ಮಂಗಳವಾರ, ಅಕ್ಟೋಬರ್ 25, 2011

ದೀಪಾವಳಿಗೆ ನಾಲ್ಕು ಮಾತು


-------------------------
ದೀಪದ ಹಬ್ಬದಲ್ಲಿ ಜಗತ್ತಿನ ಅಂಧರ ಹಣತೆ ಕಣ್ಣುಗಳಲ್ಲಿ ಸಂಭ್ರಮದ ಚಿತ್ತಾರ ಮೂಡಲಿ ಎಂಬ ಒಂದು ಪ್ರಾರ್ಥನೆ ಚಿಗುರೊಡೆಯಿತು. ಅಂಗವಿಕಲರು -ವಯೋವೃದ್ಧರು - ಪುಟ್ಟ ಕಂದಮ್ಮಗಳಿಗೂ ಆಶಾಕಿರಣದ ಹಣತೆ ಬೆಳಗಲಿ .ಅಕ್ಕ-ಪಕ್ಕದವರ ಪಟಾಕಿಯ ಸಂಭ್ರಮದಲ್ಲಿ ಪಾಲ್ಗೋಳ್ಳಲಾಗದ ಬಡವರ ಕನಸು ಕಣ್ಣುಗಳಲ್ಲಿ ಈ ಹಣತೆ ಬೆಳಗುವ ದಿನಗಳು ಎದುರುಗೊಳ್ಳುವುದನ್ನು ಆಶಿಸುತ್ತೇವೆ.
ಪ್ರೀತಿ- ಸ್ನೇಹ ಮತ್ತು ಮಾನವಿಯತೆಯಿಂದ ಜೀವ ಸಂಕುಲವನ್ನು ಪೋಷಿಸುವ ಲಾಲಿತ್ಯ ಬೇಕು. ರಾಕೇಟ್ ವೇಗದಲ್ಲಿ ಓಡುತ್ತಿರುವ ರೋಬೋಟ್ ಯುಗದಲ್ಲಿ ಅದು ಸಾಧ್ಯವ ಅಂತ ಪ್ರಶ್ನೆ. ಗೆಲುವು ಅನ್ನುವ ಬಿಸಿಲುಗುದುರೆಯ ಬೆಂಬೆತ್ತಿ ಸೋಲು ಅನ್ನುವ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳಲು ನಾವು ಮರೆತಿಲ್ಲ. ದೀಪಾವಳಿಯ ಹಣತೆ ಹಿಡಿದು ನಾವು ಹಬ್ಬಗಳನ್ನು ಆಚರಿಸುತ್ತಿದ್ದೇವೆ.
ಹಣತೆಗಳ ಸ್ವರೂಪವನ್ನೇ ಕಾಣದ ಅಸಂಖ್ಯಾತ ಹಣತೆಗಳು ಕಗ್ಗತ್ತಲೆಯಲ್ಲೇ ಪಟಾಕಿ ಶಭ್ದಗಳನ್ನು ಆಲಿಸುತ್ತಾ, ಸಂಭ್ರಮಿಸುವವರ ಸಂಭ್ರಮವೇ ತಮ್ಮ ಬೆಳಕಿನ ಹಬ್ಬ ಅಂತ ಆಚರಿಸುವ ಅದೇಷ್ಟೋ ಕಣ್ಣಿಲ್ಲದವರಿಗೆ ನನ್ನ ದೀಪಾವಳಿಯ ನಮನಗಳು.ಅವರ ಕಣ್ಣುಗಳು ಈ ದೀಪಾವಳಿಗೆ ಹಣತೆಗಳಂತೆ ತೆರೆದುಕೊಳ್ಳಲಿ.
ರೋಗಗ್ರಸ್ತ ಸಮಾಜದಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ ಉರಿಯುವ ಹಣತೆ, ಹಸಿವಿನ ಕಬಂಧ ಭಾಹುಗಳಲ್ಲಿ ನಲುಗುತ್ತಿರುವ ಹಸಿವಿನ ಕಗ್ಗತ್ತಲ ಲೋಕದಲ್ಲಿ ಒಂದು ಮಾನವೀಯ ಹಣತೆ ಹಚ್ಚುವ ಕಾರ್ಯ ಜನತೆಯಲ್ಲಿ ಉಗಮವಾಗಬೇಕು. ಅದು ಪ್ರೀತಿ ,ಸ್ವ್ನೇಹ - ಮಾನವೀಯ ಮನಸ್ಸಿನಿಂದ ಮಾತ್ರ ಸಾಧ್ಯ. ವಿದ್ಯೆಯಿಲ್ಲದೆ ದಾರಿ ತಪ್ಪುತ್ತಿರುವ ಮನಸ್ಸುಗಳಿಗೆ ಅಕ್ಷರದ ದೀಪ ಹಚ್ಚಿ..ವಿದ್ಯೆಯಿದ್ದರೂ ಕೆಲಸವಿಲ್ಲದೇ ದಾರಿ ತಪ್ಪಿದವರಿಗೆ ಹಣತೆ ಹಚ್ಚಿ..ಕನ್ನಡ ನಾಡಿನಲ್ಲಿ ಕೆಲಸಕ್ಕಾಗಿ ಭಿಕ್ಷಾಟನೆ ನಿಲ್ಲಿಸಿ. ಅದು ಮಾನವೀಯ ಹಣತೆ ಹಚ್ಚಿ ಬೆಳಕು ನೀಡಿ ಸಾಧಿಸುವಂತಹದ್ದು.
ಸಮಾಜದಲ್ಲಿ ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯಕ್ಕೆ ಸದಾ ನಿಮ್ಮ ಬೆಂಬಲವಿರಲಿ. ಜಡ್ಡು ಹಿಡಿದ ಸಮಾಜ, ಕಂದಾಚಾರ- ಗೊಡ್ಡು ಸಂಪ್ರದಾಯದ ಹೆಸರಿನಲ್ಲಿ ದಾರಿ ತಪ್ಪಿಸುವವರ ಬಗ್ಗೆ ಎಚ್ಚರವಿರಲಿ. ತಮ್ಮದೇ ಸ್ವಾರ್ಥ ಚಿಂತನೆಯಿಂದ ಸಮಾಜವನ್ನು ದಿಕ್ಕು ಬದಲಿಸುವ " ಹಿಪ್ನಾಟಿಜಂ" ಪ್ರವೃತ್ತಿಗೆ ಬಲಿಯಾಗದಿರಲಿ ಈ ಜನತೆ. ಅನ್ಯಾಯಕ್ಕೆ ಸದಾ ಸೆಟೆದು ನಿಲ್ಲುವ ಶಕ್ತಿ-ಸಾಮರ್ಥ್ಯ, ಕತ್ತಲೆ ಸವಾಲೊಡ್ಡುವ ದೀಪಾವಳಿ ಹಣತೆಗಳು ಮನ- ಮನದಲ್ಲಿ ಬೆಳಕ ಚೆಲ್ಲಲಿ.
-ರವಿ ಮೂರ್ನಾಡು.

8 ಕಾಮೆಂಟ್‌ಗಳು:

  1. ದೀಪಾವಳಿಯ ಶುಭ ಸಂದರ್ಭದಲ್ಲಿ, ಒಂದು ಅರ್ಥಗರ್ಭಿತ, ಸಮಾಜಮುಖಿ ಲೇಖನ...
    ಮುಂದುವರಿಯುತ್ತಿರುವ ದೇಶದಲ್ಲಿನ ಕೆಲ ಸ್ತರದಲ್ಲಿನ ಜನರ ಕುರಿತು ನಮ್ಮಲ್ಲೊಂದು ಕಾಳಜಿಯ ಹಣತೆಯನ್ನು ಬೆಳಗಿದ್ದಿರಿ...
    ಅಂಗವಿಕಲರು, ಅನಾಥರು, ಭಿಕ್ಷಾಟನೆಗೆ ಇಳಿದಿರುವ ಮಕ್ಕಳು,ಹಿಡಿಜಾಗಳು ಇವರಿಗೊಂದು ನೆಲೆಯಾಗಬೇಕು..ಸಮಾಜದಲ್ಲಿ ಇಂದಿಗೂ ಶಾಪಗ್ರಸ್ತರಂತೆ ಕಾಣಲ್ಪಡುತ್ತಿರುವ ಇವರ ಕಂಗಳಲ್ಲಿ ಕನಸು ಮೂಡಬೇಕು...ಬದುಕು ನೆಮ್ಮದಿಗೊಳ್ಳಬೇಕು...ಸಾವಿರಾರು ರೂಪೈಗಳ ಸಿಡಿಮದ್ದು ಸುಡುವ ಬದಲಾಗಿ ಒಬ್ಬೊಬ್ಬ ಒಂದೊಂದು ಶೋಷಿತ ಪ್ರಜೆಯ ಹಿಂದೆ ನಿಲ್ಲೋಣ..ಬಹುಶಃ ಆಗ ನಮ್ಮ ಸಹೋದರ/ರೀ ಯಾ ಕಣ್ಣಲ್ಲೊಂದು ಕನಸಿನ ಮಿಂಚು ಕಾಣಸಿಗಬಹುದು..

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕಾಳಜಿಯನ್ನು ತೋರುವ ಲೇಖನ. ಸಕಾಲಿಕವಾಗಿದೆ. ಚೆನ್ನಾಗಿದೆ ರವಿ ಸರ್. ದೀಪಾವಳಿಯ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. ಲೇಖಕ ಸಮಾಜ ಮುಖಿಯಾದಾಗ, ಆತನ ಲೇಖನಿಯಿಂದ ಇಂತಹ ಮಾನವೀಯ ಲೇಖನಗಳು ಮೂಡಿಬರುತ್ತವೆ.

    ದೀಪಾವಳಿಯಂದು ನಮ್ಮ ಮೆದುಳುಗಳು ರಜೆ, ಮಜೆ, ಅಭ್ಯಂಜನ, ಹೊಸ ಬಟ್ಟೆ, ಭಾರೀ ಬೋಜನ, ಪಟಾಕಿಗಳ ಮಾಯೆಯಲ್ಲಿ ಕಳೆದು ಹೋದ ಗಳಿಗೆಯಲ್ಲಿ, ನಿಮ್ಮ ಮನಸ್ಸು ಅಂಧರ ಬಗ್ಗೆ ಮಿಡಿದದ್ದು ನಿಮ್ಮ ಮಾನವೀಯತೆಗೆ ಸಾಕ್ಷಿ...

    ಪ್ರತ್ಯುತ್ತರಅಳಿಸಿ
  4. ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್ಕೊಂದು ಜಾಗೃತಿಯ ಸಂದೇಶವನ್ನು ಹೊತ್ತುಕೊಂಡು ಮೂಡಿ ಬಂದಿರುವ ಈ ಬರಹ ಮನಸಿಗೆ ಹಿಡಿಸಿತು.

    ಪ್ರತ್ಯುತ್ತರಅಳಿಸಿ
  5. ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್ಕೊಂದು ಜಾಗೃತಿಯ ಸಂದೇಶವನ್ನು ಹೊತ್ತುಕೊಂಡು ಮೂಡಿ ಬಂದಿರುವ ಈ ಬರಹ ಮನಸಿಗೆ ಹಿಡಿಸಿತು.

    ಪ್ರತ್ಯುತ್ತರಅಳಿಸಿ
  6. ಶ್ರೀಯುತ ರವಿ ಮೂರ್ನಾಡರವರ ನಾಲ್ಕು ಮಾತುಗಳಲ್ಲಿ ಒಳ್ಳೆಯ ವಿಚಾರಗಳು ಮೂಡಿಬಂದಿದೆ ,ನಮ್ಮ ಸಮಾಜದಲ್ಲಿ ಜಾಗ್ರತಿ ಮೂಡಿಸುವ ವಿಚಾರಗಳು ನಿಮ್ಮಿಂದ ಇನ್ನಷ್ಟೂ ಹೊರಹೊಮ್ಮಲಿ

    ಪ್ರತ್ಯುತ್ತರಅಳಿಸಿ
  7. ಓದಿದ... ನಂತರ ನಿಮ್ಮ ಮಾತನ್ನು
    ಮನಸ್ಪೂರ್ವಕವಾಗಿ ಮೆಚ್ಚಿದೆನು...
    ನಿಮ್ಮ ಮಾತಿನ ಭಾವನೆಯನ್ನು
    ನಾನು ಕವನದಲ್ಲಿ ಬರೆಯಲಿಚ್ಚುಸುವೆನು..

    ಎಲ್ಲರೂ ಯಾರಿಗೂ ಕೇಡನ್ನು ಬಯಸದೇ....
    ಮನಸ್ಸಿಂದ ಮೆಚ್ಚಿ , ಭೇದಭಾವಗಳ ಮಾಡದೇ...
    ಕೀಳು ಮೇಲು , ಹೆಚ್ಚು ಕಮ್ಮಿ ಎಂದು ಹೇಳದೇ...
    ನಾನೆಂಬ ಅಹಂಕಾರವನ್ನು ತೋರಿಸದೇ...

    ಇದ್ದರೆಷ್ಟು ಚೆನ್ನ ಈ ಜನವು ಈ ನೆಲವು
    ನಿಮ್ಮ ಉತ್ತಮ್ಮ ಕಾರ್ಯಕ್ಕೆ ನಮ್ಮ ಬೆಂಬಲವು
    ಹೃತ್ಪೂರ್ವಕವಾಗಿ ನಿಮ್ಮನ್ನು ಸ್ವಾಗತಿಸುವೆವು...
    ನಮ್ಮಾಸೆ ಎಲ್ಲಾ ಸ್ವರ್ಗ ಸುಖವಾಗಲಿ ಇಡೀ ಜಗವು....
    ಸದಾ ಬೆಳಗುತಿರಲಿ ನಮ್ಮ ಮೈ ಮನವು .... :)

    ಪ್ರತ್ಯುತ್ತರಅಳಿಸಿ