಗಮವಾಗಳೆ ಇಲ್ಲ
ನನ್ನ ಮುದ್ದು ಕವಿತೆ ಹುಟ್ಟಲೇ ಇಲ್ಲ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ