ಭಾನುವಾರ, ಸೆಪ್ಟೆಂಬರ್ 16, 2012

ನಮ್ಮ ಕವಿತೆ !

ಹಲವು ಜನರ ಮೂಲ ಹುಡುಕಿ
ಅರಿವು ಪಡೆದೆವು!
ನಮ್ಮ ಮೂಲ ಹುಡುಕುವಲ್ಲಿ
ಎಡವಿ ಬಿದ್ದೆವು !

ಹೆತ್ತ ತಾಯಿ ದೇವರೆಂದು
ಮಕ್ಕಳಾದೆವು  !
ಗುಡಿ-ಮಸೀದಿ-ಚರ್ಚು ನುಗ್ಗಿ
ಭಕ್ತರಾದೆವು !

ದೇಹದೊಳಗೆ ಮನವ ಬಿಗಿದು
ಚರ್ಮವಾದೆವು !
ಬೀದಿ ನಡೆಗೆ ಬಣ್ಣ ಬಳಿದು
ಬೆತ್ತಲಾದೆವು !

ಊರು ತಪ್ಪು ನೂರು ಮಾಡಿ
ಜಗಳ ಕಾದೆವು !
ಮನೆಗೆ ಹರಿವ ಕೊಚ್ಚೆ ನೊಣಕೆ
ಎಂಜಲಾದೆವು !

ತಪ್ಪ ಒಪ್ಪಿ ನೆಂಟನೆಂದು
ಮೆಚ್ಚಿಕೊಂಡೆವು !
ನಮ್ಮ ನಮ್ಮ ತಪ್ಪುಗಳನು
ಮುಚ್ಚಿಕೊಂಡೆವು !

ನಮ್ಮವರ ಕತ್ತಲೆಗಳಿಗೆ
ದೀಪವಾದೆವು !
ನಮ್ಮ ಮನದ ಕೋಣೆಯಲ್ಲಿ
ಕತ್ತಲಾದೆವು !

ಹಲವು ಜನರ ಯಾತ್ರೆಯನ್ನು
ನೋಡುತ್ತಿದ್ದೆವು !
ನಮ್ಮ ಯಾತ್ರೆಯನ್ನು ನಾವೇ
ಕಾಣದಾದೆವು !
-ರವಿ ಮುರ್ನಾಡು

3 ಕಾಮೆಂಟ್‌ಗಳು:

  1. ಹರ್ಷದ ಕೂಳು ನೋಡಿ
    ವರ್ಷದ ಕೂಳು ಕಳಕೊಂಡ್ರು

    ಅನ್ನುವಂತೆ, ನಾವು ನಮ್ಮದಲ್ಲದ ಬದುಕನ್ನೇ ಅಮೋಘ ಎಂದೆಣಿಸಿ, ಕಣ್ಣ ಮುಂದಿರುವ ಸ್ವರ್ಗವನ್ನು ಎಡಗಾಲಲ್ಲೇ ಒದೆಯುತ್ತಿರುತ್ತೇವೆ.

    ಮನೋಚಿಕಿತ್ಸಕ, ಸರಳ ಪ್ರಯೋಗ. ಉತ್ತಮ - ಅತ್ಯುತ್ತಮ.

    ಪ್ರತ್ಯುತ್ತರಅಳಿಸಿ
  2. ಸರಳ ಪದಗಳಲ್ಲಿ ಕಟ್ಟಿದ ಗಟ್ಟಿ ಕವಿತೆ., ಹಣತೆಯ ಅಡಿಯಲ್ಲೇ ಕತ್ತಲೆಯ ತವರು..!! ಈ ಸ್ಮಾಜದ ಪ್ರತಿಯೊಬ್ಬರೂ ಪರರ ಅಂಧಕಾರದೆಡೆಗೆ ಬೆರಳು ಮಾಡಿ ತೋರಿಸುವುದರ ಬದಲು., ನಮ್ಮೊಳಗಿನ ತಮೋ ವಿಕಾರಗಳ ತೊಡೆಯುವ ಕೆಲಸಾವಾದರೆ., ಎಲ್ಲೆಲ್ಲೂ ಪ್ರಭಾವಳಿಯ ಸಿಂಚನವಾಗುವುದು..

    ಪ್ರತ್ಯುತ್ತರಅಳಿಸಿ